ಸಾಹಿತ್ಯ ಸರ್ಕಲ್: ತುರ್ತುಪರಿಸ್ಥಿತಿಯ ಕಾಲಘಟ್ಟದಲ್ಲಿ ಅಡಿಗರು ಮತ್ತು ಬೇಂದ್ರೆಯವರ ಪ್ರತಿಕ್ರಿಯೆ:
ಇಂದಿನ ಅಘೋಷಿತ ತುರ್ತು ಪರಿಸ್ಥಿತಿಯ ಈ ಕಾಲಘಟ್ಟದಲ್ಲಿ ಅಡಿಗರು ಬದುಕಿದ್ದರೆ ಅವರ ನಿಲುವೇನಿರುತ್ತಿತ್ತು ಎನ್ನುವ ಊಹೆಯನ್ನು ಕೆಲವರು ಮಾಡುತ್ತಿದ್ದಾರೆ. ಈ ಊಹೆಯಿಂದ ಅವರನ್ನು ನಾವು ಹೇಗೆ ಪರಿಭಾವಿಸಿಕೊಂಡಿದ್ದೇವೆ ಎನ್ನುವುದು ಸ್ಪಷ್ಟವಾಗುತ್ತದೆ. ತುರ್ತು ಪರಿಸ್ಥಿತಿ ಹೇರಲ್ಪಟ್ಟ ಕಾಲಕ್ಕೆ ಅಡಿಗರು ಪಕ್ಕಾ ಜನಸಂಘಿಯಾಗಿದ್ದರು. ಅವರು ತುರ್ತು ಪರಿಸ್ಥಿತಿಯ ಹೇರಿಕೆಯ ಪರವಾಗಿದ್ದರು ಎನ್ನುವುದು ಸತ್ಯಕ್ಕೆ ದೂರವಾದ ಮಾತು. ಆ ಸಮಯದಲ್ಲಿ ನಾಡಿನ ತುಂಬೆಲ್ಲ ಸಂಚರಿಸಿ ಅವರು ಸಭೆಗಳನ್ನುದ್ದೇಶಿಸಿ ಘನ ಘೋರ ಭಾಷಣ ಮಾಡಿದ ದಾಖಲೆಗಳಿವೆ. ಹಾಗೆ ಪ್ರತಿ ಸಲ ಭಾಷಣ ಮಾಡುವಾಗಲೂ ಅವರನ್ನು ಬಂಧಿಸಲಾಗುತ್ತದೆ ಎಂದು ಸ್ವತಃ ಅವರು ಮತ್ತು ಅವರ ಅನುಯಾಯಿಗಳು ನಂಬಿದ್ದರು ಮತ್ತು ಅದಕ್ಕಾಗಿ ಕಾದಿದ್ದರು. ಆದರೆ ಆಗಿನ ಮುಖ್ಯ ಮಂತ್ರಿ ದೇವರಾಜ್ ಅರಸ್ ಬಹಳ ಬುದ್ಧಿವಂತಿಕೆಯಿಂದ ಅವರನ್ನು ಬಂಧಿಸಲೇ ಇಲ್ಲ. Because he was not a threat. ಇದು ಅವರಿಗೆ ಸ್ವಲ್ಪ ಮುಖಭಂಗವನ್ನೂ ಉಂಟು ಮಾಡಿತ್ತು.
