ರೈತ ರೈತ ಎಂದು ಬೊಬ್ಬೆ ಹೊಡೆಯುವವರೇ ಅನ್ನದಾತರ ಆಂದೋಲನವ ಪ್ರಪಾತಕ್ಕೆ ನೂಕಿದರು ಎಂಬಲ್ಲಿಗೆ; ಯಾರಿಗೆ ಬಂತು ಎಲ್ಲಿಗೆ ಬಂತು 47ರ ಸ್ವಾತಂತ್ರ್ಯ:
ರೈತ ಹೋರಾಟದ ಒಂದು ಪ್ರಮುಖ ಘಟ್ಟ ತಾರ್ಕಿಕ ಅಂತ್ಯ ಕಾಣದೆ ಮುಗಿದಿದೆ. ರೈತ ರೈತ ಎಂದು ಬಡಬಡಿಸುವ ಜನನಾಯಕರೇ ರೈತ ಹೋರಾಟವನ್ನು ಹತ್ತಿಕ್ಕಿಬಿಟ್ಟರು. ರೈತ ಈ ನೆಲದ ಭಾವನೆ ಎಂದು ತೌಡು ಕುಟ್ಟಿದವರು ಭಾರತ್ ಬಂದ್ ಗೆ ಬೆಂಬಲ ನೀಡುವುದಿಲ್ಲ ಎಂದು ಫೇಸ್ ಬುಕ್ ನಲ್ಲಿ ಸ್ಟೇಟಸ್ ಹಾಕಿದ್ದಷ್ಟೇ ಅಲ್ಲ; ವ್ಯವಸ್ಥಿತವಾಗಿ ಅನ್ನದಾತರ ಹೋರಾಟವನ್ನು ವಿಫಲಗೊಳಿಸಲು ತಮ್ಮಿಂದಾದ ಎಲ್ಲಾ ಪ್ರಯತ್ನವನ್ನೂ ಮಾಡಿದರು. ತಾವು ಮಣ್ಣಿನ ಮಕ್ಕಳು ಮೊಮ್ಮಕ್ಕಳು ಮರಿಮಕ್ಕಳೆಂದು ಘೋಷಿಸಿಕೊಂಡ ನಾಯಕರ ನೇತೃತ್ವದ ಇಲ್ಲೊಂದು ಪ್ರಾದೇಶಿಕ ಪಕ್ಷ, ರೈತ ವಿರೋಧ ಮಸೂದೆಗೆ ಬೇಷರತ್ ಬೆಂಬಲ ಕೊಟ್ಟೇ ಬಿಟ್ಟಿತು. ಕರೋನಾ ಅಲ್ಲ ಅದಕ್ಕಿಂತ ಭಯಾನಕವಾದ ವೈರಸ್ ಬಂದರೂ ಈ ಅವಿವೇಕಿಗಳಿಗೆ ಅಧಮರಿಗೆ ಬುದ್ದಿ ಬರುವುದಿಲ್ಲ.
“ನಾವು ಖರೀದಿಸಿ ಉಣ್ಣದೇ ಇದ್ದಿದ್ರೆ ಅವರು ರೈತರು ಬೆಳೆದಾದ್ರೂ ಏನು ಪ್ರಯೋಜನ. ನಾವು ಹಣ ಕೊಟ್ಟು ಅನ್ನ ತಿಂತಿರೋದಕ್ಕೇ ಅವರೂ ಸಹ ವರ್ಷಾ ವರ್ಷ ಬೆಳಿತಿರೋದು..” ಹೀಗಂತ ಸಾಮಾಜಿಕ ಜಾಲತಾಣಗಳಲ್ಲಿ ರೈತರನ್ನು ಹಂಗಿಸಿದ ಅಯೋಗ್ಯರಿಗೇನು ಕಡಿಮೆ ಇಲ್ಲ.
ಇನ್ನೊಬ್ಬ ಮಹಾಶಯ ಕಾಮೆಂಟಿಸಿದ್ದು ನೋಡಿ ಹೇಗಿದೆ ಎಂದು. “ರೈತರು ಪ್ರತೀ ವರ್ಷ ಇಂತದ್ದೆಲ್ಲಾ ಮಾಡ್ತಾನೇ ಇರ್ತಾರೆ. ಅವರಿಗೆ ಬೇರೇ ಏನ್ ಕೆಲಸ. ಸುಮ್ಮ ಸುಮ್ಮನೇ ಪರಿಹಾರಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ತಾರೆ. ಲಾ ಎಂಡ್ ಆರ್ಡರ್ ಹಾಳ್ ಮಾಡ್ತಾರೆ. ಇದ್ರಿಂದ ನಮ್ ದೇಶದ ರೆಪ್ಯೂಟೇಷನ್ ಏನಾಗಬೇಡ. ಮೋದಿಜಿ ಎಷ್ಟೆಲ್ಲಾ ದೇಶಗಳಲ್ಲಿ ನಮ್ಮ ದೇಶ ಹಾಗೇ ಹೀಗೆ ಅಂತ ಹೇಳ್ಕೊಂಡು ಬಂದಿದಾರೆ. ಈಗ ಇವರು ನೋಡಿದ್ರೆ ಡೆಲ್ಲಿಲೀ ನ್ಯೂಸೆನ್ಸ್ ಕ್ರಿಯೇಟ್ ಮಾಡ್ತಿದ್ದಾರೆ. ಛೇ!” ಇಂತಹ ಮೂರ್ಖರಿಗೆ ಏನು ಹೇಳಿ ತಾನೇ ಏನು ಪ್ರಯೋಜನ.
