ADVERTISEMENT

Tag: #Vantara #JoyMoti #ElephantRescue #WildlifeCare #Jamnagar #AssamFloods #SaakshaTV

ಪ್ರವಾಹದಲ್ಲಿ ಗಂಭೀರವಾಗಿ ಗಾಯಗೊಂಡ 53 ವರ್ಷದ ಆನೆ ಜೋಯ್ ಮೋತಿ ವಂತಾರಾಗೆ ಏರ್‌ಲಿಫ್ಟ್!

ಜಾಮ್‌ನಗರ- ಅಸ್ಸಾಂ ಮತ್ತು ನಾಗಾಲ್ಯಾಂಡ್‌ನಲ್ಲಿ ಇತ್ತೀಚೆಗೆ ಸಂಭವಿಸಿದ ಭೀಕರ ಪ್ರವಾಹದ ಅಲೆಗಳಿಗೆ ಸಿಲುಕಿ ತೀವ್ರವಾಗಿ ಗಾಯಗೊಂಡಿದ್ದ 53 ವರ್ಷ ವಯಸ್ಸಿನ 'ಜೋಯ್‌ ಮೋತಿ' ಎಂಬ ಹೆಣ್ಣಾನೆಗೆ ವಿಶೇಷ ವೈದ್ಯಕೀಯ ಚಿಕಿತ್ಸೆ ನೀಡಲು, ಗುಜರಾತ್‌ನ ಜಾಮ್‌ನಗರದಲ್ಲಿರುವ ಪ್ರಸಿದ್ಧ 'ವಂತಾರಾ' (Vantara) ಆಸ್ಪತ್ರೆಗೆ ವಿಮಾನದ ಮೂಲಕ (Air transport) ಕರೆತರಲಾಗುತ್ತಿದೆ. ಭಾರತದ ಇತಿಹಾಸದಲ್ಲೇ ವನ್ಯಜೀವಿ ಚಿಕಿತ್ಸೆಗಾಗಿ ಆನೆಯೊಂದನ್ನು ವಿಮಾನದಲ್ಲಿ ಕರೆದೊಯ್ಯುತ್ತಿರುವುದು ಇದೇ ಮೊದಲ ಬಾರಿಯಾಗಿದೆ.  ಕಳೆದ ಜುಲೈ ತಿಂಗಳ ಎರಡನೇ ವಾರದಲ್ಲಿ ನಾಗಾಲ್ಯಾಂಡ್‌ನಲ್ಲಿ ಸಂಭವಿಸಿದ ಪ್ರವಾಹದಲ್ಲಿ ಜೋಯ್‌ ಮೋತಿ ಆನೆ ನೀರಿನಲ್ಲಿ ಕೊಚ್ಚಿಹೋಗಿತ್ತು. ಸ್ಥಳೀಯ ಸಾರ್ವಜನಿಕರು ಮತ್ತು ಸರಕಾರಿ ಸಂಸ್ಥೆಗಳ ನೆರವಿನಿಂದ ಅದನ್ನು ಸುರಕ್ಷಿತವಾಗಿ ರಕ್ಷಿಸಲಾಗಿತ್ತು. ಆದರೆ ಈ ದುರ್ಘಟನೆಯಲ್ಲಿ ಆನೆಗೆ ಮೈಯೆಲ್ಲಾ ಗಂಭೀರ ಗಾಯಗಳಾಗಿತ್ತು.  ಆನೆಯ ಹಣೆಯ ಭಾಗ, ಬಲ ಕಿವಿ, ಬಾಲದ ಮೇಲ್ಭಾಗ, ಎಡ ತೊಡೆ ಮತ್ತು ಹೊಟ್ಟೆಯ ಭಾಗದಲ್ಲಿ ತೀವ್ರ ಸ್ವರೂಪದ ಗಾಯಗಳಾಗಿವೆ. ಅದರಲ್ಲೂ ಜನನಾಂಗದ ಸುತ್ತ ಆಳವಾದ ಗಾಯವಾಗಿ ಹುಳುಗಳು ಬಿದ್ದಿದ್ದವು.  ಪ್ರವಾಹದ ಹೊಡೆತದಿಂದ ಆನೆಯ ಬಲ ಕಣ್ಣು ಸಂಪೂರ್ಣವಾಗಿ ಹಾನಿಗೊಂಡಿದ್ದು, ಶಾಶ್ವತವಾಗಿ ದೃಷ್ಟಿ ಕಳೆದುಕೊಂಡಿದೆ. ಅಲ್ಲದೆ ಕಣ್ಣಿನಿಂದ ಸತತವಾಗಿ ನೀರು ಬರುತ್ತಿದೆ.  ಮರ ಸಾಗಾಣಿಕೆ  ಕೆಲಸದ ಸಮಯದಲ್ಲಾದ ಕಾಡಿನ ಅಪಘಾತದಿಂದಾಗಿ ಹಿಂದೆ ಎಡ ಹಿಂದಿನ ಕಾಲಿಗೆ ಮೂಳೆ ಮುರಿತವಾಗಿತ್ತು. ಇದರಿಂದಾಗಿ ಆನೆಗೆ ಸಾಮಾನ್ಯ ರೀತಿಯಲ್ಲಿ ನಡೆಯಲು, ಆಹಾರ ಹಾಗೂ ನೀರನ್ನು ಹುಡುಕಿಕೊಳ್ಳಲು ಬಹಳ ಕಷ್ಟವಾಗುತ್ತಿತ್ತು.  