ಮಂಗಳೂರು: ಹುಲಿವೇಷ ತಂಡವಾಗಿರುವ ಕಲ್ಲೇಗ ಟೈಗರ್ಸ್ನ (Kallega Tigers) ಮುಖ್ಯಸ್ಥನನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ.
ಈ ಘಟನೆ ಜಿಲ್ಲೆಯ ಪುತ್ತೂರು (Puttur) ತಾಲೂಕಿನ ನೆಹರೂ ನಗರ (Nehru Nagar)ದ ಜಂಕ್ಷನ್ ನಲ್ಲಿ ನಡೆದಿದೆ. ಅಕ್ಷಯ್ ಕಲ್ಲೇಗ (26) ಹತ್ಯೆಯಾದ ಯುವಕ. ಹುಲಿಕುಣಿತದಲ್ಲಿ ಕಲ್ಲೇಗ ಟೈಗರ್ಸ್ ತಂಡದ ನೇತೃತ್ವ ವಹಿಸಿಕೊಂಡಿದ್ದ ಅಕ್ಷಯ್ನನ್ನು ಮಾಣಿ-ಮೈಸೂರು ಹೆದ್ದಾರಿಯ ನೆಹರೂ ನಗರ ಜಂಕ್ಷನ್ನಲ್ಲಿ ಕೊಲೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಕೊಲೆಯಾದ ನಂತರ ಆರೋಪಿಗಳಾದ ಬನ್ನೂರು ನಿವಾಸಿ ಮನೀಷ್ ಹಾಗೂ ಚೇತು ಪೊಲೀಸರಿಗೆ ಶರಣಾಗಿದ್ದಾರೆ. ಅಲ್ಲದೇ, ಓರ್ವ ಆರೋಪಿ ತಲೆ ಮರೆಸಿಕೊಂಡಿದ್ದಾನೆ ಎನ್ನಲಾಗುತ್ತಿದೆ. ದ್ವಿಚಕ್ರ ವಾಹನಗಳ ನಡುವೆ ನಡೆದ ಅಪಘಾತದ ವಿಚಾರದಲ್ಲಿ ಆರೋಪಿಗಳು ಹಾಗೂ ಅಕ್ಷಯ್ ನಡುವೆ ಗಲಾಟೆಯಾಗಿತ್ತು. ಆಗ 2 ಸಾವಿರ ರೂ. ನೀಡುವ ವಿಚಾರವಾಗಿ ಅದು ವಿಕೋಪಕ್ಕೆ ತೆರಳಿತ್ತು. ಕೊನೆಗೆ ಇದು ವಿಕೋಪಕ್ಕೆ ತೆರಳಿ ಅಕ್ಷಯ್ ಕೊಲೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಈ ಕುರಿತು ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.