ಚೀನಾದಿಂದ ಇಡೀ ವಿಶ್ವಕ್ಕೇ ವ್ಯಾಪಿಸಿ ಜಗತ್ತಿನ ಜನರನ್ನು ಕಂಗಾಲಾಗಿಸಿರುವ ಕೊರೊನಾ ಮಹಾಮಾರಿಗೆ ಅದೆಷ್ಟೋ ಉದ್ಯಮಗಳು ನಷ್ಟ ಅನುಭವಿಸುವಂತಾಗಿದೆ. ಅದರಲ್ಲೂ ಭಾರತದಲ್ಲಿ ಕಳೆದ 6 ತಿಂಗಳಿನಿಂದ ಕೊರೊನಾ ಸಂಕಷ್ಟದಿಂದಾಗಿ ಪ್ರಮುಖ ಉದ್ಯಮಗಳಿಗೆ ಪೆಟ್ಟು ಬಿದ್ದಿದೆ. ಆದ್ರೆ ಅದರಿಂದ ದಿನಗೂಲಿ ತಿಂಗಳ ಕೂಲಿ ನಂಬುಕೊಂಡೇ ಬದುಕುತ್ತಿರುವ ಜನರ ಬದುಕು ಕೂಡ ಮೂರಾಬಟ್ಟೆಯಾಗಿ ಅದೆಷ್ಟೋ ಕುಟುಂಬಗಳು ಕಣ್ಣೀರಿನಲ್ಲಿ ಕೈತೊಳೆದಿವೆ. ಕೊರೊನಾ ಸಂಕಷ್ಟದಿಂದ ದೊಡ್ಡ ಪೆಟ್ಟು ಬಿದ್ದ ಪ್ರಮುಖ ಕ್ಷೇತ್ರ ಅಂದ್ರೆ. ಅದು ಚಿತ್ರೋದ್ಯಮ. ಲಾಕ್ ಡೌನ್ ಆದಾಗಿನಿಂದಲೂ ಎಲ್ಲಾ ಚಿತ್ರರಂಗಗಳು ಬಂದ್ ಆಗಿವೆ. ಈಗಾಗಲೇ ಲಾಕ್ ಡೌನ್ ಸಡಿಲಿಕೆ ಆಗಿದ್ದರೂ ಸಹ ಚಿತ್ರಮಂದಿರಗಳು ಮಾತ್ರ ಪುನರಾಂಭವಾಗಿಲ್ಲ. ಅದಕ್ಕೆ ಕಾಲ ಯಾವಾಗ ಕೂಡಿಬರುತ್ತೆ ಎಂಬ ಪ್ರಶ್ನೆಗಳು ಎಲ್ಲರಲ್ಲೂ ಸಹಜವಾಗಿಯೇ ಇದೆ. ಮತ್ತೊಂದೆಡೆ ಬಹುತೇಕ ವಿತರಕರು, ನಿರ್ಮಾಕರೆಲ್ಲರೂ ಡಿಜಿಟಲ್ ಮೀಡಿಯಾಗಳತ್ತ ಒಲವು ತೋರುತ್ತಿದ್ದಾರೆ.

ಇನ್ನೂ ಇಂದಿಗೆ ಭಾರತೀಯ ಚಿತ್ರೋಧ್ಯಮ ಬಂದ್ ಆಗಿ ಸುಮಾರು 143 ದಿನ ಕಳೆದಿದೆ. ಆದರೆ ಕರ್ನಾಟಕದಲ್ಲಿ 10 ದಿನಗಳ ಮುಂಚಿತವಾಗಿಗೇ ಲಾಕ್ ಡೌನ್ ವಿಧಿಸಲಾಗಿತ್ತು. ಹೀಗಾಗಿ ರಾಜ್ಯದಲ್ಲಿ ಚಿತ್ರೋದ್ಯಮ ಸ್ಥಗಿತಗೊಂಡು ಸರಿಯಾಗಿ 153 ದಿನಗಳೇ ಆಗಿದೆ. ಈ ನಡುವೆ ಚಿತ್ರಗಳ ಶೂಟಿಂಗ್ ಗೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡು ಶುರು ಮಾಡುವುದಕ್ಕೇನೋ ಸರ್ಕಾರ ಅನುಮತಿಸಿದೆ. ಆದ್ರೆ ಥಿಯೇಟರ್ ಗಳ ತೆರೆಯಲು ಮಾತ್ರ ಇನ್ನೂ ಗ್ರೀನ್ ಸಿಗ್ನಲ್ ಕೊಟ್ಟಿಲ್ಲ.
