ರೈತ ಕಲ್ಯಾಣ ಗ್ರಾಮ ಸ್ವರಾಜ್ಯಕ್ಕೆ ಆದ್ಯತೆ ನೀಡದ ಯಾವ ಸರ್ಕಾರಗಳಿಂದಲೂ ದೇಶದ ಉನ್ನತಿ ಸಾಧ್ಯವಿಲ್ಲ; ಕೃಷಿ ಬಿಲ್ ಹಾಗೆ ಮಾಡುವ ಬದಲು ಹೀಗೆ ಮಾಡಿದ್ದರೇ! Marjala manthana farm bill
“ಮಾರುಕಟ್ಟೆ ವ್ಯವಸ್ಥೆಯನ್ನು ಪುನರ್ ರೂಪಿಸಲು ಸಾಧ್ಯವಿದೆ ಆದರೆ ದುರದೃಷ್ಟ ನೋಡಿ ಆಳುವ ಸರ್ಕಾರಗಳಿಗೆ ಇಚ್ಛಾಶಕ್ತಿಯ ಕೊರತೆಯಿದೆ” Marjala manthana farm bill
“ಕೋವಿಡ್ ಸಂದರ್ಭದಲ್ಲಿ ಎಲ್ಲಾ ರಂಗಗಳ ಅರ್ಥ ವ್ಯವಸ್ಥೆ ನೆಲಕಚ್ಚಿದ್ದಾಗ ಶೇ. 3.2 % ಅರ್ಥ ವ್ಯವಸ್ಥೆಯನ್ನು ಮೇಲೆತ್ತಿದ್ದೇ ರೈತರು ಮತ್ತು ಈ ದೇಶದ ಕೃಷಿ. ಒಂದು ಅಂಕಿ ಅಂಶ ನೋಡುವುದಾದರೇ ಕೋವಿಡ್ ಸಂಕಷ್ಟ ಕಾಲಘಟ್ಟದಲ್ಲಿ ನಮ್ಮಲ್ಲಿ ಆಹಾರ ಧಾನ್ಯಗಳು – 296 ಮಿಲಿಯನ್ ಟನ್, ಹಣ್ಣು ತರಕಾರಿ – 320 ಮಿಲಿಯನ್ ಟನ್, ಹಾಲು – 180 ಮಿಲಿಯನ್ ಟನ್ ಮತ್ತು 32 ಮಿಲಿಯನ್ ಟನ್ ಸಕ್ಕರೆ ಉತ್ಪಾದನೆಯಾಗಿದೆ. ಆದರೂ ಎಪಿಎಂಸಿ ಬಂದ್ ಆಗಿದ್ದ ಕಾರಣ ಸುಮಾರು 50 ಸಾವಿರ ಕೋಟಿಯಷ್ಟು ಹಣ್ಣು, ಹಾಲು, ತರಕಾರಿ, ಸೊಪ್ಪು, ಆಹಾರ ಧಾನ್ಯಗಳು ನಷ್ಟವಾಯಿತು..”
ಹೀಗಂತ ಒಂದು ವೆಬಿನಾರ್ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದವರು ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷರಾದ ಪ್ರಕಾಶ್ ಕಮ್ಮರಡಿಯವರು. ಅಂಕಿ ಅಂಶಗಳು ಹೆಚ್ಚು ಕಮ್ಮಿಯಾಗಿರಬಹುದೇನೋ, ಅನುಮಾನವಿದ್ದವರು ಪರಿಶೀಲಿಸಿಕೊಳ್ಳಿ. ಆದರೆ ಕೋವಿಡ್ ಸಮಯದಲ್ಲಿ ಭಾರತೀಯರಿಗೆ ಊಟಕ್ಕೆ ಆಹಾರದ ಅಭಾವ ಯಾವತ್ತೂ ಆಗಲಿಲ್ಲ. ಎಲ್ಲಾ ಆಹಾರದ ಉತ್ಪನ್ನಗಳ ಪೂರೈಕೆ ನಿರಂತರವಾಗಿತ್ತು. ಪೂರೈಕೆ ನಿರಂತರವಾಗಿತ್ತು ಎಂದಾಗ ಆಹಾರದ ಪ್ರೊಡಕ್ಷನ್ ಕೂಡಾ ನಿರಂತರವಾಗೇ ಇತ್ತಲ್ಲವಾ! ನಮ್ಮ ಎಷ್ಟೋ ಬೇರೆ ಬೇರೆ ಕ್ಷೇತ್ರಗಳ (ಸಾಫ್ಟ್ ವೇರ್ ಉದ್ಯಮವೂ ಸೇರಿದಂತೆ) ಯುವಕರು