ಕಾಂಗ್ರೆಸ್ ಪಾಳೆಯದಲ್ಲಿ ನಾಯಕತ್ವ ಬದಲಾವಣೆಯ ಬಿಸಿ ಚರ್ಚೆಯಾಗುತ್ತಿರುವಾಗಲೇ, ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಎಐಸಿಸಿ (ಅಖಿಲ ಭಾರತ ಕಾಂಗ್ರೆಸ್ ಸಮಿತಿ) ಒಬಿಸಿ ಸಲಹಾ ಮಂಡಳಿಯ (AICC OBC Advisory Council) ಅಧ್ಯಕ್ಷರನ್ನಾಗಿ ದಿಢೀರ್ ನೇಮಕ ಮಾಡಲಾಗಿದೆ. ಈ ನಡೆ ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿದ್ದು, ವಿರೋಧ ಪಕ್ಷದ ಬಿಜೆಪಿ ನಾಯಕರು ಸಿದ್ದರಾಮಯ್ಯ ಅವರ ರಾಜಕೀಯ ಭವಿಷ್ಯದ ಬಗ್ಗೆ ವಿಭಿನ್ನ ವ್ಯಾಖ್ಯಾನಗಳನ್ನು ಮಾಡಿದ್ದಾರೆ.
ಸಿದ್ದರಾಮಯ್ಯರ ನಿವೃತ್ತಿ ಸಮಯ ಹತ್ತಿರ ಬಂದಿದೆ: ಆರ್. ಅಶೋಕ್
ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಸಿದ್ದರಾಮಯ್ಯ ಅವರ ಈ ಹೊಸ ನೇಮಕಾತಿಯನ್ನು ಅವರ ರಾಜಕೀಯ ಜೀವನದ ಅಂತ್ಯದ ಸಂಕೇತ ಎಂದು ಬಣ್ಣಿಸಿದ್ದಾರೆ. “ಸಿಎಂ ಸಿದ್ದರಾಮಯ್ಯ ನಿವೃತ್ತಿ ಸಮಯ ಹತ್ತಿರ ಬಂದಿದೆ. ನಿವೃತ್ತಿ ಸಮಯ ಹತ್ತಿರ ಬಂದಿದೆ ಎನ್ನುವುದಕ್ಕೆ ಹೈಕಮಾಂಡ್ ರಚನೆ ಮಾಡಿರುವ ಎಐಸಿಸಿ ಓಬಿಸಿ ಸಮಿತಿ ಸಾಕ್ಷಿ” ಎಂದು ಅಶೋಕ್ ಹೇಳಿದ್ದಾರೆ.
ಅವರು ಸಿದ್ದರಾಮಯ್ಯ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದು, “ಮಾನ್ಯ ಸಿದ್ದರಾಮಯ್ಯನವರೇ, ನಿಮ್ಮ ಸೇವೆ ಸಾಕು ರಾಜೀನಾಮೆ ಕೊಟ್ಟು ನಿವೃತ್ತರಾಗಿ ಎಂದು ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಪರೋಕ್ಷವಾಗಿ ಹೇಳುತ್ತಿದ್ದಾರೆ. ಇನ್ನೆಷ್ಟು ದಿನ ಸ್ವಾಮಿ ಈ ಭಂಡ ಬಾಳು? ಈ ರಬ್ಬರ್ ಸ್ಟ್ಯಾಂಪ್ ಕುರ್ಚಿ ಇದ್ದರೆಷ್ಟು, ಬಿಟ್ಟರೆಷ್ಟು. ನಿಮಗೆ ಕಿಂಚಿತ್ತಾದರೂ ಸ್ವಾಭಿಮಾನ ಇದ್ದಿದ್ದರೆ ಒಂದು ಕ್ಷಣವೂ ಅಧಿಕಾರದಲ್ಲಿ ಮುಂದುವರೆಯುತ್ತಿರಲಿಲ್ಲ” ಎಂದು ವಾಗ್ದಾಳಿ ನಡೆಸಿದ್ದಾರೆ.
ಸಿದ್ದರಾಮಯ್ಯ ಹಠಾವೋ ಪ್ರಾರಂಭವಾಗಿದೆ: ಛಲವಾದಿ ನಾರಾಯಣಸ್ವಾಮಿ
ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಸಿದ್ದರಾಮಯ್ಯ ಅವರ ರಾಜೀನಾಮೆ ಖಚಿತ ಎಂದು ಹೇಳಿಕೊಂಡಿದ್ದಾರೆ. “ಸಿಎಂ ಸಿದ್ದರಾಮಯ್ಯ ನವೆಂಬರ್ನಲ್ಲಿ ರಾಜೀನಾಮೆ ಕೊಡುವುದು ಖಾತ್ರಿ. ಇನ್ನೊಂದು ಬಜೆಟ್ ಮಂಡನೆಗೆ ಅವಕಾಶ ಕೊಡಿ ಎಂದು ಕೇಳಿದ್ದಾರೆ. ರಾಜ್ಯದಿಂದ ಸಿದ್ದರಾಮಯ್ಯ ಅವರನ್ನು ಹೇಗೆ ಹೊರಗಡೆ ಕಳಿಸಬೇಕು ಅನ್ನೋದು ಶುರುವಾಗಿದೆ” ಎಂದು ನಾರಾಯಣಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.