ವೈದ್ಯಕೀಯ ಕಾರಣಗಳಿಗಾಗಿ ವಿಮಾನದ ಮೂಲಕ ರಕ್ಷಣೆ ರಕ್ಷಣೆಯ ಬಳಿಕ ಸ್ಥಳೀಯ ಮಟ್ಟದಲ್ಲಿ ಪ್ರಥಮ ಚಿಕಿತ್ಸೆ, ಡ್ರೆಸ್ಸಿಂಗ್, ನೋವು ನಿವಾರಕಗಳು ಮತ್ತು ಪೌಷ್ಟಿಕ ಸತ್ವಗಳನ್ನು ನೀಡಲಾಗಿತ್ತು. ಆದರೆ ಆನೆಯ ವಯಸ್ಸು, ಗಾಯಗಳ ತೀವ್ರತೆ ಮತ್ತು ಓಡಾಡಲು ಇರುವ ಸಮಸ್ಯೆಯನ್ನು ಗಮನಿಸಿದರೆ, ಸಾಂಪ್ರದಾಯಿಕ ರಸ್ತೆ ಮಾರ್ಗದ ಮೂಲಕ ದೂರದ ಪ್ರಯಾಣ ಮಾಡುವುದು ಅದರ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀಳುವ ಸಾಧ್ಯತೆಯಿತ್ತು.  ಆದ್ದರಿಂದ, ಪ್ರಯಾಣದ ಅವಧಿಯನ್ನು ಕನಿಷ್ಠಗೊಳಿಸಲು ಮತ್ತು ಆನೆಗೆ ಯಾವುದೇ ದೈಹಿಕ ಒತ್ತಡ ಉಂಟಾಗದಂತೆ ತಡೆಯಲು ಅತ್ಯಂತ ಎಚ್ಚರಿಕೆಯಿಂದ ವಿಮಾನದ ಮೂಲಕ (Airlift) ಜಾಮ್‌ನಗರಕ್ಕೆ ಕರೆತರಲು ನಿರ್ಧರಿಸಲಾಯಿತು. ವಂತಾರಾ ತಲುಪಿದ ತಕ್ಷಣವೇ ಜೋಯ್‌ ಮೋತಿಗೆ ತಜ್ಞ ವೈದ್ಯರಿಂದ ಸಮಗ್ರ ಆರೋಗ್ಯ ತಪಾಸಣೆ ನಡೆಸಿ, ವಿಶೇಷ ಚಿಕಿತ್ಸೆ ಹಾಗೂ ಪೌಷ್ಟಿಕಾಂಶದ ಆರೈಕೆ ನೀಡಲಾಗುತ್ತದೆ.  ಜೋಯ್‌ ಮೋತಿಯ ಈ ಘಟನೆಯು ವನ್ಯಜೀವಿ ತುರ್ತುಪರಿಹಾರ ಕೇಂದ್ರಗಳು ಸ್ಥಳೀಯವಾಗಿ ಎಷ್ಟು ಅಗತ್ಯ ಎಂಬುದನ್ನು ಎತ್ತಿ ತೋರಿಸಿದೆ. ಪ್ರವಾಹ, ಮಾನವ-ವನ್ಯಜೀವಿ ಸಂಘರ್ಷ ಅಥವಾ ಇತರೆ ಆರೋಗ್ಯ ತುರ್ತು ಸಂದರ್ಭಗಳಲ್ಲಿ ವನ್ಯಜೀವಿಗಳಿಗೆ ತಕ್ಷಣದ ಚಿಕಿತ್ಸೆ ಸಿಗುವಂತಾಗಲು, ಅಸ್ಸಾಂನಲ್ಲಿ ಮೂರು ಪ್ರತ್ಯೇಕ ವನ್ಯಜೀವಿ ವೈದ್ಯಕೀಯ ಆರೈಕೆ ಕೇಂದ್ರಗಳನ್ನು (ಅಸ್ಸಾಂ ಅರಣ್ಯ ಇಲಾಖೆಯಡಿ ಸಂಪೂರ್ಣ ಸ್ವಾಯತ್ತತೆಯಿಂದ ಕಾರ್ಯನಿರ್ವಹಿಸುವ) ಸ್ಥಾಪಿಸಲು ವಂತಾರಾ ಪ್ರಸ್ತಾವನೆ ಸಲ್ಲಿಸಿದೆ. ಭವಿಷ್ಯದಲ್ಲಿ ಇಂತಹ ಪ್ರಕರಣಗಳಿಗೆ ದೂರದ ಪ್ರಯಾಣದ ಅವಶ್ಯಕತೆ ಇಲ್ಲದಂತೆ ಸ್ಥಳೀಯವಾಗಿ ಉನ್ನತ ಮಟ್ಟದ ಚಿಕಿತ್ಸೆ ದೊರೆಯುವಂತೆ ಮಾಡುವುದು ಇದರ ಮುಖ್ಯ ಉದ್ದೇಶವಾಗಿದೆ.  ಇದು ಜೋಯ್‌ ಮೋತಿಯ ಯಾವುದೇ ಶಾಶ್ವತ ಸ್ಥಳಾಂತರವಲ್ಲ; ಕೇವಲ ಜೀವ ಉಳಿಸುವ ತುರ್ತು ಚಿಕಿತ್ಸೆಗಾಗಿ ಮಾತ್ರ ಮಾಡಲಾಗಿರುವ ತಾತ್ಕಾಲಿಕ ವ್ಯವಸ್ಥೆಯಾಗಿದೆ. ಚಿಕಿತ್ಸೆಯ ಬಳಿಕ ಜೋಯ್‌ ಮೋತಿ ಸುರಕ್ಷಿತ ಜೀವನ ನಡೆಸಲು ವಂತಾರಾದಲ್ಲಿ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ.

Read moreDetails

FOLLOW US