4 ವೇಗದ ಬೌಲರ್ಗಳು ಭಾರತಕ್ಕೆ ವಾಪಾಸ್..!
ಟೀಮ್ ಇಂಡಿಯಾ ಐಸಿಸಿ ಟಿ20 ವಿಶ್ವಕಪ್ನಲ್ಲಿ ನಿರೀಕ್ಷಿತ ಆರಂಭ ಕಂಡಿಲ್ಲ. ಕಳೆದ ಭಾನುವಾರ ಕಡುಬದ್ಧ ವೈರಿ ಪಾಕಿಸ್ತಾನ ವಿರುದ್ಧ ಹೀನಾಯವಾಗಿ ಸೋತ ಬಳಿಕ ವಿರಾಟ್ ಬಳಗ ಒತ್ತಡದಲ್ಲಿದೆ. ಮುಂದಿನ ಭಾನುವಾರ ನ್ಯೂಜಿಲೆಂಡ್ ವಿರುದ್ಧ ಮಾಡು ಇಲ್ಲವೆ ಮಡಿ ಅನ್ನುವಂತಹ ಪಂದ್ಯವನ್ನು ಆಡಬೇಕಿದೆ. ಈ ಮಧ್ಯೆ ಟೀಮ್ ಇಂಡಿಯಾ ನಾಲ್ವರು ವೇಗದ ಬೌಲರ್ಗಳನ್ನು ಕಳೆದುಕೊಂಡಿದೆ.
ಬಿಸಿಸಿಐ ಐಪಿಎಲ್ನಲ್ಲಿ ಗಮನ ಸೆಳೆಯುವಂತಹ ಪ್ರದರ್ಶನ ನೀಡಿದ್ದ ಹರ್ಷಲ್ ಪಟೇಲ್, ಉಮ್ರನ್ ಮಲಿಕ್, ಆವೇಶ್ ಖಾನ್ ಮತ್ತು ಲುಕ್ಮಾನ್ ಮೆರಿವಾಲಾ ಅವರನ್ನು ಯುಎಇನಲ್ಲಿ ಉಳಿಸಿಕೊಂಡಿತ್ತು.
ಈ ಬೌಲರ್ಗಳು ನೆಟ್ ಬೌಲರ್ಗಳಾಗಿ ಬಯೋಬಬಲ್ನಲ್ಲಿ ಉಳಿದುಕೊಂಡಿದ್ದರು. ಟೀಮ್ ಇಂಡಿಯಾದ ಪ್ರಾಕ್ಟೀಸ್ ಅವಧಿಯಲ್ಲಿ ಇವರು ತಂಡಕ್ಕೆ ನೆರವಾಗುತ್ತಿದ್ದರು. ಆದರೆ ಬಿಸಿಸಿಐ ಈಗ ಈ ನಾಲ್ವರನ್ನು ವಾಪಾಸ್ ಕರೆಸಿಕೊಳ್ಳುತ್ತಿದೆ. ಈ ನಾಲ್ವರು ಬೌಲರ್ಗಳು ಸೈಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ತಮ್ಮ ತಮ್ಮ ತಂಡವನ್ನು ಪ್ರತಿನಿಧಿಸಲು ಸಿದ್ಧವಾಗಬೇಕಿದೆ.
ಟೀಮ್ ಇಂಡಿಯಾ ವಿಶ್ವಕಪ್ನ ತನ್ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ 10 ವಿಕೆಟ್ಗಳ ಹೀನಾಯ ಸೋಲನ್ನು ಅನುಭವಿಸಿತ್ತು. ಪಾಕ್ ವೇಗದ ಬೌಲರ್ಗಳ ಮುಂದೆ ಭಾರತದ ಬ್ಯಾಟ್ಸ್ಮನ್ಗಳು ದೊಡ್ಡ ಮೊತ್ತ ಗಳಿಸಲು ವಿಫಲರಾಗಿದ್ದರು. ಟೀಮ್ ಇಂಡಿಯಾ ತನ್ನ ಗ್ರೂಪ್ ಹಂತದ ಎರಡನೇ ಪಂದ್ಯವನ್ನು ನ್ಯೂಜಿಲೆಂಡ್ ವಿರುದ್ಧ ಅಕ್ಟೋಬರ್ 31 ರಂದು ಆಡಬೇಕಿದ್ದು, ಅದಕ್ಕಾಗಿ ತಯಾರಿ ಮಾಡಿಕೊಳ್ಳುತ್ತಿದೆ. ರಿಸರ್ವ್ ಬೌಲರ್ಗಳು ಮತ್ತು ಮೈನ್ ಬೌಲರ್ಗಳು ಟೀಮ್ ಇಂಡಿಯಾಕ್ಕೆ ಈಗ ನೆರವಾಗುತ್ತಿದ್ದಾರೆ.