ಸುಮಲತಾಗೆ ಬಿರುಕು & ದುರಸ್ತಿ ಪದದ ವ್ಯತ್ಯಾಸ ಗೊತ್ತಿಲ್ಲ : ಜಿ.ಟಿ.ದೇವೇಗೌಡ
ಮೈಸೂರು : ಸಂಸದೆ ಸುಮಲತಾ ಅವರಿಗೆ ಬಿರುಕು ಮತ್ತು ದುರಸ್ತಿ ಪದದ ನಡುವಿನ ವ್ಯತ್ಯಾಸವೇ ಗೊತ್ತಿಲ್ಲ. ಹೀಗಾಗಿ ಅವರು ಕೆಆರ್ ಎಸ್ ಬಿರುಕು ಬಿಟ್ಟಿದೆ ಅಂತಾ ಹೇಳಿದ್ದಾರೆ ಎಂದು ಶಾಸಕ ಜಿ.ಟಿ.ದೇವೇಗೌಡ ವ್ಯಂಗ್ಯವಾಡಿದರು.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅವರು ಮೊದಲ ಬಾರಿ ಸಂಸದರಾಗಿರುವುದರಿಂದ ಪದ ಪ್ರಯೋಗ ಗೊತ್ತಿಲ್ಲದೆ ಏನೇನೋ ಹೇಳಿದ್ದಾರೆ. ಕೆಆರ್ ಎಸ್ ಉಳಿವಿನ ಬಗ್ಗೆ ಎಲ್ಲರಿಗೂ ಕಾಳಜಿ ಇದೆ. ಕೆಆರ್ ಎಸ್ ಬಿರುಕು ಬಿಟ್ಟಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಈ ವಿಚಾರದಲ್ಲಿ ಗೊಂದಲ ಸೃಷ್ಟಿಮಾಡುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದರು.
ಜೊತೆಗೆ ಕೆಆರ್ ಎಸ್ ವಿಚಾರವಾಗಿ ಜಗಳವಾಡುವುದು ಯಾರಿಗೂ ಶೋಭೆ ತರುವಂಥದ್ದಲ್ಲ ಎಂದು ಹೇಳಿದ ಜಿ.ಟಿ.ಸುಮಲತಾ, ಸುಮಲತಾ ಹಾಗೂ ಜೆಡಿಎಸ್ ಮುಖಂಡರು ಜನರ ಭಾವನೆಗಳನ್ನು ಅರ್ಥ ಮಾಡಿಕೊಳ್ಳಬೇಕು. ಈ ಕಿತ್ತಾಟ ಇಬ್ಬರಿಗೂ ನಷ್ಟವನ್ನುಂಟು ಮಾಡುತ್ತದೆ. ಮಾತಿನ ಸಮರ ಯಾರಿಗೂ ಲಾಭವನ್ನುಂಟು ಮಾಡುವುದಿಲ್ಲ. ಈ ಮಾತಿನ ಸಮರವನ್ನು ಅಂತ್ಯ ಮಾಡಬೇಕು ಎಂದು ಸಲಹೆ ನೀಡಿದರು.
ಅಲ್ಲದೆ ಮುಂದಿನ ಚುನಾವಣೆಯಲ್ಲಿ ನಾನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದರೂ ಅಚ್ಚರಿ ಇಲ್ಲ ಎಂದರು.