ದೇಶದ ರೈತರು ದೆಹಲಿಯ ಬೀದಿಗಳಲ್ಲಿ ಚಳಿಯಲ್ಲಿ ನಡುಗುತ್ತಾ ಪ್ರತಿಭಟನೆ ಮಾಡುತ್ತಿದ್ದರು. ಅದೇ ಸಂದರ್ಭದಲ್ಲಿ ನಾವಿಲ್ಲಿ ಬೆಚ್ಚಗೆ ಮನೆಯೊಳಗೆ ಕುಳಿತು ಛೇ! ಪಾಪ ರೈತರು ಅಂತ ಅಲವತ್ತುಕೊಂಡು ಸ್ಟೇಟಸ್ ಹಾಕುತ್ತಾ ಕುಳಿತಿದ್ದೆವು. ನಮ್ಮ ಮಧ್ಯೆಯೇ ಒಬ್ಬ ಅವಿವೇಕಿ ರೈತರು ಹೋರಾಟಕ್ಕೆ ಕಾರ್ ನಲ್ಲಿ ಬಂದಿದ್ದಾರೆ ಅಂತ ಸ್ಟೇಟಸ್ ಹಾಕಿ ತನ್ನ ಸ್ವಾಮಿ ನಿಷ್ಟೆ ಪ್ರದರ್ಶನ ಮಾಡಿದ್ದ. ಇನ್ನೊಬ್ಬ ಮಹಾಶಯ ಅವರು ರೈತರಲ್ಲ ಭಯೋತ್ಪಾದಕರು, ದೇಶದ್ರೋಹಿಗಳು ಪ್ರತ್ಯೇಕ ಖಲಿಸ್ತಾನ್ ಪರವಾಗಿರುವವರು ಎಂದು ಸರ್ಟಿಫಿಕೇಟ್ ಕೊಟ್ಟುಬಿಟ್ಟ. ನಂಬಿ ಇದು ಕೇವಲ ನಮ್ಮ ಭಾರತದಲ್ಲಿ ಮಾತ್ರ ಹೀಗಾಗುತ್ತದೆ. ಇಲ್ಲಿ ಮಾತ್ರ ವ್ಯಕ್ತಿ ಪೂಜೆ ಭಜನೆ ಪಾರಾಯಣ ನಡೆಯುತ್ತಲೇ ಇರುತ್ತದೆ.
ಇವೆರೆಷ್ಟು ಕೃತಘ್ನರೆಂದರೆ ಇವರಿಗೆ ಅನ್ನ ಹಾಕಿದ ರೈತ ಬೀದಿಗೆ ಬಂದರೆ ಕರುಳು ಚುರ್ ಅನ್ನುವುದಿಲ್ಲ. ಯಾಕೆಂದರೆ ಇವರೆಲ್ಲಾ ತಿನ್ನುವುದು ವಿದೇಶಿ ಕಾರ್ಪೊರೇಟ್ ಗಳ ಸಾಫ್ಟ್ ವೇರ್ ಕೋಡಿಂಗ್ ಗಳನ್ನು ಮಾತ್ರ. ಇಲ್ಲಿ ಮಂಡ್ಯದ್ದೋ, ಗಂಗಾವತಿಯದ್ದೋ, ರಾಯಚೂರಿನದ್ದೋ ಅನ್ನ ತಿಂದಿದ್ದರೇ ಇವರ ಬಾಯಲ್ಲಿ ಇಂತ ಮಾತು ಬರುತ್ತಿರಲಿಲ್ಲ. ಈ ಅಂಡೇಪಿರ್ಕಿಗಳ ಎದೆ ಸೀಳಿ ಅಲ್ಲಿ ನಾಲ್ಕೇ ನಾಲ್ಕಕ್ಷರ ವಿವೇಕ ಸೌಜನ್ಯ ಮತ್ತು ವಾಸ್ತವದ ವಿಚಾರವಿರುವುದಿಲ್ಲ. ಇವರಲ್ಲಿ ಬಹುತೇಕರು ಕೃಷೀ ಕುಟುಂಬದಲ್ಲೇ ಹುಟ್ಟಿದವರು ಆದರೆ ಇವರ ನಿಷ್ಟೇ ಮಾತ್ರ ಕಾರ್ಪೊರೇಟ್ ಚೇಲಾಗಿರಿಗೆ.