ಮಾಜಿ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರನ್ನು ಪಕ್ಷವು ದೆಹಲಿಗೆ ಕಳುಹಿಸಿದಂತೆ, ಸಿದ್ದರಾಮಯ್ಯ ಅವರನ್ನು ಕೂಡ ದೆಹಲಿಗೆ ಕಳುಹಿಸಲು ಹೈಕಮಾಂಡ್ ಸಿದ್ಧತೆ ನಡೆಸಿದೆ ಎಂದು ಅವರು ಹೋಲಿಸಿದ್ದಾರೆ. “ಖರ್ಗೆಗೆ ಶೆಡ್ ರೆಡಿ ಮಾಡಿದ್ದರು, ಈಗ ಸಿದ್ದರಾಮಯ್ಯಗೂ ಶೆಡ್ ರೆಡಿ ಮಾಡಿದ್ದಾರೆ. ಒಂದು ಹೆಜ್ಜೆ ತೆಗೆದು ಇಟ್ಟರೆ ಶೆಡ್ಗೆ ಹೋದಂತೆ” ಎಂದು ವ್ಯಂಗ್ಯವಾಡಿದ್ದಾರೆ.
ಕೇಂದ್ರಕ್ಕೆ ಹೋಗಿ ಏನು ಮಾಡುತ್ತಾರೆ?: ಪ್ರಲ್ಹಾದ್ ಜೋಶಿ
ಕೇಂದ್ರ ಆಹಾರ ಸಚಿವ ಪ್ರಲ್ಹಾದ್ ಜೋಶಿ ಅವರು ಹುಬ್ಬಳ್ಳಿಯಲ್ಲಿ ಮಾತನಾಡಿ, ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ತ್ಯಜಿಸಿ ದೆಹಲಿಗೆ ಬರಲು ಈ ನೇಮಕಾತಿ ಒಂದು ಸಂದೇಶ ಎಂದು ಅರ್ಥೈಸಿದ್ದಾರೆ. “ಸಿಎಂ ಸ್ಥಾನ ತ್ಯಜಿಸಿ ದೆಹಲಿಗೆ ಬನ್ನಿ ಎಂಬ ಸಂದೇಶ ರವಾನಿಸಿದಂತಿದೆ. ಸಿದ್ದರಾಮಯ್ಯಗೆ ಒಳ್ಳೆಯದಾಗಲಿ. ಇಲ್ಲೇ ಸಂಭಾಳಿಸಲು ಸಾಧ್ಯವಾಗ್ತಿಲ್ಲ, ಕೇಂದ್ರಕ್ಕೆ ಹೋಗಿ ಏನು ಮಾಡುತ್ತಾರೆ?” ಎಂದು ಪ್ರಶ್ನಿಸಿದ್ದಾರೆ.
“ರಾಷ್ಟ್ರೀಯ ಹಿಂದುಳಿದ ವರ್ಗಕ್ಕೆ ಈಗ ನೇಮಿಸುವ ಉದ್ದೇಶ ಏನಿತ್ತು?” ಎಂದು ಪ್ರಶ್ನಿಸಿದ ಜೋಶಿ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು “ಇಂಟರ್ನಲ್ ಆಗಿ ನಾನೇ ಮುಂದಿನ ಸಿಎಂ ಅಂತಾ ಸಾಕಷ್ಟು ಜನರಿಗೆ ಹೇಳುತ್ತಿದ್ದಾರೆ” ಎಂದು ಸೂಚಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ನಿರ್ಧಾರ: ಹೆಚ್.ಡಿ. ಕುಮಾರಸ್ವಾಮಿ
ಈ ಎಲ್ಲಾ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಬೆಂಗಳೂರಿನಲ್ಲಿ, “ಕಾಂಗ್ರೆಸ್ ಪಕ್ಷದ ನಿರ್ಧಾರದ ಬಗ್ಗೆ ನಾನು ಚರ್ಚೆ ಮಾಡುವುದಿಲ್ಲ” ಎಂದು ಹೇಳಿದ್ದಾರೆ.








