ಇಂದಿನ ಐಕಾನ್ – ಅಯೋಧ್ಯೆಯ ಶ್ರೀ ರಾಮ ದೇವರ ನಿಕಟ ಸ್ನೇಹಿತ ತ್ರೀಲೋಕಿ ನಾಥ ಪಾಂಡೆ.
“ನಾನು ಎಂದಿಗೂ ಶ್ರೀ ರಾಮದೇವರ ಜೊತೆಗೆ ಇದ್ದೇನೆ. ನಾನು ದೇವರ ಜೊತೆಗೆ ಇದ್ದಾಗ ನನಗೆ ಯಾರ ಭಯ? ದೇವರು ನನ್ನ ಸಮರ್ಥನೆಗೆ ಇದ್ದಾರೆ!” ಈ ಮಾತುಗಳನ್ನು ಮಾಧ್ಯಮದವರ ಮುಂದೆ ಹೇಳುವಾಗ ಅವರ ಕಣ್ಣಲ್ಲಿ ಅಪಾರವಾದ ಅಭಿಮಾನ ಮತ್ತು ಸಂತೋಷ ಕಂಡುಬಂದಿತ್ತು. ಅವರು ಕಳೆದ ಎರಡು ದಶಕಗಳಿಂದ ಅಯೋಧ್ಯೇಯ ಕರಸೇವಕ ಪುರಂ ಎಂಬಲ್ಲಿರುವ ವಿಶ್ವ ಹಿಂದೂ ಪರಿಷತ್ತಿನ ಆಫೀಸಿನ ಒಂದು ಧೂಳು ತುಂಬಿದ ಪುಟ್ಟ ಕೊಠಡಿಯಲ್ಲಿ ವಾಸವಾಗಿರುವ 75 ವರ್ಷದ ವೃದ್ಧರು. ಅವರನ್ನು ಕೋರ್ಟು “ರಾಮ ಲಲ್ಲಾನ ನಿಕಟ ಸ್ನೇಹಿತ” ಎಂದು ಗೌರವದಿಂದ ಕರೆಯಿತು.
ಅವರೇ ನಮ್ಮ ಇಂದಿನ ಐಕಾನ್ ತ್ರೀ ಲೋಕಿನಾಥ್ ಪಾಂಡೆ!
ಪಾಂಡೆಯವರು ಉತ್ತರಪ್ರದೇಶದ ಬಲಿಯಾ ಎಂಬ ಊರಿಗೆ ಸಂಬಂಧಿಸಿದವರು. ಅವರದ್ದು ಕೃಷಿಕರ ಕುಟುಂಬ. ಹೆತ್ತವರ ನಾಲ್ಕು ಜನ ಮಕ್ಕಳಲ್ಲಿ ಇವರೇ ಹಿರಿಯರು. ಸ್ಥಳೀಯ ಶಾಲೆ, ಕಾಲೇಜಿನಲ್ಲಿ ಓದಿದವರು. ಸ್ವಲ್ಪ ದಿನ ಹಿಂದೀ ಅಧ್ಯಾಪಕರಾಗಿ ಪಾಠ ಹೇಳಿದವರು. ನಂತರ ಅವರು ಯಾವ ಉದ್ಯೋಗವನ್ನೂ ಮಾಡಿದವರಲ್ಲ.
ವಿದ್ಯಾರ್ಥಿಯಾಗಿ ಇದ್ದಾಗಲೇ ಆರೆಸ್ಸೆಸ್ ಸಂಪರ್ಕಕ್ಕೆ ಬಂದ ಅವರು ಪೂರ್ಣ ಕಾಲದ ಪ್ರಚಾರಕರಾದರು. 1980ರ ನಂತರ ವಿಶ್ವ ಹಿಂದೂ ಪರಿಷತ್ತಿನ ಹೊಣೆ ತೆಗೆದುಕೊಂಡರು. ಉತ್ತರಪ್ರದೇಶ ರಾಜ್ಯದಲ್ಲಿ ಅಯೋಧ್ಯೆಯ ರಾಮ ಜನ್ಮ ಭೂಮಿ ಬಗ್ಗೆ ಅರಿವು ಮೂಡಿಸಲು ಇಡೀ ರಾಜ್ಯ ಸುತ್ತಾಡಿದರು. ಮತಾಂತರ ಮತ್ತು ಹಿಂದೂ ಒಗ್ಗಟ್ಟಿನ ಬಗ್ಗೆ ಜಾಗೃತಿ ಮೂಡಿಸಿದರು. ಸಂಸಾರದ ಗೊಡವೆಯನ್ನು ಮಾಡದೆ ತಮ್ಮ ಬದುಕಿನ ಬಹುಭಾಗವನ್ನು ಹಿಂದೂತ್ವದ ಪ್ರಚಾರಕ್ಕೆ ಕಳೆದರು. ಜೋಳಿಗೆಯನ್ನು ಬಗಲಿಗೆ ಹಾಕಿಕೊಂಡು ಊರೂರು ಸುತ್ತಿದರು.