ಅನ್ನ ತಿನ್ನುವ ಬಾಯಲ್ಲಿ ಹೊಲಸು ಮಾತಾಡುವ ಮಂದಿ ಬಗ್ಗೆ ಮಾತಾಡಿ ಏನು ಪ್ರಯೋಜನ. ರೈತ ಈ ದೇಶದ ಅಸ್ಮಿತೆ ಮತ್ತು ಎಮೋಷನ್. ಇದು ಸರ್ವಕಾಲಿಕ ಸತ್ಯ. ನಾವೆಲ್ಲ ಹುಟ್ಟಿನಿಂದ ಒಂದು ಘನ ಸಂಸ್ಕಾರ ಕಲಿತು ಬಂದಿದ್ದೇವೆ. ಅದು ನಿಜವಾದ ಭಾರತೀಯತೆ. ಅದು ಹೇಳುವುದು ಒಂದೇ ವಿಷಯ ‘ಅನ್ನದಾತೋ ಸುಖೀಭವಃ’ ಇವತ್ತು ಅನ್ನದಾತ ಕಷ್ಟದಲ್ಲಿದ್ದಾನೆ; ನಾವು ಅವನ ಕಷ್ಟ ಕೇಳಬೇಕಾಗಿದೆ. ಇದು ನಾವು ಕಲಿತ ಸಂಸ್ಕಾರಕ್ಕೆ ಗೌರವ ಉಳಿಸಬೇಕಾದ ಸಂದರ್ಭ. ಈ ದೇಶ ಕಂಡ ಅದ್ಭುತ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರು ಜೈ ಕಿಸಾನ್ ಎಂದರು ಆದ್ರೆ ಈಗಿನ ಸನ್ಮಾನ್ಯ ಪ್ರಧಾನಿಗಳಿಗೆ ಕಿಸಾನ್ ಅಂದರೇನು ಎಂದು ತಿಳಿಸಿ ಹೇಳಬೇಕಾಗಿದೆ. ಯಾಕಂದ್ರೆ ಅವರ ಸ್ನೇಹಿತರು ಕಿಸಾನ್ ಅಲ್ಲವಲ್ಲ.
ಅಖಂಡ ಭಾರತಾದ್ಯಂತ ನಡೆದ ರೈತ ಹೋರಾಟ ತನ್ಮೂಲಕ ಘೋಷಣೆಯಾದ ಭಾರತ್ ಬಂದ್ ನಲ್ಲಿ, ನಮ್ಮ ನಡುವೆ ಇನ್ನೂ ಬದುಕಿರುವ ರೈತಪರ ಕಾಳಜಿಯ ಐಕ್ಯ ಹೋರಾಟ ಸಮಿತಿಯೂ ಪಾಲ್ಗೊಂಡಿತ್ತು. ಈ ದೇಶದ ಬೆನ್ನೆಲಬು ರೈತನ ಬೆನ್ನು ಮೂಳೆಯನ್ನೆ ಮುರಿಯಲು ಹೊರಟಿರುವ ಆಳುವ ಪ್ರಭುತ್ವದ ಸೊಕ್ಕು ಮುರಿಯಬೇಕು ಎನ್ನುವ ನಿರ್ಣಾಯಕ ಹೋರಾಟದ ಅಂಗವಾಗಿ ಅಸಂಖ್ಯಾತ ರೈತರು ಬೀದಿಗಿಳಿದರು.
ಈ ದೇಶವನ್ನು ಉಳಿಸಬಲ್ಲವನು ಅನ್ನದಾತ ರೈತನೇ ವಿನಃ ಪ್ರಧಾನಿಗಳ ದೋಸ್ತ್ ಅಂಬಾನಿ ಅದಾನಿಗಳಲ್ಲ. ಆಳುವ ಸರ್ಕಾರ ಕಣ್ಣು ಕಿವಿಗಳು ಕೊನೆಗೆ ಹೃದಯವೂ ಇಲ್ಲ ಅನ್ನುವುದು ಪದೇ ಪದೇ ಸಾಬೀತಾಗುತ್ತಲೇ ಇದೆ. ಈಗಿರುವುದು ಒಂದೇ ದಾರಿ ಈ ದಪ್ಪ ಚರ್ಮಕ್ಕೆ ಹದವಾಗಿ ಸುಟ್ಟ ಸಲಾಕೆಯಿಂದ ಬಿಗುವಾಗಿ ಬರೆಹಾಕಬೇಕು. ರೈತ ಹೋರಾಟಕ್ಕೆ ರೈತನ ಮೇಲೆ ಅಭಿಮಾನ ಹೊಂದಿರುವ ನನ್ನಂತಹ ನೂರಾರು ಸಾವಿರಾರು ವಾಸ್ತವದ ಪ್ರಜ್ಞೆ ಇರುವ ಮತ್ತು ಭವಿಷ್ಯದ ದೂರದೃಷ್ಟಿ ಇರುವ ಮಂದಿ ಮುಕ್ತ ಬೆಂಬಲವನ್ನೂ ನೀಡಿದರು. ಆದರೆ ಪರಿಣಾಮ ಏನಾಯ್ತು?