ಮರಳಿ ವ್ಯವಸಾಯ ಮಾಡಲು ತೆರಳಿದ್ದೂ ಸಹ ನಿಮ್ಮೆಲ್ಲರ ಗಮನಕ್ಕೆ ಬಂದಿದೆ. ಎಷ್ಟೋ ಜನ ಅಪ್ಪನ ತುಂಡು ಭೂಮಿಯಲ್ಲಿ ಭತ್ತ ಬೆಳೆದರು, ಜೋಳ, ರಾಗಿ, ಕಾಯಿಪಲ್ಲೆ, ಈರುಳ್ಳಿ, ಮೆಣಸು, ಟೊಮ್ಯಾಟೋ ಬೆಳೆದರು. ಸಮಗ್ರ ಕೃಷಿ ಮಾಡಿದರು. ಸಗಣಿ ಬಾಚಿ ಹಾಲು ಕರೆದರು. ಕುರಿ ಆಡು ಕೋಳಿ ಸಾಕಾಣಿಕೆಗೆ ಇಳಿದರು. ಇದೆಲ್ಲವೂ ಈ ದೇಶದ ಆಹಾರೋತ್ಪದನೆಯ ನಿಜವಾದ ಕ್ರಾಂತಿಯಲ್ಲವೇ?
ಮೊನ್ನೆ ಗೆಳೆಯರೊಬ್ಬರು ಹೇಳುತ್ತಿದ್ದರು. ಅವರ ಸ್ನೇಹಿತರು ಹೀಗೇ ಕರೋನಾ ಸಂರ್ಭದಲ್ಲಿ ಬೆಂಗಳೂರಿನಿಂದ ಗಂಟು ಮೂಟೆ ಕಟ್ಟಿಕೊಂಡು ಊರಿಗೆ ಮರಳಿದರಂತೆ. ಅಪಾರ ಶ್ರದ್ಧೆ ಮತ್ತು ವಿಶ್ವಾಸಗಳಿಂದಲೇ ವ್ಯವಸಾಯ ಮಾಡೋಣ ಎಂದು ಬೋರ್ ತೆಗೆಸಿ ಮೆಣಸು ಟೊಮ್ಯಾಟೋ ಬೆಳೆದರಂತೆ. ಅದ್ಭುತವಾದ ಬೆಳೆಯೂ ಬಂತಂತೆ. ಆದರೆ ಬೆಳೆ ಬಿತ್ತಿದಾಗ ಕ್ರೇಟ್ ಗೆ 800 ಚಿಲ್ಲರೇ ಇದ್ದ ಟೊಮ್ಯಾಟೋ ಇವರ ಬೆಳೆ ಕೈಗೆ ಬಂದಾಗ 250 ಕ್ಕೆ ಇಳಿಯಿತಂತೆ. ಹೀಗಾದರೇ ಯಾರು ತಾನೇ ಕೃಷಿ ಮಾಡಲು ಮನಸು ಮಾಡ್ತಾರೆ? ಯಾವ ಯುವಕ ವ್ಯವಸಾಯ ಮಾಡಲು ಮುಂದೆ ಬರುತ್ತಾನೆ?
ಅವನು ಬೆಳೆದ ಟೊಮ್ಯಾಟೋ, ಮೆಣಸು, ಮತ್ಯಾರೋ ಬೆಳೆದ ತರಕಾರಿ ಹಣ್ಣು ಕಾಯಿ ಪಲ್ಲೆ, ಇನ್ಯಾರದ್ದೋ ಭತ್ತ ರಾಗಿ ಜೋಳ ಸಿರಿಧಾನ್ಯಗಳು, ಆಹಾರ ಧಾನ್ಯಗಳು, ಎಣ್ಣೆ ಕಾಳುಗಳು, ಸಕ್ಕರೆ ಬೆಲ್ಲ, ಹೈನುಗಾರಿಕೆ ಉತ್ಪನ್ನ ಎಲ್ಲವಕ್ಕೂ ಬೇಡಿಕೆ ಸದಾ ಕಾಲದಲ್ಲೂ ಇದೆ. ಕೊಳ್ಳುವವನಿಗೆ ಎಲ್ಲವೂ ಬೇಕು. ಬೆಳದವನಿಗೆ ಮಾತ್ರ ಏನೂ ಇಲ್ಲ. ಮಧ್ಯೆ ನಿಂತ ಬಕಾಸುರ ಯಾರು? ಈ ದಳ್ಳಾಳಿಗಳ ತೊಲಗಿಸುವುದು ಹೇಗೆ? ಅಸಲಿಗೆ ಇದರಲ್ಲಿ ತಪ್ಪು ಯಾರದ್ದು? ಸರ್ಕಾರ ಒಂದು ಸಮರ್ಪಕ ಕೃಷಿ ಮಾರುಕಟ್ಟೆ ನೀತಿ ಅಳವಡಿಸಿಕೊಳ್ಳಲು ಮೀನಾಮೇಶ ಎಣಿಸುವುದೇಕೆ? ಈ ಮೇಲಿನ ಘಟನೆಯಲ್ಲಿ ಮೆಣಸು ಟೊಮ್ಯಾಟೋ ಬೆಳೆದ ಆ ಯುವಕನಂತಯೆ ಭ್ರಮನಿರಸನಗೊಂಡ ಉಳಿದವರ ಗತಿಯೇನು?
