t-20 cricket: ಟೀಮ್ ಇಂಡಿಯಾ ಕಣಜದಲ್ಲಿ ಕೀಟಾಣುಗಳ ಕಾಟ..! ಆಂಗ್ಲರ ಐಸಿಯುನಲ್ಲಿ ಗಂಭೀರ್ ಹುಡುಗರು..! 🚨🏏🔥
💥 ಕೊನೆಗೂ ಅರ್ಥವಾಗಬೇಕು.. ಅರ್ಥವಾಗಿದೆ ಅನ್ಸುತ್ತೆ. ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಬರೀ ಐಪಿಎಲ್ ಮಾನದಂಡವಲ್ಲ…! ಬಿಸಿಸಿಐ, ಟೀಮ್ ಇಂಡಿಯಾ ಆಯ್ಕೆ ಸಮಿತಿ ಮತ್ತು ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ಗೆ ಸ್ಪಷ್ಟ ಅರಿವಾಗಲೇಬೇಕು. ಅಲ್ಲದೆ ಇದು ಭಾರತೀಯ ಕ್ರಿಕೆಟ್ಗೆ ಎಚ್ಚರಿಕೆಯ ಗಂಟೆ..! 🚨🏏
ಟಿ-20 ಕ್ರಿಕೆಟ್ ಅಂದ್ರೆ ಬರೀ ಹೊಡಿಬಡಿ ಆಟವಲ್ಲ. ಕೆಲವೊಂದು ಬಾರಿ ಟೆಸ್ಟ್ ಕ್ರಿಕೆಟ್ನ ತಾಳ್ಮೆಯೂ ಬೇಕು. ಏಕದಿನ ಕ್ರಿಕೆಟ್ನ ಏಕಾಗ್ರತೆಯೂ ಬೇಕು. ದೇಶಿ ಕ್ರಿಕೆಟ್ನಲ್ಲಿ ಬೆವರಿಳಿಸಿರುವ ಅನುಭವವೂ ಬೇಕು. ಕಳೆದ 18-19 ವರ್ಷಗಳಲ್ಲಿ ಟೀಮ್ ಇಂಡಿಯಾಗೆ ಈ ವಾಸ್ತವ ಗೊತ್ತೇ ಆಗಲಿಲ್ಲ.
ಯಾಕಂದ್ರೆ ಮೂರು ಮಾದರಿಯ ಕ್ರಿಕೆಟ್ ಜೊತೆಗೆ ದೇಸಿ ಕ್ರಿಕೆಟ್ನಲ್ಲಿ ಆಡಿರುವ ಒಂದು ಬಲಿಷ್ಠ ಆಟಗಾರರ ಪಡೆಯೇ ಟೀಮ್ ಇಂಡಿಯಾದ ಶಕ್ತಿಯಾಗಿತ್ತು. ಆದ್ರೆ ಈಗ ಹಳೆಯ ಮರಗಳನ್ನು ಕಿತ್ತು ಹಾಕಿ ಹೊಸ ಗಿಡಗಳನ್ನು ಪೋಷಣೆ ಮಾಡುವಾಗ ಕೆಲವೊಂದು ಸಮಸ್ಯೆಗಳು ಎದುರಾಗೋದು ಸಹಜ. ಫಲವತ್ತಾದ ಮಣ್ಣಿನಲ್ಲಿ ಕೀಟಾಣುಗಳು ಸೇರಿಕೊಂಡಂತೆ ಸದ್ಯದ ಟೀಮ್ ಇಂಡಿಯಾದ ಪರಿಸ್ಥಿತಿಯೂ ಹಾಗೇ ಆಗಿದೆ.