ದೆಹಲಿಯಲ್ಲಿ ರೈತರ ಪ್ರತಿಭಟನೆ ಶುರುವಾಗಿ ಆಯ್ತಲ್ಲ 15 ದಿನ. ಇನ್ನೂ ರೈತ ಮುಖಂಡರನ್ನು ಸರ್ಕಾರದ ಪ್ರತಿನಿಧಿಗಳು ಸೂಕ್ತರೀತಿಯಲಿ ಮಾತಾಡಿಸಲಿಲ್ಲ ಆಳುವ ಪ್ರಭುಗಳು. ಅದೊಂದು ರಾಜಕೀಯ ಪ್ರೇರಿತವೇ ಆಗಿದ್ದರೇ ಅಷ್ಟು ಮಂದಿ ಎಲ್ಲಿಂದ ಬಂದರು? ಯಾವ ಯಾವ ರಾಜ್ಯದವರು ಟ್ರಾಕ್ಟರ್ ಚಕ್ಕಡಿ ಬಂಡಿ ಟಿಲ್ಲರ್ ಗಳ ಮೇಲೆ ಅಡುಗೆ ಸಾಮಾನು ಹೇರಿಕೊಂಡು ಬಂದರು? ಕೊರೆಯುವ ಚಳಿಯಲ್ಲಿ ಟೆಂಟ್ ಹಾಕಿ ಯಾಕೆ ಕುಳಿತಿದ್ದರು ಗಮನಿಸಿ ನೋಡಿ. ಇವರಲ್ಲಿ ನಕಲಿ ರೈತರಿದ್ದಾರೆ, ಪ್ರತ್ಯೇಕ ಖಲಿಸ್ತಾನ್ ಹೋರಾಟಗಾರರಿದ್ದಾರೆ, ಮೋದಿ ವಿರೋದಿ ಸಿಎಎ ಪ್ರತಿಭಟನಾಕಾರರಿದ್ದಾರೆ ಎಂದೆಲ್ಲಾ ನಮ್ಮದೇ ಮಾಧ್ಯಮಗಳು ಬೊಮ್ಮಡಿ ಬಜಾಯಿಸಿದವು. ಒಂದು ಸಲ ಹರಿಯಾಣ ದೆಹಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಿಲೋ ಮೀಟರ್ ಉದ್ದ ಸಾಲುಗಟ್ಟಿ ನಿಂತಿದ್ದ ರೈತರನ್ನು ಮಾತಾಡಿಸಿದ್ದಿದ್ದರೇ ನಮ್ಮ ಪತ್ರಕರ್ತರು ಕನಿಷ್ಟ ಆತ್ಮಸಾಕ್ಷಿಗಾಗಿಯಾದರೂ ಅಂಜಿ ಈ ರೀತಿ ವರದಿ ಮಾಡುತ್ತಿರಲಿಲ್ಲ. ದುರಂತವೆಂದರೆ ಇಂದಿನ ಪತ್ರಕರ್ತರಿಗೆ ಗ್ರೌಂಡ್ ರಿಯಾಲಿಟಿಗಳು ಬೇಕಿಲ್ಲ. ಅವರಿಗೆ ಬೇಕಾದ ಸುದ್ದಿ ವಾಟ್ಸ್ ಆಪ್ ಮುಖಾಂತರ ಬರುತ್ತದೆ. ಕ್ರಾಸ್ ಚೆಕ್ ಮಾಡಿಕೊಳ್ಳಲು ಸಾಮಾಜಿಕ ಜಾಲತಾಣದ ಪಿ ಆರ್ ಏಜೆನ್ಸಿಯ ಪೋಸ್ಟ್ ಗಳಿವೆ. ಫೈನ್! ದೂದ್ ಕಾ ದೂದ್ ಪಾನಿ ಕಾ ಪಾನಿ ನಿರ್ಧರಿಸಿ ಜಡ್ಜ್ ಮೆಂಟ್ ಕೊಟ್ಟು ಬಿಡುತ್ತಾರೆ.
ಇದರ ನಡುವೆಯೂ ಕೆಲವು ಬದ್ಧತೆ ಹೊಂದಿರುವ ರಾಷ್ಟ್ರೀಯ ಮಾಧ್ಯಮಗಳು ಗ್ರೌಂಡ್ ರಿಪೋರ್ಟಿಂಗ್ ಮಾಡುತ್ತಲೇ ಇದ್ದವು. ಆದರೆ ಅದನ್ನು ಗಮನಿಸುವ ವ್ಯವಧಾನ ನಮ್ಮ ಮಂದಿಗೆ ಬೇಕಲ್ಲ. ಇದು ರೈತರ ಪಾಲಿಗೆ ಮರಣಶಾಸನ; ಈ ಬಿಲ್ ಯಥಾವತ್ ಜಾರಿಯಾಗಬಾರದು ಎನ್ನುವ ರೈತರ ಒಕ್ಕೊರಲಿನ ಕೂಗು ನಮ್ಮ ಜನರಿಗೆ ಪ್ರಧಾನಿಗಳ ವಿರುದ್ಧದ ಷಡ್ಯಂತ್ರದಂತೆ ಕಂಡಿದೆ. ಇದು ಬಿಜೆಪಿ ಮತ್ತು ಮೋದಿ ವಿರುದ್ಧದ ಹೋರಾಟ ಮಾತ್ರ ಎಂದು ಒನ್ ಲೈನ್ ಷರಾ ಬರೆದು ಭಾರತ್ ಬಂದ್ ವಿಫಲಗೊಳಿಸಿಬಿಟ್ಟರು. ಅತ್ತ ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ರನ್ನು ಕೇಂದ್ರದ ಪೊಲೀಸರು ಗೃಹ ಬಂಧನದಲ್ಲಿಟ್ಟು ಪ್ರತಿಭಟನಾ ಸ್ಥಳಕ್ಕೆ ಬರದಂತೆ ತಡೆದಿದ್ದು ಇವರ ವಾಸ್ತವ ಪ್ರಜ್ಞೆಗೆ ನಿಲುಕಲೇ ಇಲ್ಲ. ಒಬ್ಬ ಸಂವಿಧಾನದತ್ತ ಪ್ರಮುಖ ಹುದ್ದೆಯಲ್ಲಿರುವ, ಮತದಾರರದಿಂದ ಪ್ರಜಾಪ್ರಭುತ್ವದ ಆಶಯಗಳೊಂದಿಗೆ ಆಯ್ಕೆಯಾದ ಮುಖ್ಯಮಂತ್ರಿಯನ್ನು ಬಲವಂತದ ಗೃಹಬಂಧನದಲ್ಲಿ ಇಡಲಾಗುತ್ತದೆ ಎಂದರೆ ಇದು ನಮ್ಮ ಸಂವಿಧಾನದ ವ್ಯವಸ್ಥೆಗೆ ಮಾಡಿದ ಅಪಚಾರವಲ್ಲವೇ? ಇದೇನು ಪ್ರಜಾಪ್ರಭುತ್ವವೋ ಹಿಟ್ಲರ್ ನ ಡಿಕ್ಟೇಟರ್ ಶಿಪ್ಪೋ?
