ಎಂಎಸ್ ಧೋನಿ ಹಾಗೂ ಸುರೇಶ್ ರೈನಾ ಎಂಬ ಭಾರತೀಯ ಕ್ರಿಕೇಟ್ ದಿಗ್ಗಜರ ನಿವೃತ್ತಿಯ ನಂತರ ಆಡಲೇಬೇಕಾದ ಒಂದಷ್ಟು ಮಾತುಗಳು:
ಮೊನ್ನೆ ಆಗಸ್ಟ್ 15 ಸ್ವತಂತ್ರ್ಯ ದಿನಾಚರಣೆ ಅಸಂಖ್ಯ ಭಾರತೀಯ ಕ್ರಿಕೇಟ್ ಪ್ರೇಮಿಗಳಿಗೆ ಬಹು ದೊಡ್ಡ ಶಾಕ್ ನೀಡಿದ ದಿನ. ಒಂದಿಡೀ ಜನರೇಶನ್ ಅನ್ನೇ ತನ್ನ ಅಭಿಮಾನಿಗಳನ್ನಾಗಿಸಿಕೊಂಡ ಲೀವಿಂಗ್ ಲೆಜೆಂಡ್ ಮಿಸ್ಟರ್ ಕೂಲ್, ಮಾಜಿ ಇಂಡಿಯನ್ ಕಪ್ತಾನ ಮಹೇಂದ್ರ ಸಿಂಗ್ ಧೋನಿ, ತಮ್ಮ ಇನ್ ಸ್ಟಾ ಗ್ರಾಂ ಪೋಸ್ಟ್ ನಲ್ಲಿ ನಿವೃತ್ತಿಯ ನಿರ್ಧಾರ ಘೋಷಿಸಿದರು. ಹಿಂದೆಯೇ ಭಾರತ ಕ್ರಿಕೇಟ್ ತಂಡದ ಆ್ಯಂಗ್ರಿ ಯಂಗ್ ಮ್ಯಾನ್, ಧಮಾಕೆದಾರ್ ಬ್ಯಾಟ್ಸ್ ಮನ್, ಚಿರತೆಯಷ್ಟೇ ಚಾಣಾಕ್ಷ ಫೀಲ್ಡರ್ ಸುರೇಶ್ ರೈನಾ ಸಹ ಧೋನಿಯ ನೆರಳನ್ನು ಹಿಂಬಾಲಿಸಿ ನಿವೃತ್ತಿಯ ಸೂಚನೆ ನೀಡಿದರು. ಕಳೆದೆರಡು ದಿನಗಳಿಂದ ಈ ದಾಂಡಿಗರ ನಿವೃತ್ತಿಯ ಕುರಿತಾದ ಹಲವು ಕೋನಗಳ, ಹಲವು ತರಹದ ವಿಶ್ಲೇಷಣೆಗಳನ್ನು ಪರಿಣಿತರು ಮಾಡುತ್ತಿದ್ದಾರೆ. ಧೋನಿ ಮತ್ತು ಸುರೇಶ್ ರೈನಾರ ಕ್ರಿಕೇಟ್ ಬದುಕನ್ನು ಆರಂಭದ ದಿನಗಳಿಂದ ತೀರಾ ಹತ್ತಿರದಿಂದ ಗಮನಿಸಿದ ನಾನು ಒಂದು ಬ್ಯಾಲೆನ್ಸ್ ಆರ್ಟಿಕಲ್ ಮಾಡಬೇಕೆಂದು ಕಾಯುತ್ತಿದ್ದೆ. ಸಾಧ್ಯವಾದಷ್ಟು ಪ್ರಾಮಾಣಿಕವಾಗಿ, ಯಾವುದೇ ಪೂರ್ವಾಗ್ರಹಗಳಿಲ್ಲದೇ ಈ ಇಬ್ಬರು ಕ್ರಿಕೇಟ್ ಲೆಜೆಂಡ್ ಗಳ ಸಾಧನೆ, ಸಂಘರ್ಷ ಮತ್ತು ಉಳಿದ ವಿವರಗಳನ್ನು ಕಟ್ಟಿಕೊಡುವ ಪ್ರಯತ್ನ ಈ ಅಂಕಣ.
