ಸನ್ಯಾಸಿಯ ಬದುಕು
ಪ್ರಶಾಂತ್ ಪೈ ಹೆಬ್ರಿ
ನಾನೊಬ್ಬ ಸುಸಂಸ್ಕೃತ ಮನೆತನದಿಂದ ಬಂದ ಕೂಸಾಗಿದ್ದೆ. ನಾನವಳುವಾಗ ನನ್ನ ಹೆತ್ತಬ್ಬೆ ಅಂದ್ಕೊಂಡಿದ್ದಳೇನೋ ಹುಟ್ಟಿದ ಈ ಮುದ್ದುಮಗ ನಾಳೆ ನಮ್ಮ ಮನೆಯ ನಂದಾದೀಪವಾಗಿಯೋ ಆಶಾದೀಪವಾಗಿಯೋ ಮೂಡಿ ಬರಬಲ್ಲ,ಮದುವೆಯ ಬಂಧನಕ್ಕೆ ಒಳಗಾಗಿ ಸುಖದಿಂದ ಬಾಳಿ ಬದುಕಿ ಕುಲ ವಂಶೋದರಕನಾಗಬಲ್ಲ ಅಂತ!
ಅಳುವ, ನಾ ಶಾಲೆಗೆ ಹೋಗಲಮ್ಮ ಅಂತ ಗೋಗರೆದು ಅಮ್ಮನ ಸೆರಗು ಹಿಡಿದು ಸೆರಗಿನ ನಡುವೆ ಮುಖ ಹುದುಗಿಸಿ ಸಿಂಬಳ ಸಹಿತ ಅಳುವನ್ನು ಒರೆಸಿ ತಾಯಿಯನ್ನು ಬಿಟ್ಟು ನಾ ಎಲ್ಲಿಗೂ ಹೋಗಲಾರೆ ಅಂತ ಮುಂದಿನ ಬದುಕಿನ ಭಯ ಇರದೇ ತನ್ನದೇ ಮುಗ್ದ ಹಸುಳೆಯ ಮನದ,ತಪ್ಪು-ಸರಿ,ಮುಖವಾಡ ಹೊಂದಿದ ಜನರ ಪರಿಚವೇ ಗೊತ್ತಾಗದ ಕಪಟವಿಲ್ಲದ ಮನಸಿನಂತಹ ಹರೆಯದಲ್ಲಿ……
ಹಿರಿಯರೊಬ್ಬರು ನನ್ನ ಅಪ್ಪ-ಅಮ್ಮನ ಬಳಿ ಬಂದು ಒಂದು ವಿಷಯದ ಬಗ್ಗೆ ಚರ್ಚೆ ಮಾಡುವುದನ್ನ ಕಂಡೆ. ಅರೆ ಇದ್ಯಾಕಪ್ಪ ನನ್ನಮ್ಮ ಅಳ್ತಾ ಇದ್ದಾರೆ, ಅಪ್ಪನ ಮೊಗದಲ್ಲಿ ದುಗುಡ ಆದರೂ ಮನೆಯ ಯಜಮಾನನಾಗಿ ಕಣ್ಣೀರು ತರವಲ್ಲ ಎಂಬಂತೆ ಮನದ ಮೂಲೆಯಲ್ಲಿ ಬೇಡವೆನ್ದರೂ ಬಿಕ್ಕಳಿಸುವ ನೋವಿನ ಅಳು!
ಅರಿವಾಗಲಿಲ್ಲ ನನಗೆ ಅವರ ಮನಸಿನ ನೋವು.. ಒತ್ತಾಯದಿಂದ ಮನಸ್ಸೇ ಇಲ್ಲದ ಮನಸ್ಸಿನಿಂದ ಒಪ್ಪಿಕೊಂಡ ಎರಡು ಮನಸುಗಳು ಆಲೋಚನೆಯೇ ಮಾಡ್ಲಿಲ್ಲ ಈ ಮಗುವಿನ ಮನಸ್ಸನ್ನು, ನನ್ನ ಮನಸ್ಸಿನ ಮಾತನ್ನು….