ರಾಜ್ಯದ ಹೋಟೆಲ್ ಉದ್ಯಮಿಗಳು ರೈತ ಪ್ರತಿಭಟನೆಯ ಭಾರತ್ ಬಂದ್ ಗೆ ಬೆಂಬಲ ನೀಡಲಿಲ್ಲ. ಕೋವಿಡ್ ಲಾಕ್ ಡೌನ್ ಹೊಡೆತಕ್ಕೆ ದೊಡ್ಡ ಮಟ್ಟದಲ್ಲಿ ತತ್ತರಿಸಿದ್ದು ಹೋಟೆಲ್ ಉದ್ಯಮ. ಇದು ಎಲ್ಲರೂ ಬಲ್ಲರೂ. ಹೋಟೆಲ್ ತೆರೆದ ಕುರಿತು ಯಾರದ್ದೂ ತಕರಾರಿಲ್ಲ ಆದರೆ ಕನಿಷ್ಟ ನೈತಿಕ ಬೆಂಬಲ ನೀಡಬಹುದಿತ್ತಲ್ಲ. ಹೋಟೆಲ್ ನವರಿಗೆ ರೈತರ ಋಣ ಎಷ್ಟಿತ್ತೋ ಸಾಮಾಜಿಕ ಹೊಣೆಗಾರಿಕೆಯೂ ಅಷ್ಟೇ ಇರಬೇಕಿತ್ತು. ಅವರು ರೈತ ಬೆಳೆದ ಬೆಳೆಗಳನ್ನು ಅಡುಗೆ ಮಾಡುತ್ತಾರೆಯೇ ವಿನಃ ಸಾಫ್ಟ್ ವೇರ್ ಪ್ರೋಗ್ರಾಂಗಳನ್ನು ಬೇಯಿಸಿ ಒಗ್ಗರಣೆ ಹಾಕಿ ಕೊಡೋದಿಲ್ಲವಲ್ಲ. ನಮ್ಮ ಸಮಾಜ ಈ ಮಟ್ಟಕ್ಕೆ ಕೃತಘ್ನವಾಗಬಾರದಿತ್ತು.
ಈಗ ಮೂಲದ ಪ್ರಶ್ನೆಗಳಿಗೆ ಬರೋಣ. ಎಪಿಎಂಸಿ ಕಾಯ್ದೆ ತಿದ್ದುಪಡಿ, ಫಾರ್ಮರ್ ಬಿಲ್ ಹೇಗೆ ರೈತನಿಗೆ ನೆರವಾಗುತ್ತದೆ? ಕಾರ್ಪೊರೇಟ್ ಸಂಸ್ಥೆಗಳು ಸರ್ಕಾರಕ್ಕಿಂತ ನಿರ್ಣಾಯಕರಾದರೇ ರೈತನಿಗೆ ಹೇಗೆ ಉಪಕಾರವಾಗುತ್ತದೆ? ಬೆಳೆ ನಿಗದಿ ಮತ್ತು ಬೆಲೆ ನಿಗದಿಗಳನ್ನು ಖಾಸಗಿ ಸಂಸ್ಥೆಗಳು ಮಾಡಿದರೇ ಸರ್ಕಾರ ತನ್ನ ಜವಾಬ್ದಾರಿಯಿಂದ ನುಣುಚಿಕೊಂಡರೇ ರೈತನಿಗೆ ಹೇಗೆ ನ್ಯಾಯ ಸಿಗಬಹುದು? ಕಾಂಟ್ರಾಕ್ಟ್ ಫಾರ್ಮಿಂಗ್ ಭವಿಷ್ಯದಲ್ಲಿ ಕಿಲ್ಲಿಂಗ್ ಫಾರ್ಮಿಂಗ್ ಆಗಲಾರವೇ? ಚಿಕ್ಕ ಹಿಡುವಳಿಯ ರೈತನ ತುಂಡು ಜಮೀನನ್ನು ಕಾರ್ಪೊರೇಟ್ ನುಂಗುವುದಿಲ್ಲ ಎನ್ನುವುದಕ್ಕೆ ಏನು ಗ್ಯಾರಂಟಿ? ಕಾರ್ಪೊರೇಟ್ ಸಂಸ್ಥೆಗಳು ಗದ್ದೆಗಿಳಿದರೆ ಏನಾಗುತ್ತೆ ಅನ್ನೋದರ ಪರಿಣಾಮ ಈಗ ಗೊತ್ತಾಗಲ್ಲ ನಮಗೆ. ಅದರ ಪರಿಣಾಮ ಗೊತ್ತಾದಾಗ ರೈತ ಕಾರ್ಪೊರೇಟ್ ಸಂಸ್ಥೆಗಳ ವಾಚ್ ಮನ್ ಆಗಿ ಕೂಲಿ ಮಾಡುತ್ತಿರುತ್ತಾನೆ. ಹೇಗೆ ಕಾರ್ಪೊರೇಟ್ ಸಂಸ್ಥೆಗಳು ರೈತರನ್ನು ಉದ್ಧಾರ ಮಾಡುತ್ತವೆ? ಈ ದೇಶದಲ್ಲಿ ಈಗಾಗಲೆ ಬ್ಯಾಂಕಿಂಗ್ ವ್ಯವಸ್ಥೆಯನ್ನು ಕಾರ್ಪೊರೇಟ್ ಶಾಹಿಗಳು ಹಳ್ಳ ಹಿಡಿಸಿದ್ದು ನೆನಪಿಲ್ಲವೇ.
