ಛಲಗಾತಿ ಹೆಣ್ಣು ಮಗಳ ಯಶೋಗಾಥೆ ಎಲ್ಲರಿಗೂ ಸ್ಪೂರ್ತಿ
ಹೊಸದಿಲ್ಲಿ, ಜುಲೈ 11: ಭಾರತೀಯ ಮಹಿಳೆಯ ಧೈರ್ಯ, ಸಾಹಸದ ಪ್ರತೀಕ ಲೆಫ್ಟಿನೆಂಟ್ ಗೌರಿ ಮಹಾದಿಕ್. ತನ್ನ ಪತಿ ದೇಶ ಸೇವೆಗಾಗಿ ಹುತಾತ್ಮನಾದಾಗ ತನ್ನ ನೋವನ್ನು ನುಂಗಿ ಆತನ ಕನಸನ್ನು ತನ್ನದಾಗಿಸಿಕೊಂಡು ಪತಿಗೆ ಗೌರವ ಸಲ್ಲಿಸಿದ ಛಲಗಾತಿ ಹೆಣ್ಣು ಮಗಳೇ ಗೌರಿ ಮಹಾದಿಕ್.
2017 ರಲ್ಲಿ ಭಾರತ-ಚೀನಾ ಗಡಿ ಬಳಿ ಬೆಂಕಿ ಅಪಘಾತದಲ್ಲಿ ಹುತಾತ್ಮರಾದ ಮೇಜರ್ ಪ್ರಸಾದ್ ಗಣೇಶ್ ಅವರ ಪತ್ನಿಯೇ ಗೌರಿ ಪ್ರಸಾದ್ ಮಹಾದಿಕ್.
ಗೌರಿ ಪ್ರಸಾದ್ ಮಹಾದಿಕ್ ಪತಿಯ ಮರಣದ ನಂತರ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುವ ಮೂಲಕ ಪತಿಗೆ ಗೌರವ ಸಲ್ಲಿಸಲು ನಿರ್ಧರಿಸಿದ್ದರು. ನಾನು ಒಬ್ಬ ವಕೀಲೆ ಮತ್ತು ಕಂಪನಿಯ ಕಾರ್ಯದರ್ಶಿ ಹುದ್ದೆ ಯಲ್ಲಿದ್ದೆ. ಆದರೆ ನನ್ನ ಪತಿಯ ಮರಣದ ನಂತರ ಆ ಕೆಲಸವನ್ನು ತೊರೆದು ಸಶಸ್ತ್ರ ಪಡೆ ಸೇರಲು ತಯಾರಿ ಆರಂಭಿಸಿದೆ. ನನ್ನ ಪತಿ ಮತ್ತು ಸೇನೆಗೆ ಗೌರವ ಸಲ್ಲಿಸಲು ಸೇನೆ ಸೇರಲು ನಾನು ನಿರ್ಧರಿಸಿದೆ. ಈಗ ನಾನು ಲೆಫ್ಟಿನೆಂಟ್ ಆಗಿ ಧರಿಸುವ ಸಮವಸ್ತ್ರ ನನ್ನದಲ್ಲ ನಮ್ಮದು ಎಂದು ಎಂಎಸ್ ಮಹಾದಿಕ್ ಅವರು ಹೇಳಿದ್ದಾರೆ. ಪತಿಯ ಮರಣದ ಬಳಿಕ ಸೇನಾ ತರಬೇತಿ ಪಡೆದು ಸೇನಾ ಪರೀಕ್ಷೆಗಳನ್ನು ಪಾಸಾಗಿ ಗೌರಿ ಮಾರ್ಚ್ ತಿಂಗಳಲ್ಲಿ ಲೆಫ್ಟಿನೆಂಟ್ ಆಗಿ ಭಾರತೀಯ ಸೇನೆಗೆ ನಿಯೋಜಿತರಾಗಿದ್ದಾರೆ.
ಅವರ ಧೈರ್ಯವನ್ನು ಕೇಂದ್ರ ಸಚಿವೆ ಸ್ಮೃತಿ ಇರಾನಿ ತಮ್ಮ ಇನ್ಸ್ಟಾಗ್ರಾಮ್ಗೆ ನಲ್ಲಿ ಕೊಂಡಾಡಿದ್ದಾರೆ. ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಗೌರಿ ಅವರ ಈ ಸಾಧನೆಯ ಕುರಿತ ವೀಡಿಯೋ ಒಂದನ್ನು ಹಂಚಿಕೊಂಡಿದ್ದು, ಎಲ್ಲರೂ ಕುಸಿದಿದ್ದಾಗ ಆಕೆ ಎದ್ದು ನಿಂತರು ಎಂದು ಬರೆದುಕೊಂಡಿದ್ದಾರೆ.
ವೀಡಿಯೋದಲ್ಲಿ ಗೌರಿ ಅವರು, ನಾನು ಎಂದೆಂದಿಗೂ ಮಿಸೆಸ್. ಪ್ರಸಾದ್ ಮಹಾದಿಕ್. ನನ್ನ ಪತಿ ನನ್ನೊಡನೆ ಭೌತಿಕವಾಗಿ ಇಲ್ಲದಿದ್ದರೂ, ಮಾನಸಿಕವಾಗಿ ಯಾವಾಗಲೂ ನನ್ನ ಜೊತೆ ಇರುತ್ತಾರೆ. ನನ್ನ ಉದ್ದೇಶಗಳಲ್ಲಿ ಮತ್ತು ನನ್ನ ಯೋಚನೆಗಳಲ್ಲಿ ಸದಾ ಅವರು ಇದ್ದಾರೆ. ಅವರ ಕನಸನ್ನು ಮುಂದುವರೆಸಲು ನಾನು ಬಹಳ ಹೆಮ್ಮೆ ಪಡುತ್ತೇನೆ. ಇನ್ನುಮುಂದೆ ಅವರ ಯೂನಿಫಾರ್ಮ್ ಮತ್ತು ಸ್ಟಾರ್ ಗಳು ನನ್ನದು ಎಂದಿದ್ದಾರೆ.
ಹೆಣ್ಣು ಅಬಲೆ ಎನ್ನುವವರಿಗೆ ಲೆಫ್ಟಿನೆಂಟ್ ಗೌರಿ ಮಹಾದಿಕ್ ಸ್ಪೂರ್ತಿ. ಪತಿಯ ಸಾವಿನಿಂದ ಹತಾಶರಾಗದೆ ಉನ್ನತ ಧ್ಯೇಯ ಸಾಧನೆಗಾಗಿ ತನ್ನ ನೋವನ್ನು ಮರೆತು ತನ್ನ ಪತಿಯ ಕನಸನ್ನು ತನ್ನದಾಗಿಸಿಕೊಂಡು, ಸಾಧಿಸುವ ಛಲ ಇದ್ದಲ್ಲಿ ಏನನ್ನೂ ಸಾಧಿಸಬಹುದು ಎಂದು ತನ್ನನ್ನೇ ಉದಾಹರಣೆಯಾಗಿ ತೋರಿಸಿಕೊಟ್ಟ ಇವರ ಜೀವನ ಗಾಥೆಯೇ ಎಲ್ಲರಿಗೂ ಸ್ಪೂರ್ತಿ.