ಪ್ರಾಯಶಃ ಮಹೇಂದ್ರ ಸಿಂಗ್ ಧೋನಿ ಎನ್ನುವ ವಿಚಿತ್ರ ಶೈಲಿಯ ಹೊಡೆತಗಳ ಸಿಡಿಲಬ್ಬರದ ಮಿಂಚಿನ ವೇಗದ ದಾಂಡಿಗ ನಮಗೆ ಪರಿಚಯವಾಗಿದ್ದು 2005ರ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ. ಅದಕ್ಕೂ ಮೊದಲಿನ 5 ಪಂದ್ಯಗಳಲ್ಲಿ ಧೋನಿಯ ಸಾಧನೆ ಅಷ್ಟೇನೂ ಹೇಳಿಕೊಳ್ಳುವ ಮಟ್ಟಿಗಿರಲಿಲ್ಲ. ಆರನೇ ಕ್ರಮಾಂಕದಲ್ಲಿ ಆಡಲು ಬರುತ್ತಿದ್ದ ಧೋನಿಯನ್ನು ಆ ಪಂದ್ಯದಲ್ಲಿ ಆಗಿನ ಟೀಂ ಇಂಡಿಯಾ ಕಪ್ತಾನ ಸೌರವ್ ಗಂಗೂಲಿ ತಮ್ಮ ಆರ್ಡರ್ ಅಂದ್ರೆ ಒನ್ ಡೌನ್ ನಲ್ಲಿ ಆಡಲು ಕಳಿಸಿದರು. ಸಚಿನ್ ಔಟಾಗಿದ್ದರು. ಇನ್ನೊಂದು ಬದಿಯಲ್ಲಿ ಸೆಹ್ವಾಗ್ ತಮ್ಮ ಎಂದಿನ ಶೈಲಿಯಲ್ಲಿ ಬ್ಯಾಟ್ ಮೂಲಕ ಉತ್ತರ ಹೇಳುತ್ತಿದ್ದರು. ಆಗ ಅಂಕಣಕ್ಕೆ ಪ್ಯಾಡ್ ತೊಟ್ಟು ಬಂದ ಧೋನಿ ನವ ಇತಿಹಾಸ ಸೃಷ್ಟಿಸಿದರು. ಕ್ರಿಕೆಟಿನ ಎಲ್ಲಾ ಸಾಂಪ್ರದಾಯಿಕ ಶೈಲಿ ಹಾಗೂ ಟೆಕ್ನಿಕಲ್ ಶಾಟ್ ಗಳನ್ನು ಮೀರಿ, ಬಾಲ್ ಗಳನ್ನು ಅತ್ಯಂತ ವಿಚಿತ್ರ ರೀತಿಯಲ್ಲಿ ಬೌಂಡರಿಗೆ ಅಟ್ಟುತ್ತಿದ್ದರು. ಅತ್ತ ಪಾಕಿ ಬೌಲರ್ ಗಳು ಕಂಗಾಲಾಗಿದ್ದರೇ, ಇತ್ತ ಭಾರತದ ನಮ್ಮ ಮುಂದಿನ ಪೀಳಿಗೆಯ ಕ್ರಿಕೆಟ್ ಪ್ರೇಮಿಗಳಿಗೊಬ್ಬ ಹೊಸ ಹೀರೋ ಸಿಕ್ಕಿದ್ದ. ಆವತ್ತೇ ಹೆಲಿಕ್ಯಾಪ್ಟರ್ ಶಾಟ್ ಎನ್ನುವ ಹೊಸ ಪದ ನಾವು ಕೇಳಿದ್ದೇವಾದ್ರೂ, ಅದನ್ನು ಮೊದಲೇ ಕ್ರಿಕೆಟ್ ದೇವರಾದ ಸಚಿನ್ ತೆಂಡೂಲ್ಕರ್ ತಮ್ಮ ಕೆಲವು ಪಂದ್ಯಗಳಲ್ಲಿ ಪರಿಚಯಿಸಿ ಆಗಿತ್ತು. ಆದರೂ ಅದೊಂದು ಶಾಟ್ ಗೆ ಬ್ರಾಂಡ್ ಒದಗಿಸಿದ ಕೀರ್ತಿ ಧೋನಿಯದ್ದಾಯ್ತು. ವಿಕೆಟ್ ಕೀಪರ್ ಹಿಂದೆ, ಥರ್ಡ್ ಮ್ಯಾನ್ ಹಾಗೂ ಸ್ಲಿಪ್ ಮತ್ತು ಗಲ್ಲಿಗಳ ನಡುವೆ ಅತ್ಯಂತ ಚಾಣಾಕ್ಷತನದಲ್ಲಿ ಬಾಲ್ ತೂರಿಸುವಲ್ಲಿ ಧೋನಿ ನಿಸ್ಸೀಮರಾದರು. ಧೋನಿಯ ಸಿಕ್ಸರ್ ಗಳಾದರೂ ಅಷ್ಟೇ ಮನಮೋಹಕ ಆದರೆ ಬಲಪ್ರಯೋಗದ ಗಟ್ಟಿ ಹೊಡೆತ. ನಮ್ಮನ್ನು ನಮ್ಮ ಹೆಣ್ಣು ಮಕ್ಕಳನ್ನು ಹೆಚ್ಚು ಆಕರ್ಷಿಸಿದ್ದು ಉದ್ದದ್ದ ಕೂದಲುಗಳ ಚೂಪು ಮೂತಿಯ ಎಣ್ಣೆಗೆಂಪಿನ ಐದಡಿ ಹತ್ತಿಂಚಿನ, 7ನೇ ನಂಬರ್ ಜೆರ್ಸಿಯ, ಆರಡಿಯ ಧೋನಿಯ ಅಪಿಯರೆನ್ಸ್.