ಇದರ ನಡುವೆ ಸಾಮಾಜಿಕ ಜಾಲತಾಣದಲ್ಲಿ, ಈ ಸಮಯ ಥಿಯೇಟರ್ ಗಳ ಓಪನ್ ಮಾಡುವ ಸಮಯ ಎಂಬ ಅಭಿಯಾನ ಶುರುವಾಗಗಿಬಿಟ್ಟಿದೆ. “#Time to OpenTheatres” ಈಗ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಇನ್ನೂ ಅಭಿಯಾನದಲ್ಲಿ ದಕ್ಷಿಣ ಭಾರತದ ಚಿತ್ರರಂಗವೂ ಸಹ ಕೈಜೋಡಿಸಿದೆ.
ಮಾರ್ಚ್ 24 ರಂದು ದೇಶದಲ್ಲಿ ಲಾಕ್ಡೌನ್ ಘೋಷಣೆ ಆಯಿತು. ಅಲ್ಲಿಂದ ಇಲ್ಲಿಯವರೆಗೂ 143 ದಿನ ಕಳೆದಿದೆ. ಇಲ್ಲಿಯವರೆಗೂ ಚಿತ್ರಮಂದಿರಗಳು ತೆಗೆದಿಲ್ಲ. ಚಿತ್ರಮಂದಿರ ಮಾಲೀಕರು, ಥಿಯೇಟರ್ ಸಿಬ್ಬಂದಿ, ಕಾರ್ಮಿಕರು ಎಲ್ಲರೂ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಾಗಾಗಿ, #TimetoOpenTheatres ಎಂದು ಅಭಿಯಾನ ಆರಂಭವಾಗಿದೆ. ಅಷ್ಟೇ ಅಲ್ಲ ಈ ಅಭಿಯಾನಕ್ಕೆ ಕೆಜಿಎಪ್ ಕಾರ್ಯಕಾರಿ ನಿರ್ಮಾಪಕರಾದ ಕಾರ್ತಿಕ್ ಗೌಡ ಸಹ ಸಾಥ್ ನೀಡಿದ್ದಾರೆ.
ಚಿತ್ರಮಂದಿರ ತೆರೆಯದೇ ಇರುವುದು ಮಾಲೀಕರಿಗೇ ನಷ್ಟವೇ ಆದರೂ ಇದರಿಂದಾಗಿ ಹೆಚ್ಚು ಸಮಸ್ಯೆ ಅನುಭವಿಸುತ್ತಿರುವುದು ಮಾತ್ರ ಚಿತ್ರರಂಗದಲ್ಲಿರುವ ಅಸಂಘಟಿತ ಬಡ ಕಾರ್ಮಿಕರು. ಸಂಘಟಿತ ಕಾರ್ಮಿಕರು, ಚಾಲಕರು ಹಾಗೂ ಇನ್ನಿತರರಿಗೆ ಸರ್ಕಾರದಿಂದ ಆರ್ಥಿಕ ಪ್ಯಾಕೇಜ್ ಘೋಷಣೆಯಾಗಿತ್ತು. ಆದರೆ ಈ ಪ್ಯಾಕೇಜ್ ನಲ್ಲಿ ಅಸಂಘಟಿಕ ಕಾರ್ಮಿಕರಿಗೆ ಯಾವುದೇ ನೆರವು ಸಿಕ್ಕಿರಲಿಲ್ಲ. ಹೀಗಾಗಿ ಚಿತ್ರಮಂದಿರಗಳ ಪುನರಾರಂಭಕ್ಕೆ ಒತ್ತಾಯಗಳಿದ್ದು, ಅದಕ್ಕಾಗಿ ಅಭಿಯಾನವನ್ನೂ ಶುರುಮಾಡುವ ಮೂಲಕ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ನಡೆಯುತ್ತಿದೆ.