ಹಾಗಂತ ಕರೋನಾ ಕಾಲದಲ್ಲಿ ತಾತ್ಕಾಲಿಕವಾಗಿ ಬಾಗಿಲು ಹಾಕಿಕೊಂಡ ಎಪಿಎಂಸಿಯನ್ನು ಶಾಶ್ವತವಾಗಿ ಮುಚ್ಚಿಬಿಡುವುದೇ ಪರಿಹಾರವಾ? ಖಾಸಗಿ ಸಂಸ್ಥೆಗಳಿಗೆ ಗುತ್ತಿಗೆ ಕೊಟ್ಟು ರೈತರನ್ನು ಅವರು ಬೆಳೆದ ಬೆಳೆಯನ್ನು ಕಾರ್ಪೊರೇಟ್ ವಲಯಕ್ಕೆ ಒಪ್ಪಿಸಿಬಿಡಬೇಕೆ? ದಳ್ಳಾಳಿ ವ್ಯವಸ್ಥೆ ತೊಲಗಿಸಲು ಕೋಟು ಬೂಟಿನ ಕಾರ್ಪೊರೇಟ್ ದಳ್ಳಾಳಿಯನ್ನು ಸೃಷ್ಟಿಸಬೇಕೆ? ಹೀಗಾದರೆ ಊದೋದನ್ನು ಬಿಟ್ಟು ಬಡಿಯೋದನ್ನು ತೆಗೆದುಕೊಂಡಂತಾಗುವುದಿಲ್ಲವೇ? ರೈತನ ಸಮಸ್ಯೆಗೆ ಸರ್ಕಾರ ಮನಸು ಮಾಡಿದರೇ ಯಾವ ಪರಿಹಾರ ಕಲ್ಪಿಸಬಹುದು? ಸದ್ಯ ಕೇಂದ್ರ ಜಾರಿಗೆ ತರಲು ಹೊರಟಿರುವ ಕೃಷಿ ಬಿಲ್ ನಲ್ಲಿರುವ ಕಾಂಟ್ರಾಕ್ಟ್ ಫಾರ್ಮಿಂಗ್ ಆಗಲೀ ಅಥವಾ ಎಂ.ಎಸ್.ಪಿ ರದ್ದು ಮಾಡುವುದಾಗಲೀ, ಎಪಿಎಂಸಿ ತಿದ್ದುಪಡಿ ಕಾಯ್ದೆಯಾಗಲೀ ರೈತನಿಗೆ ಶಾಶ್ವತ ಕಲ್ಯಾಣ ಭಾಗ್ಯ ಕಲ್ಪಿಸುತ್ತೆಂದರೆ ಅದು ಖಂಡಿತಾ ಮೂರ್ಖತನದ ಮಾತಾದೀತಷ್ಟೆ.