ಇಂಗ್ಲೆಂಡ್ ವಿರುದ್ಧದ ಟಿ-20 ಸರಣಿಯ ಮಹಾಮಂಗಳಾರತಿಗೆ ಟೀಮ್ ಇಂಡಿಯಾದ ಯಾರೊಬ್ಬರ ಆಟಗಾರರ ನಾಮಸ್ಮರಣೆಯೂ ಬೇಡ. ಭರವಸೆಯನ್ನಿಟ್ಟಿದ್ದ ಆಟಗಾರರು ನೀರಿನಲ್ಲಿ ಹೋಮ ಮಾಡಿದಂತೆ ಆಡಿದ್ದಾರೆ. ಒಂದು ತಂಡವಾಗಿ ಆಡಲು ಸಂಪೂರ್ಣವಾಗಿ ವಿಫಲವಾಗಿದ್ದಾರೆ. ಸದಾ ಗೆಲುವಿನಲ್ಲಿ ಅಲೆಯಲ್ಲಿ ತೇಲಾಡುತ್ತಿದ್ದ ಟೀಮ್ ಇಂಡಿಯಾದ ಹೀನಾಯ ಸೋಲನ್ನು ಅಭಿಮಾನಿಗಳು ಖಂಡಿತವಾಗಿಯೂ ಸಹಿಸಿಕೊಳ್ಳುತ್ತಿಲ್ಲ. 🤦♂️
ಹೌದು, ಈ ಹಿಂದೆಯೂ ಟೀಮ್ ಇಂಡಿಯಾ ಹೀನಾಯವಾಗಿ ಸೋತಿದೆ. ಇದೇನೂ ಮೊದಲು ಸಲವಲ್ಲ. ಆದ್ರೆ ಇಂಗ್ಲೆಂಡ್ ವಿರುದ್ದದ ವೈಟ್ವಾಶ್ ಭಾರತೀಯ ಅಭಿಮಾನಿಗಳಿಗೆ ಕಹಿಯಾಗಿದೆ. ಯಾಕಂದ್ರೆ ಭವಿಷ್ಯದ ಟೀಮ್ ಇಂಡಿಯಾವನ್ನು ಕಣ್ಣಲ್ಲಿ ನೋಡುತ್ತಿರುವ ಕ್ರಿಕೆಟ್ ಪ್ರೇಮಿಗಳಿಗೆ ನಿರಾಸೆಯಾಗಿದೆ. 💔
ಅದಕ್ಕಿಂತಲೂ ಹೆಚ್ಚಾಗಿ ತಂಡದೊಳಗಿನ ಸರ್ವಾಧಿಕಾರಿ ಧೋರಣೆ, ತಂಡದೊಳಗಿನ ಭಿನ್ನಾಭಿಪ್ರಾಯ, ಅಂತಿಮ ಹನ್ನೊಂದರ ಬಳಗವನ್ನು ಆಯ್ಕೆ ಮಾಡುವಾಗ ಆಗುತ್ತಿರುವ ಗೊಂದಲ. ಪ್ಲಾನೇ ಇಲ್ಲದ ಗೇಮ್ ಪ್ಲಾನ್. ಅನುಭವದ ಕೊರತೆ.. ಹೊಂದಾಣಿಕೆ ಇಲ್ಲದ ಆಟ.. ಬಿಸಿರಕ್ತದ ಹುಡುಗರ ಹುಡುಗಾಟ. ಹೆಡ್ ಕೋಚ್ ಮತ್ತು ನಾಯಕನ ನಡುವಿನ ಭಿನ್ನರಾಗ. ಹೀಗೆ ಒಂದಲ್ಲ ಒಂದು ಸಮಸ್ಯೆಗಳ ಸುಳಿಯಲ್ಲಿರುವ ಟೀಮ್ ಇಂಡಿಯಾದ ಸದ್ಯದ ಪರಿಸ್ಥಿತಿ ಮಾತ್ರ ಅಯೋಮಯವಾಗಿದೆ.
ಅಂದ ಹಾಗೇ, ಹೆಡ್ ಕೋಚ್ ಗಂಭೀರ್ ಮಾರ್ಗದರ್ಶನದಲ್ಲಿ ಪ್ರತಿಷ್ಠಿತ ಟ್ರೋಪಿಗಳನ್ನುಗೆದ್ದಿರಬಹುದು. ಆದ್ರೆ ಹೆಡ್ ಕೋಚ್ ಆಗಿ ಗಂಭೀರ್ ಗೆಲುವಿಗಿಂತ ಹೆಚ್ಚು ಸೋಲನ್ನೇ ಕಂಡಿರುವುದು ಜಾಸ್ತಿ. ಇಂತಹ ಪರಿಸ್ಥಿತಿ ಈ ಹಿಂದೆಯೂ ಆಗಿದೆ. ಆಗಲೂ ಟೀಕೆ ಬಂದಿದೆ. ಈಗಲೂ ಟೀಕೆ ಬರುತ್ತಿದೆ. ಭಾರತದಲ್ಲಿ ಅಭಿಮಾನಿಗಳ, ಕ್ರಿಕೆಟ್ ಪಂಡಿತರ ಟೀಕೆಗಳು ಮೂಮೂಲಿ. ಆದ್ರೆ ಇದನ್ನು ಲಘುವಾಗಿ ಪರಿಗಣಿಸುವಂತಿಲ್ಲ. ಯಾಕಂದ್ರೆ ಭಾರತದಲ್ಲಿ ಒಂದು ಹೊತ್ತಿನ ಊಟ ತಿಂಡಿಯನ್ನಾದ್ರೂ ಬಿಡ್ತಾರೆ. ಆದ್ರೆ ಟೀಮ್ ಇಂಡಿಯಾದ ಆಟ ನೋಡುವುದನ್ನಂತೂ ಬಿಡೋ ಚಾನ್ಸೆ ಇಲ್ಲ. ಅದಕ್ಕೆ ಕಾರಣ ಕ್ರಿಕೆಟ್ ಆಟವನ್ನು ಭಾರತೀಯ ಅಭಿಮಾನಿಗಳು ಮನಸಾರೆ ಪ್ರೀತಿಸ್ತಾರೆ. ಕ್ರಿಕೆಟಿಗರನ್ನು ಹೃದಯದಿಂದ ಆರಾಧಿಸುತ್ತಾರೆ.
ಹಾಗಂತ ಇಲ್ಲಿ ಬರೀ ಹೆಡ್ ಗಂಭೀರ್ ನನ್ನೇ ದೂಷಣೆ ಮಾಡುವುದರಲ್ಲಿ ಅರ್ಥವಿಲ್ಲ. ಮೇಲ್ನೋಟಕ್ಕೆ ಗಂಭೀರನ ಗಂಭೀರ ನಡೆ, ಖಾರವಾದ ಮಾತಿಗೆ ಟೀಕೆ ಮಾಡಲೇಬೇಕಾಗುತ್ತದೆ. ಆದ್ರೆ ತಂಡದ ಆಟಗಾರರು ಕೂಡ ಹೆಡ್ ಕೋಚ್ನ ಪ್ಲಾನ್ನಂತೆ ಆಡಬೇಕು. ಸೂಕ್ತ, ಸಲಹೆ, ಮಾರ್ಗದರ್ಶನಗಳನ್ನು ನೀಡಿದ್ರೆ ಅದನ್ನು ಕೇಳಿಸಿಕೊಳ್ಳುವ ಸಂಯಮ ಆಟಗಾರರಲ್ಲೂ ಇರಬೇಕು. ಆದ್ರೆ, ಮೈದಾನದಲ್ಲಿ ಟೀಮ್ ಇಂಡಿಯಾದ ಎಳೆಯ ಆಟಗಾರರು ಕೋಚ್ ನಿರ್ದೇಶನ ಹಾಗೂ ಯೋಜನೆಯನ್ನು ಕಾರ್ಯರೂಪಕ್ಕೆ ತರುತ್ತಿಲ್ಲ. ಮುಖ್ಯವಾಗಿ ಗಂಭೀರ್ನ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಬ್ಲ್ಯೂ ಬಾಯ್ಸ್ಗೆ ಸಾಧ್ಯವಾಗುತ್ತಿಲ್ಲ. 🤷♂️ 🤬
ತಂಡಕ್ಕೆ ಸೂಪರ್ ಸ್ಟಾರ್ ಆಟಗಾರರು ಬೇಡ. ತಂಡದ ಹಿತಕ್ಕಾಗಿ ಆಡುವ ಆಟಗಾರರು ಬೇಕು ಎಂಬ ಗಂಭೀರ್ ವಾದವನ್ನು ಒಪ್ಪಿಕೊಳ್ಳೋಣ. ಆದ್ರೆ ಸದ್ಯದ ಟೀಮ್ ಇಂಡಿಯಾದಲ್ಲಿ ಸಚಿನ್, ಗಂಗೂಲಿ, ಧೋನಿ, ಕೊಹ್ಲಿ, ರೋಹಿತ್ನಂತಹ ಸೂಪರ್ ಸ್ಟಾರ್ ಆಟಗಾರರು ಇಲ್ಲ. ತಂಡದ ಹಿತಕ್ಕಾಗಿ ಆಡುವಂತಹ ದ್ರಾವಿಡ್, ಲಕ್ಷ್ಮಣ್, ಕುಂಬ್ಳೆ, ಬೂಮ್ರಾ, ಜಡೇಜಾ, ಆಶ್ವಿನ್ನಂತಹ ಆಟಗಾರರು ಇಲ್ಲ. ಇದೇ ಟೀಮ್ ಇಂಡಿಯಾಗೆ ಮೈನಸ್ ಆಗಿರೋದು. ದೊಡ್ಡ ಸಮಸ್ಯೆಯೂ ಆಗಿರೋದು.
