ಕಲಬುರಗಿ: ರಾಜ್ಯದಲ್ಲಿ ಮೊದಲ ಹಂತದಲ್ಲಿ ಮತದಾನ ನಡೆದಿದೆ. ಮೊದಲ ಹಂತದ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಹೆಚ್ಚು ಸ್ಥಾನಗಳು ಬರುತ್ತವೆ ಎಂದು ಸಮೀಕ್ಷೆ ಹೇಳಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ 5 ಗ್ಯಾರಂಟಿ (Guarantee Scheme) ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ. ಈ ಚುನಾವಣೆಯಲ್ಲಿ ಕೇಂದ್ರ ಸರ್ಕಾರದ ವೈಫಲ್ಯ ಹಾಗೂ ನಮ್ಮ ಸರ್ಕಾರದ ಸಾಧನೆ ಪ್ರಸ್ತಾಪ ಮಾಡಿದ್ದೇವೆ. ಮೋದಿ ಸುಳ್ಳಿನ ಮಾರುಕಟ್ಟೆಯನ್ನೇ ಕಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.
ಕೇಂದ್ರ ಸರ್ಕಾರದಿಂದ 3,400 ಕೋಟಿ ರೂ. ಬರ ಪರಿಹಾರ (Drought Relief) ಬಿಡುಗಡೆ ವಿಚಾರವಾಗಿ ಮಾತನಾಡಿದ ಅವರು, ನಾವು ಕೇಳಿದ್ದು 18,172 ಕೋಟಿ ರೂ. ಒಟ್ಟು 35 ಸಾವಿರ ಕೋಟಿ ಬೆಳೆ ನಷ್ಟವಾಗಿದೆ. 48 ಲಕ್ಷ ಹೆಕ್ಟೇರ್ ಬೆಳೆ ನಷ್ಟವಾಗಿದೆ. ನಾವು 18 ಸಾವಿರ ಕೋಟಿ ರೂ. ಕೇಳಿದ್ದೇವು. ಆಗ ನಿರ್ಮಲಾ ಸಿತಾರಾಮನ್, ಅಮಿತ್ ಶಾ ಸುಳ್ಳು ಹೇಳಿದರು. ಕೋಡ್ ಆಫ್ ಕಂಡಕ್ಟ್ ಬಂದಿದೆ ಅಂತ ಅಮಿತ್ ಶಾ ಹೇಳಿದ್ರೆ ನಿರ್ಮಲಾ ಸಿತಾರಾಮನ್ ಬರಗಾಲಕ್ಕೆ ಮನವಿ ಕೊಟ್ಟಿಲ್ಲ, ಗ್ಯಾರಂಟಿಗಳಿಗೆ ದುಡ್ಡು ಕೇಳಿದ್ದಾರೆ ಎಂದರು. ನಾವು ಗ್ಯಾರಂಟಿಗಳಿಗೆ ನಯಾಪೈಸೆ ದುಡ್ಡು ಕೇಳಿಲ್ಲ, ಕೇಳೋದು ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.