ರಿಲಾಯನ್ಸ್ ಸಂಸ್ಥೆಯ ಅಗ್ರಿ ವೆಂಚರ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ 3 ಮೇ 2007ರಲ್ಲೇ ಕಂಪೆನಿ ಆಕ್ಟ್ ಪ್ರಕಾರ ನೊಂದಣಿಯಾಗಿದೆ. ಅಗ್ರಿಕಲ್ಚರ್ & ಅಲೈಡ್ ಆಕ್ಟಿವಿಟೀಸ್ ಇದರ ಕಾರ್ಯಾಚರಣೆ ಎಂದು ದಾಖಲಿಸಲಾಗಿದೆ. (170521 ಇದರ ರಿಜಿಸ್ಟ್ರೇಷನ್ ನಂಬರ್) ಇದರ ಕೊನೆಯ ಜನರಲ್ ಬಾಡಿ ಮೀಟಿಂಗ್ ನಡೆದಿದ್ದು 13 ಮಾರ್ಚ್ 2013ರಂದು. ಅಂದರೆ ಸದ್ಯ ಈ ಸಂಸ್ಥೆ ನಿಷ್ಕ್ರಿಯವಾಗಿದೆ. ಇದನ್ನು ಕ್ರಿಯಾಶೀಲಗೊಳಿಸಲು ರಿಲಾಯನ್ಸ್ ಮುಖ್ಯಸ್ಥ ಧಣಿಗಳು ಪ್ರಯತ್ನಿಸುತ್ತಿರಬಹುದು. ಒಂದು ವೇಳೆ ದಳ್ಳಾಳಿಗಳನ್ನು ನಿಯಂತ್ರಿಸಲು ಈ ಕಾಯ್ದೆ ಜಾರಿಯಾಗುವೇ ಆದರೇ ದಳ್ಳಾಳಿಗಳ ಅಪ್ಪ ರಿಲಾಯನ್ಸ್ ನಂತಹ ಸಂಸ್ಥೆ ರೈತನ ಕುತ್ತಿಗೆ ಪಟ್ಟಿ ಹಿಡಿದು ಹಣ ವಸೂಲಿ ಮಾಡುತ್ತದೆ. ಸರ್ಕಾರ ಮಧ್ಯೆ ಪ್ರವೇಶಿಸುವಂತಿಲ್ಲ. ಒಂದು ವೇಳೆ ರೈತನ ವ್ಯಾಜ್ಯಗಳೇನೇ ಇದ್ದರೂ ಡಿಸ್ಟ್ರಿಕ್ಟ್ ಅಡ್ಮಿನಿಸ್ಟ್ರೇಷನ್ ಅಥವಾ ಜಿಲ್ಲಾಧಿಕಾರಿಗೆ ದೂರು ಒಯ್ಯಬೇಕಷ್ಟೆ. ಈಗಿನ ಪರಿಸ್ಥಿತಿಯಲ್ಲಿ ಯಾವ ಅಧಿಕಾರಿ ಸತ್ಯಸಂದ ಪ್ರಾಮಾಣಿಕ ರೈತ ಪರ ಎಂದು ರೈತ ನಂಬಬಹುದು? ಅಥವಾ ಹಣ, ರಾಜಕೀಯದ ಪ್ರಭಾವದಿಂದ ಡಿಸಿ ಅಸಹಾಯಕನಾದರೇ ರೈತನ ಪಾಡೇನು?
ಇನ್ನೊಂದು ಸಂಗತಿ ಇಲ್ಲಿ ಉಲ್ಲೇಖಿಸಲೇಬೇಕು ಮುಖೇಶ್ ಅಂಬಾನಿಯ ರಿಲಾಯನ್ಸ್ ಸಂಸ್ಥೆ 2006ರಲ್ಲೇ ಕಮರ್ಷಿಯಲ್ ಫಾರ್ಮಿಂಗ್ ಆರಂಭಿಸುವ ಉದ್ದೇಶದಿಂದ ಜಾಮ್ ನಗರದಲ್ಲಿ ಸುಮಾರು 2000 ಎಕರೆ ಭೂಮಿಯನ್ನು ಲೀಸ್ ಗೆ ಪಡರೆದುಕೊಂಡಿತ್ತು. ಇಲ್ಲಿ ಅತ್ಯಂತ ದೊಡ್ಡ ಪ್ರಮಾಣದಲ್ಲಿ ಮಾವು ಬೆಳೆಯಲು ಅಂದರೆ ವಾರ್ಷಿಕ ಸರಾಸರಿ 3500 ಟನ್ ಮಾವಿನ ಹಣ್ಣಿನ ಉತ್ಪಾದನೆಗೆ ಯೋಜನೆ ರೂಪಿಸಲಾಗಿತ್ತು. ನಂತರದ ಹಂತದಲ್ಲಿ ಸುಮಾರು 8000 ಎಕರೆ ರಿಫೈನರಿ ಕಾಂಪ್ಲೆಕ್ಸ್ ನಿರ್ಮಾಣದ ಗುರಿಯನ್ನೂ ಹೊಂದಲಾಗಿತ್ತು. ಇದನ್ನು ಇಲ್ಲಿ ಯಾಕೆ ಹೇಳಿದೆ ಅಂದರೇ ರಿಲಾಯನ್ಸ್ ನ ಅಂಬಾನಿಗಳು ಕೃಷಿ ಕ್ಷೇತ್ರಕ್ಕೆ ದಾಂಗುಡಿ ಇಡಲು ಇವತ್ತು ನಿನ್ನೆಯಲ್ಲ ದಶಕಗಳಿಂದಲೇ ಪ್ರಯತ್ನ ನಡೆಸುತ್ತಿದ್ದಾರೆ. ಡಿಸೆಂಬರ್ 2017ರಲ್ಲೆ ಮುಕೇಶ್ ಅಂಬಾನಿ ಸುದ್ದಿಗೋಷ್ಟಿಯಲ್ಲಿ ತಮ್ಮ ಮುಂದಿನ ಹೂಡಿಕೆಯ ಸೈಕಲ್ ಕೃಷಿ ಮತ್ತು ಶಿಕ್ಷಣ ಕ್ಷೇತ್ರದ ಮೇಲೆ ಎಂದಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. 2018ರಲ್ಲಿ ಇದೇ ರಿಲಾಯನ್ಸ್ ಸಂಸ್ಥೆ ಕೃಷಿ, ಶಿಕ್ಷಣ, ಆರೋಗ್ಯ, ಗ್ರಾಮೀಣ ಆರೋಗ್ಯ ಮತ್ತು ಇ-ಕಾಮರ್ಸ್ ಸೇರಿದಂತೆ ಹಲವು ಸ್ಟಾರ್ಟ್ ಅಪ್ ಉದ್ದಿಮೆಗಳಿಗೆ ಮುಂದಿನ 5 ವರ್ಷಗಳಲ್ಲಿ ಬರೋಬ್ಬರಿ 5000 ಕೋಟಿ ಹೂಡಿಕೆ ಮಾಡಲು ತೀರ್ಮಾನಿಸಿರುವುದಾಗಿ ಬಿಸಿನೆಸ್ ಲೈನ್ ಪತ್ರಿಕೆ ವರದಿ ಮಾಡಿತ್ತು. ಇಲ್ಲಿಯೂ ಗಮನಿಸಿ ನೋಡಿ ರಿಲಾಯನ್ಸ್ ನ ಅಜೆಂಡಾದಲ್ಲಿ ಕೃಷಿ ಕ್ಷೇತ್ರಕ್ಕೆ ದಾಪುಗಾಲಿಡುವುದು ಪ್ರಮುಖವಾಗಿ ಕಾಣಿಸುತ್ತದೆ.
ಇಲ್ಲಿ ಪ್ರಶ್ನೆ ಇರುವುದು ಅಂಬಾನಿ ರೈತನ ಗದ್ದೆಗಿಳಿಯುವುದಲ್ಲ. ಅಂಬಾನಿ ಮಾತ್ರವೇ ಯಾಕೆ ಎನ್ನುವುದು. ಕೃಷಿ ಕ್ಷೇತ್ರಕ್ಕೆ ಖಾಸಗಿ ಅಥವಾ ಕಾಪೊರೇಟ್ ಸ್ಪರ್ಷ ನೀಡುವುದು ಒಂದರ್ಥದಲ್ಲಿ ಉತ್ತಮವೇ. ಆದರೆ ಅದರ ನಿಯಂತ್ರಣ ಮಾತ್ರ ಸರ್ಕಾರದ ಕೈನಲ್ಲಿರಬೇಕೇ ಹೊರತು ಜುಟ್ಟು ಜನಿವಾರವನ್ನು ಕಾರ್ಪೋರೇಟ್ ಪ್ರಭುಗಳಿಗೆ ಕೊಡುವಂತಾಗಬಾರದು. ದೇಶದ ಎಲ್ಲಾ ಕ್ಷೇತ್ರದ ಉದ್ಯಮಗಳಿಗೆ ಅಂಬಾನಿ ತನ್ನ ಕಬಂಧ ಬಾಹು ಚಾಚುತ್ತಿರುವುದು ಗುಟ್ಟಿನ ಸಂಗತಿಯೇನಲ್ಲ. ರಿಲಾಯನ್ಸ್ ನ ಏಕಚಕ್ರಾಧಿಪತ್ಯವನ್ನು ಪ್ರಶ್ನಿಸದೇ ಹೋದರೆ ಉಳಿದ ಸಣ್ಣ ಪುಟ್ಟ ಉದ್ಯಮಿಗಳಿಗೆ ಉಳಿಗಾಲವಿಲ್ಲ. ಇಲ್ಲಿ ಮಾರ್ಪಾಡಗಬೇಕಿರುವುದು ಇಂತಹ ಸಂಗತಿಗಳು. ಅಂದರೆ ಉದಾಹರಣೆಗೆ ದಾವಣಗೆರೆಯ ರೈತನ ಉತ್ಪನ್ನಗಳನ್ನು ದಾವಣಗೆರೆ ಮೂಲದ ಒಬ್ಬ ಉದ್ಯಮಿಯೋ ಅಥವಾ ದಾವಣಗೆರೆಯ ಸ್ಥಳೀಯ ಖಾಸಗಿ ಸಂಸ್ಥೆ ಖರೀದಿಸಿ ಮಾರಾಟ ಮಾಡಲು ಮುಂದೆ ಬಂದರೆ ರೈತನಿಗೂ ಧೈರ್ಯ, ವ್ಯವಹಾರವೂ ಪಾರದರ್ಶಕವಾಗುಳಿಯುತ್ತದೆ ಮತ್ತು ಏನಾದರೂ ಹೆಚ್ಚು ಕಮ್ಮಿಯಾದರೆ ಕತ್ತಿನ ಪಟ್ಟಿ ಹಿಡಿದು ಕೇಳಲು ರೈತನಿಗೂ ಅಧಿಕಾರವಿರುತ್ತದೆ. ಅದೇ ದಾವಣಗೆರೆಯ ರೈತನಿಗೆ ಉತ್ತರ ಭಾರತೀಯ ಅಂಬಾನಿ ದಳ್ಳಾಳಿಯಾದರೆ ಭಾಷೆ ಗೊತ್ತಿಲ್ಲದೇ, ಧಣಿಯ ಮುಖ ನೋಡದೇ ಅವನೇನಾದರೂ ಟೋಪಿ ಹಾಕುವ ವ್ಯವಹಾರಕ್ಕೆ ಮುಂದಾದರೇ ಅನಾಥನಾಗುವುದು ರೈತನೇ ತಾನೇ?
ಇನ್ನು ಕಾರ್ಪೊರೇಟ್ ವ್ಯವಸ್ಥೆಯೇ ಬೇಡವೆಂದರೂ ಎಪಿಎಂಸಿಯ ದಳ್ಳಾಳಿಗಳನ್ನು ಹೋಲ್ ಸೇಲ್ ಆಗಿ ನಿರ್ನಾಮಗೊಳಿಸಿ, ಸಂಪೂರ್ಣ ಸ್ವಾಯತ್ತ, ಸ್ವಾವಲಂಭಿ ಮತ್ತು ಸ್ಥಿರ-ಸಮರ್ಥ ಸಾಂಸ್ಥಿಕ ಕಾರ್ಯಾಚರಣೆಗೆ ಒಳಪಡಿಸುವುದು ಕಷ್ಟದ ಮಾತೇನಲ್ಲ. ಆದರೆ ಇದಕ್ಕೊಂದು ಪ್ರಬಲವಾದ ಇಚ್ಛಾಶಕ್ತಿ ಮತ್ತು ಬದ್ಧತೆ ಆಳುವ ಸರ್ಕಾರಕ್ಕೆ ಬೇಕು. ಸರ್ಕಾರ ನಿಜಕ್ಕೂ ಪ್ರಾಮಾಣಿಕ ರೈತ ಪರ ಎನ್ನುವುದಾದರೇ ಈಗಿರುವ ಎಪಿಎಂಸಿ ವ್ಯವಸ್ಥೆಯನ್ನೇ ಬದಲಾಯಿಸಿ ಹೊಸ ಸ್ವರೂಪ ನೀಡಬೇಕು. ಹೇಗೆ ಗ್ರಾಮ ಪಂಚಾಯತಿ, ಅದರ ಮೇಲೊಂದು ತಾಲೂಕು ಪಂಚಾಯತಿ, ನಂತರ ಜಿಲ್ಲಾ ಪಂಚಾಯತಿ, ಪಟ್ಟಣಗಳಲ್ಲಿ ಸ್ಥಳೀಯ ಸಂಸ್ಥೆಗಳಾದ ಪುರಸಭೆ, ನಗರಸಭೆ, ಮಹಾನಗರ ಪಾಲಿಕೆ ಎನ್ನುವ ಅಧಿಕಾರ ವಿಕೇಂದ್ರಿಕರಣದ ವ್ಯವಸ್ಥೆ ಇದೆಯೋ ಹಾಗೆಯೇ ಕೃಷಿಕರ ಮಾರುಕಟ್ಟೆ ಅಥವಾ ಎಪಿಎಂಸಿಯನ್ನು ಹೀಗೆ ವಿಕೇಂದ್ರಿಕರಿಸಬಹುದು. ಗ್ರಾಮ ಗ್ರಾಮಗಳಲ್ಲೂ ಗ್ರಾಮೀಣ ಮಾರುಕಟ್ಟೆ. ನಂತರ ಹೋಬಳಿ ಹಾಗೂ ತಾಲೂಕು ಮಟ್ಟದ ಮಾರುಕಟ್ಟೆ ಅದರ ನಂತರ ಜಿಲ್ಲಾ ಮಾರುಕಟ್ಟೆ ಎನ್ನುವುದಾಗಿ ವಿಭಾಗಿಸಬಹುದು.
