ಶ್ರೀಲಂಕಾದಲ್ಲಿ ಭಾರಿ ಪ್ರತಿಭಟನೆ – ನೌಕಾನೆಲೆಯಲ್ಲಿ ಆಶ್ರಯ ಪಡೆದ ಮಾಜಿ ಪ್ರಧಾನಿ ಮಹಿಂದಾ ರಾಜಪಕ್ಸೆ
ಶ್ರೀಲಂಕಾದ ಮಾಜಿ ಪ್ರಧಾನಿ ಮಹಿಂದಾ ರಾಜಪಕ್ಸೆ ಮತ್ತು ಅವರ ಕೆಲವು ಕುಟುಂಬ ಸದಸ್ಯರು ನೌಕಾನೆಲೆಯಲ್ಲಿ ಆಶ್ರಯ ಪಡೆಯುತ್ತಿದ್ದಾರೆ ಎಂದು ತಿಳಿದ ನಂತರ ಶ್ರೀಲಂಕಾದ ಟ್ರಿಂಕೋಮಲಿ ನೌಕಾನೆಲೆಯಲ್ಲಿ ಪ್ರತಿಭಟನೆಗಳು ಭುಗಿಲೆದ್ದಿವೆ.
ಕೊಲಂಬೊದಲ್ಲಿನ ಅಧಿಕೃತ ನಿವಾಸವನ್ನು ತೊರೆದಿರುವ ಮಾಜಿ ಪ್ರಧಾನಿ ಮತ್ತು ಅವರ ಕುಟುಂಬವನ್ನ ನೌಕಾ ನೆಲೆಯಲ್ಲಿ ಇರಿಸಲಾಗಿದೆ. ಟ್ರಿಂಕೋಮಲಿ ನೌಕಾನೆಲೆಯ ಮುಂದೆ ಮಾಜಿ ಪ್ರಧಾನಿ ಮಹಿಂದಾ ರಾಜಪಕ್ಸೆ ಮತ್ತು ಅವರ ಕುಟುಂಬ ಸದಸ್ಯರು ತಂಗಿದ್ದಾರೆ ಎಂದು ಹೇಳಿಕೊಂಡು ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ರಾಜಪಕ್ಸೆ ಪ್ರಧಾನಿ ಹುದ್ದೆಗೆ ರಾಜಿನಾಮೆ ನೀಡಿದ ಬಳಿಕ ಸರ್ಕಾರಿ ವಿರೋಧಿ ಪ್ರತಿಭಟನಾಕಾರರ ಮೇಲೆ ರಾಜಪಕ್ಸೆ ಅಭಿಮಾನಿಗಳು ದಾಳಿ ಮಾಡಿದ ನಂತರ ದ್ವೀಪ ರಾಷ್ಟ್ರದಲ್ಲಿ ಘರ್ಷಣೆಗಳು ಭುಗಿಲೆದ್ದಿವೆ. ಪೊಲೀಸರ ಪ್ರಕಾರ, ಸೋಮವಾರ ದೇಶದಲ್ಲಿ ನಡೆದ ಹಿಂಸಾಚಾರದಲ್ಲಿ ಐದು ಜನರು ಸಾವನ್ನಪ್ಪಿದ್ದಾರೆ.
ದಾಳಿಯ ಕೆಲವೇ ಗಂಟೆಗಳ ನಂತರ, ಮಹಿಂದ ರಾಜಪಕ್ಸೆ, ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ದೇಶದಲ್ಲಿ ಹಿಂಸಾಚಾರವು ಭೀಕರವಾದ ತಿರುವು ಪಡೆದಂತೆ, ಹಂಬನ್ತೋಟದಲ್ಲಿರುವ ರಾಜಪಕ್ಸೆ ಕುಟುಂಬದ ಪೂರ್ವಜರ ಮನೆಗೆ ಪ್ರತಿಭಟನಾಕಾರರು ಬೆಂಕಿ ಹಚ್ಚಿದರು.
ಶ್ರೀಲಂಕಾ ದೇಶವು ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟನ್ನ ಎದುರಿಸುತ್ತಿದೆ, ಇದು ಪ್ರಧಾನವಾಗಿ ಆಹಾರ, ಇಂಧನ ಶಕ್ತಿ ತೀವ್ರ ಕೊರತೆಗೆ ಕಾರಣವಾಗಿದೆ.