ಕೋಲ್ಕತ್ತಾ: ಪಶ್ಚಿಮ ಬಂಗಾಳದ ರಾಜಕೀಯ ಇತಿಹಾಸದಲ್ಲಿ ಇಂದಿನಿಂದ ಹೊಸ ಅಧ್ಯಾಯವೊಂದು ಆರಂಭವಾಗಿದೆ. ದಶಕಗಳ ಕಾಲ ಏಕಚಕ್ರಾಧಿಪತ್ಯ ಸ್ಥಾಪಿಸಿದ್ದ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಭದ್ರಕೋಟೆ ಈಗ ಸಂಪೂರ್ಣವಾಗಿ ಧೂಳೀಪಟವಾಗಿದೆ. ರಾಜ್ಯದಲ್ಲಿ ಬೀಸಿರುವ ಕೇಸರಿ ಬಿರುಗಾಳಿಗೆ ಟಿಎಂಸಿ ತತ್ತರಿಸಿ ಹೋಗಿದ್ದು, ಬದಲಾವಣೆಯ ಗಾಳಿ ದಟ್ಟವಾಗಿ ಹರಡಿದೆ.
ಕಾಳಿ ಮಾತೆ ಮುಂದೆ ನಿಂತಿದ್ದರೂ ಸೋಲು ತಪ್ಪಲಿಲ್ಲ
ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯ ಫಲಿತಾಂಶ ಹೊರಬೀಳುತ್ತಿದ್ದಂತೆ ಬಿಗ್ ಬಾಸ್ ಖ್ಯಾತಿಯ ಒಳ್ಳೆ ಹುಡುಗ ಪ್ರಥಮ್ ಅವರ ಸೋಶಿಯಲ್ ಮೀಡಿಯಾ ಪೋಸ್ಟ್ ಭಾರೀ ಸಂಚಲನ ಮೂಡಿಸಿದೆ. ಮಮತಾ ಬ್ಯಾನರ್ಜಿ ಸೋತರೆ ನೂರು ಬಡವರ ಅಭಿವೃದ್ಧಿಗೆ ಸಹಾಯ ಮಾಡುವುದಾಗಿ ಈಶ್ವರನಲ್ಲಿ ಹರಕೆ ಹೊತ್ತಿದ್ದ ಪ್ರಥಮ್, ಈಗ ಮಮತಾ ಅವರ ನಡೆಯನ್ನು ತೀವ್ರವಾಗಿ ಟೀಕಿಸಿದ್ದಾರೆ.
ನೆನಪಿಟ್ಟುಕೊಳ್ಳಿ, ಮುಂದಿನ ಮೂರೇ ತಿಂಗಳಲ್ಲಿ ಸುಮಾರು 25 ಲಕ್ಷ ಅಕ್ರಮ ಬಾಂಗ್ಲಾ ನುಸುಳುಕೋರರನ್ನು ಗುರುತಿಸಿ ಹೊರಹಾಕಲಾಗುವುದು. ಭಾರತ ಈಗ ಸುರಕ್ಷಿತವಾಗಿದೆ. ನಾನು ಯಾವುದೇ ಸಮೀಕ್ಷೆ ಅಥವಾ ಪಕ್ಷದ ಪರವಲ್ಲ, ನಾನು ದೇಶದ ಪರ. ಅಕ್ರಮ ನುಸುಳುಕೋರರು ಭಯೋತ್ಪಾದಕರಿಗಿಂತಲೂ ಅಪಾಯಕಾರಿ. ನಮ್ಮ ದೇಶದ ಜನಸಂಖ್ಯಾ ಸ್ವರೂಪ ಬದಲಾಗುತ್ತಿತ್ತು, ಅದಕ್ಕೇ ಮಮತಾ ನಿಮ್ಮ ಮೇಲೆ ಜನರಿಗೆ ಬೇಸರವಿತ್ತು. ನೀವು ಕಾಳಿ ಮಾತೆ ಮುಂದೆ ನಿಂತಿದ್ದರೂ, ಜನರು ನಿಮ್ಮನ್ನು ಕೋಳಿ ತರ ಸೋಲಿಸಿಬಿಟ್ಟರು ಎಂದು ಪ್ರಥಮ್ ಹರಿಹಾಯ್ದಿದ್ದಾರೆ.
ಮಮತಾ ಜಮಾನಾ ಅಂತ್ಯದತ್ತ
2011ರಲ್ಲಿ ಬರೋಬ್ಬರಿ 34 ವರ್ಷಗಳ ಎಡಪಕ್ಷಗಳ ಸುದೀರ್ಘ ಆಡಳಿತಕ್ಕೆ ಅಂತ್ಯ ಹಾಡಿ ಮಮತಾ ಬ್ಯಾನರ್ಜಿ ಅಧಿಕಾರಕ್ಕೆ ಬಂದಿದ್ದರು. ಅಂದು ಇದು ಸೇಡಿನ ಸರ್ಕಾರವಲ್ಲ, ಬದಲಾವಣೆಯ ಸರ್ಕಾರ ಎಂದು ಘೋಷಿಸಿದ್ದರು. ಆದರೆ ಕಾಲಕ್ರಮೇಣ ಬಂಗಾಳದ ರಾಜಕೀಯ ರಕ್ತಸಿಕ್ತವಾಯಿತು. ಸಿಪಿಎಂ ಕಾರ್ಯಕರ್ತರ ಹತ್ಯೆ, ಚುನಾವಣಾ ಹಿಂಸಾಚಾರಗಳು ರಾಜ್ಯದ ಶಾಂತಿಯನ್ನು ಕದಡಿದ್ದವು. ವಿರೋಧ ಪಕ್ಷಗಳನ್ನು ಹತ್ತಿಕ್ಕುವ ಮಮತಾ ಅವರ ತಂತ್ರಗಾರಿಕೆ ಈ ಬಾರಿ ಫಲ ನೀಡಿದಂತೆ ಕಾಣುತ್ತಿಲ್ಲ. 2021ರಲ್ಲಿ ಶೂನ್ಯಕ್ಕೆ ಕುಸಿದಿದ್ದ ವಿರೋಧ ಪಕ್ಷಗಳ ಜಾಗವನ್ನು ಇಂದು ಬಿಜೆಪಿ ಸಮರ್ಥವಾಗಿ ತುಂಬಿದೆ.
ಸುವೇಂದು ಅಧಿಕಾರಿ ಎಂಬ ಮಗ್ಗುಲ ಮುಳ್ಳು
ಮಮತಾ ಬ್ಯಾನರ್ಜಿ ಅವರ ಬಲಗೈ ಬಂಟನಂತಿದ್ದ ಸುವೇಂದು ಅಧಿಕಾರಿ ಇಂದು ಅವರ ಪಾಲಿಗೆ ಮಗ್ಗುಲ ಮುಳ್ಳಾಗಿದ್ದಾರೆ. ಟಿಎಂಸಿ ಅಧಿಕಾರಕ್ಕೆ ಬರಲು ಪ್ರಮುಖ ಕಾರಣವಾಗಿದ್ದ ನಂದಿಗ್ರಾಮ ಮತ್ತು ಕೇಶಪುರ ಚಳವಳಿಯ ಮುಂಚೂಣಿಯಲ್ಲಿದ್ದ ಸುವೇಂದು, ಕಳೆದ ಐದು ವರ್ಷಗಳಿಂದ ಮಮತಾ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ತೊಡೆತಟ್ಟಿದ್ದರು. ಅವರ ಹೋರಾಟದ ಫಲವಾಗಿಯೇ ಇಂದು ಬಂಗಾಳದಲ್ಲಿ ಬಿಜೆಪಿ ಪ್ರಬಲ ಶಕ್ತಿಯಾಗಿ ಹೊರಹೊಮ್ಮಿದೆ.
ಕೇಂದ್ರ ಸರ್ಕಾರದ ಅಭಿವೃದ್ಧಿ ಯೋಜನೆಗಳು ಮತ್ತು ರಾಜ್ಯ ಸರ್ಕಾರದ ಮೇಲಿನ ಭ್ರಷ್ಟಾಚಾರದ ಆರೋಪಗಳು ಮತದಾರರು ಬಿಜೆಪಿಯತ್ತ ವಾಲುವಂತೆ ಮಾಡಿದೆ ಎಂಬ ವಿಶ್ಲೇಷಣೆಗಳು ಕೇಳಿಬರುತ್ತಿವೆ. ಒಟ್ಟಾರೆಯಾಗಿ ಬಂಗಾಳದಲ್ಲಿ ದೀದಿ ಯುಗ ಅಂತ್ಯವಾಗುತ್ತಿದ್ದು, ಕೇಸರಿ ಕಲಿಗಳ ಆರ್ಭಟ ಶುರುವಾಗಿದೆ.