ಪ್ರತೀ ಹಳ್ಳಿಯಲ್ಲೂ ಗ್ರಾಮೀಣ ಮಾರುಕಟ್ಟೆಗೆ ರೈತ ಬೆಳೆದ ಬೆಳೆಗಳನ್ನು ವಿಲೇವಾರಿ ಮತ್ತು ಮಾರಾಟ ಮಾಡುವುದು. ಕೊಂಚ ಕೆಡದ ಅಂದರೆ ಧಾನ್ಯಗಳು, ಎಣ್ಣೆ ಕಾಳುಗಳಾದರೆ ಅದರ ದಾಸ್ತಾನು ಮಳಿಗೆಯಲ್ಲಿ ಶೇಖರಿಸಿಡುವುದು. ಅಲ್ಲೇ ಮಾರಾಟವಾಗುವಷ್ಟು ಮಾರಾಟವಾದ ನಂತರ ಉಳಿದಿದ್ದನ್ನು ತಾಲೂಕು ಕೇಂದ್ರಕ್ಕೆ ಕಳಿಸುವುದು. ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿಯೂ ಇದೇ ವ್ಯವಸ್ಥೆ ರೂಪಿಸಬಹುದು. ಈಗಾಗಲೇ ಆಹಾರ ಸಂಗ್ರಹಾಗಾರ ಗೋದಾಮುಗಳು ಅತ್ಯಾಧುನಿಕ ವ್ಯವಸ್ಥೆ ಅಳವಡಿಸಿಕೊಂಡು ಸಿದ್ಧವಾಗಿದೆ. ಹಾಳಾಗುವ ಬೆಳೆಗಳಾದರೆ ಅವುಗಳನ್ನು ಶೈತ್ಯಾಗಾರದಲ್ಲಿ ಸಂಗ್ರಹಿಸಿಯೋ ಅಥವಾ ಡ್ರೈಯರ್ ಮೂಲಕ ಒಣಗಿಸಿ ಮಾರಾಟ ಮಾಡುವುದೋ ಮಾಡಬಹುದು. ಕೃಷಿ ಸಂಬಂಧಿ ಉಪ ಉತ್ಪನ್ನಗಳ ಗೃಹ ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡಿದರೆ ಇನ್ನೂ ಒಂದು ಹಂತ ಮುಂದೆ ಹೋಗಬಹುದು. ಉದಾಹರಣೆಗೆ ಗಳಿತ ಟೊಮ್ಯಾಟೋ ಮಾರಾಟವಾಗದಿದ್ದರೇ ಕೆಚಪ್ ಅಥವಾ ಸಾಸ್ ತಯಾರಿಸುವ ಉದ್ಯಮಕ್ಕೆ ಪ್ರೋತ್ಸಾಹ ನೀಡಿದರೆ ಬೆಳೆಯ ನಷ್ಟ ತಪ್ಪುತ್ತದೆ.
