ಚೆನ್ನೈ: ಪ್ರಧಾನಿ ನರೇಂದ್ರ ಮೋದಿ (Narendra Modi) ಎರಡು ದಿನಗಳ ಧ್ಯಾನ ಕೈಗೊಳ್ಳಲಿದ್ದು, ಅದಕ್ಕೂ ಮುನ್ನ ಭಗವತಿ ಅಮ್ಮನ ದರ್ಶನ ಪಡೆದಿದ್ದಾರೆ.
ಕನ್ಯಾಕುಮಾರಿಯಲ್ಲಿನ (Kanyakumari) ವಿವೇಕಾನಂದ ರಾಕ್ ಸ್ಮಾರಕದಲ್ಲಿ ( Vivekananda Rock Memorial) ಇಂದಿನಿಂದ ಎರಡು ದಿನಗಳ ಧ್ಯಾನ ಆರಂಭಿಸಿದ್ದಾರೆ. ಪ್ರಧಾನಿ ಮೋದಿ ಮೇ 30 ರ ಸಂಜೆಯಿಂದ (ಇಂದು) ಜೂನ್ 1 ರ ಸಂಜೆಯವರೆಗೆ ಸುಮಾರು 45 ಗಂಟೆಗಳ ಕಾಲ ಆಧ್ಯಾತ್ಮಿಕ ಕಾರ್ಯದಲ್ಲಿರಲಿದ್ದಾರೆ. ಸ್ವಾಮಿ ವಿವೇಕಾನಂದರು ಧ್ಯಾನ ಮಾಡಿದ ಸ್ಥಳದಲ್ಲಿಯೇ ಪ್ರಧಾನಿ ಹಗಲು-ರಾತ್ರಿ ಧ್ಯಾನ ಮಾಡುತ್ತಾರೆ.
ಸಂಜೆ ತಿರುವನಂತಪುರದಿಂದ ಹೆಲಿಕಾಪ್ಟರ್ನಲ್ಲಿ ಆಗಮಿಸಿದ ಮೋದಿ ನಂತರ ಭಗವತಿ ಅಮ್ಮನವರ ದೇವಸ್ಥಾನದಲ್ಲಿ (Bhagavathy Amman Temple) ಪೂಜೆ ಸಲ್ಲಿಸಿದರು. ಧೋತಿ ಮತ್ತು ಬಿಳಿ ಶಾಲು ಧರಿಸಿದ ಮೋದಿ ಅವರು ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿ, ಪ್ರದಕ್ಷಿಣೆ ಹಾಕಿ, ಆರತಿ ಬೆಳಗಿದರು.
ನಂತರ ದೋಣಿಯ ಮೂಲಕ ರಾಕ್ ಸ್ಮಾರಕವನ್ನು ತಲುಪಿದರು. ಧ್ಯಾನ ಪ್ರಾರಂಭಕ್ಕೂ ಮುನ್ನ ಮೋದಿಯವರು ಸ್ಮಾರಕವನ್ನು ಸುತ್ತುವರಿದಿರುವ ಸಮುದ್ರದ ರುದ್ರರಮಣೀಯ ದೃಶ್ಯಗಳನ್ನು ಕಣ್ತುಂಬಿಕೊಂಡರು. ಪ್ರಧಾನಿ ಆಗಮಿಸಿರುವ ಹಿನ್ನೆಲೆಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.