ತುರ್ತು ಪರಿಸ್ಥಿತಿಯನ್ನು ವಿರೋಧಿಸಿದ್ದರು ಎನ್ನುವ ಕಾರಣವನ್ನು ಮುಂದೊಡ್ಡಿ ಅವರು ಇಂದು ಬದುಕಿದ್ದರೆ ಮೋದಿ ಆಡಳಿತ ಜಾರಿ ಮಾಡಿದ ಈ ಅಘೋಷಿತ ತುರ್ತು ಪರಿಸ್ಥಿತಿಯನ್ನು ವಿರೋಧಿಸುತ್ತಿದ್ದರು ಎಂದು ಅನಿಸುವುದಿಲ್ಲ. ಆದ್ವಾನಿ ಈಗಲೂ ಬದುಕಿದ್ದಾರೆ, ಅವರೂ ತುರ್ತು ಪರಿಸ್ಥಿತಿ ಘೋಷಣೆಯಾದಾಗ ಬಂಧಿಸಲ್ಪಟ್ಟು ಜೈಲು ಸೇರಿದವರು, ಆದರೆ ಇಂದಿನ ಸರಕಾರದ ವಿರುದ್ಧ ಒಂದಾದರೂ ಹೇಳಿಕೆಯನ್ನು ಅವರು ನೀಡಿದ್ದಾರೆಯೆ. ಹಾಗೆಯೇ ಅಡಿಗರೂ ಬಿಜೆಪಿಯ ಸದಸ್ಯರಾಗಿ ಚುನಾವಣೆ ಸ್ಪರ್ಧಿಸಿದವರು ನಂತರ ಅವರ ನಿಧನದವರೆಗೂ ಅದೇ ಸಿದ್ದಾಂತಕ್ಕೆ ಜೋತು ಬಿದ್ದವರು ಮತ್ತು ಅವರ ಕಾವ್ಯ ಹೆಚ್ಚು ಹೆಚ್ಚು ಬಲ ಪಂಥೀಯವಾಗುತ್ತ ಕೋಮು ಭಾವನೆಯನ್ನು ಉದ್ರೇಕಿಸುವ ‘ಮತ್ತೆ ಮೊಳಗಲಿ ಇಲ್ಲಿ ಪಾಂಚಜನ್ಯ’ ದಂತಹ ಕವಿತೆಯನ್ನು ಬರೆಯುವವರೆಗೆ ಹೋಗಿ ತಲುಪಿತ್ತು.
ಈ ಹಿನ್ನೆಲೆಯಲ್ಲಿ ಅಡಿಗರು ಬದುಕಿದ್ದರೆ ಇಂದಿನ ಸರಕಾರದ ವಿರುದ್ಧವಾಗಿ ಒಂದು ಮಾತನ್ನಾದರೂ ಆಡುತ್ತಿದ್ದರು ಎಂದು ಸಹ ಊಹಿಸುವುದಕ್ಕೂ ಸಾಧ್ಯವಿಲ್ಲ. ಆದರೆ ಬೇಂದ್ರೆ ಬದುಕಿದ್ದರೆ ವಿರೋಧಿಸುತ್ತಿದ್ದರು ಎಂದೆನಿಸುತ್ತದೆ. ವಿಪರ್ಯಾಸವೆಂದರೆ ಬೇಂದ್ರೆ ತುರ್ತು ಪರಿಸ್ಥಿತಿಯನ್ನು ಬೆಂಬಲಿಸಿದ್ದರು. ತುರ್ತು ಪರಿಸ್ಥಿತಿ ಘೋಷಣೆ ಹಿಂದೆ ಕೋಮು ಭಾವನೆ ಉದ್ರೇಕಿಸುವ ಉದ್ದೇಶ ಇರಲಿಲ್ಲವಾಗಿತ್ತು ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಮೇಲಾಗಲಿ ಯಾವುದೇ ಕೋಮಿನ ಧಾರ್ಮಿಕ ಚಟುವಟಿಕೆಗಳ ಮೇಲಾಗಲಿ ಯಾವ ನಿರ್ಭಂದವನ್ನು ಹೇರುವ ಉದ್ದೇಶವೂ ಇರಲಿಲ್ಲ. ಹಾಗಾಗಿ ಅದನ್ನು ಕೇವಲ ರಾಜಕೀಯ ಆಯಾಮದಲ್ಲಿ ಮಾತ್ರ ನೋಡಿದವರ ಸಂಖ್ಯೆ ಹೆಚ್ಚಿತ್ತು. ಅದೇ ಕಾರಣಕ್ಕಾಗಿ ನಂತರದ ಚುನಾವಣೆಯಲ್ಲಿ Cow belt ನ ಹೊರಗೆ ಇಂದಿರಾಗೆ ಸೋಲಾಗಿರಲಿಲ್ಲ. ಮಹರಾಷ್ಟ್ರ ಮತ್ತು ದಕ್ಷಿಣದ ಎಲ್ಲ ರಾಜ್ಯಗಳೂ ಇಂದಿರಾ ಪರವಾಗಿಯೇ Solid ಆಗಿ ಮತ ಚಲಾಯಿಸಿದ್ದವು.
