ಪತಿಯನ್ನು ಕೊಲೆ ಮಾಡಿ ಆತ್ಮಹತ್ಯೆ ಎಂದು ಬಿಂಬಿಸಲು ಯತ್ನಿಸಿದ ಪತ್ನಿಯ ಕೃತ್ಯವನ್ನು ಪೊಲೀಸರು ಬಯಲಿಗೆ ತಂದಿದ್ದಾರೆ.
ವ್ಯಕ್ತಿಯೊಬ್ಬ ಕಳೆದ ಒಂದು ತಿಂಗಳ ಹಿಂದೆ ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಕೊಂಕಲ್ ಗ್ರಾಮದ ಹೊಲದಲ್ಲಿ ವ್ಯಕ್ತಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದ. ಎಲ್ಲರೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದೇ ನಂಬಿದ್ದರು. ಪತ್ನಿ ಕೂಡ ಹಾಗೆ ಹೇಳಿದ್ದರು. ಆದರೆ, ಪೊಲೀಸರು ಒಂದು ತಿಂಗಳ ಕಾಲ ತನಿಖೆ ನಡೆಸಿ, ಅದು ಆತ್ಮಹತ್ಯೆಯಲ್ಲ ಕೊಲೆ ಎಂಬುವುದನ್ನು ಸಾಬೀತು ಮಾಡಿದ್ದಾರೆ.
ಬನ್ನಿ ಗಿಡಕ್ಕೆ ಗ್ರಾಮದ 36 ವರ್ಷದ ಕಾಶಪ್ಪ ಎಂಬುವವರ ದೇಹ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ವಿಷಯ ತಿಳಿಯುತ್ತಿದ್ದಂತೆ ಗುರುಮಠಕಲ್ ಠಾಣೆಯ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದರು. ಕಾಶಪ್ಪನ ಸಹೋದರಿ ಕಾಶಮ್ಮ ಕೂಡ ಸ್ಥಳಕ್ಕೆ ಬಂದಿದ್ದರು. ಪೊಲೀಸರು ಕಾಶಮ್ಮಳಿಂದ ಅಸಹಜ ಸಾವು ಅಂತ ದೂರು ದಾಖಲಿಸಿಕೊಂಡಿದ್ದರು. ಆದರೆ, ಪೊಲೀಸರು ಒಂದು ತಿಂಗಳ ಕಾಲ ತನಿಖೆ ನಡೆಸಿದ್ದಾರೆ. ಬಳಿಕ ಕಾಶಪ್ಪ ಆತ್ಮಹತ್ಯೆ ಮಾಡಿಕೊಂಡಿಲ್ಲ. ಕಾಶಪ್ಪನನ್ನು ಯಾರೋ ಕೊಲೆ ಮಾಡಿ, ನೇಣು ಬಿಗಿದಿದ್ದಾರೆ ಎಂಬುವುದು ತನಿಖೆಯಲ್ಲಿ ತಿಳಿದು ಬಂದಿದೆ.
ಕಾಶಪ್ಪನ ಪತ್ನಿ 31 ವರ್ಷದ ಅನಿತಾ ಹಾಗೂ ಕಾಶಪ್ಪನ ಹಿಂದಿನ ಮನೆಯ 25 ವರ್ಷ ನಾಗರಾಜ್ ಕೊಲೆ ಮಾಡಿರುವುದು ಎಂಬುವುದು ತನಿಖೆಯಿಂದ ಬಯಲಿಗೆ ಬಂದಿದೆ. ಕಾಶಪ್ಪ ಗ್ರಾಮದಲ್ಲಿ ಕೃಷಿ ಕೆಲಸ ಮಾಡಿಕೊಂಡಿದ್ದ. ಸ್ವಂತ ಜಮೀನಿನಲ್ಲಿ ಉಳುಮೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಕಾಶಪ್ಪನ ಮನೆಯ ಹಿಂದೆ ವಾಸವಾಗಿದ್ದ ನಾಗರಾಜ್, ಕಾಶಪ್ಪನ ಜಮೀನಿಗೆ ಕೆಲಸ ಮಾಡಲು ಹೋಗುತ್ತಿದ್ದ. ಈ ಸಂದರ್ಭದಲ್ಲಿ ಅನಿತಾ ಹಾಗೂ ನಾಗರಾಜ್ ಮಧ್ಯೆ ಪ್ರೇಮಾಂಕುರವಾಗಿದೆ. ಕಳೆದ ಮೂರು ವರ್ಷಗಳಿಂದ ಅನೈತಿಕ ಸಂಬಂಧ ಕೂಡ ಬೆಳೆದಿದೆ.
ಇಬ್ಬರೂ ಆಗಾಗ ಜಮೀನಿನಲ್ಲಿ ಸೇರುತ್ತಿದ್ದರು ಎನ್ನಲಾಗಿದೆ. ಈ ವಿಚಾರ ಕಾಶಪ್ಪನಿಗೂ ಗೊತ್ತಾಗಿದೆ. ಇದೇ ಕಾರಣಕ್ಕೆ ಗ್ರಾಮದ ಹಿರಿಯ ಸಮ್ಮುಖದಲ್ಲಿ ಎರಡು ಬಾರಿ ನ್ಯಾಯ ಪಂಚಾಯ್ತಿ ಕೂಡ ಮಾಡಲಾಗಿತ್ತು ಎನ್ನಲಾಗಿದೆ. ಆದರೆ, ಮೂರು ಮಕ್ಕಳ ತಾಯಿಯಾಗಿರುವ ಅನೀತಾ ಮಾತ್ರ ಯಾರ ಮಾತಿಗೂ ಕಿವಿ ಕೊಡದೆ ಮತ್ತೆ ಮತ್ತೆ ಫೋನ್ ಮಾಡಿ ನಾಗರಾಜ್ ಗೆ ಕರೆಸಿಕೊಳ್ಳುತ್ತಿದ್ದಳು ಎನ್ನಲಾಗಿದೆ. ಸದ್ಯ ತಮ್ಮ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿರುವ ಕಾಶಪ್ಪನನ್ನು ಕೊಲೆ ಮಾಡಿದ್ದಾರೆ ಎಂಬುವುದು ತಿಳಿದು ಬಂದಿದೆ.