ಸರ್ಕಾರಿ ಸಂಸ್ಥೆ ಬಿಎಸ್ ಎನ್ ಎಲ್ ನ ಸ್ವರುಪವನ್ನೇ ಬದಲಾಯಿಸಬಹುದಿತ್ತಲ್ಲ. ಆದರೆ ಖಾಸಗಿ ಸಂಸ್ಥೆ ರಿಲಾಯನ್ಸ್ ಜಿಯೋ ಅಭಿವೃದ್ಧಿ ಆಯ್ತು. ಸರ್ಕಾರಿ ಸಂಸ್ಥೆ ಹಾಳಾಯ್ತು. ಸರ್ಕಾರಿ ಎಪಿಎಂಸಿ ಕಥೆಯೂ ಹೀಗೆಯೇ ಆಗತ್ತೆ. ಮೊದಮೊದಲು ಖಾಸಗಿ ಸಂಸ್ಥೆಗಳು ರೈತರ ಉತ್ಪನ್ನಗಳಿಗೆ ಅದ್ಭುತ ಬೆಲೆ ಕೊಡುತ್ತಾರೆ. ಸರ್ಕಾರಿ ಎಪಿಎಂಸಿ ಸಾಯತೊಡಗುತ್ತದೆ. ಒಂದು ಹಂತದ ಮಾನೋಪಲಿ ಸಾಧಿಸಿದ ನಂತರ ಖಾಸಗಿ ಸಂಸ್ಥೆಗಳು ಪಟ್ಟು ಹಿಡಿಯತೊಡಗುತ್ತವೆ. ಆಗ ಅತ್ತ ಸರ್ಕಾರಿ ಎಪಿಎಂಸಿ ಸತ್ತೇ ಹೋಗಿರುತ್ತದೆ. ಇರುವ ಈ ಖಾಸಗಿ ಸಂಸ್ಥೆಯ ಷರತ್ತುಗಳನ್ನು ಸ್ವೀಕರಿಸದೆ ವಿಧಿ ಇರುವುದಿಲ್ಲ. ನನಗಿರುವ ಆತಂಕ ಈ ಖಾಸಗಿ ಸಂಸ್ಥೆಗಳೆನ್ನುವ ಸಣ್ಣ ಪುಟ್ಟ ಮೀನುಗಳನ್ನು ನುಂಗಿ ರಿಲಾಯನ್ಸ್ ಅನ್ನುವ ತಿಮಿಂಗಿಲ ಬಂದು ಕೂತರೇ ಜಿಯೋ ಕಥೆಯೇ ಇಲ್ಲೂ ಆಗತ್ತೆ. ಇದು ಒಂದು ಆ್ಯಂಗಲ್. ಕಾಂಟ್ರಾಕ್ಟ್ ಫಾರ್ಮಿಂಗ್ ಮತ್ತು ಎಂಎಸ್ ಪಿ ಕಥೆಗಳು ಬೇರೆ. ಈ ಆ್ಯಕ್ಟ್ ಬರುವುದೇ ಆದರೆ ರೈತರ ಹಿತದೃಷ್ಟಿ ಪ್ರಧಾನವಾಗಿರಬೇಕೇ ಹೊರತು ಕಾರ್ಪೊರೇಟ್ ಕಲ್ಯಾಣವಲ್ಲ.