2005ರ ಅದೇ ವರ್ಷ ಅಂತರಾಷ್ಟ್ರೀಯ ಏಕದಿನ ಪಂದ್ಯಕ್ಕೆ ಪಾದಾರ್ಪಣೆ ಮಾಡಿದ ಇನ್ನೊಬ್ಬ ಕಿರಿಯ ಎನರ್ಜಿಟಿಕ್ ಕ್ರಿಕೆಟರ್ ಸುರೇಶ್ ರೈನಾ. ರೈನಾ ಬಂದ ನಂತರ ಭಾರತದ ಫೀಲ್ಡಿಂಗ್ ಚುರುಕಿಗೆ ಮತ್ತಷ್ಟು ಬಲ ಬಂದಿತು. ಆಗ ಸೌರವ್ ದಾದಾ ಪರ್ವ ಕಾಲ ನಡೆಯುತ್ತಿತ್ತು. ಅದಾಗಲೇ ಯುವರಾಜ್ ಸಿಂಗ್ ಮತ್ತು ಮೊಹಮದ್ ಕೈಫ್ ಎಂಬ ಇಬ್ಬರು ಕ್ರಿಕೆಟಿಗರ ಹದ್ದಿನ ಕಣ್ಣು, ಚಿರತೆಯ ವೇಗ ಮತ್ತು ಮೊಸಳೆಯ ಹಿಡಿತ ಅಂಕಣದಲ್ಲಿ ಎದುರಾಳಿಯ 30-40 ರನ್ ಉಳಿಸುತ್ತಿದ್ದವು. ಸುರೇಶ್ ರೈನಾ ಇಂಡಿಯನ್ ಕ್ರಿಕೆಟ್ ನಲ್ಲಿ ಶೈನ್ ಆಗಲು ಕಾರಣವೇ ಅವರ ಚಾಣಾಕ್ಷ ಕ್ಷೇತ್ರಗಾರಿಕೆ. ಇವತ್ತಿಗೂ ದಾಖಲೆಗಳ ಪ್ರಕಾರ ಅತ್ಯಂತ ಚುರುಕಿನ ರನ್ ಔಟ್, ಅದ್ಭುತ ಕ್ಯಾಚ್ ಇತ್ಯಾದಿ ವಿಚಾರದಲ್ಲಿ ರೈನಾ, ಯುವರಾಜ್ ಗಿಂತ ಮುಂದಿದ್ದಾರೆ. ಇನ್ನು ರೈನಾ ಬ್ಯಾಟಿಂಗ್ ನಲ್ಲೂ ತೀರಾ ಅಗ್ರೇಸ್ಸೀವ್. ಭಾರತೀಯ ಕ್ರಿಕೆಟ್ ತಂಡದಲ್ಲಿ ಅನಾಯಾಸವಾಗಿ ಬೌಲರ್ ಗಳನ್ನು ದಂಡಿಸಬಲ್ಲ ಯುವರಾಜ್ ಸಿಂಗ್, ಸೆಹ್ವಾಗ್, ಧೋನಿಯ ನಂತರದ ಸ್ಥಾನ ಸುರೇಶ್ ರೈನಾರದ್ದಾಗಿತ್ತು. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಬಂದು ಯುವರಾಜ್ ಅಥವಾ ಧೋನಿಯ ಜೊತೆಗೂಡಿ ರೈನಾ ಗೆಲ್ಲಿಸಿದ ಪಂದ್ಯಗಳು ಸಾಕಷ್ಟು. ರೈನಾಗೆ ಬೌಲ್ ಮಾಡುವುದು ಯಾವುದೇ ರಾಷ್ಟ್ರಗಳ ಸ್ಪಿನ್ನರ್ ಗಳು ತಥಾ ಫಾಸ್ಟ್ ಬೌಲರ್ ಗಳಿಗೂ ಕಷ್ಟ ಅನ್ನುವ ಸ್ಥಿತಿ ಆಗ ಇತ್ತು. ರೈನಾ ಅರೆಕಾಲಿಕ ಬೌಲರ್ ಆಗಿಯೂ ಅನೇಕ ಸಲ ಚೆಂಡನ್ನು ಕೈಗೆತ್ತಿಕೊಂಡು ಯಶಸ್ವಿಯಾಗಿದ್ದಾರೆ. ಸ್ಲಿಪ್, ಗಲ್ಲಿ, ಕವರ್ಸ್, ಪಾಯಿಂಟ್, ಶಾರ್ಟ್ ಲೆಗ್, ಮಿಡ್ ಆನ್, ಲಾಂಗ್ ಆಫ್, ಥರ್ಡ್ ಮ್ಯಾನ್ ಹೀಗೆ ರೈನಾ ಎಲ್ಲೇ ಫೀಲ್ಡಿಂಗ್ ಮಾಡುತ್ತಿದ್ದರೂ ಎದುರಾಳಿಯ ಬ್ಯಾಟ್ಸ್ ಮನ್ ಅಲ್ಲೊಂದು ಎಚ್ಚರಿಕೆ ಕಣ್ಣಿಡುತ್ತಿದ್ದರು. ಅತ್ತ ಅಪ್ಪಿ ತಪ್ಪಿ ಹೊಡೆದ ಶಾಟ್ ಗಾಳಿಯಲ್ಲಿದ್ದರೇ ಅದು ಅವರ ಪಾಲಿಗೆ ಅಪಾಯವೇ. ರೈನಾರ ಕುಶಾಗ್ರ ಕ್ಷೇತ್ರರಕ್ಷಣೆಗೆ ಇಂತಹ ಸಾವಿರ ಉದಾಹರಣೆಗಳಿವೆ.
