ರಾಜ್ಯ ಬಿಜೆಪಿಗೆ ಮತ್ತೆ ಆವರಿಸಿಕೊಂಡ ಬಂಡಾಯದ ಸೋಂಕು..! ಸಿಎಂ ಬಿಎಸ್ ವೈಗೆ ಇದು ಕೋವಿಡ್ಗಿಂತಲೂ ಮಾರಕ…!
ಮಹಾಮಾರಿ ಕೋವಿಡ್ ಸೋಂಕಿಗಿಂತಲೂ ಕರ್ನಾಟಕ ಬಿಜೆಪಿಗೆ ಅಧಿಕಾರದ ಆಮಲು ಆವರಿಸಿಕೊಂಡಂತಿದೆ. ಯಾಕಂದ್ರೆ ಸಿಎಂ ಬಿ.ಎಸ್. ಯಡಿಯೂರಪ್ಪ ನಾಯಕತ್ವ ಬದಲಾವಣೆಯ ಬಗ್ಗೆ ಚರ್ಚೆ ನಡೆಯುತ್ತಿದೆ.
ರಾಜ್ಯದಲ್ಲಿ ಕೋವಿಡ್ ಸೋಂಕಿನಿಂದ ಜನರು ಒದ್ದಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆಯ ಬಗ್ಗೆ ಬಿಸಿ ಬಿಸಿ ಚರ್ಚೆಗಳು ನಡೆಯುತ್ತಿವೆ.
ರಾಜ್ಯದಲ್ಲಿ ಕೋವಿಡ್ ಸೋಂಕಿನ ಪ್ರಮಾಣವನ್ನು ತಗ್ಗಿಸಲು ರಾಜ್ಯದಲ್ಲಿ ಲಾಕ್ ಡೌನ್ ಮಾಡಲಾಗಿದೆ. ಸೋಂಕಿನ ಪ್ರಮಾಣವನ್ನು ಕಮ್ಮಿ ಮಾಡಲು ಸರ್ಕಾರ ಹಲವು ಕ್ರಮಗಳನ್ನು ತೆಗೆದುಕೊಂಡಿದೆ. ಅಧಿಕಾರಿಗಳು, ವೈದ್ಯಕೀಯ ಸಿಬ್ಬಂದಿಗಳು, ಸೇವಾಕಾರ್ಯಕರ್ತರು ಹಾಗೂ ಕೆಲವು ಜನಪ್ರತಿನಿಧಿಗಳು ಜೀವದ ಹಂಗನ್ನು ತೊರೆದು ಕೆಲಸ ಮಾಡುತ್ತಿದ್ದಾರೆ.
ಆದ್ರೆ ಇನ್ನು ಕೆಲವು ಜನ ಪ್ರತಿನಿಧಿಗಳಿಗೆ ಜನರ ಹಿತಕ್ಕಿಂತ ಅಧಿಕಾರವೇ ಮುಖ್ಯವಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಸಿಎಂ ಬದಲಾವಣೆಯ ಅಗತ್ಯವಾದ್ರೂ ಏನಿದೆ ಎಂಬ ಪ್ರಶ್ನೆಗೆ ಉತ್ತರಗಳು ಹಲವಾರು.
ಹಾಗೇ ನೋಡಿದ್ರೆ ಕೋವಿಡ್ ವಿಚಾರದಲ್ಲಿ ಸಿಎಂ ಬಿಎಸ್ ವೈ ಕೆಲವೊಂದು ದಿಟ್ಟ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಆದ್ರೆ ಬಿಜೆಪಿಯ ಸಚಿವರು, ಶಾಸಕರು, ಹಾಗೂ ವಿರೋಧ ಪಕ್ಷಗಳ ಜನನಾಯಕರು ಒಗ್ಗಟ್ಟಿನಿಂದ ಕೆಲಸ ಮಾಡುತ್ತಿಲ್ಲ ಎಂಬುದು ಕೂಡ ಗೊತ್ತಿಲ್ಲದ ವಿಚಾರವೇನೂ ಅಲ್ಲ.
ಕರ್ನಾಟಕ ಕಾಂಗ್ರೆಸ್ ಸರ್ಕಾರವನ್ನು ಟೀಕಿಸುವುದರಲ್ಲೇ ತಲ್ಲೀಣವಾಗಿದೆ. ಇನ್ನೊಂದೆಡೆ ಆಡಳಿತ ಪಕ್ಷ ಬಿಜೆಪಿಯಲ್ಲೂ ವಿರೋಧಿ ಬಣ ಹೆಚ್ಚಾಗಿದೆ. ಹೀಗಾಗಿ ಬಿಎಸ್ ವೈ ಗೆ ಅಧಿಕಾರ ನಡೆಸಲು ವಿರೋಧ ಪಕ್ಷಗಳಿಗಿಂತಲೂ ಸ್ವಪಕ್ಷದ ಶಾಸಕರ ವಿರೋಧವೇ ಹೆಚ್ಚಾಗುತ್ತಿದೆ.
ಪದೇ ಪದೇ ಸಿಎಂ ಬಿಎಸ್ ವೈ ಅವರನ್ನು ನಿದ್ದೆಗೆಡಿಸುತ್ತಿರುವ ಸ್ವಪಕ್ಷದ ಶಾಸಕರು ಮುಳ್ಳಾಗಿ ಚುಚ್ಚುತ್ತಿದ್ದಾರೆ. ಹೀಗಾಗಿ ಬಿಎಸ್ ವೈ ಅಧಿಕಾರ ನಡೆಸಲು ಒದ್ದಾಟ ನಡೆಸುತ್ತಿದ್ದಾರೆ.
