ಮಂಗಳೂರು: ಪತಿ, ಪತ್ನಿಯನ್ನೇ ಕೊಲೆ ಮಾಡಿ ಬಾವಿಗೆ ಎಸೆದಿದ್ದಾನೆ ಎಂಬ ಆರೋಪದ ಘಟನೆಯೊಂದು ಬೆಳಕಿಗೆ ಬಂದಿದೆ.
ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮಾಚಾರೆ ಎಂಬಲ್ಲಿ ಈ ಘಟನೆ ನಡೆದಿದೆ. ವಿವಾಹಿತೆಯೊಬ್ಬರ ಶವವು ಬಾವಿಯಲ್ಲಿ ಎರಡು ದಿನಗಳ ಹಿಂದೆಯಷ್ಟೇ ಪತ್ತೆಯಾಗಿತ್ತು. ಆದರೆ, ಈ ಘಟನೆಗೆ ಪತಿಯೇ ಕಾರಣ ಎಂಬುವುದು ಬಯಲಾಗಿದೆ. ಪತಿ ಬೇರೊಬ್ಬ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾನೆ ಎಂಬ ಕಾರಣಕ್ಕೆ ಕುಟುಂಬದಲ್ಲಿ ಆಗಾಗ ಗಲಾಟೆ ನಡೆಯುತ್ತಿತ್ತು. ಈ ಘಟನೆ ವಿಕೋಪಕ್ಕೆ ಹೋಗಿ, ಘಟನೆ ನಡೆದ ದಿನದಂದು ನಡೆದ ಜಗಳದಲ್ಲಿ ಪತಿಯೇ ಪತ್ನಿಯನ್ನು ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ಶಶಿಕಲಾ (25) ಎಂಬುವವರ ಶವ ಬಾವಿಯಲ್ಲಿ ಪತ್ತೆಯಾಗಿತ್ತು. ಈ ಕುರಿತು ಧರ್ಮಸ್ಥಳ ಪೊಲೀಸ್ ಠಾಣೆ ಪೊಲೀಸರು ತನಿಖೆ ಆರಂಭಿಸಿದ್ದರು. ಸುಧಾಕರ್ ಎಂಬಾತ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಆರೋಪಿ ಹಾಗೂ ಸಾವನ್ನಪ್ಪಿದ ದುರ್ದೈವ ಮಹಿಳೆ ಕಳೆದ 7 ವರ್ಷಗಳ ಹಿಂದೆ ಪ್ರೀತಿ ಮಾಡಿ ಮದುವೆಯಗಿದ್ದರು. ಈ ದಂಪತಿಗೆ ಮಗಳು ಕೂಡ ಇದ್ದಾರೆ. ಆದರೆ, ಸುಧಾಕರ್ ಬೇರೆಯವಳೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾನೆ ಎನ್ನಲಾಗಿದೆ. ಹೀಗಾಗಿ ಇಬ್ಬರ ಮಧ್ಯೆ ಜಗಳ ನಡೆದು, ಅದು ವಿಕೋಪಕ್ಕೆ ತೆರಳಿ, ಶಶಿಕಲಾ ಕೊಲೆಯಲ್ಲಿ ಅಂತ್ಯವಾಗಿದೆ.