ಧೋನಿ ಹಾಗೂ ರೈನಾ ನಮ್ಮ ನಂತರದ ಇಡೀ ತಲೆಮಾರಿನ ಅಭಿಮಾನ ಗೆದ್ದ ಆಟಗಾರರು ಅನ್ನುವುದು ನಿರ್ವಿವಾದಿತ ಸತ್ಯ. ಧೋನಿ ಭಾರತದ ಹಲವು ಹೊಸ ಪ್ರಯೋಗಗಳಿಗೆ ಕಾರಣವಾದ ಆಟಗಾರ್ ಕಮ್ ನಾಯಕ. ಅತ್ಯಂತ ಚತುರಮತಿ ವಿಕೆಟ್ ಕೀಪರ್ ಸಹ ಆಗಿದ್ದ ಧೋನಿ, ವಿಕೆಟ್ ಹಿಂದೆ ಪಡೆದ ಬಲಿಗಳು ದಾಖಲೆ ಸೃಷ್ಟಿಸಿವೆ. ಫೀಲ್ಡ್ ನಲ್ಲಿ ಕ್ರಿಕೆಟ್ ಕಾಮನ್ ಸೆನ್ಸ್ ಅನ್ನುವುದನ್ನು ಸಮರ್ಥವಾಗಿ ಬಳಸಿಕೊಂಡವರು ಧೋನಿ. ಆ ಕಾಲದಲ್ಲಿ ಧೋನಿ ಎಂದರೆ ಅದೊಂದು ಬರೀ ಹೆಸರಾಗಿರಲಿಲ್ಲ. ಅದೊಂದು ವಿಭಿನ್ನ ಆಯಾಮವಾಗಿತ್ತು, ಅದೊಂದು ಅದ್ಭುತ ಮ್ಯಾನರಿಸಂ, ಅನನ್ಯ ಸ್ಟ್ರಾಟೆಜಿ, ಕ್ರಿಕೆಟ್ ನ ಮ್ಯಾಜಿಕ್, ಹೆಮ್ಮೆ, ಗರ್ವ ಎಲ್ಲವೂ ಆಗಿದ್ದವು. ಧೋನಿಗಾಗಿಯೇ, ಧೋನಿಯಿಂದಲೇ ಕ್ರಿಕೆಟ್ ನೋಡಲು ಶುರುಮಾಡಿದವರು ಲಕ್ಷಾಂತರ ಮಂದಿ.
2007ರ ಟಿ -20 ವಿಶ್ವಕಪ್ ನಿಮಗೆ ನೆನಪಿರಬೇಕಲ್ಲ, ಹಿರಿಯರಾದ ಸಚಿನ್, ಸೌರವ್, ದ್ರಾವಿಡ್ ಹಾಗೂ ಲಕ್ಷ್ಮಣ್ ಬೇರೆ ಬೇರೆ ಕಾರಣಗಳಿಂದ ದೂರ ಉಳಿದಿದ್ದರು. ಆಗ ಟೀಂ ಇಂಡಿಯಾ ಕಪ್ತಾನರಾಗಿ ಆಯ್ಕೆಯಾದವರು ಮಹೇಂದ್ರ ಸಿಂಗ್ ಧೋನಿ. ಅದು ಪ್ರಾಯಶಃ ಯಾವ ಭಾರತೀಯರು ಮರೆಯಲಾಗದ ವಿಶ್ವಕಪ್ ಯಾನ. ಅದಾದ ನಂತರ ಧೋನಿಯ ನಸೀಬು ಬದಲಾಗಿಹೋಯಿತು. ಧೋನಿ ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ, ಭಾರತೀಯ ಕ್ರಿಕೆಟ್ ಪ್ರೇಮಿಗಳ ಮನಸಿನಲ್ಲಿ ಶಾಶ್ವತ ಸ್ಥಾನ ಗಳಿಸಿಕೊಂಡರು. ಆ ಇಡೀ ಪಂದ್ಯಾವಳಿಯಲ್ಲಿ ನಾವು ಗಮನಿಸಿದ ಸಂಗತಿ ಎಂದರೆ ಆಟದಲ್ಲಿ ಅಗ್ರೆಸ್ಸೀವ್ ಆಗಿದ್ದ ಧೋನಿ, ಫೀಲ್ಡ್ ಕಾರ್ಯಾಚರಣೆಯಲ್ಲಿ ಕೂಲ್ ಆಗಿರುತ್ತಿದ್ದರು. ಮೈದಾನದಲ್ಲಿ ಅವರು ಕೋಪಿಸಿಕೊಳ್ಳುತ್ತಿರಲಿಲ್ಲ. ಔಟಾದಾಗಲೂ ತಮ್ಮ ಹತಾಶೆಯನ್ನು ತೋರ್ಪಡಿಸಿಕೊಳ್ಳುತ್ತಿರಲಿಲ್ಲ. ಮುಖ್ಯವಾಗಿ ಪಂದ್ಯದ ಕಡೆಯ ಹಂತದಲ್ಲಿ ವಿಕೆಟ್ ಗೆ ಗಟ್ಟಿಯಾಗಿ ಆತುಕೊಂಡು ಪಂದ್ಯವನ್ನು ಮುಗಿಸಿಕೊಟ್ಟು, ಸಂಭ್ರಮವನ್ನು