ಪದಾರ್ಪಣೆ ಪಂದ್ಯದಲ್ಲಿ ಅಭಿನವ್ ಅರ್ಧಶತಕ | ಪ್ರೀ ಕ್ವಾರ್ಟರ್ ಫೈನಲ್ ನಲ್ಲಿ ಕರ್ನಾಟಕಕ್ಕೆ ಜಯ
ಪದಾರ್ಪಣೆ ಪಂದ್ಯದಲ್ಲಿ ಅಭಿನವ್ ಮನೋಹರ್ ಅವರ ಭರ್ಜರಿ ಅರ್ಧಶತಕದ ಬಲದಿಂದ ಕರ್ನಾಟಕ ತಂಡ ದೆಹಲಿಯಲ್ಲಿ ಸೈಯ್ಯದ್ ಮುಷ್ತಾಕ್ ಅಲಿ ಟಿ-20 ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸೌರಾಷ್ಟ್ರ ತಂಡವನ್ನು ಮಣಿಸಿ, ಕ್ವಾರ್ಟರ್ ಫೈನಲ್ ಗೆ ಪ್ರವೇಶ ಪಡೆದಿದೆ.
ಮೊದಲು ಬ್ಯಾಟ್ ಮಾಡಿದ ಸೌರಾಷ್ಟ್ರ 20 ಓವರ್ ಗಳಲ್ಲಿ 7 ವಿಕೆಟ್ ಗೆ 145 ರನ್ ಸೇರಿಸಿತು.
ಇದಕ್ಕುತ್ತರವಾಗಿ ಕರ್ನಾಟಕ ಇನ್ನು ಒಂದು ಎಸೆತ ಬಾಕಿ ಇರುವಂತೆ ಎಂಟು ವಿಕೆಟ್ ಕಳೆದುಕೊಂಡು 150 ರನ್ ಸೇರಿಸಿ ಜಯ ಸಾಧಿಸಿತು.
ಸ್ಪರ್ಧಾತ್ಮಕ ಮೊತ್ತದ ಗುರಿಯನ್ನು ಹಿಂಬಾಲಿಸಿದ ಕರ್ನಾಟಕ ತಂಡದ ಆರಂಭ ಕಳಪೆಯಾಗಿತ್ತು.
ಆರಂಭಿಕ ಬಿ.ಆರ್ ಶರತ್ ಸೊನ್ನೆ ಸುತ್ತಿದರು. ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಡಿದ ಅನುಭವ ಹೊಂದಿರುವ ಮನೀಷ್ ಪಾಂಡೆ (4), ಕರುಣ್ ನಾಯರ್ (5) ರನ್ ಕಲೆ ಹಾಕುವಲ್ಲಿ ವಿಫಲರಾದರು.
ಆರಂಭಿಕ ರೋಹನ್ ಕದಂ ತಂಡಕ್ಕೆ ಆಧಾರವಾದರು. ಇವರು 26 ಎಸೆತಗಳಲ್ಲಿ 4 ಬೌಂಡರಿ ಸಹಾಯದಿಂದ 33 ರನ್ ಬಾರಿಸಿ ಮುನ್ನುಗುತ್ತಿದ್ದಾಗ ಇಲ್ಲದ ರನ್ ಕದಿಯಲು ಹೋಗಿ ಔಟ್ ಆದರು.
ಮಧ್ಯಮ ಕ್ರಮಾಂಕದಲ್ಲಿ ಅನಿರುದ್ಧ ಜೋಶಿ (13), ಜಗದೀಶ್ ಸುಚಿತ್ (5), ವಿಜಯಕುಮಾರ್ ವೈಶಾಖ್ (4) ರನ್ ಕಲೆ ಹಾಕುವಲ್ಲಿ ಹಿಂದೆ ಬಿದ್ದರು.
ಭರವಸೆಯ ಆಟಗಾರ ಅಭಿನವ್ ಮನೋಹರ್ 49 ಎಸೆತಗಳಲ್ಲಿ 2 ಬೌಂಡರಿ, 6 ಸಿಕ್ಸರ್ ಸಹಾಯದಿಂದ ಅಜೇಯ 70 ರನ್ ಬಾರಿಸಿ ಜಯದಲ್ಲಿ ಮಿಂಚಿದರು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಸೌರಾಷ್ಟ್ರ ತಂಡದ ಆರಂಭ ಕಳಪೆಯಾಗಿತ್ತು.
ಆರಂಭಿಕ ಹಿಮಾಲಯ ಬಾರ್ಡ್ (4), ವಿಶ್ವರಾಜ್ ಜಡೇಜಾ (3) ರನ್ ಕಲೆ ಹಾಕುವಲ್ಲಿ ವಿಫಲರಾದರು.
ಸಂಕಷ್ಟದಲ್ಲಿದ್ದ ತಂಡಕ್ಕೆ ಅರ್ಪಿತ್ ವಾಸವಾದ ಹಾಗೂ ಅನುಭವಿ ಶೆಲ್ಡನ್ ಜಾಕ್ಸನ್ ಆಧಾರವಾದರು.
ಈ ಜೋಡಿ ತಂಡಕ್ಕೆ 39 ರನ್ ಗಳ ಕಾಣಿಕೆ ನೀಡಿತು. ಅರ್ಪಿತ್ ವಾಸವಾದ 26 ರನ್ ಗಳಿಸಿ ಔಟ್ ಆದರು.
ನಾಲ್ಕನೇ ವಿಕೆಟ್ ಗೆ ಶೆಲ್ಡನ್ ಹಾಗೂ ಪ್ರೇರಕ್ ಮಂಕದ್ ಜೋಡಿ ತಂಡಕ್ಕೆ 59 ರನ್ ಕಲೆ ಹಾಕಿತು.
ಪ್ರೇರಕ್ 23 ರನ್ ಸೇರಿಸಿದ್ದಾಗ ಕರಿಯಪ್ಪ ಅವರಿಗೆ ವಿಕೆಟ್ ಒಪ್ಪಿಸಿದರು. ಉಳಿದ ಆಟಗಾರರು ರನ್ ಕಲೆ ಹಾಕುವಲ್ಲಿ ವಿಫಲವಾಯಿತು.
ಸ್ಟಾರ್ ಆಟಗಾರ ಶೆಲ್ಡನ್ ಜಾಕ್ಸನ್ 43 ಎಸೆತಗಳಲ್ಲಿ 3 ಬೌಂಡರಿ, 3 ಸಿಕ್ಸರ್ ಸಹಾಯದಿಂದ 50 ರನ್ ಬಾರಿಸಿ ಔಟ್ ಆದರು.