ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಅಂಗಳದಲ್ಲಿ ಶಾಂತವಾಗಿದ್ದ ನಾಯಕತ್ವ ಬದಲಾವಣೆಯ ಕಿಡಿ ಮತ್ತೆ ಹೊತ್ತಿಕೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಬಣಗಳ ನಡುವಿನ ಶೀತಲ ಸಮರ ಈಗ ಬಹಿರಂಗ ಹಗ್ಗಜಗ್ಗಾಟದ ರೂಪ ಪಡೆಯುತ್ತಿದ್ದು, ಕೊಟ್ಟ ಮಾತು ಉಳಿಸಿಕೊಳ್ಳುವುದು ಎಂಬ ಒಂದೇ ಒಂದು ಸಾಲು ರಾಜಕೀಯ ಪಡಸಾಲೆಯಲ್ಲಿ ಭಾರೀ ಸಂಚಲನವನ್ನೇ ಸೃಷ್ಟಿಸಿದೆ.
2023ರ ವಿಧಾನಸಭಾ ಚುನಾವಣೆಯ ಭರ್ಜರಿ ಗೆಲುವಿನ ನಂತರ ತೆರೆಮರೆಯಲ್ಲಿ ನಡೆದಿದ್ದ ಅಧಿಕಾರ ಹಂಚಿಕೆಯ ರಹಸ್ಯ ಒಪ್ಪಂದದ ಗುಟ್ಟು ಈಗ ಸ್ಫೋಟಗೊಳ್ಳುವ ಹಂತಕ್ಕೆ ತಲುಪಿದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ.
ಮಾತು ಕೊಟ್ಟವರು ಯಾರು ಮಾತು ತಪ್ಪಿದವರು ಯಾರು
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇತ್ತೀಚೆಗೆ ತಮ್ಮ ಭಾಷಣಗಳಲ್ಲಿ, ಹೇಳಿಕೆಗಳಲ್ಲಿ ಮತ್ತು ಸಾಮಾಜಿಕ ಜಾಲತಾಣದ ಪೋಸ್ಟ್ಗಳಲ್ಲಿ ಕೊಟ್ಟ ಮಾತು ಉಳಿಸಿಕೊಳ್ಳುವುದು ಎಂಬ ವಾಕ್ಯವನ್ನು ಪದೇ ಪದೇ ಪ್ರಸ್ತಾಪಿಸುತ್ತಿದ್ದಾರೆ. ಇದು ಮೇಲ್ನೋಟಕ್ಕೆ ಪಕ್ಷದ ತತ್ವದಂತೆ ಕಂಡರೂ, ರಾಜಕೀಯ ವಿಶ್ಲೇಷಕರ ಪ್ರಕಾರ ಇದು ನೇರವಾಗಿ ಸಿಎಂ ಕುರ್ಚಿಯ ಹಂಚಿಕೆಯ ವಿಚಾರವನ್ನೇ ಗುರಿಯಾಗಿಸಿದೆ.
ಆದರೆ ಚಾಣಾಕ್ಷ ರಾಜಕಾರಣಿ ಸಿದ್ದರಾಮಯ್ಯ ಅವರು ಇದಕ್ಕೆ ತಮ್ಮದೇ ಶೈಲಿಯಲ್ಲಿ ತಿರುಗೇಟು ನೀಡಿದ್ದಾರೆ. ಡಿಕೆಶಿಯವರ ಮಾತಿಗೆ ಪರೋಕ್ಷವಾಗಿ ಟಾಂಗ್ ನೀಡಿರುವ ಸಿಎಂ, ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ, ನಾವು ಜನರಿಗೆ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ ಎಂದು ಹೇಳುವ ಮೂಲಕ ಚೆಂಡನ್ನು ಮತ್ತೆ ಡಿಕೆಶಿ ಅಂಗಳಕ್ಕೆ ಎಸೆದಿದ್ದಾರೆ.
ದೆಹಲಿ ದರ್ಬಾರ್ ನಲ್ಲಿ ನಡೆದಿದ್ದೇನು
2023ರಲ್ಲಿ ಕಾಂಗ್ರೆಸ್ 135 ಸ್ಥಾನಗಳೊಂದಿಗೆ ಬಹುಮತಗಳಿಸಿ ಅಧಿಕಾರಕ್ಕೆ ಬಂದಾಗ, ಮುಖ್ಯಮಂತ್ರಿ ಸ್ಥಾನಕ್ಕಾಗಿ ದೊಡ್ಡ ಮಟ್ಟದ ಜಿದ್ದಾಜಿದ್ದಿ ನಡೆದಿತ್ತು. ಕೆಪಿಸಿಸಿ ಅಧ್ಯಕ್ಷರಾಗಿ ಪಕ್ಷವನ್ನು ಅಧಿಕಾರಕ್ಕೆ ತಂದ ಡಿ.ಕೆ. ಶಿವಕುಮಾರ್ ಮತ್ತು ಜನಪ್ರಿಯತೆಯ ಉತ್ತುಂಗದಲ್ಲಿದ್ದ ಸಿದ್ದರಾಮಯ್ಯ ಅವರ ನಡುವೆ ಸಿಎಂ ಕುರ್ಚಿಗಾಗಿ ನಡೆದ ಸರ್ಕಸ್ ದೆಹಲಿ ಮಟ್ಟದಲ್ಲಿ ಸದ್ದು ಮಾಡಿತ್ತು.
ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಯಿಂದ ಹಿಡಿದು, ದೆಹಲಿಯ ಹೈಕಮಾಂಡ್ ಅಂಗಳದವರೆಗೆ ಎರಡೂ ಬಣಗಳ ಬೆಂಬಲಿಗರು ಶಕ್ತಿ ಪ್ರದರ್ಶನ ನಡೆಸಿದ್ದರು. ಅಂತಿಮವಾಗಿ ಸಿದ್ದರಾಮಯ್ಯ ಸಿಎಂ ಆಗಿ, ಡಿಕೆಶಿ ಡಿಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಪರಿಸ್ಥಿತಿಯನ್ನು ತಿಳಿಗೊಳಿಸಲು ಹೈಕಮಾಂಡ್ 50-50 ಸೂತ್ರವನ್ನು (ತಲಾ ಎರಡೂವರೆ ವರ್ಷ ಅಧಿಕಾರ) ಮುಂದಿಟ್ಟಿತ್ತು ಎಂಬ ಮಾತುಗಳು ಬಲವಾಗಿ ಕೇಳಿಬಂದಿದ್ದವು.
ಅರ್ಧ ಅವಧಿ ಸಿಎಂ ಮಾತುಕತೆಗೆ ಸಾಕ್ಷಿ ಯಾರು
ಡಿಕೆಶಿ ಶಿಬಿರದ ಪ್ರಮುಖ ವಾದವೆಂದರೆ, ಎರಡೂವರೆ ವರ್ಷಗಳ ನಂತರ ಅಧಿಕಾರ ಹಸ್ತಾಂತರವಾಗಬೇಕು ಎಂಬುದು. ಆದರೆ ಇದಕ್ಕೆ ಸಿದ್ದರಾಮಯ್ಯ ಬಣದಿಂದ ಯಾವುದೇ ಅಧಿಕೃತ ಒಪ್ಪಿಗೆ ಸಿಕ್ಕಿಲ್ಲ. ಹಾಗಾದರೆ ಈ ರಹಸ್ಯ ಒಪ್ಪಂದಕ್ಕೆ ಸಾಕ್ಷಿ ಯಾರು ಎಂಬ ಪ್ರಶ್ನೆ ಈಗ ಮುಂಚೂಣಿಗೆ ಬಂದಿದೆ.
ಸರ್ಕಾರ ರಚನೆಯ ಸಂದರ್ಭದಲ್ಲಿ ನಡೆದ ಸಂಧಾನ ಸಭೆಗಳಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಮತ್ತು ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಉಪಸ್ಥಿತರಿದ್ದರು. ಒಂದು ವೇಳೆ ಡಿ.ಕೆ. ಶಿವಕುಮಾರ್ ಅವರಿಗೆ ಅರ್ಧ ಅವಧಿಯ ನಂತರ ಸಿಎಂ ಪಟ್ಟ ನೀಡುವುದಾಗಿ ಭರವಸೆ ನೀಡಿದ್ದರೆ, ಅದು ಈ ನಾಲ್ವರು ಪ್ರಮುಖ ನಾಯಕರ ಸಮ್ಮುಖದಲ್ಲೇ ನಡೆದಿರಬೇಕು.
ಕುತೂಹಲಕಾರಿ ಸಂಗತಿಯೆಂದರೆ, ಅಧಿಕಾರ ಹಂಚಿಕೆಯ ಬಗ್ಗೆ ಕೇಳಿಬರುತ್ತಿರುವ ಊಹಾಪೋಹಗಳಿಗೆ ಈವರೆಗೂ ಹೈಕಮಾಂಡ್ ನಾಯಕರು ಸ್ಪಷ್ಟನೆ ನೀಡಿಲ್ಲ. ಕೆ.ಸಿ. ವೇಣುಗೋಪಾಲ್ ಅವರ ಬಳಿ ಮಾಧ್ಯಮಗಳು ಈ ಬಗ್ಗೆ ಪ್ರಶ್ನಿಸಿದಾಗಲೂ ಅವರು ಜಾರಿಕೊಳ್ಳುವ ಉತ್ತರ ನೀಡಿದ್ದರು. ಈ ಮೌನವೇ ಈಗ ಡಿಕೆಶಿ ಬೆಂಬಲಿಗರಲ್ಲಿ ನಿರೀಕ್ಷೆ ಹುಟ್ಟಿಸಿದರೆ, ಸಿದ್ದರಾಮಯ್ಯ ಬೆಂಬಲಿಗರಲ್ಲಿ ಗೊಂದಲ ಸೃಷ್ಟಿಸಿದೆ.
ಸಿದ್ದರಾಮಯ್ಯ ಬಣವು ಅಧಿಕಾರ ಹಸ್ತಾಂತರದ ಬಗ್ಗೆ ಯಾವುದೇ ಲಿಖಿತ ಅಥವಾ ಮೌಖಿಕ ಒಪ್ಪಂದ ಆಗಿಲ್ಲ ಎಂದು ವಾದಿಸುತ್ತಿದೆ. ಹೈಕಮಾಂಡ್ ಅಂತಹ ಯಾವುದೇ ಭರವಸೆ ಕೊಟ್ಟಿಲ್ಲ ಎಂದು ಸಿದ್ದರಾಮಯ್ಯ ಆಪ್ತರು ಪ್ರತಿಪಾದಿಸುತ್ತಿದ್ದಾರೆ.
ಕೊಟ್ಟ ಮಾತು ಎಂಬ ಅಸ್ತ್ರವನ್ನು ಹಿಡಿದು ಡಿಕೆಶಿ ಬಣ ಮುನ್ನುಗ್ಗುತ್ತಿದ್ದರೆ, ಅಭಿವೃದ್ಧಿ ಮತ್ತು ಗ್ಯಾರಂಟಿ ಎಂಬ ಕವಚವನ್ನು ಹಿಡಿದು ಸಿದ್ದರಾಮಯ್ಯ ಬಣ ರಕ್ಷಣೆ ಪಡೆಯುತ್ತಿದೆ. ಈ ಹಗ್ಗಜಗ್ಗಾಟದಲ್ಲಿ ಹೈಕಮಾಂಡ್ ಮಧ್ಯಪ್ರವೇಶಿಸಿ ಸತ್ಯಾಂಶವನ್ನು ಬಹಿರಂಗಪಡಿಸುತ್ತದೆಯೇ ಅಥವಾ ಈ ರಹಸ್ಯ ಒಪ್ಪಂದದ ಗುಟ್ಟು ಹಾಗೆಯೇ ಉಳಿಯುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ. ಸದ್ಯಕ್ಕಂತೂ ರಾಜ್ಯ ಕಾಂಗ್ರೆಸ್ನಲ್ಲಿ ಆಂತರಿಕ ಯುದ್ಧದ ಕಾರ್ಮೋಡ ದಟ್ಟವಾಗುತ್ತಿದೆ.