ಅದುಮಿಟ್ಟು ಶೇಕ್ ಹ್ಯಾಂಡ್ ಕೊಟ್ಟು ಪೆವಿಲಿಯನ್ ಗೆ ಮರಳುತ್ತಿದ್ದರು. ಕ್ರಿಕೆಟ್ ಪ್ರೇಮಿಗಳು ಆಗ ಉದ್ಘರಿಸಿದರು. He is master finisher; The game changer. ನಿಜ ಹತ್ತಾರು ಪಂದ್ಯಗಳಲ್ಲಿ ಭಾರತಕ್ಕೆ ಗೆಲುವು ದೊರೆಸಿಕೊಟ್ಟರು ಧೋನಿ. ಕೊನೆಯ ಹಂತದಲ್ಲಿ ದೊಡ್ಡದೊಂದು ಹೊಡೆತ, ಸಿಕ್ಸರ್ ಅಥವಾ ಬೌಂಡರಿ ಮೂಲಕ ಪಂದ್ಯಕ್ಕೆ ಮಂಗಳ ಹಾಡುತ್ತಿದ್ದರು. ಭಾರತದ ಬೆಸ್ಟ್ ಫಿನಿಶರ್ ಅನ್ನಿಸಿಕೊಂಡರು. 2011ರ ವಿಶ್ವಕಪ್ ಪೈನಲ್ ಪಂದ್ಯದಲ್ಲೂ ಲಂಕಾ ವಿರುದ್ಧ ಸಿಕ್ಸರ್ ಸಿಡಿಸುವ ಮೂಲಕವೇ ಭಾರತಕ್ಕೆ ವಿಶ್ವಕಪ್ ದೊರಕಿಸಿಕೊಟ್ಟಿದ್ದು ನಿಮಗೆ ನೆನಪಿರಬಹುದು. 28 ವರ್ಷಗಳ ನಂತರ 2011ರಲ್ಲಿ ಭಾರತ ವಿಶ್ವಕಪ್ ಗೆಲ್ಲುವಲ್ಲಿ ಧೋನಿಯ ಸಂಘಟನಾತ್ಮಕ
ನಾಯಕತ್ವ ಪ್ರಮುಖ ಪಾತ್ರ ವಹಿಸುತ್ತದೆ. ವಿಶ್ವಕಪ್ ನಂತರವೂ ಧೋನಿ ಗೆಲ್ಲಿಸಿದ ಪಂದ್ಯಗಳು ಅದೆಷ್ಟೋ. ಎದುರಾಳಿಗಳ ಪಾಲಿಗೆ ಒಂದು ದಶಕ ಧೋನಿ ಸಿಂಹ ಸ್ವಪ್ನವಾಗಿಯೇ ಉಳಿದರು. ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಬಲಪಡಿಸುವ ಯೋಜನೆ ಸೌರವ್ ಗಂಗೂಲಿಯದ್ದಾದರೇ ಅದನ್ನೂ ಪೂರ್ಣಗೊಳಿಸಿದ್ದು ಧೋನಿ.
ಆದರೆ ಪ್ರತಿಯೊಂದಕ್ಕೂ ಒಂದು ಅಂತ್ಯವಿರುತ್ತದಲ್ಲ. ಧೋನಿ ಬಿಸಿಸಿಐ ನಲ್ಲಿದ್ದ ತಮ್ಮ ಸ್ಥಾನಮಾನವನ್ನು ದುರುಪಯೋಗಪಡಿಸಿಕೊಂಡರಾ? ಹೀಗಂತ ಚರ್ಚೆಗಳು ಶುರುವಾಗಿದ್ದು 2015ರ ವಿಶ್ವಕಪ್ ನಂತರ. ಕ್ರಮೇಣ ಧೋನಿಯ ಫಾರಂ ಸಹ ಮಂಕಾಗತೊಡಗಿತ್ತು. ಕ್ಯಾನ್ಸರ್ ಗೆದ್ದು ಮತ್ತೆ ತಂಡಕ್ಕೆ ಮರಳಿದ ಯುವರಾಜ್ ಸಿಂಗ್ ರನ್ನು ಧೋನಿ ಬೆಂಬಲಿಸಲಿಲ್ಲ ಅನ್ನುವ ಆರೋಪ ಕೇಳಿ ಬಂತು. ಖುದ್ದು ಯುವರಾಜ್ ಸಿಂಗ್ ತಂದೆ ಮಾಜಿ ಕ್ರಿಕೆಟಿಗ ಯೋಗರಾಜ್ ಸಿಂಗ್, ಧೋನಿಯನ್ನು ನೇರಾ ನೇರ ರಾಕ್ಷಸ ಎಂದರು. ಧೋನಿ ಹಿರಿಯ ಅನುಭವಿಗಳನ್ನು ನಿರ್ಲಕ್ಷಿಸಿದರು ಅನ್ನುವ ದೂರು ಎದುರಾಯ್ತು. ಇದಕ್ಕೆ ಇಂಬು ನೀಡುವಂತೆ ಭಾರತೀಯ ಕ್ರಿಕೆಟ್ ನ ದಂತಕಥೆಗಳೇ ಆದ ಸೌರವ್ ದಾದಾ, ವಿವಿಎಸ್ ಲಕ್ಷ್ಮಣ್, ರಾಹುಲ್ ದ್ರಾವಿಡ್, ವೀರೇಂದ್ರ ಸೆಹ್ವಾಗ್, ಗೌತಮ್ ಗಂಭೀರ್, ಹರ್ಭಜನ್ ಸಿಂಗ್, ಜಹೀರ್ ಖಾನ್, ಆಶಿಶ್ ನೆಹ್ರಾ ಮುಂತಾದವರು ಆಡುವ ಕ್ಷಮತೆ ಇದ್ದಾಗಲೂ ತಂಡದಿಂದ ಹೊರಗುಳಿದರು. ಮುಂದೊಂದು ದಿನ ಅಂತಿಮ ಪಂದ್ಯವೂ ಇಲ್ಲದಂತೆ ಬೇಸರದಿಂದ ನಿವೃತ್ತಿ ಘೋಷಿಸಿದರು. ಧೋನಿ, ಸೌರವ್ ದಾದಾ ಗರಡಿಯ ಹುಡುಗರನ್ನು ಉದ್ದೇಶ ಪೂರ್ವಕವಾಗಿಯೇ ನಿರ್ಲಕ್ಷಿಸಿದರೇ?
ಇದಕ್ಕಿಂತ ಮುಖ್ಯವಾಗಿ ಇನ್ನೊಂದು ಆರೋಪ ಧೋನಿಯ ವಿರುದ್ಧ ಕೇಳಿ ಬಂತು. ಅದು ಗ್ರೂಪಿಸಂ. ಒಂದು ಹಂತದಲ್ಲಿ ಪದೇ ಪದೇ ವಿಫಲರಾಗುತ್ತಿದ್ದ ಸುರೇಶ್ ರೈನಾ, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್ ಪರ ಧೋನಿ ಮಾತಾಡಿ ಸಮರ್ಥಿಸಿ ಉಳಿಸಿಕೊಂಡರು. ಆಯ್ಕೆ ಸಮಿತಿಯಲ್ಲಿ ಧೋನಿಯ ಮಾತಿಗೆ ಎದುರು ಮಾತೇ ಇರಲಿಲ್ಲ. ಟೀಂ ಇಂಡಿಯಾದೊಳಗೆ ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ ಟೀಂ ಹುಡುಗರೇ ಭರ್ತಿಯಾದರು. ಒಂದು ಹಂತದಲ್ಲಿ ಎಂಎಸ್ಡಿ ಸರ್ವಾಧಿಕಾರಿಯಂತೆ ವರ್ತಿಸಿದರಾ? ಧೋನಿಯೇ ಇದಕ್ಕೆ ಉತ್ತರ ನೀಡಬೇಕು.
ಕ್ರಿಕೆಟ್ ಪಂಡಿತರ ಒಂದು ವರ್ಗ ಮಹೇಂದ್ರ ಸಿಂಗ್ ಧೋನಿಯವರನ್ನು ಎರಡು ತರಹ ಅಳೆಯುತ್ತದೆ. ಭಾರತದ ಸರ್ವಶ್ರೇಷ್ಠ ಕಪ್ತಾನರಲ್ಲಿ ಕಪಿಲ್ ದೇವ್, ಮೊಹಮದ್ ಅಜರುದ್ದೀನ್, ಸೌರವ್ ಗಂಗೂಲಿ ಬಿಟ್ಟರೇ ನಂತರದ ಸ್ಥಾನವೇ ಮಹೇಂದ್ರ ಸಿಂಗ್ ಧೋನಿಯದ್ದು ಎನ್ನುವುದು ನಿಸ್ಸಂದೇಹ. ಆದರೇ 2007 ಹಾಗೂ 2011 ಎರಡೂ ವಿಶ್ವಕಪ್ ಗಳಲ್ಲಿ ಇದ್ದ ಅದ್ಭುತ ಟೀಂ ಕಟ್ಟಿದವರು ಸೌರವ್ ದಾದಾ. ಅದರ ಫಲ ಸಿಕ್ಕಿದ್ದು ಮಹೇಂದ್ರ ಸಿಂಗ್ ಧೋನಿಗೆ. ಗಟ್ಟಿ ತಳಪಾಯ ಹಾಕಿ ಕೋಟೆ ಕಟ್ಟಿದ್ದು ದಾದ ಆದರೆ ಪತಂಗ ಹಾರಿಸಿದ್ದು ಧೋನಿ ಎನ್ನುವಂತಾಯ್ತು. ನಂತರದ ದಿನಗಳಲ್ಲಿ ಖುದ್ದು ಧೋನಿಯೇ ಆಯ್ಕೆ ಮಾಡಿ ಕಟ್ಟಿದ ಟೀಂ ಇಂಡಿಯಾ 