ದಶಕಗಳ ಹಿಂದೆಯೇ ಅಯೋಧ್ಯೆಯ ವಿವಾದವು ಕೋರ್ಟಿನ ಮೆಟ್ಟಿಲು ಏರಿತ್ತು. ವಿಚಾರಣೆ ನಡೆಯುವಾಗ ಯಾವುದೇ ದೇವರು ಅಥವಾ ವಿಗ್ರಹವನ್ನು ಕಾನೂನಿನ ಪರಿಭಾಷೆಯಲ್ಲಿ ಗೌರವದಿಂದ ಕರೆಯುವುದು
‘ನ್ಯಾಯ ಶಾಸ್ತ್ರೀಯ ವ್ಯಕ್ತಿ’ ಎಂದು! ದೇವಳದ ಟ್ರಸ್ಟಿ ಅಥವಾ ವ್ಯವಸ್ಥಾಪಕರು ಸಾಮಾನ್ಯವಾಗಿ ದೇಗುಲದ ಆಸ್ತಿಗಳನ್ನು ನಿರ್ವಹಣೆಯನ್ನು ಮಾಡುವುದರಿಂದ ಕೋರ್ಟು ಅವರನ್ನು
“ದೇವರ ನಿಕಟ ಸ್ನೇಹಿತ ” ಎಂದು ಕರೆಯುತ್ತದೆ. ಅದೊಂದು ಗೌರವಾನ್ವಿತ ಹುದ್ದೆ ಮತ್ತು ಹೊಣೆಗಾರಿಕೆ. ಕೋರ್ಟಿನಲ್ಲಿ ವಿಚಾರಣೆ ನಡೆಯುವ ಎಲ್ಲಾ ಸಂದರ್ಭಗಳಲ್ಲಿಯೂ ಅವರು ಹಾಜರಿರಬೇಕು. ಮತ್ತು ಕೋರ್ಟಿನ ಎಲ್ಲಾ ದಾಖಲೆಗಳಿಗೆ ಸಹಿ ಮಾಡಬೇಕು.
ಪಾಂಡೆ ಅವರಿಗಿಂತ ಮೊದಲು ಇಬ್ಬರು ಆ ಹುದ್ದೆಯನ್ನು ನಿರ್ವಹಣೆ ಮಾಡಿದ್ದರು. ಒಬ್ಬರು ಹೈಕೋರ್ಟಿನ ನ್ಯಾಯಾಧೀಶರು. ಅವರು ನಿಧನರಾಗಿದ್ದರು. ಮತ್ತೋರ್ವರು ನಿವೃತ್ತ ಯುನಿವರ್ಸಿಟಿ ಅಧ್ಯಾಪಕರು ಅರ್ಧದಲ್ಲಿ ಬಿಟ್ಟು ಹೋಗಿದ್ದರು. ಅದೇ ಹುದ್ದೆ ಪಾಂಡೆ ಅವರಿಗೆ ಅರ್ಹತೆ ಮತ್ತು ಹಿರಿತನದ ಆಧಾರದ ಮೇಲೆ ದೊರೆಯಿತು. ಕೋಟಿ ಕೋಟಿ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಚ್ಯುತಿ ಬರದಂತೆ ಅವರು ತಮ್ಮ ಕರ್ತವ್ಯವನ್ನು ಸಮರ್ಥವಾಗಿ ನೆರವೇರಿಸಿದರು ಮತ್ತು ಕೇಸನ್ನು ಗೆಲ್ಲಿಸಿಕೊಟ್ಟರು.
