ಪತಿಯೊಂದಿಗೆ ಜಗಳವಾಡಿದ್ದ ಪತ್ನಿ ತವರು ಮನೆಗೆ ಹೋಗಿದ್ದರಿಂದಾಗಿ ಕೋಪಗೊಂಡ ಪತಿ ಮಾವನ ಮನೆಗೆ ವಾಮಾಚಾರ ಮಾಡಿಸಿರುವ ಘಟನೆಯೊಂದು ನಡೆದಿದೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಸಮೀಪದ ಮತ್ತಿಕಟ್ಟೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸದೀಶ್ ಎಂಬ ವ್ಯಕ್ತಿ 13 ವರ್ಷಗಳ ಹಿಂದೆ ತಮ್ಮ ಸಹೋದರಿಯನ್ನು ಮರಸಣಿಗೆಯ ಗುರುಮೂರ್ತಿ ಎಂಬುವವರೊಂದಿಗೆ ವಿವಾಹ ಮಾಡಿಕೊಟ್ಟಿದ್ದರು. ಆದರೆ, ಇಬ್ಬರ ಮಧ್ಯೆ ಆಗಾಗ ಜಗಳ ನಡೆಯುತ್ತಲೇ ಇತ್ತು.
ಹೀಗಾಗಿ ಹಿರಿಯರು ಹಲವಾರು ಬಾರಿ ರಾಜಿ ಸಂಧಾನ ಮಾಡಿದ್ದರು. ಕಳೆದ ತಿಂಗಳು ಇಬ್ಬರ ಮಧ್ಯೆ ಜಗಳವಾಗಿದ್ದರಿಂದಾಗಿ ಸುಮಿತ್ರಾ ಅವರು ಸಹೋದರನ ಮನೆಗೆ ಹೋಗಿದ್ದರು. ಇದರಿಂದ ಕೋಪಗೊಂಡ ಗುರುಮೂರ್ತಿ ಸತೀಶ್ ಮನೆಗೆ ಬಂದು ಚಾಕು ತೋರಿಸಿ ಕೊಲೆ ಬೆದರಿಕೆ ಹಾಕಿದ್ದಾನೆ.
ಅಲ್ಲದೇ, ಮನೆ ಬಾಗಿಲಿನಲ್ಲಿ ಯಾವುದೋ ಪ್ರಾಣಿಯ ರಕ್ತ ಚೆಲ್ಲಿ ವಾಮಾಚಾರ ಮಾಡಿರುವುದು ಕಂಡು ಬಂದಿದೆ. ಚಾಕು ಕೂಡ ಅಲ್ಲಿಯೇ ಬಿಟ್ಟು ಹೋಗಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಸದ್ಯ ಗುರುಮೂರ್ತಿ ವಿರುದ್ಧ ಬಣಕಲ್ ಠಾಣೆಗೆ ಸತೀಶ್ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.