ಬೆಂಗಳೂರು: ವಿಧಾನಸಭೆಯ ಕಲಾಪ ಅಂದರೆ ಸಾಮಾನ್ಯವಾಗಿ ಗಂಭೀರ ಚರ್ಚೆ, ಆರೋಪ-ಪ್ರತ್ಯಾರೋಪ, ಏರಿದ ದನಿ ಮತ್ತು ಪ್ರತಿಭಟನೆಗಳು ಸಾಮಾನ್ಯ. ಆದರೆ ಬುಧವಾರದ ವಿಧಾನಸಭೆಯ ಪ್ರಶ್ನೋತ್ತರ ಕಲಾಪ ಇದಕ್ಕೆ ತದ್ವಿರುದ್ಧವಾಗಿತ್ತು. ಹೆಸರಿನ ಉಚ್ಚಾರಣೆಯಲ್ಲಿ ಆದ ಸಣ್ಣ ಎಡವಟ್ಟು ಸದನದಲ್ಲಿ ನಗೆಯ ಅಲೆ ಎಬ್ಬಿಸಿತು. ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ತಮ್ಮ ಹೆಸರಿನ ಕುರಿತು ನೀಡಿದ ಸ್ವಾರಸ್ಯಕರ ಹೇಳಿಕೆ ಇಡೀ ಸದನವನ್ನು ನಗೆಗಡಲಲ್ಲಿ ತೇಲಿಸಿತು.
ಹೆಸರು ಬದಲಾವಣೆ ಮತ್ತು ಗೊಂದಲದ ಕುರಿತು ಮಾತನಾಡುತ್ತಾ, ಹೆಸರು ಬದಲಾದರೆ ಏನಾಗುತ್ತದೆ ಎನ್ನುವುದಕ್ಕೆ ನನಗಿಂತ ಬೇರೆ ಉದಾಹರಣೆಯೇ ಇಲ್ಲ. ನನ್ನ ಹೆಸರು ಪ್ರಿಯಾಂಕ್ ಖರ್ಗೆ. ಆದರೆ, ಹಲವರು ಪ್ರಿಯಾಂಕಾ.. ಪ್ರಿಯಾಂಕಾ.. ಎಂದು ಕರೆಯುವ ಮೂಲಕ ನನ್ನ ಲಿಂಗವನ್ನೇ ಬದಲು ಮಾಡಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹಾಸ್ಯಮಯವಾಗಿ ಹೇಳುವ ಮೂಲಕ ಸದನದ ಒತ್ತಡದ ವಾತಾವರಣವನ್ನು ತಿಳಿಗೊಳಿಸಿದರು.
ತಿಮ್ಮಯ್ಯ ವರ್ಸಸ್ ತಮ್ಮಯ್ಯ ಪ್ರಸಂಗ
ಈ ಹಾಸ್ಯ ಪ್ರಸಂಗಕ್ಕೆ ಕಾರಣವಾಗಿದ್ದು ಆಡಳಿತ ಪಕ್ಷದ ಸದಸ್ಯ ತಮ್ಮಯ್ಯ ಎಚ್.ಡಿ. ಅವರ ಹೆಸರು. ಪ್ರಶ್ನೋತ್ತರ ಅವಧಿಯಲ್ಲಿ ಉತ್ತರಿಸುತ್ತಿದ್ದ ಸಚಿವ ಪ್ರಿಯಾಂಕ್ ಖರ್ಗೆ, ಸದಸ್ಯ ತಮ್ಮಯ್ಯ ಅವರನ್ನು ಅಚಾತುರ್ಯದಿಂದ ತಿಮ್ಮಯ್ಯ ಎಂದು ಸಂಭೋದಿಸಿದರು.
ಇದಕ್ಕೆ ತಕ್ಷಣವೇ ಆಕ್ಷೇಪ ವ್ಯಕ್ತಪಡಿಸಿದ ಶಾಸಕ ತಮ್ಮಯ್ಯ, ಮಾನ್ಯ ಸ್ಪೀಕರ್ ಅವರೇ, ನನ್ನ ಹೆಸರನ್ನು ತಾವು ಒಮ್ಮೆ ತಿಮ್ಮಯ್ಯ ಎಂದು ಕರೆದ ಪರಿಣಾಮ, ಈಗ ಎಲ್ಲರೂ ನನ್ನನ್ನು ತಿಮ್ಮಯ್ಯ ಎಂದೇ ಕರೆಯುತ್ತಿದ್ದಾರೆ. ಇದರಿಂದಾಗಿ ನನ್ನ ಹೆಸರೇ ಬದಲಾದಂತಾಗಿದೆ ಎಂದು ಸಭಾಧ್ಯಕ್ಷರ ಗಮನ ಸೆಳೆದರು.