ಈ ಯಥಾವತ್ ಬಿಲ್ ಜಾರಿಯಾದರೇ ಯಾರಿಗೆ ಒಳ್ಳೇದು ರೈತನಿಗಾ? ಅಂಬಾನಿಗಾ? ಈ ಬಿಲ್ ಬಗ್ಗೆ ಒಂದು ಮಟ್ಟಿಗಾದರೂ ಸಾದಕ ಬಾದಕಗಳನ್ನು ಪೂರಕವೋ ಮಾರಕವೋ ಎಂಬುದನ್ನು ನಮ್ಮ ಕೆಲವು ಮಾಧ್ಯಮಗಳು ಮಾಡಿದವು. ಆದರೆ ಅದನ್ನು ಗಮನಿಸುವ ತಾಳ್ಮೆ ನಮ್ಮ ಜನಗಳಿಗಿತ್ತಾ? ಹಾಗಾಗುತ್ತೆ ಹೀಗಾಗುತ್ತೆ ಅನ್ನುವುದು ಕೇವಲ ಊಹಾಪೋಹ ಎನ್ನುತ್ತಿದ್ದ ನಮ್ಮ ಸಾಮಾಜಿಕ ಜಾಲತಾಣದ ವಾರಿಯರ್ಸ್ ಗಳಿಗೆ ಕನಿಷ್ಟ ಮಟ್ಟದ ದೂರದೃಷ್ಟಿಯೂ ಇಲ್ಲವಾಯಿತು. ದಳ್ಳಾಳಿಗಳ ಹೋರಾಟ ಎಂದು ಈ ಇಡೀ ರೈತ ಹೋರಾಟವನ್ನು ಬಿಂಬಿಸಲಾಯಿತು. ಯಾರು ದಳ್ಳಾಳಿಗಳು ಅನ್ನುವ ಪ್ರಶ್ನೆಗೆ ಮಾತ್ರ ಉತ್ತರ ಸಿಗಲಿಲ್ಲ. ನಾಳೆ ಕಾರ್ಪೊರೇಟ್ ಅಥವಾ ಯಾವುದೇ ಖಾಸಗಿ ಸಂಸ್ಥೆ ರೈತನ ಜೊತೆ ವ್ಯವಹರಿಸಲು ನಿಂತರೇ ಅವರೂ ದಲ್ಲಾಳಿಗಳೇ ಅಲ್ವಾ? ಈಗೇನೋ ಎಪಿಎಂಸಿ ದಲ್ಲಾಳಿಗಳ ಮೂಗುದಾರ ಹಿಡಿಯಲು ಸರ್ಕಾರ ಇದೆ. ಆದ್ರೆ ನಾಳೆ ಕಾರ್ಪೊರೇಟ್ ನ ವೈಟ್ ಕಾಲರ್ ದಲ್ಲಾಳಿಗಳು ವ್ಯವಹಾರಕ್ಕೆ ಬಂದ್ರೆ ಕಂಟ್ರೋಲ್ ಮಾಡಲು ಸರ್ಕಾರಕ್ಕೂ ಅನುಮತಿ ಇಲ್ಲ. ಇಷ್ಟಂತೂ ಅರ್ಥ ಮಾಡಿಕೊಳ್ಳಬಹುದಲ್ಲವೇ ನಾವು.
ಇನ್ನು ಎಂ.ಎಸ್.ಪಿ ಅಥವಾ ಮಿನಿಮಮ್ ಸಪೋರ್ಟ್ ಪ್ರೈಸ್ ನಿಗದಿ ಮಾಡೋದು ಯಾರು? ಕಾಂಟ್ರಾಕ್ಟ್ ಫಾರ್ಮಿಂಗ್ ರೈತನಿಗೆ ಅನುಕೂಲವಾ? ಯಾವ ಬೆಳೆ ಬೆಳಿಯಬೇಕು ಎಷ್ಟು ರೇಟು ಅನ್ನೋದೂ ಸಹ ಖಾಸಗಿ ಸಂಸ್ಥೆ ನಿರ್ಧರಿಸಿದರೆ ರೈತ ಕಲ್ಯಾಣವಾ? ಮೂಲದ ಪ್ರಶ್ನೆ ತನ್ನ 2 ಎಕರೆ ಗದ್ದೆಯನ್ನು ಅಂಬಾನಿಗೆ ಮಾರಿದ ರೈತ ಭವಿಷ್ಯದಲ್ಲಿ ಚೆನ್ನಾಗಿರ್ತಾನ? ಈ ಕಾಯ್ದೆಯಲ್ಲಿ ಹಲವು ತಿದ್ದುಪಡಿಗಳಾಗಬೇಕು. ಎಪಿಎಂಸಿ ಮಾರ್ಪಾಡು ಮತ್ತು ಪಾರದರ್ಶಕತೆ ಬೇಕೇ ವಿನಃ ಎಪಿಎಂಸಿ ನಾಶವಾಗುವುದಲ್ಲ. ದಳ್ಳಾಳಿ ತೊಲಗಬೇಕೆ ವಿನಃ ಅವನ ಜಾಗದಲ್ಲಿ ಅಂಬಾನಿ ಬಂದು ಕೂರುವುದಲ್ಲ.