ಇನ್ನು ಬಿಎಸ್ ವೈ, ಪುತ್ರ ವಿಜಯೇಂದ್ರ ಅವರ ಮೇಲಿನ ವ್ಯಾಮೋಹದಿಂದಾಗಿ ಪಕ್ಷದದಲ್ಲಿ ಹಿಡಿತವನ್ನು ಕಳೆದುಕೊಳ್ಳುತ್ತಿದ್ದಾರೆ. ವಿಜಯೇಂದ್ರ ಅವರು ಆಡಳಿತದಲ್ಲಿ ಮೂಗು ತೂರಿಸುತ್ತಿರುವುದರಿಂದ ಬಿಎಸ್ ವೈ ಗೆ ವಿರೋಧಿಗಳು ಹೆಚ್ಚಾಗಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಇನ್ನು ಉತ್ತರ ಕರ್ನಾಟಕದ ಶಾಸಕರು ಪ್ರತ್ಯೇಕ ಬಣ ರಚಿಸಿಕೊಂಡಿದ್ದಾರೆ. ಇವರಿಗೆ ಕೆಲವೊಂದು ಮಠಾಧೀಶರ ಬೆಂಬಲವೂ ಇದೆ. ಅದೇ ರೀತಿ ಉತ್ತರ ಕರ್ನಾಟಕದ ಶಾಸಕರು ಮತ್ತು ಸಂಸದರಿಗೆ ಬಿಜೆಪಿ ಹೈಕಮಾಂಡ್ ಮತ್ತು ಆರ್ ಎಸ್ ಎಸ್ ನ ಬೆಂಬಲವೂ ಇದೆ.
ಇನ್ನೊಂದೆಡೆ ಬಿಎಸ್ ವೈ ಗೆ ವಯಸ್ಸು ಕೂಡ ಅಡ್ಡಿಯಾಗುತ್ತಿದೆ. ಹೀಗಾಗಿ ಬಿಎಸ್ ವೈ ಸಿಎಂ ಸ್ಥಾನದಿಂದ ಕೆಳಗಿಳಿಯುವುದು ಅನಿವಾರ್ಯವಾಗಿದೆ. ಆದ್ರೆ ಬಿಎಸ್ ವೈ ಅಷ್ಟೊಂದು ಸುಲಭವಾಗಿ ಅಧಿಕಾರದಿಂದ ಕೆಳಗಿಳಿಯುವ ಸಾಧ್ಯತೆಗಳಿಲ್ಲ.
ಕರ್ನಾಟಕದಲ್ಲಿ ಬಿಜೆಪಿ ಪಕ್ಷವನ್ನು ಬಲಪಡಿಸಲು ಮತ್ತು ಅಧಿಕಾರ ಚುಕ್ಕಾಣಿ ಹಿಡಿಯಲು ಪ್ರಮುಖ ಕಾರಣ ಬಿಎಸ್ ವೈ ನಾಯಕತ್ವ. ಹೀಗಾಗಿ ಬಿಜೆಪಿ ಹೈಕಮಾಂಡ್ ಬಹಳಷ್ಟು ಯೋಚನೆ ಮಾಡಿ ನಿರ್ಧಾರ ತೆಗೆದುಕೊಳ್ಳಬೇಕಿದೆ. ಯಾಕಂದ್ರೆ ಬಿಎಸ್ ವೈ ಅವರನ್ನು ಕೆಳಗಿಳಿಸಿದ್ರೆ ಅದರಿಂದ ಆಗುವಂತಹ ಹಿನ್ನಡೆಯ ಬಗ್ಗೆ ಯೋಚನೆ ಮಾಡಬೇಕಿದೆ.
ಈ ನಡುವೆ, ಬಿಜೆಪಿ ಹೈಕಮಾಂಡ್ ನ ಸೂಚನೆಯಂತೆ ಜೂನ್ 7ರಂದು ಶಾಸಕಾಂಗ ಸಭೆಯನ್ನು ಕರೆದಿದ್ದಾರೆ ಎನ್ನಲಾಗುತ್ತಿದೆ. ಇದಕ್ಕೆ ಪೂರಕವಾಗಿ ಸಂಸದ ಪ್ರಹ್ಲಾದ್ ಜೋಶಿಯವರ ನೇತೃತ್ವದಲ್ಲಿ ಕೆಲವೊಂದು ಶಾಸಕರ ಜೊತೆ ಸಭೆ ಕೂಡ ನಡೆದಿದೆ.
ಒಟ್ಡಿನಲ್ಲಿ ರಾಜ್ಯದಲ್ಲಿ ಈಗ ಕೋವಿಡ್ ಗಿಂತಲೂ ರಾಜಕೀಯ ಬೆಳವಣಿಗೆಯ ಹೆಚ್ಚು ಮಹತ್ವ ಪಡೆದುಕೊಂಡಿದೆ, ಈಗಾಗಲೇ ಬಿಎಸ್ ವೈ ಉತ್ತರಾಧಿಕಾರಿಯಾಗಲು ಆರೇಳು ಮಂದಿ ರೇಸ್ ನಲ್ಲಿದ್ದಾರೆ. ಒಟ್ಟಾರೆ, ಸಿಎಂ ಬಿಎಸ್ ವೈ ಸಿಎಂ ಸ್ಥಾನದಿಂದ ಕೆಳಗಿಳಿಯುವುದು ಪಕ್ಕಾ ಅಂತನೇ ಹೇಳಲಾಗುತ್ತಿದೆ. ಆದ್ರೂ ಬಿಎಸ್ ವೈ ಅಧಿಕಾರ ಬಿಟ್ಟುಕೊಡುವುದು ಅಂದುಕೊಂಡಷ್ಟು ಸುಲಭವಿಲ್ಲ.