ಇಲ್ಲಿ ಮುಖ್ಯವಾಗಿ ಆಗಬೇಕಿರುವುದು ರೈತ ಬೆಳೆದ ಪ್ರತೀ ಬೆಳೆಗೆ ನ್ಯಾಯಯುತವಾದ ಬೆಲೆ ನಿಗದಿ ಮಾಡುವುದು. ಟೊಮ್ಯಾಟೋ, ಈರುಳ್ಳಿ, ತರಕಾರಿ, ಸೊಪ್ಪು, ಹಣ್ಣುಗಳು, ದವಸ, ಧಾನ್ಯಗಳು, ಕಾಳು ಕಡಿ, ಎಣ್ಣೇ ಕಾಳುಗಳಿಗೆ ಯಾವತ್ತೂ ಬೇಡಿಕೆ ಇದ್ದೇ ಇರುತ್ತದೆ. ಇವುಗಳ ಧರವನ್ನು ಒಂದೇ ರೀತಿಯಲ್ಲಿ ನಿಗದಿ ಪಡಿಸಿದರೇ ರೈತ ಯಾವ ಉದ್ಯಮಿಗಳಿಗೂ ಕಡಿಮೆ ಇಲ್ಲದಂತೆ ಸುಖವಾಗಿ ಬದುಕುವಂತಾಗುತ್ತದೆ. ಬೆಂಗಳೂರಿನಲ್ಲಿ ಟೊಮ್ಯಾಟೋ ಕೆಜಿಗೆ 20 ರೂಪಾಯಿ ಆದರೆ ರೈತನಿಂದ ಅದೇ ಟೊಮ್ಯಾಟೋ ಕೆಜಿಗೆ 5 ರೂಪಾಯಿಗಿಂತ ಕಡಿಮೆಗೆ ಖರೀದಿಯಾಗುತ್ತದೆ. 10 ರೂಪಾಯಿ ನಿರ್ದಿಷ್ಟ ಬೆಲೆ ನಿಗದಿಯಾದರೇ 10 ರೂಪಾಯಿ ಲಾಭ ಹೊಸ ಮಧ್ಯವರ್ತಿ ಅಥವಾ ಮಾರುಕಟ್ಟೆಗೆ ಖಂಡಿತಾ ಲಭ್ಯವಿರುತ್ತದಲ್ಲ. ಹೀಗಾದರೇ ರೈತನೂ ಸುಖಿ, ಮಾರುಕಟ್ಟೆಯೂ ಲಾಭಕರ ಗ್ರಾಹಕನೂ ಸಂತುಷ್ಟ. ಇಷ್ಟು ಸರಳ ವ್ಯವಸ್ಥೆಯನ್ನು ರೂಪಿಸುವುದಕ್ಕೆ ಆಳುವ ಸರ್ಕಾರಗಳಿಗೇನು ರೋಗ.
ಅಂತಿಮವಾಗಿ ನನಗನ್ನಿಸುವುದು ಇಷ್ಟೆ. ಈ ದೇಶ ರೈತನಿಂದ ಗ್ರಾಮಗಳಿಂದ ಎನ್ನುವುದಾದರೇ ರೈತ ಮತ್ತು ಗ್ರಾಮಗಳ ಕಲ್ಯಾಣ ಪ್ರತಿಯೊಂದು ಸರ್ಕಾರಗಳ ಆದ್ಯತೆಯಾಗಬೇಕು. ಅದಲ್ಲದೇ ಕಾರ್ಪೋರೇಟ್ ಸಂಸ್ಥೆಗಳ ಗುಲಾಮಗಿರಿಗೆ ತನ್ನನ್ನು ಒಡ್ಡಿಕೊಳ್ಳುವ ಯಾವುದೇ ಸೋ ಕಾಲ್ಡ್ ಭಾಗ್ಯವಿಧಾತರಿಂದಲೂ ಈ ದೇಶದ ಉದ್ಧಾರ ಸಾಧ್ಯವಿಲ್ಲ. ಗ್ರಾಮಗಳ ಸಬಲೀಕರಣ ಎನ್ನುವುದು ರೈತನ ಹಿತಚಿಂತನೆಯಿಂದ ಮಾತ್ರ ಸಾಧ್ಯ. ಹೀಗೊಂದು ಪರಿಕಲ್ಪನೆಯನ್ನು 50 ವರ್ಷಗಳ ಹಿಂದೆಯೇ ಮಹಾತ್ಮ ಎನಿಸಿಕೊಂಡ ಒಬ್ಬ ನಿಜವಾದ ಫಕೀರನೊಬ್ಬ ನೀಡಿದ್ದರು. ಆದರೆ ಆ ಮಹಾತ್ಮನನ್ನೇ ಪದೇ ಪದೇ ಅವಮಾನಿಸುವ ನಮ್ಮ ನಾಯಕ ಮಹಾಶಯರಿಗೆ ಗ್ರಾಮ ಸ್ವರಾಜ್ಯದ ಪರಿಕಲ್ಪನೆಯ ಅರ್ಥವಾದರೂ ಹೇಗಾದೀತು..
-ವಿಭಾ (ವಿಶ್ವಾಸ್ ಭಾರದ್ವಾಜ್)
***
ಸಾಕ್ಷಾಟಿವಿ ಸುದ್ದಿ ಸಂಪಾದಕ ವಿಶ್ವಾಸ್ ಭಾರದ್ವಾಜ್ ಅವರ ಕಿರು ಪರಿಚಯ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel