ಪೆಟ್ರೋಲ್ ದರ ಶತಕ ಬಾರಿಸಲಿದೆ. ಇದು ಮೋದಿ ಸಾಧನೆ : ಕುಮಾರಸ್ವಾಮಿ
ತುಮಕೂರು : ಪೆಟ್ರೋಲ್ ದರ ಶತಕ ಬಾರಿಸಲಿದೆ. ಇದು ನರೇಂದ್ರ ಮೋದಿ ಸಾಧನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಟೀಕಿಸಿದ್ದಾರೆ.
ತುಮಕೂರಿನ ತುರುವೇಕೆರೆಯ ಸೀಗೇಹಳ್ಳಿ ಗ್ರಾಮದಲ್ಲಿ ಮಾತನಾಡಿದ ಅವರು, ಪೆಟ್ರೋಲ್ ದರ ಶತಕ ಬಾರಿಸಲಿದೆ. ಇದು ನರೇಂದ್ರ ಮೋದಿ ಸಾಧನೆ.
ಹಲವಾರು ಮಿತ್ರಪಕ್ಷಗಳು ಎನ್ ಡಿ ಎ ಕೂಟ ತೊರೆದಿವೆ. ಐಟಿ ಇಡಿಗಳು ಮಾತ್ರ ಇವರ ಮಿತ್ರ ಪಕ್ಷದಂತೆ ಇವೆ.
ನಾನು ಸಿಎಂ ಆದಾಗ ನಮಗೆ ಸಂಬಂಧಿಸಿದವರ ಮನೆ ಮೇಲೆ ಪದೇ ಪದೇ ಐಟಿ ದಾಳಿ ನಡೆಸಿದರು. ಈಗ ಯಾಕೆ ದಾಳಿ ನಡೆಯುತಿಲ್ಲ ಎಂದು ಪ್ರಶ್ನಿಸಿದರು.
ಈ ಸರ್ಕಾರದಲಿ ಲೂಟಿ ನಡೀತಿದೆ ಎಂದು ಸ್ವತ ವಿಶ್ವನಾಥ್ ಹೇಳುತಿದ್ದಾರೆ. ರಾಜ್ಯದಲ್ಲಿ ಪಾರದರ್ಶಕ ಆಡಳಿತ ನಡೀತಿಲ್ಲ.
ಐಟಿದಾಳಿಗೆ ನಾನು ಹೆದರಲ್ಲ. ರಾಜ್ಯದಲ್ಲಿ ನಡೆಯುತ್ತಿರುವ ಅವ್ಯವಹಾರ ಕಂಡು ಅಸಹ್ಯ ಪಟ್ಟು ನಾನು ಮೌನಕ್ಕೆ ಶರಣಾಗಿದ್ದೇನೆ. ಈ ವ್ಯವಸ್ಥೆ ಕಂಡು ಜನಗಳೇ ತಿರುಗಿ ಬೀಳಬೇಕು ಎಂದು ಹೇಳಿದರು.
ಇದೇ ವೇಳೆ ರಾಮ ಮಂದಿರಕ್ಕೆ ದೇಣಿಗೆ ಕೊಡಲು ಆಗದೇ ಇದ್ದರೇ ತೆಪ್ಪಗಿರಿ ಅಂದಿದ್ದ ಪ್ರಹ್ಲಾದ್ ಜೋಶಿ ಹೇಳಿಕೆ ವಿಚಾರವಾಗಿ ಮಾತನಾಡಿ, ನಾನು ದೇಣಿಗೆ ಕೊಡಲು ಆಗಲ್ಲ ಅಂದಿಲ್ಲ.
ಪದೇ ಪದೇ ಅವರು ನನಗೆ ಕೆಣಕಬಾರದು. ಸ್ವೇಚ್ಛಾಚಾರವಾಗಿ ಬೀದಿ ಬೀದಿಯಲ್ಲಿ ದೇಣಿಗೆ ಸಂಗ್ರಹ ಮಾಡಿರೋರ ಬಗ್ಗೆ ನಾನು ಟೀಕೆ ಮಾಡಿರೋದು.
ಹಣ ವಸೂಲಿ ಮಾಡಲು ಯಾರು ಪವರ್ ಕೊಟ್ಟಿರೋರು. ಪ್ರಹ್ಲಾದ್ ಜೋಶಿ ಎಷ್ಟು ದೇವಸ್ಥಾನ ಕಟ್ಟಿದ್ದಾರೆ. ನಾನು ಮತ್ತು ದೇವೇಗೌಡರು ನಮ್ಮ ಭಾಗದಲ್ಲಿ ಎಷ್ಟೋ ದೇವಸ್ಥಾನ ಕಟ್ಟಲು ದೇಣಿಗೆ ನೀಡಿದ್ದೇವೆ.
ರಾಮನ ಹೆಸರು ದುರ್ಬಳಕೆ ಮಾಡಬೇಡಿ ಎಂದಿದ್ದೆ. ನಾನು ಲೆಕ್ಕ ಕೇಳಿಲ್ಲ,ಲೆಕ್ಕ ಕೇಳಿದವರಿಗೆ ಬೇಕಾದರೆ ಇವರು ಪ್ರಶ್ನೆ ಮಾಡಲಿ. ಹಣ ಸಂಗ್ರಹಕ್ಕೆ ನೀತಿ ನಿಯಮ ಇರಬೇಕು ಎಂದು ತಿಳಿಸಿದರು.
ಸಮುದಾಯಗಳ ಮೀಸಲಾತಿ ವಿಚಾರ ಮಾತನಾಡಿ, ಸಮಾಜದಲ್ಲಿ ಸಂಘರ್ಷ ಉಂಟಾಗುವ ಮೊದಲು ಸರ್ಕಾರ ಸರಿಯಾದ ಮಾಹಿತಿ ಕೊಡಬೇಕು.
ಇಲ್ಲದಿದ್ದರೆ ಅನಾಹುತ ನಡೆಯಬಹುದು. ಜಾತಿಗಣತಿ ವರದಿ ಬರೆದಿರೋದು ಕಾಂತರಾಜು ಅಲ್ಲ. ಸಿದ್ದರಾಮಯ್ಯನವರೇ ಬರೆದಿರೋದು, ಅದಕ್ಕೆ ಆರ್ಥಿಕ ಸಾಮಾಜಿಕ ಗಣತಿ ಎಂಬ ಹೆಸರು ಕೊಟ್ಟಿದ್ದಾರೆ.
ಅದಕ್ಕೆ ಬಹಳ ಜನರಿಗೆ ಗಾಬರಿ ಇದೆ. ಸಿದ್ದರಾಮಯ್ಯರ ಆ ವರದಿ ರಿಲೀಸ್ ಮಾಡಿದರೆ ಸಂಘರ್ಷ ಉಂಟಾಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ರು.