ಲಕ್ನೋ: ಸುಹೇಲ್ದೇವ್ ಭಾರತೀಯ ಸಮಾಜ ಪಕ್ಷದ (SBSP) ಮಹಿಳಾ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿಯನ್ನು ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಕೊತ್ವಾಲಿ ಕಲೀಲಾಬಾದ್ ನಲ್ಲಿ ನಡೆದಿದೆ.
ನಂದಿನಿ ರಾಜ್ಭರ್ (30) ಕೊಲೆಯಾದ ಮಹಿಳೆ. ನಾಯಕಿಯ ಮನೆಯಲ್ಲಿಯೇ ಹತ್ಯೆ ಮಾಡಲಾಗಿದೆ. ಜಮೀನು ವಿಚಾರಕ್ಕೆ ಸಂಬಂಧಿಸಿದಂತೆ ಈ ಕೊಲೆ ನಡೆದಿದೆ ಎಂದು ಶಂಕಿಸಲಾಗಿದೆ. ನಂದಿನಿ ದೇಹದ ಮೇಲೆ ಅನೇಕ ಇರಿತದ ಗಾಯಗಳಿವೆ. ಸುಮಾರು 10 ದಿನಗಳ ಹಿಂದೆ ವರದಿಯಾದ ವಿವಾದದ ಕುರಿತು ಅಪರಿಚಿತ ವ್ಯಕ್ತಿಗಳು ನಂದಿನಿಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ ಎಂದು ಐಜಿ ರಾಮ್ ಕೃಷ್ಣ ಭಾರದ್ವಾಜ್ ತಿಳಿಸಿದ್ದಾರೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದಾರೆ. ಸದ್ಯ ಮೂರ್ನಾಲ್ಕು ಜನರ ಹೆಸರು ಈ ಕೊಲೆ ಪ್ರಕರಣದಲ್ಲಿ ಕೇಳಿ ಬರುತ್ತಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇತ್ತೀಚೆಗಷ್ಟೇ ನಂದಿನಿ ಮಾವ ಕೂಡ ಕೊಲೆಯಾಗಿದ್ದರು. ನಂದಿನಿಂದ ತಮ್ಮ ಕುಟುಂಬದ ನ್ಯಾಯಕ್ಕಾಗಿ ಹೋರಾಡುತ್ತಿದ್ದು, ಅವರನ್ನು ಕೊಲೆ ಮಾಡಿದ್ದಾರೆ. ಹೀಗಾಗಿ ಸೂಕ್ತ ತನಿಖೆ ನಡೆಸಬೇಕು ಎಂದು ಅವರ ಕುಟುಂಬಸ್ಥರು ಮನವಿ ಮಾಡಿದ್ದಾರೆ.