ಕಾರಂತರ ʻಬೆಟ್ಟದ ಜೀವ’ ಕಾದಂಬರಿ ಎನ್ನುವ ಸದಾಕಾಲದ ವಿಸ್ಮಯ:
ಲಂಕೇಶರು ಅಂದಂತೆ ’ಕಾರಂತರು ತಮ್ಮ ಕಾದಂಬರಿಗಳಲ್ಲಿ ಬದುಕನ್ನು ದಾಖಲಿಸುತ್ತಲೇ ಅದನ್ನೊಂದು ಅದ್ಭುತ ಕಲಾಕೃತಿಯನ್ನಾಗಿ ಮಾಡುತ್ತಾರೆ’ ಬೆಟ್ಟದ ಜೀವ ಅವರ ಅಂತಹ ಕೃತಿಗಳಲ್ಲಿ ಒಂದು. ಮೇಲು ನೋಟಕ್ಕೆ ಇದು ಕಗ್ಗಾಡಿನಲ್ಲಿ ಬದುಕಿದ ಒಂದು ಕುಟುಂಬದ ಜೀವನದ ದಾಖಲೆಯಂತೆ ಕಂಡು ಬಂದರೂ ಒಂಟಿತನ ಬಹಿರಂಗ ಹಾಗೂ ಅಂತರಂಗವನ್ನು ಕಾಡುವ ಪರಿಯನ್ನು ನಿರ್ವಹಿಸಿದ ರೀತಿ ಇದನ್ನು ಒಂದು ಉತ್ತಮ ಕಲಾಕೃತಿಯನ್ನಾಗಿ ಮಾಡಿದೆ.
ಸುಮಾರು ಒಂದು ನೂರು ವರ್ಷಗಳಷ್ಟು ಹಿಂದೆ ಪಶ್ಚಿಮ ಘಟ್ಟದ ಬೆಟ್ಟದ ಸಾಲಿನ ಒಂಟಿ ಮನೆಯಲ್ಲಿ ಬದುಕುತ್ತಿರುವ ಒಂದು ವೃದ್ದ ದಂಪತಿಗಳ ಬದುಕಿನ ಕಥೆ ಇದು. ಇಂತಹ ಪ್ರದೇಶಗಳಲ್ಲಿ ಎರಡು ಮೂರು ಕಿಲೋಮೀಟರ ಅಂತರದಲ್ಲಿಯೂ ಮನುಷ್ಯರ ಇನ್ನೊಂದು ವಾಸಸ್ಥಳ ಸಿಗುವುದು ವಿರಳ. ಈಗಲೂ ಈ ಪ್ರದೇಶದಲ್ಲಿ ಇಂತಹದ್ದೇ ವಾತಾವರಣದಲ್ಲಿ ಬದುಕುತ್ತಿರುವವರನ್ನು ಅಪರೂಪಕ್ಕಾದರೂ ಕಾಣಬಹುದು. ನನ್ನ ಹತ್ತಿರದ ಸಂಬಂಧಿಯೊಬ್ಬ ಈಗಲೂ ಒಂಟಿಯಾಗಿ ಕಾಡಿನ ನಡುವಿನ ಮನೆಯಲ್ಲಿ ಕಾಲ ಕಳೆಯುತ್ತಿರುವುದನ್ನು ನಾನು ಬಲ್ಲೆ. ಹೆಂಡತಿ ಸತ್ತು ಹದಿನೈದು ವರ್ಷವಾಗಿದೆ. ಮಗ ಮತ್ತು ಮಗಳು ಬೇರೆ ಊರಿನಲ್ಲಿ ತಮ್ಮ ತಮ್ಮ ಸಂಸಾರದೊಂದಿಗೆ ಇದ್ದಾರೆ. ಒಂದೆರಡು