ಅಹಮದಾಬಾದ್: ಈ ಬಾರಿ ಕಪ್ ನಮ್ಮದೇ ಎಂಬ ಆರ್ ಸಿಬಿಯ ಕೋಟ್ಯಂತರ ಅಭಿಮಾನಿಗಳ ಕನಸು ಮತ್ತೊಮ್ಮೆ ಭಗ್ನವಾಗಿದ್ದು, ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ 4 ವಿಕೆಟ್ಗಳ ರೋಚಕ ಜಯ ಸಾಧಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ್ದ ಆರ್ ಸಿಬಿ ತಂಡ 172 ರನ್ ಗಳನ್ನು ಮಾತ್ರ ಗಳಿಸಲು ಯಶಸ್ವಿಯಾಯಿತು. ಸಾಧಾರಣ ಹಾಗೂ ಸ್ಪರ್ಧಾತ್ಮಕ ಗುರಿ ಬೆನ್ನಟ್ಟಿದ್ದ ರಾಜಸ್ಥಾನ್ ರಾಯಲ್ಸ್ ತಂಡವು ಇನ್ನೂ 6 ಎಸೆತ ಬಾಕಿ ಇರುವಂತೆ 4 ವಿಕೆಟ್ ಗಳ ಜಯ ಸಾಧಿಸಿತು.
ಆರ್ ಸಿಬಿ ಪರ ಈ ಪಂದ್ಯದಲ್ಲಿ ಶ್ರೇಷ್ಠ ಆಟಗಾರರು ಮಿಂಚಲು ವಿಫಲವಾಗಿದ್ದು, ಹಾಗೂ ಕಳಪೆ ಬೌಲಿಂಗ್, ಫೀಲ್ಡಿಂಗ್ ನಿಂದಾಗಿ ಆರ್ ಸಿಬಿ ಸೋಲು ಕಾಣುವಂತಾಯಿತು. ಆರ್ ಆರ್ ಪರ ಯಶಸ್ವಿ ಜೈಸ್ವಾಲ್ ಮತ್ತು ಟಾಮ್ ಕ್ಯಾಡ್ಮೋರ್ 33 ಎಸೆತಗಳಲ್ಲಿ 46 ರನ್ ಗಳಿಸಿ ಆರಂಭಿಕ ಬುನಾದಿ ಹಾಕಿದರು. ಯಶಸ್ವಿ ಜೈಸ್ವಾಲ್ 45 ರನ್(30 ಎಸೆತ, 8 ಬೌಂಡರಿ) ಹೊಡೆದು ವಿಕೆಟ್ ಒಪ್ಪಿಸಿದರು. ನಾಯಕ ಸಂಜು ಸ್ಯಾಮ್ಸನ್ 17 ರನ್ ಗಳಿಸಿದರು. 112 ರನ್ಗಳಿಸಿ ಉತ್ತಮ ಸ್ಥಿತಿಯಲ್ಲಿದ್ದ ರಾಜಸ್ಥಾನಗೆ ಒಂದು ಹಂತದಲ್ಲಿ ವಿರಾಟ್ ದುಃಸ್ವಪ್ನವಾಗಿ ಪರಿಣಮಿಸಿದರು.
ಅವರು ಎಸೆದ ಬೆಸ್ಟ್ ಥ್ರೋನಿಂದಾಗಿ 4ನೇ ವಿಕೆಟ್ ಬಿದ್ದಿತ್ತು. ಈ ಸಂದರ್ಭದಲ್ಲಿ ಮ್ಯಾಚ್ ಸ್ವಲ್ಪ ಮಟ್ಟಿಗೆ ಆರ್ ಸಿಬಿ ಪರ ವಾಲಿದಂತಾಗಿತ್ತು. ಹೆಟ್ಮೇಯರ್ 26 ರನ್(14 ಎಸೆತ, 3 ಬೌಂಡರಿ, 1 ಸಿಕ್ಸರ್) ಮತ್ತು ಪೊವೆಲ್ ಔಟಾಗದೇ 16 ರನ್ ಗಳಿಸಿ ಪಂದ್ಯ ಗೆಲ್ಲುವಂತೆ ಮಾಡಿದರು. ಮುಂದಿನ ಎಲಿಮಿನೇಟರ್ ಹಾಗೂ ಸೆಮಿಫೈನಲ್ ರೀತಿಯೇ ಇರುವ ಪಂದ್ಯ ಶುಕ್ರವಾರ ನಡೆಯಲಿದೆ. ಈ ಪಂದ್ಯದಲ್ಲಿ ರಾಜಸ್ಥಾನ್ ಹಾಗೂ ಹೈದರಾಬಾದ್ ಮುಖಾಮುಖಿಯಾಗಲಿವೆ.
ಮೊದಲು ಬ್ಯಾಟಿಂಗ್ ಮಾಡಿದ್ದ ಆರ್ ಸಿಬಿ ಪರ ವಿರಾಟ್ ಕೊಹ್ಲಿ ಮತ್ತು ನಾಯಕ ಡುಪ್ಲೆಸಿಸ್ ಮೊದಲ ವಿಕೆಟಿಗೆ 37 ರನ್ ಕಲೆ ಹಾಕಿದರು. 17 ರನ್ ಗಳಿಸಿದ್ದಾಗ ಡುಪ್ಲೇಸಿಸ್ ಪೊವೆಲ್ ಹಿಡಿದ ಅತ್ಯುತ್ತಮ ಕ್ಯಾಚ್ಗೆ ಬಲಿಯಾದರು. ಕೊಹ್ಲಿ 33 ರನ್ ಗೆ ಇನ್ನಿಂಗ್ಸ್ ಮುಗಿಸಿದರು. ರಜತ್ ಪಾಟೀದರ್ ಮತ್ತು ಕ್ಯಾಮರೂನ್ ಗ್ರೀನ್ 31 ಎಸೆತಗಳಲ್ಲಿ 41 ರನ್ ಜೊತೆಯಾಟವಾಡಿ ಸ್ವಲ್ಪ ಚೇತರಿಕೆ ನೀಡಿದರು. ಕ್ಯಾಮರೂನ್ ಗ್ರೀನ್ 27 ರನ್, ರಜತ್ ಪಾಟೀದರ್ 34, ಮಹಿಪಾಲ್ ಮಹಿಪಾಲ್ ಲೋಮ್ರೋರ್ 32 ರನ್ ಗಳಿಸಿ ಔಟ್ ಆದರು.