2015 ಹಾಗೂ 2019ರ ವಿಶ್ವಕಪ್ ನಲ್ಲಿ ಟ್ರೋಫಿ ಎತ್ತಲು ಯಾಕೆ ಸಾಧ್ಯವಾಗಲಿಲ್ಲ? ಹಿರಿಯ ಅನುಭವಿಗಳನ್ನು ಕಡೆಗಣಿಸಿ ತಮ್ಮ ಬೆಂಬಲಿಗರ ತಂಡ ಕಟ್ಟುವ ಮುಖೇನ ಧೋನಿ ಗ್ರೂಪಿಸಂ ಗೆ ನಾಂದಿ ಹಾಡಿದರು ಅನ್ನುವ ಆಪಾದನೆಯೂ ಅವರ ಮೇಲಿದೆ. 2013ರ ಚಾಂಪಿಯನ್ ಟ್ರೋಫಿಯ ನಂತರ ಯಾವುದೇ ಮಹತ್ವದ ಟೂರ್ನಿಯನ್ನು ಧೋನಿ ನಾಯಕತ್ವದಲ್ಲಿ ಗೆಲ್ಲಲಾಗಲಿಲ್ಲ ಅನ್ನುವುದೂ ಸಹ ಗಮನಿಸಬೇಕಾದ ಸಂಗತಿ. ಒಂದೇ ಒಂದು ರನೌಟ್ ಆಧಾರವಾಗಿಟ್ಟುಕೊಂಡು ಡೆಲ್ಲಿ ಡ್ಯಾಷರ್ ವೀರೇಂದ್ರ ಸೆಹ್ವಾಗ್ ಕರಿಯರ್ ಅನ್ನೇ ಅಂತ್ಯಗೊಳಿಸಿದ ಮಹೇಂದ್ರ ಸಿಂಗ್ ಧೋನಿ ಕಳೆದ ವಿಶ್ವಕಪ್ ನಲ್ಲಿ ನಿರ್ಣಾಯಕ ಸೆಮಿ ಫೈನಲ್ ನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ರನೌಟ್ ಆಗುವ ಮೂಲಕವೇ ತಮ್ಮ ಕ್ರಿಕೆಟ್ ಬದುಕನ್ನೇ ಕೊನೆಗಾಣಿಸಿಕೊಂಡಿದ್ದು ವಿಧಿಯ ವಿಪರ್ಯಾಸ.
2019ರ ಮಧ್ಯದಲ್ಲಿ ಟೀಂ ಇಂಡಿಯಾದಲ್ಲಿ ಕಾಣಿಸಿಕೊಂಡಿದ್ದ ಧೋನಿ ಆನಂತರ ಮತ್ತೆ ನೀಲಿ ಜೆರ್ಸಿ ತೊಡಲಿಲ್ಲ. ಧೋನಿ ಮೇನಿಯಾ ಕ್ರಮೇಣ ಮರೆಯಾಗತೊಡಗಿತು. ಕರೋನಾ ಕಾರಣದಿಂದ ಕ್ರಿಕೆಟ್ ಪಂದ್ಯಾವಳಿಗಳೇ ನಿಂತು ಹೋದವು. ಹೀಗಾಗಿ ಧೋನಿಗೊಂದು ಫೇರ್ ವೆಲ್ ಪಂದ್ಯವೂ ವ್ಯವಸ್ಥೆಯಾಗಲಿಲ್ಲ. ಟೆಸ್ಟ್ ಪಂದ್ಯಗಳಿಂದ ದಿಢೀರ್ ನೇ ನಿವೃತ್ತಿ ಘೋಷಣೆ ಮಾಡಿ ಅಚ್ಚರಿ ಹುಟ್ಟಿಸಿದ್ದ ಧೋನಿ, ಏಕದಿನ ಪಂದ್ಯಗಳಿಗೂ ಅಷ್ಟೇ ಅಚ್ಚರಿಯ ನಿವೃತ್ತಿ ಘೋಷಿಸಿದ್ದಾರೆ. ಹಿಂದೆಯೇ ಧೋನಿಯ ನೆರಳಿನಂತಿದ್ದ ಸುರೇಶ್ ರೈನಾ ಸಹ ತಮ್ಮ ನಿವೃತ್ತಿಯನ್ನು ನಿಕ್ಕಿ ಮಾಡಿ ಸ್ವಾಮಿನಿಷ್ಠೆ ಮೆರೆದಿದ್ದಾರೆ. ಇನ್ನು ಧೋನಿ ಹಾಗೂ ರೈನಾ ಭಾರತೀಯ ಕ್ರಿಕೆಟ್ ನ ಇತಿಹಾಸವಷ್ಟೇ. ಧೋನಿಯನ್ನು ಕಣ್ಣುಮುಚ್ಚಿಕೊಂಡು ಇಷ್ಟಪಡುವಷ್ಟೇ ಜನ ಒಂದೆಡೆಯಾದರೇ, ಅಷ್ಟೇ ಪ್ರಮಾಣದ ಕ್ರಿಕೆಟ್ ಅಭಿಮಾನಿಗಳು ಅವರ ಚಾರಿತ್ರಿಕ ತಪ್ಪು ನಿರ್ಣಯಗಳನ್ನು ಈಗ ವಿಶ್ಲೇಷಿಸುತ್ತಿದ್ದಾರೆ.