ಮೈಲುಗಳ ಆಸುಪಾಸಿನಲ್ಲಿ ಕೇವಲ ಕಾಡು ಹೊರತಾಗಿ ಬೇರೆ ಮನೆಗಳಿಲ್ಲ. ತನಗೆ ಬಾಯಿ ತೆರೆದು ಮಾತನಾಡುವುದೇ ಮರೆತು ಹೋಗಿದೆ ಎನ್ನುತ್ತಾನೆ. ಹಾಗಾಗಿ ಅಪರೂಪಕ್ಕೊಮ್ಮೆ ನೆಂಟರ ಮನೆಗೆ ಹೋದರೆ ಏನು ಮಾತನಾಡುವುದು ಎಂದು ತೋಚದೆ ಅಲ್ಲಿಯೂ ಬಾಯಿ ಮುಚ್ಚಿ ಸುಮ್ಮನೆ ಕುಳಿತು ಬಿಡುತ್ತೇನೆ ಎಂದು ಈಗ ಕೆಲವು ವರ್ಷಗಳ ಹಿಂದೆ ಸಿಕ್ಕಾಗ ನನ್ನ ಹತ್ತಿರ ಹೇಳಿ ಕೊಂಡಿದ್ದ. ಮನುಷ್ಯರ ಮುಖ ನೋಡಲೆಂದೇ ಎರಡು ಕಿಲೋಮೀಟರ್ ದೂರದ ಊರಿಗೆ ವಾರಕ್ಕೊಮ್ಮೆ ಹೋಗಿ ಬರುತ್ತಾನಂತೆ. ನಗರದಲ್ಲಿ ಹುಟ್ಟಿ ಬೆಳೆದವರಿಗೆ ಮಾತ್ರವಲ್ಲ ಮಲೆನಾಡಿನಲ್ಲಿ ಹುಟ್ಟಿ ಬೆಳೆದ ನನಗೇ ಅವನ ಈ ಬದುಕಿನ ಸ್ಥಿತಿ ವಿಚಿತ್ರವೆನಿಸಿತು. ನಗರದಲ್ಲಿ ಜನಸಾಗರದ ಮಧ್ಯೆಯೆ ಇದ್ದು ಒಂಟಿತನ ಅನುಭವಿಸುವುದು ಮತ್ತೊಂದು ರೀತಿ.
ಇರಲಿ. ಈಗ ಕಾರಂತರ ’ಬೆಟ್ಟದ ಜೀವ’ ಕಾದಂಬರಿಯ ವಿಷಯಕ್ಕೆ ಬರುವುದಾದರೆ – ಅರವತ್ತು ದಾಟಿದ ಗೋಪಾಲಯ್ಯ ಮತ್ತು ಅವನ ಹೆಂಡತಿ ಶಂಕರಿ ಪಶ್ಚಿಮ ಘಟ್ಟದ ಬೆಟ್ಟದ ಸಾಲಿನಲ್ಲಿ ಅಡಿಕೆ ತೋಟ ಮಾಡಿಕೊಂಡು ಒಂಟಿ ಮನೆಯಲ್ಲಿ ಬದುಕು ಸಾಗಿಸುತ್ತಿದ್ದಾರೆ. ಸುತ್ತಮುತ್ತ ಆಸುಪಾಸಿನ ಎರಡು ಮೂರು ಮೈಲುಗಳ ಅಂತರದಲ್ಲಿ ಮತ್ತೊಂದು ಮನುಷ್ಯ ವಸತಿ ಇಲ್ಲ. ನಾಲ್ಕೂ ದಿಕ್ಕಿನಲ್ಲೂ ಗುಡ್ಡ ಹತ್ತಿ ಇಳಿದು ಕಾಡು ದಾಟಿದ ಮೇಲೆಯೆ ಇನ್ನೊಂದು ಮನೆ ಗೋಚರವಾಗುವುದು. ಅಷ್ಟು ದುರ್ಗಮ ಪ್ರದೇಶ ಅದು. ಮಗಳು ಮದುವೆಯಾಗಿ ಮೊದಲ ಹೆರಿಗೆಯ ಸಮಯದಲ್ಲಿ ಖಾಯಿಲೆಯಿಂದ ಸತ್ತು ಎಷ್ಟೋ ವರ್ಷಗಳಾಗಿವೆ. ಮಗ ಕಾಲೇಜು ಶಿಕ್ಷಣ ಮುಗಿಸಿದವನು ಮನೆಗೆ ತಿರುಗಿ ಬಂದಿಲ್ಲ. ಹದಿನೈದು ವರ್ಷ ಕಳೆದಿದೆ. ಅವನು ಎಲ್ಲಿದ್ದಾನೆ ಎನ್ನುವುದು ಈ ವೃದ್ದ ತಂದೆ ತಾಯಿಗಳಿಗೆ ತಿಳಿದಿಲ್ಲ. ಈ ಕೊರಗು ಅವರನ್ನು ಪ್ರತಿ ಕ್ಷಣವೂ ಕಾಡುತ್ತಿದೆ. ಆದರೂ ಗೋಪಾಲಯ್ಯ ಜೀವನೋತ್ಸಾಹವನ್ನು ಕಳೆದು ಕೊಳ್ಳದೆ ಕೃಷಿಯಲ್ಲಿ ತೊಡಗಿಸಿಕೊಂಡು ದಿನಕ್ಕೊಂದು ಸಾಹಸ ಮೆರೆಯುತ್ತಿದ್ದಾರೆ. ಬಹು ಧೀಮಂತ ಬದುಕು ಅವರದು. ಮೇಲ್ಮೇಲೆ ಗಂಡ ಹೆಂಡತಿ ಇಬ್ಬರೂ ನವ ದಂಪತಿಗಳಂತೆ ವಿನೋದದಿಂದ ದಿನ ಕಳೆಯುತ್ತಿರುವಂತೆ ಕಂಡರೂ ಮಕ್ಕಳ ಅಗಲಿಕೆಯ ನೋವು ಪ್ರತಿ ಗಳಿಗೆಯೂ ಅವರನ್ನು ಅಂತರಂಗದಲ್ಲಿ ಕೊರೆಯುತ್ತಿರುವುದನ್ನು ಕಾರಂತರು ಚಿತ್ರಿಸಿದ ರೀತಿ ಅನನ್ಯವಾದುದು. ಬಾಹ್ಯ ಬದುಕಿನ ಒಂಟಿತನ ಬೇಸರವನ್ನಷ್ಟೇ ಉಂಟು ಮಾಡಿದರೆ ಕರುಳ ಕುಡಿಗಳ ಅಗಲಿಕೆಯಿಂದ ಉಂಟಾದ ಒಂಟಿತನದ ಆಂತರ್ಯದ ಬೇಗೆ ಎಡೆಬಿಡದೆ ಶೇಷ ಬದುಕಿನುದ್ದಕ್ಕೂ ಮನುಷ್ಯನ ಬದುಕನ್ನು ಹೈರಾಣುಗೊಳಿಸುತ್ತದೆ. ಹೀಗೆ ಅವರ ಬದುಕಿನ ಅಂತರಂಗ ಬಹಿರಂಗಗಳೆರಡನ್ನೂ ಆವರಿಸಿದ ಒಂಟಿತನದ ಕಲಾತ್ಮಕ ಅನಾವರಣವೇ ಈ ಕಾದಂಬರಿಯ ವಿಶೇಷ.
ಬೇಂದ್ರೆ ಎಂಬ ಪೊಯೆಟ್ ಆಫ್ ಪ್ಲೆಂಟಿ:
ಬೇಂದ್ರೆ ಬದುಕಿದ್ದರೆ ಈಗ ನೂರಿಪ್ಪತೈದು ತುಂಬುತ್ತಿತ್ತು. ಬೇಂದ್ರೆಯವರ ಬಗ್ಗೆ ಎಷ್ಟೆಲ್ಲಾ ಜನ ಎಷ್ಟೆಲ್ಲಾ ಸಂಗತಿಗಳನ್ನು ಹೇಳಿ ಆಗಿದೆ. ಹೇಳಲಿಕ್ಕೆ ಇನ್ನು ಏನೂ ಉಳಿದಿಲ್ಲ ಅಂದುಕೊಂಡಂತೆ ಮತ್ತಷ್ಟು ಹೊಸ ವಿಷಯಗಳು ಅವರ ಬಗ್ಗೆ, ಅವರ ಬರಹದ ಬಗ್ಗೆ ಹೊರಬರುತ್ತಲೇ ಇವೆ. He was a poet of plenty. ಅಲ್ಲದೆ ಅವರ ವ್ಯಕ್ತಿತ್ವದ ಬಗ್ಗೆ ಒಂದು ನಿಗೂಢತೆ ಅಂದರೆ ಅವರನ್ನು ಪೂರ್ತಿಯಾಗಿ ಅರಿಯಲು ಸಾಧ್ಯವಾಗದ ಒಂದು ಅಪರಿಚಿತ ಭಾಗ ಅವರ ದೈನಂದಿನ ವ್ಯವಹಾರಿಕ ಮಾತುಕತೆಗಳಲ್ಲಿ ನಿರಂತರವಾಗಿ ಅವರು ಬದುಕಿದಷ್ಟೂ ಕಾಲ ಹೊರಬರುತ್ತಲೇ ಇತ್ತು. ಈ ಅರ್ಥದಲ್ಲಿಯೂ He was a person of plenty. ಬೇಂದ್ರೆಯವರ ಬಗ್ಗೆ ನಮಗೆ ಎಲ್ಲ ತಿಳಿಯಿತು ಅಂದುಕೊಳ್ಳುತ್ತಿದ್ದಂತೆ ಅವರ ಒಂದು ಚತೋರೋಕ್ತಿಯೋ ಅಥವಾ ಒಂದು ಕವಿತೆಯೋ ನಾವು ಆವರೆಗೆ ಕಂಡಿರದ ಬೇಂದ್ರೆಯನ್ನು ತೋರಿಸಿ ಬೆರಗು ಮಾಡಿಬಿಡುತ್ತದೆ. ಇದು ಬೇಂದ್ರೆಯವರ ನಿಜವಾದ ಮಾಂತ್ರಿಕತೆ. ಅವರ ಈ ಮಾಂತ್ರಿಕತೆಗೆ ಮರುಳಾಗದ ಕನ್ನಡ ಓದುಗನಿರಲಿಕ್ಕಿಲ್ಲ.
ಅವರು ಅನೇಕ ಸಲ ಕವಿತೆಗಳನ್ನು ಕನಸಿನಲ್ಲಿ ಪಡೆದುಕೊಂಡೆ ಎನ್ನುತ್ತಾರೆ. ಇದು ಅವರ ಕವಿತೆಗಳ ಸುತ್ತಲೂ ನಾವು ಅರಿಯದ ಒಂದು ನಿಗೂಢತೆಯನ್ನು ಸೃಷ್ಟಿ ಮಾಡಿರುವುದೂ ಉಂಟು. ಕನಸು ಎಂದೆಂದೂ ನಿಗೂಢ ತಾನೆ. ಹಾಗೆಯೇ ಇನ್ನೊಂದು ಕುತೂಹಲದ ಸಂಗತಿಯೆಂದರೆ ಅವರು ತಾನು ಹಿಂದಿನ ಜನ್ಮದಲ್ಲಿ ಕವಿ ಕಾಳಿದಾಸನಾಗಿದ್ದೆ ಎಂದು ನಂಬಿದ್ದರಂತೆ. ಜಗತ್ತಿನ ಯಾವುದೇ ಭಾಷೆಯ ಅತ್ಯುತ್ತಮ ಕವಿಯ ಹೋಲಿಕೆಯಲ್ಲಿ ಸರಿಸಮನಾಗಿ ನಿಲ್ಲುವ ಬೇಂದ್ರೆ ಕನ್ನಡಕ್ಕೆ ದೊರೆತಿದ್ದು ಈ ನೆಲದ ಭಾಗ್ಯ.
-ಶ್ರೀಪಾದ ಹೆಗಡೆ,
ನಿವೃತ್ತ ಬಿಎಸ್ಎನ್ಎಲ್ ಉದ್ಯೋಗಿ, ಸಾಹಿತ್ಯಾಸಕ್ತರು ಹಾಗೂ ಹವ್ಯಾಸಿ ಬರಹಗಾರರು,
ಬೆಂಗಳೂರು