ಹೆಸರು ತಪ್ಪಾಗಿ ಕರೆದರೆ ದಂಡ ಗ್ಯಾರಂಟಿ
ಶಾಸಕ ತಮ್ಮಯ್ಯ ಅವರ ಅಳಲಿಗೆ ಸ್ಪಂದಿಸಿದ ಸಭಾಧ್ಯಕ್ಷ ಯು.ಟಿ. ಖಾದರ್, ಸದಸ್ಯರ ಹೆಸರನ್ನು ತಪ್ಪಾಗಿ ಕರೆಯುವುದು ಸರಿಯಲ್ಲ. ನಿಮ್ಮ ಹೆಸರು ತಮ್ಮಯ್ಯ ಎಂದು ಕಡತದಲ್ಲಿದೆ. ಹೀಗಾಗಿ ಸದನದ ಕಲಾಪದಲ್ಲಿ ಇನ್ನು ಮುಂದೆ ಸದಸ್ಯರ ಹೆಸರನ್ನು ಯಾರೂ ತಪ್ಪಾಗಿ ಕರೆಯಬಾರದು. ಒಂದು ವೇಳೆ ಯಾರಾದರೂ ತಪ್ಪಾಗಿ ಹೆಸರು ಕರೆದರೆ ಅವರಿಗೆ ಸ್ಥಳದಲ್ಲೇ ದಂಡವನ್ನು ವಿಧಿಸಲಾಗುವುದು ಎಂದು ಚಟಾಕಿ ಹಾರಿಸಿದರು. ಸ್ಪೀಕರ್ ಅವರ ಈ ರೂಲಿಂಗ್ ಸದನದಲ್ಲಿ ನಗೆಯುಕ್ಕಿಸಿತು.
ನನ್ನ ಲಿಂಗವನ್ನೇ ಬದಲಿಸಿದ್ದಾರೆ ಎಂದ ಖರ್ಗೆ
ಸ್ಪೀಕರ್ ಅವರ ಮಾತಿನ ಬೆನ್ನಲ್ಲೇ ಉತ್ತರಿಸಲು ಎದ್ದುನಿಂತ ಸಚಿವ ಪ್ರಿಯಾಂಕ್ ಖರ್ಗೆ, ಸದಸ್ಯರ ಹೆಸರನ್ನು ತಪ್ಪಾಗಿ ಕರೆದಿದ್ದಕ್ಕೆ ಕ್ಷಮೆ ಕೋರಿದರು. ಬಳಿಕ ತಮ್ಮದೇ ಉದಾಹರಣೆಯನ್ನು ನೀಡುತ್ತಾ, ಹೆಸರು ತಪ್ಪಾದರೆ ಆಗುವ ಅನಾಹುತಕ್ಕೆ ನಾನೇ ದೊಡ್ಡ ಸಾಕ್ಷಿ. ನನ್ನ ಹೆಸರು ಪ್ರಿಯಾಂಕ್ ಖರ್ಗೆ. ಆದರೆ ಸಾರ್ವಜನಿಕವಾಗಿ ಮತ್ತು ಕೆಲವೊಮ್ಮೆ ಮಾಧ್ಯಮಗಳಲ್ಲಿ ನನ್ನನ್ನು ಪ್ರಿಯಾಂಕಾ ಎಂದು ಕರೆಯುತ್ತಾರೆ. ಈ ಮೂಲಕ ನನ್ನ ಹೆಸರನ್ನು ಮಾತ್ರವಲ್ಲ, ನನ್ನ ಲಿಂಗವನ್ನೇ ಬದಲಾಯಿಸಿ ಬಿಟ್ಟಿದ್ದಾರೆ ಎಂದು ಮಸಾಲೆ ಬೆರೆಸಿ ಹೇಳಿದರು. ಸಚಿವರ ಈ ಮಾತುಗಳನ್ನು ಕೇಳಿ ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರು ಒಟ್ಟಾಗಿ ನಗಲಾರಂಭಿಸಿದರು.
ಹಾಸ್ಯದ ಬಳಿಕ ವಿಷಯಕ್ಕೆ ಮರಳಿದ ಶಾಸಕರು, ಸಚಿವರ ಉತ್ತರಕ್ಕೆ ತೃಪ್ತಿ ವ್ಯಕ್ತಪಡಿಸುತ್ತಾ ಸಮರ್ಥ ಮಂತ್ರಿ ಎಂದು ಮೆಚ್ಚುಗೆ ಸೂಚಿಸಿದರು. ಆದರೆ ವಾಕ್ಯದ ಕೊನೆಯಲ್ಲಿ ಆದರೆ.. ಎಂದು ಸೇರಿಸಿದರು. ಇದನ್ನು ತಕ್ಷಣವೇ ಗಮನಿಸಿದ ಸಚಿವ ಖರ್ಗೆ, ಸಮರ್ಥ ಎಂದು ಹೇಳಿದ ನಂತರ ಈ ಆದರೆ ಎಂಬ ಪ್ರಶ್ನೆ ಏಕೆ? ಏನೇ ಆದರೂ ಸರಕಾರ ಸದಸ್ಯರ ಪ್ರಶ್ನೆಗೆ ಸೂಕ್ತ ಉತ್ತರವನ್ನು ನೀಡಿದೆ ಎಂದು ಚುರುಕಾಗಿ ಉತ್ತರಿಸಿದರು.
ಬುಧವಾರದ ಕಲಾಪವು ಗಂಭೀರ ವಿಷಯಗಳ ನಡುವೆಯೂ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಸ್ಪೀಕರ್ ಖಾದರ್ ಅವರ ಸಮಯಪ್ರಜ್ಞೆಯಿಂದ ಕೂಡಿದ ಹಾಸ್ಯಕ್ಕೆ ಸಾಕ್ಷಿಯಾಯಿತು.