ಅವರಿಗೆ ಅಪಾರವಾದ ಜ್ಞಾಪಕ ಶಕ್ತಿ ಇದೆ. ಅವರು ಪ್ರತೀ ದಿನದ ನಡೆದ ಕೋರ್ಟಿನ ನಡಾವಳಿಗಳನ್ನು ಯಥಾವತ್ತಾಗಿ ಮತ್ತು ನಿಖರವಾಗಿ ಹೇಳಬಲ್ಲರು. ಅವರ ತಾಳ್ಮೆ ಅಂತೂ ಅದ್ಭುತ. ದಶಕಗಳ ಕಾಲ ಕೋರ್ಟಿನ ವಾದಗಳು ನಡೆಯುವಾಗ ಕೊನೆಯ ಬೆಂಚಿನಲ್ಲಿ ಸುಮ್ಮನೆ ಕುಳಿತುಕೊಳ್ಳುವುದು ಸುಲಭ ಅಲ್ಲ. ಅವರಿಗೆ ಆರ್ಥ್ರೈಟಿಸ್ ಸಮಸ್ಯೆ ಇದೆ. ಒಮ್ಮೆ ಹೃದಯಾಘಾತ ಕೂಡ ಆಗಿದೆ. ಆದರೂ 2010ರ ನಂತರದ ಸುಪ್ರೀಂ ಕೋರ್ಟಿನ ಒಂದು ದಿನದ ಬೈಟಕ್ ಕೂಡ ತಪ್ಪಿಸಿ ಕೊಂಡಿಲ್ಲ! ದೂರದಿಂದ ಪ್ರಯಾಣ ಮಾಡಿ ದೆಹಲಿಗೆ ಬಂದಿದ್ದಾರೆ. ಕೊನೆಯ 40 ದಿನಗಳ ಕಾಲ ಮ್ಯಾರಥಾನ್ ಹಿಯರಿಂಗ್ ನಡೆದಾಗಲೂ ಅವರು ಕೋರ್ಟಲ್ಲಿ 100% ಹಾಜರಾಗಿದ್ದರು.
ಅಯೋಧ್ಯೆಯ ದೇಗುಲದ ಸಮೀಪದ ಒಂದು ಪುಟ್ಟದಾದ ಕೊಠಡಿಯಲ್ಲಿ ಅವರು ವಾಸವಾಗಿದ್ದಾರೆ. ಅವರ ಬಳಿ ಒಂದೆರಡು ಜೊತೆ ಬಟ್ಟೆ ಬಿಟ್ಟರೆ ಬೇರೇನೂ ಇಲ್ಲ! ಊರವರು ಯಾರಾದರೂ ಊಟ, ತಿಂಡಿಗೆ ಕರೆದರೆ ಹೋಗುತ್ತಾರೆ. ಇಲ್ಲವಾದರೆ ರಾಮ ನಾಮ ಜಪ ಮಾಡಿ ನೀರು ಕುಡಿದು ಮಲಗಿ ಬಿಡುತ್ತಾರೆ.
” ರಾಮ ಲಲ್ಲ ನನಗೆ ವಹಿಸಿ ಕೊಟ್ಟಿದ್ದ ಹೊಣೆಯನ್ನು ಚೆನ್ನಾಗಿ ನಿರ್ವಹಣೆ ಮಾಡಿದ್ದೇನೆ. ಸುಪ್ರೀಂ ಕೋರ್ಟಿನ ಕೊನೆಯ ತೀರ್ಪು ರಾಮ ಮಂದಿರದ ಪರವಾಗಿ ಬಂದಾಗ ಅದು ನನ್ನ ಜೀವನದ ಮರೆಯಲಾಗದ ಕ್ಷಣ.” ಎಂದವರು ಹೇಳಿದ್ದಾರೆ.
ತಮ್ಮ ಇಡೀ ಬದುಕನ್ನು ಹಿಂದೂತ್ವ ಮತ್ತು ಶ್ರೀ ರಾಮನ ಸೇವೆಯಲ್ಲಿ ಕಳೆದಿರುವ ಪಾಂಡೆಜಿ ಅವರ ಬಗ್ಗೆ ನಮಗೆ ಹೆಮ್ಮೆ ಮತ್ತು ಅಭಿಮಾನ ಇದೆ.
☑ ರಾಜೇಂದ್ರ ಭಟ್ ಕೆ.