ಎಂ.ಎಸ್ ಧೋನಿ ಕುರಿತಾಗಿ ಏನೇ ತಕರಾರು ಭಿನ್ನಾಭಿಪ್ರಾಯಗಳಿರಲಿ, ಫೀಲ್ಡ್ ನಲ್ಲಿ ಅವರ ಅತ್ಯಂತ ತಣ್ಣಗಿನ ವರ್ತನೆ, ಸಂಘಟನೆ ಮತ್ತು ಶಿಸ್ತು ನಾವೆಲ್ಲ ಸದಾ ಮೆಚ್ಚುತ್ತಿದ್ದ ಅತ್ಯುತ್ತಮ ಗುಣ. ಅವರು ಈ ದೇಶಕ್ಕೆ ಎರಡು ವಿಶ್ವಕಪ್ ತಂದುಕೊಟ್ಟ ತಂಡದ ಸಾರಥ್ಯ ವಹಿಸಿದ್ದಂತೂ ಸತ್ಯ. ಅಫ್ ಕೋರ್ಸ್ ಧೋನಿ ಹತ್ತು ಹಲವು ಪಂದ್ಯಗಳನ್ನು ಗೆದ್ದು ಕೊಟ್ಟವರು. ಅದ್ಭುತ ಫಿನಿಶರ್ ಆಗಿದ್ದವರು: The game changer. ಲೀಲಾಜಾಲವಾಗಿ ಬ್ಯಾಟ್ ಬೀಸಿ, ಚಾಣಾಕ್ಷತನದಿಂದ ವಿಕೇಟ್ ಕೀಪಿಂಗ್ ಮಾಡಿ ಇಷ್ಟು ವರ್ಷ ನಮ್ಮನ್ನೆಲ್ಲಾ ರಂಜಿಸಿದವರು. ಓರ್ವ ಆಟಗಾರರಾಗಿ ಧೋನಿ ಅಥವಾ ರೈನಾರ ಸಾಮರ್ಥ್ಯವನ್ನು ತಳ್ಳಿ ಹಾಕುವಂತೆಯೇ ಇಲ್ಲ. ನಿಜ ಧೋನಿ ಟೀಂ ಮ್ಯಾನೇಜ್ಮೆಂಟ್, ಟೀಂ ಸೆಲೆಕ್ಷನ್, ಡ್ರೆಸ್ಸಿಂಗ್ ರೂಂ ನಲ್ಲಿ ತೆಗೆದುಕೊಳ್ಳುವ ನಿರ್ಧಾರಗಳ ವಿಚಾರದಲ್ಲಿ ಇವತ್ತಿಗೂ ನಮ್ಮ ತಕರಾರುಗಳಿವೆ. ಆದರೆ ಅದೆಲ್ಲದರ ಆಚೆಯೂ ಧೋನಿಯನ್ನು ಹಾಗೂ ಅವರ ಪರಮ ಪ್ರಿಯ ಶಿಷ್ಯ ರೈನಾರನ್ನು ಇಷ್ಟಪಡಲು ನೂರಾರು ಕಾರಣಗಳೂ ಇವೆ. ಧೋನಿಗೊಂದು ಮತ್ತು ಸುರೇಶ್ ರೈನಾರಿಗೊಂದು ಫೇರ್ ವೆಲ್ ಮ್ಯಾಚ್ ಸಿಗಬೇಕಿತ್ತು; ಅದೇ ಧೋನಿ ಅಂತಹ ಅವಕಾಶವನ್ನು ನಮ್ಮ ದ್ರಾವಿಡ್ ಗೆ, ಲಕ್ಷ್ಮಣ್ ಗೆ, ಗಂಭೀರ್, ಮುಂತಾದವರಿಗೆ ಮಾಡಿಕೊಟ್ಟಿದ್ದರೇ ಧೋನಿ ನಿಜಕ್ಕೂ ದೊಡ್ಡವರಾಗುತ್ತಿದ್ದರು. ಇರಲಿ, ಇನ್ನು ಕ್ಯಾಪ್ಟನ್ ಕೂಲ್ ರನ್ನು ಮತ್ತು ಮೈದಾನದಲ್ಲಿ ಸದಾ ಅಬ್ಬರಿಸುತ್ತಿದ್ದ ರೈನಾರನ್ನು ನೀಲಿ ಜರ್ಸಿಯಲ್ಲಿ ನೋಡಲಾಗಲ್ಲ ಅನ್ನೋದು ಒಂಥರಾ ಸಂಕಟ. ಮಿಸ್ ಯೂ ಮಿಸ್ಟರ್ ಕೂಲ್. ಮಿಸ್ ಯೂ ಸುರೇಶ್ ರೈನಾ..
-ವಿಭಾ (ವಿಶ್ವಾಸ್ ಭಾರದ್ವಾಜ್)