ಮಣೆಯ ಮೇಲೆ ಕೂರಿಸಿ ಜನಿವಾರದಾರಿಯನ್ನಾಗಿ ಮಾಡಿ ಅದೇ ಜನಿವಾರವನ್ನು ಕಡಿದು ಹಾಕಿರುವ ನನ್ನ ಅಂಗಿ ಮತ್ತು ಚಡ್ಡಿಯನ್ನು ತೆಗೆದು ಕೇಸರಿ ವಸ್ತ್ರವನ್ನು ಹಾಕಿದಾಗಲೂ ಅನ್ನಿಸಲಿಲ್ಲ ನನಗೆ ಇಲ್ಲಿ ಏನಾಗ್ತಾ ಇದೆ ಅಂತ ಯಾಕೆಂದರೆ ನಾನಗಾಗ 8ರ ಹರೆಯ!
ನಮ್ಮ ಮನೆಯ ತೋಟದಲ್ಲಿ ಹರಿಯುವ ತೋಡಿನಲ್ಲಿ ದೋಣಿ ಬಿಡುವ, ಸೈಕಲನ ಟೈಯರನ್ನು ಕೋಲಿನಲ್ಲಿ ಹೊಡೆದುಕೊಂಡು ಹೋಗುವ, ಅಟ್ಟಾ-ಮುಟ್ಟ ಆಡುವ, ಕಣ್ಣಾ ಮುಚ್ಚಾಲೆ ಆಡುವ ಹರೆಯದಲ್ಲಿ ನನ್ನ ಮೈಮೇಲೆ ಸ್ವಾಮಿಗಳ ಹೊದಿಕೆ ಹಾಕಿ ಆಗಿತ್ತು. ನನಗನಿಸಲೇ ಇಲ್ಲ ಮುಂದೊಂದು ದಿನ ಈ ಹೊದಿಕೆಯೇ ಬದುಕಿಗಾಗಲಿದೆ ಅಂತ!
ಹೊಸ ಬಟ್ಟೆ ಉಡಿಸಿದ ಕ್ಷಣದಲ್ಲೇ ಜೈಕಾರ ಕೇಳಲಾರಂಭಿಸಿತು.
ವಿಚಿತ್ರ ಅನಿಸಿತು ಹಿರಿಯ ಜೀವಗಳು, ಮಹಿಳೆಯರು ಎಲ್ಲಾ ನನ್ನ ಕಾಲು ಹಿಡಿಯುವ ಕ್ಷಣಗಳು..ನನ್ನನ್ನ ಅವರಿಂದ ಪ್ರತ್ಯೇಕವಾಗಿ ಕಾಣುವ ಕ್ಷಣಗಳು.. ನನಗಾಗೇ ಪ್ರತ್ಯೇಕವಾಗಿ ತಯಾರಿಸಿದ ಊಟ ಉಪಚಾರಗಳು.. ಒಂದಾ ಎರಡೇ..
ಕಾಲ ಕಳೆದಂತೆ ನಾನು ಯವ್ವನದ ಕಾಲಘಟ್ಟಕ್ಕೆ ಇಳಿದೆ. ಮೈ ಮನಸ್ಸಿನ ಬದಲಾವಣೆ ಆಗುವ ಸಂದರ್ಭದಲ್ಲಿ ನಾನು ಅದೇ ಬಂಧನದ ಹಕ್ಕಿಯಾಗಿದ್ದೆ. ಮನದಾಳದ ವಯೋ ಸಹಜ ಬಯಕೆಯನ್ನು ಯಾರ ಜತೆ ಹಂಚಿಕೊಳ್ಳಲಿ? ನನ್ನ ಇಚ್ಛೆಯನ್ನ ಪೂರೈಸುವುದು ತಪ್ಪು ಅಂತ ಕಟ್ಟಪ್ಪಣೆ ವಿಧಿಸಿದ್ದು ಆಲೋಚಿಸುವಾಗ ತಿಳಿಯಿತು ನಾನೇನಾಗಿದ್ದೆ ನಾನೇನಾಗಿದ್ದೇನೆ ಅಂತ. ಆದ್ರೆ ಕಾಲ ಮಿಂಚಿ ಹೋಗಿತ್ತು. ಕೈಗೆ ಸಿಕ್ಕ ಮಠದ ಜವಾಬ್ದಾರಿ, ನೂರಾರು ಕೋಟಿ ಆಸ್ತಿಯ ಹಕ್ಕು, ನೂರಾರು ಕೋಟಿಗಳ ವ್ಯವಹಾರ, ತಿರುಗಲು ವೈಭವದ ವಿದೇಶಿ ಕಾರು.. ಬಿಟ್ಟು ವೈವಾಹಿಕ ಬಂಧನಕ್ಕೆ ಹೇಗೆ ಮರಳಲಿ? ಹೋದರೆ ನನ್ನನ್ನ ಹೇಗೆ ಸ್ವೀಕರಿಸಬಲ್ಲುದು ಈ ಸಮಾಜ? ಮಠದ ಸಮಸ್ಸೆಯನ್ನ ಪರಿಹರಿಸಲು ಯತ್ನಿಸುವುದು ಹುತ್ತಕ್ಕೆ ಕೈ ಹಾಕಿದಂತೆ ಅಂತ ದಿನ ಹೋದಂತೆ ಅನ್ನಿಸತೊಡಗಿತು. ಆದ್ರೂ…. ಹರೆಯ ಮೀರತೊಡಗಿತು.. ಮನಸ್ಸಿನ ಬಯಕೆಯ ಕೂಗು ನಿತ್ರಾಣಗೊಂಡು ತನ್ನ ಚೈತನ್ಯ ಕಳೆಯತೊಡಗಿತು.. ಎಲ್ಲರೂ ಇದ್ದು ನಾನು ಒಂಟಿಯಾಗ ತೊಡಗಿದೆ. ಮಧ್ಯರಾತ್ರಿಯಲ್ಲಿ ಒಂದು ಕರೆ ಬಂತು ಅಪ್ಪ ತಿರ್ಕೊಂಡ್ಲು ಅಂತ! ಅಪ್ಪ ಅಂತ ಓಡೋಡಿ ಹೋಗೋಣ ಅಂತ ಅನ್ನಿಸ್ತು ಮನಸಿಗೆ ಆದ್ರೆ ಆದೇ ಮಠದ ಕಟ್ಟಳೆ.. ಸತ್ತ ಅಪ್ಪನ ಹೆಣ ನೋಡುವುದು ನಿಷಿದ್ಧ! ನಾನ್ಯಾವ ಜನ್ಮದಲ್ಲಿ ಮಾಡಿದ ತಪ್ಪೋ ಹುಟ್ಟಿಸಿದ ಅಪ್ಪ ತೀರಿದಾಗ ಮುಟ್ಟಲು ನಿಷಿದ್ದವಂತೆ! ಅಯ್ಯೋ ವಿಧಿಯೇ.
ನಾನು ನಾನಾಗಿರಲಿಲ್ಲ ಅವಾಗ ಯಾಕಂದ್ರೆ ಮಠದ ಹಿರಿಯ ತಲೆಗಳು ನನ್ನ ಅನುಮತಿ ಇಲ್ಲದೆಯೇ, ನನ್ನ ತಂದೆ ತಾಯಿಗೆ ಬಲವಂತವಾಗಿ ಒಪ್ಪಿಸಿ ನನ್ನನ್ನ ನನ್ನ ತಂದೆತಾಯಿಯಿಂದ ಕಿತ್ತುಕೊಂಡು,ನನ್ನ ಬಾಲ್ಯವನ್ನು ಕೊಂದು ಹಾಕಿದ ಮನಸ್ಥಿತಿಗೆ ಏನು ಹೇಳಲಿ, ಬೇರೆಯವರ ಹೆಗಲ ಮೇಲೆ ಬಂದೂಕು ಇತ್ತು ಗುರಿ ಇಡುವ ಕ್ರೂರ ಮನಸ್ಸಿನ ಕೈಗೊಂಬೆಯಾಗಿದ್ದೆ ನಾನು..
ನನ್ನನ್ನು ನನ್ನವರಿಂದ ಕಸಿದ ಮಠದ ಬದುಕು ನನ್ನ ಜೀವನದ ಅಂತಿಮ ಗಳಿಗೆಯಲ್ಲಿ ನನ್ನನ್ನೇ ನನ್ನಿಂದ ದೂರವಾಗಿಸಿತು. ಬದುಕಿನ ಮೂರು ಮೆಟ್ಟಿಲುಗಳನ್ನು ಹತ್ತಿ ಮೋಕ್ಷದ ಬಯಕೆ ಬಯಸಿದ ಮನಕ್ಕೆ ಬಾಲ್ಯದಲ್ಲೇ ಶವ ಪೆಟ್ಟಿಗೆಯ ಕೊನೆಯ ಮೊಳೆ ಹೊಡೆಯಲಾಯಿತು.
ನನ್ನ ಮನಸ್ಸಿನ ನೋವು ಕೇಳಲು ಯಾರೂ ಇರಲಿಲ್ಲ ಯಾಕಂದ್ರೆ ನಾನು ನಾನಾಗಿರಲಿಲ್ಲ. ನಾನು ಸ್ವಾಮಿಯಾಗಿದ್ದೆ……