ಹೌದು, 26 ವರ್ಷಗಳ ಹಿಂದೆ ಸೌರವ್ ಗಂಗೂಲಿ ಟೀಮ್ ಇಂಡಿಯಾಗೆ ಗೆಲುವಿನ ಅಡಿಪಾಯ ಹಾಕಿಕೊಟ್ಟಿದ್ದರು. ರಾಹುಲ್ ದ್ರಾವಿಡ್ ಗೆಲುವಿನ ಗೋಡೆ ಕಟ್ಟುವುದು ಹೇಗೆ ಅಂತ ತೋರಿಸಿದ್ರು. 👑 ಧೋನಿ ಗೆಲುವಿಗೆ ಯಾವ ರೀತಿ ಭದ್ರವಾದ ಕಾಂಕ್ರಿಟ್ ಹಾಕೋದು ಎಂಬುದನ್ನು ಕಲಿಸಿಕೊಟ್ಟಿದ್ದರು. 🏗️ವಿರಾಟ್ ಕೊಹ್ಲಿ ಗೆಲುವಿನ ಗೋಪುರ ಕಟ್ಟುವ ಕಲೆಯನ್ನು ಪ್ರದರ್ಶಿಸಿದ್ರು. 🏰 ರೋಹಿತ್ ಶರ್ಮಾ ಗೋಪುರದ ಮೇಲೆ ಕಲಶವಿಡುವ ವಿಧಾನವನ್ನು ಪರಿಚಯಿಸಿದ್ರು. ಸೂರ್ಯಕುಮಾರ್ ಯಾದವ್ ಟೀಮ್ ಇಂಡಿಯಾದ ಗರ್ಭಗುಡಿಯನ್ನು ರಕ್ಷಣೆ ಮಾಡುವ ಕಾವಲುಗಾರನ ಜವಾಬ್ದಾರಿಯನ್ನು ನಿಭಾಯಿಸಿದ್ರು. ಆದ್ರೆ ಟೀಮ್ ಇಂಡಿಯಾದ ಮಾಜಿ ನಾಯಕರ ಪರಿಪೂರ್ಣ ಉತ್ತರಾಧಿಕಾರಿ ಯಾರು ಅನ್ನೋ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ❓
ಹಾಗಂತ ಟೀಮ್ ಇಂಡಿಯಾದಲ್ಲಿ ಪ್ರತಿಭೆಗಳಿಗೆ ಖಂಡಿತವಾಗಿಯೂ ಕೊರತೆ ಇಲ್ಲ. ಐಪಿಎಲ್ ಅಂದ್ರೆ ಬರೀ ದುಡ್ಡು ಮಾಡುವುದಲ್ಲ. ಯುವ ಪ್ರತಿಭೆಗಳ ಅನ್ವೇಷಣೆ ಹಾಗೂ ಸಾಮಥ್ರ್ಯಕ್ಕೆ ವೇದಿಕೆಯನ್ನೂ ಕಲ್ಪಿಸಿದೆ. ಆದ್ರೆ ಈ ಪ್ರತಿಭೆಗಳನ್ನು ಸರಿಯಾದ ರೀತಿಯಲ್ಲಿ ಪೋಷಣೆ ಮಾಡಿ ಬೆಳೆಸುವುದು ಬಿಸಿಸಿಐನ ಕರ್ತವ್ಯವಾಗಿದೆ. ಐಪಿಎಲ್ ಜೊತೆಗೆ ದೇಸಿ ಕ್ರಿಕೆಟ್ನ ಪ್ರದರ್ಶನವನ್ನು ಆಧಾರವಾಗಿಟ್ಟುಕೊಂಡು ತಂಡದ ಆಯ್ಕೆ ಪ್ರಕ್ರಿಯೆ ನಡೆಸಬೇಕು. ಐಪಿಎಲ್ನಲ್ಲಿ ಬೆಳಗಿದ ಕೊಹ್ಲಿ, ಜಡೇಜಾ, ಬೂಮ್ರಾನಂತಹ ಬೆರಳೆಣಿಕೆಯಷ್ಟು ಆಟಗಾರರು ಮಾತ್ರ ಟೀಮ್ ಇಂಡಿಯಾದ ಮೂರು ಮಾದರಿಯ ಕ್ರಿಕೆಟ್ನಲ್ಲಿ ಸ್ಥಾನ ಪಡೆಯಲು ಸಫಲರಾಗಿದ್ದಾರೆ.ಇನ್ನುಳಿದ ಬಹುತೇಕ ಐಪಿಎಲ್ ಪ್ರತಿಭೆಗಳು ಬರೀ ಟಿ-20 ಕ್ರಿಕೆಟ್ ಹಾಗೂ ಏಕದಿನ ಕ್ರಿಕೆಟ್ಗೆ ಮಾತ್ರ ಸೀಮಿತವಾಗಿದ್ದಾರೆ.
ಅಂದ ಹಾಗೇ, ಟೀಮ್ ಇಂಡಿಯಾದಲ್ಲಿ ಬ್ಯಾಕ್ ಅಪ್ ಪ್ಲೇಯರ್ಸ್ ಇಲ್ಲ ಎಂಬುದನ್ನು ಒಪ್ಪಿಕೊಳ್ಳಲು ಸಾಧ್ಯನೇ ಇಲ್ಲ. ತಂಡದಲ್ಲಿ ಸ್ಥಾನ ಪಡೆಯಲು ಆಟಗಾರರು ಕ್ಯೂನಲ್ಲಿ ನಿಂತಿದ್ದಾರೆ. ಆದ್ರೆ ಯಾರನ್ನು ಆಯ್ಕೆ ಮಾಡೋದು ಎಂಬುದೇ ಯಕ್ಷ ಪ್ರಶ್ನೆಯಾಗಿ ಕಾಡುತ್ತಿದೆ. ಹೊಡಿಬಡಿ ಆಟದ ಜೊತೆ ಸ್ಥಿರತೆ ಕಾಯ್ದುಕೊಳ್ಳುವ ಅಭ್ಯಾಸವನ್ನು ಬಹುತೇಕ ಯುವ ಆಟಗಾರರು ಮೈಗೂಡಿಸಿಕೊಂಡಿಲ್ಲ.
ಇನ್ನೊಂದೆಡೆ, ಆಯ್ಕೆ ಸಮಿತಿ ಮತ್ತು ಟೀಮ್ ಮ್ಯಾನೇಜ್ಮೆಂಟ್ ಆಯ್ಕೆ ಪ್ರಕ್ರಿಯೆಯಲ್ಲಿ ಸಂಪೂರ್ಣವಾಗಿ ಎಡವುತ್ತಿದೆ ಎಂಬುದು ಕೂಡ ಸುಳ್ಳಲ್ಲ. ಮತ್ತೊಂದು ವಿಚಾರ ಹೇಳಲೇಬೇಕು. ಸೌರವ್ ಗಂಗೂಲಿಯಿಂದ ಹಿಡಿದು ರೋಹಿತ್ ಶರ್ಮಾ ತನಕ ತಂಡದ ಆಯ್ಕೆಯಲ್ಲಿ ನಾಯಕನ ಪಾತ್ರವೂ ಪ್ರಮುಖವಾಗಿತ್ತು.