ಈಗಿರುವ ಕಾಯ್ದೆ ಈಗಿರುವ ಸ್ಥಿತಿಯಲ್ಲೇ ಜಾರಿಯಾದರೆ ಅದು ರೈತನ ಪಾಲಿಗೆ ಮರಣ ಶಾಸನ. ದಲ್ಲಾಳಿಗಳ ಬದಲು ವೈಟ್ ಕಾಲರ್ ಕಾರ್ಪೊರೇಟ್ ಬಂದು ಕೂರ್ತಾನೆ. ಕಾರ್ಪರೇಟ್ ಸಂಸ್ಥೆಗಳು ಈ ದೇಶವನ್ನು ರೈತರನ್ನು ಉದ್ದಾರ ಮಾಡ್ತಾವೆ ಅನ್ನೋದರ ಬಗ್ಗೆ ನಂಗೆ ಕಿಂಚಿತ್ತೂ ನಂಬಿಕೆ ಇಲ್ಲ. ಟೆಲಿಕಾಮ್, ಕಮ್ಯುನಿಕೇಶನ್, ಮನೋರಂಜನೆ, ವಿಮೆ, ಪವರ್ ಇತ್ಯಾದಿ ಕ್ಷೇತ್ರಗಳಲ್ಲಿ ಕೆಲವೇ ಕಾರ್ಪೊರೇಟ್ ಸಂಸ್ಥೆಗಳು ಏಕಸ್ವಾಮ್ಯ ಸಾಧಿಸಿವೆ ಯಾಕೆ ಹೇಳಿ? ಅದೂ ಹೋಗಲಿ ಬ್ಯಾಂಕ್ ಗಳು ನರಳುತ್ತಿರುವುದ್ಯಾಕೆ ಹೇಳಿ? ಕಾರ್ಪೊರೇಟ್ ಕಂಪೆನಿಗಳಿಗೆ ಸಾಲ ಕೊಟ್ಟಿದ್ದಕ್ಕಲ್ಲವೇ. ನಾಳೆ ಕೃಷಿ ಕ್ಷೇತ್ರಕ್ಕೂ ಕಾರ್ಪೊರೇಟ್ ವಲಯ ನುಗ್ಗಿ ಮಾನೋಪಲಿ ಸಾಧಿಸಿದರೆ ಸಾಯುವುದು ರೈತರು ಮಾತ್ರವಲ್ಲ ಇಡೀ ಭಾರತದ ಆರ್ಥಿಕ ವ್ಯವಸ್ಥೆ.
ಪಂಜಾಬ್ ಹರಿಯಾಣದಲ್ಲಿ ಕಾರ್ಪೊರೇಟ್ ಪದ್ಧತಿಯಲ್ಲಿ ಕೃಷಿ ನಡೆಯುತ್ತಿದೆ ಎನ್ನುವ ವಾದಗಳು ಕೇಳಿ ಬಂತು. ಅಲ್ಲಿ ಅದಾಗಲೇ ಬಿಲ್ ನಲ್ಲಿರುವ ಅಂಶಗಳ ಪ್ರಾಕ್ಟಿಕಲ್ ಇಂಪ್ಲಿಮೆಂಟೇಷನ್ ಆಗೇ ಹೋಗಿದೆ. ರೈತರು ಸುಖದ ಸುಪ್ಪತ್ತಿಗೆಯಲ್ಲಿ ತೇಲಾಡುತ್ತಿದ್ದಾರೆ ಎನ್ನುವ ಅವಿವೇಕತನದ ಮಾತಾಡಿದರು ಕೆಲವರು. ದೆಹಲಿಯ ಹೊರಭಾಗದಲ್ಲಿ ಬಿಡಾರ ಹಾಕಿಕೊಂಡು ಕೂತವರಲ್ಲಿ ಪಂಜಾಬ್ ನವರೇ ಹೆಚ್ಚಿದ್ದರು ಜೊತೆಗೆ ಹರಿಯಾಣದ ಕಿಸಾನ್ ಸಂಘಟನೆ ಸಹ ಬೆಂಬಲ ಕೊಟ್ಟಿತ್ತು. ಎಲ್ಲಿದೆ ನಿಮ್ಮ ವಾದಕ್ಕೆ ಸಾಕ್ಷಿ?
ಒಂದಂತೂ ಸತ್ಯ. ತಿದ್ದುಪಡಿ ಮಾಡದ ಸದ್ಯದ ಮಸೂದೆ ಖಂಡಿತಾ ಜಾರಿಯಾಗಬಾರದು. ಅದನ್ನು ರೈತಪರವಾಗಿ ತಿದ್ದುಪಡಿ ಮಾಡಲಿ. ಕಾರ್ಪೊರೇಟ್ ಸಂಸ್ಥೆಗಳು ಗದ್ದೆಗಿಳಿಯಲಿ ಪರವಾಗಿಲ್ಲ ಆದರೆ ಅವಕ್ಕೆ ಸರ್ವಾಧಿಕಾರ ಬೇಡ. ಅವು ರೈತನ ಹಿತಾಸಕ್ತಿಯನ್ನು ರಕ್ಷಿಸಲೇಬೇಕು. ಸರ್ಕಾರ ಒಂದು ಸೂಕ್ತ ಸಮಂಜಸ ಮಾರ್ಗಸೂಚಿ ಸಿದ್ದಪಡಿಸಬೇಕು. ಸರ್ಕಾರವೂ ರೈತ ಮತ್ತು ಕಾರ್ಪೊರೇಟ್ ಸಂಸ್ಥೆಗಳ ನಡುವೆ ಮಧ್ಯವರ್ತಿಯಾಗಿ ನಿಲ್ಲಬೇಕು. ಇದಕ್ಕೊಂದು ಅಂಕುಶ ಬೇಕು. ಹಾಗಿದ್ದರೇ ಮಾತ್ರ ಮಸೂದೆ ಜಾರಿಯಾಗಲಿ.
–ವಿಭಾ (ವಿಶ್ವಾಸ್ ಭಾರದ್ವಾಜ್)
ಮಾರ್ಜಾಲ ಮಂಥನ ಕಾಲಂ
***