ಆದ್ರೆ ಆ ಹಳೆಯ ಸಾಂಪ್ರದಾಯ ಈಗಿಲ್ಲ. ಒಬ್ಬ ಆಟಗಾರನಲ್ಲಿ ಪ್ರತಿಭೆ ಇದೆ ಅಂದ್ರೆ ನಾಯಕ ಆತನ ಬೆನ್ನಿಗೆ ನಿಲ್ಲುತ್ತಿದ್ದ. ವೈಫಲ್ಯ ಅನುಭವಿಸಿದ್ರೂ ಸಾಲು ಸಾಲು ಅವಕಾಶಗಳನ್ನು ನೀಡುತ್ತಿದ್ದ. ಆದ್ರೆ ಈಗ ಆಗುತ್ತಿರುವುದು ಏನು..? ಒಂದೆರಡು ಪಂದ್ಯಗಳಲ್ಲಿ ವೈಫಲ್ಯ ಅನುಭವಿಸಿದ್ರೆ ಆ ಆಟಗಾರನ ವೃತ್ತಿಬದುಕು ಸರ್ವನಾಶ. ತಮಗೆ ಬೇಕಾದವರಿಗೆ ಅವಕಾಶ ಸಿಗುತ್ತೆ ಹೊರತು ನಿಜವಾದ ಪ್ರತಿಭೆಗೆ ಅವಕಾಶ ಸಿಗುತ್ತಿಲ್ಲ ಎಂಬುದು ಗೊತ್ತಾಗದ ವಿಚಾರವೇನೂ ಅಲ್ಲ. ಇದಕ್ಕೆ ಉತ್ತಮ ನಿದರ್ಶನ ಸಂಜು ಸಾಮ್ಸನ್ ಮತ್ತು ವೈಭವ್ ಸೂರ್ಯವಂಶಿ. ಸಂಜು ಸ್ಯಾಮ್ಸನ್ ಅಂತೂ ಟೀಮ್ ಇಂಡಿಯಾದ ಫುಟ್ಬಾಲ್ ಚೆಂಡು. ⚽
ಇನ್ನು ವೈಭವ್ಗೆ ಮೂರು ಪಂದ್ಯದಲ್ಲಿ ಗಮನ ಸೆಳೆದಿಲ್ಲ ಅಂತ ಕಾರಣ ನೀಡಿ ನಾಲ್ಕನೇ ಪಂದ್ಯಕ್ಕೆ ಡ್ರಾಪ್ ಮಾಡಿರೋದು ದೊಡ್ಡ ಅಪರಾಧವೇ ಸರಿ. ಯಾಕಂದ್ರೆ ವೈಭವ್ ಇನ್ನೂ 15ರ ಹರೆಯದ ಹುಡುಗ. ಎಳೆ ಮನಸ್ಸಿನ ಹುಡುಗನ ಆತ್ಮವಿಶ್ವಾಸವನ್ನು ಕುಗ್ಗುವಂತೆ ಮಾಡಿರುವ ಟೀಮ್ ಮ್ಯಾನೇಜ್ಮೆಂಟ್ಗೆ ಏನು ಹೇಳಬೇಕು ಅಂತನೇ ಗೊತ್ತಾಗುತ್ತಿಲ್ಲ. ಸ್ಫೋಟಕ ಬ್ಯಾಟಿಂಗ್ ಮೂಲಕ ಭಾರೀ ನಿರೀಕ್ಷೆ ಮೂಡಿಸಿದ್ದ ವೈಭವ್ ಒತ್ತಡದಿಂದಲೇ ಆಡುತ್ತಿದ್ದಾನೆ. ವೈಭವ್ಗೆ ಮತ್ತೊಂದು ಅವಕಾಶ ನೀಡಿ ಆತನಿಗೆ ಪ್ರೇರಣೆ ನೀಡುವುದು ಕೋಚ್ ಹಾಗೂ ನಾಯಕನ ಕರ್ತವ್ಯ ಆಗಿತ್ತು. ಅದರ ಬದಲು 11ರ ಬಳಗದಿಂದ ಕೈಬಿಟ್ಟು, ಠುಸ್ಸು ಪಠಾಕಿ, ಬರೀ ಐಪಿಎಲ್ ಹೀರೋ ಅಂತ ಕ್ರಿಕೆಟ್ ಜಗತ್ತು ಅಪಹಾಸ್ಯ ಮಾಡುವಂತೆ ಮಾಡಿರುವುದು ಸರಿಯಲ್ಲ. ❌
ಅಷ್ಡಕ್ಕೂ ವೈಭವ್ ಸೂರ್ಯವಂಶಿ ಕೂಡ ಪ್ರಬುದ್ಧತೆಯ ಆಟವನ್ನಾಡಬೇಕಿತ್ತು. ಟಿ-20 ಅಂದ್ರೆ ಬರೀ ಸಿಕ್ಸ್, ಬೌಂಡರಿ ಬಾರಿಸುವುದು ಅಲ್ಲ. ಪರಿಸ್ಥಿತಿಯನ್ನು ಅರಿತುಕೊಂಡು ಆಡಬೇಕು. ಭಾರತದ ಪಿಚ್ನಂತೆ ವಿದೇಶಿ ಪಿಚ್ಗಳು ಸಹಕರಿಸುವುದಿಲ್ಲ ಎಂಬುದು ಗೊತ್ತಿದ್ರೂ ಹೊಡಿಬಡಿ ಆಟಕ್ಕೆ ಒಗ್ಗಿಕೊಳ್ಳುವುದು ಸಮಂಜಸವಲ್ಲ. ಪ್ರತಿಭೆ, ಸಾಮಥ್ರ್ಯ, ಆತ್ಮವಿಶ್ವಾಸ, ತೋಳಿನ ಬಲವಿದ್ರೂ ಬುದ್ದಿವಂತಿಕೆಯ ಆಟವನ್ನು ಆಡಬೇಕು. ಇದನ್ನು ವೈಭವ್ ಸೂರ್ಯವಂಶಿ ಕಲಿತುಕೊಳ್ಳಬೇಕು. ಕೋಚ್, ಸಹ ಆಟಗಾರರು ಸಲಹೆ ನೀಡಬಹುದು. ಆದ್ರೆ ತಾನು ಹೇಗೆ ಆಡಬೇಕು ಎಂಬುದನ್ನು ಸ್ವತಃ ತಾನೇ ಅರಿತುಕೊಳ್ಳಬೇಕು ಅಲ್ವಾ..?
ಒಂದಂತೂ ಸತ್ಯ, ಟೀಮ್ ಇಂಡಿಯಾ ಬ್ಯಾಟಿಂಗ್ ಸ್ಥಿರತೆಯನ್ನು ಕಾಯ್ದುಕೊಳ್ಳಬೇಕು ಅಷ್ಟೇ. ಆದ್ರೆ ಆತಂಕ ಮೂಡಿಸಿರುವುದು ಬೌಲಿಂಗ್ ವಿಭಾಗದಲ್ಲಿ. ಬೂಮ್ರಾನಂತಹ ವಿಕೆಟ್ ಪಡೆಯುವ ವೇಗದ ಬೌಲರ್ ಇನ್ನೂ ಸಿಕ್ಕಿಲ್ಲ. ಜಡೇಜಾ, ಹಾರ್ದಿಕ್ ಪಾಂಡ್ಯ, ಅಶ್ವಿನ್ನಂತಹ ಮ್ಯಾಚ್ ವಿನ್ನಿಂಗ್ ಆಲ್ರೌಂಡರ್ಗಳು ಸಿಗುತ್ತಿಲ್ಲ. ಒಟ್ಟಾರೆಯಾಗಿ ಟೀಮ್ ಇಂಡಿಯಾದಲ್ಲಿ ಪ್ರತಿಭೆಗಳ ಕಣಜವಿದೆ ಅನ್ನೋ ಭ್ರಮೆಯಲ್ಲಿ ತೇಲಾಡಿದ್ರೆ ಪಾತಾಳಕ್ಕೆ ಬೀಳೋದು ಗ್ಯಾರಂಟಿ. ಎಚ್ಚರ..ಎಚ್ಚರ..ಎಚ್ಚರ..! ⚠️🔥
ಸನತ್ ರೈ 😎
saakshatv.com







