ರಾಮನಗರ, ಜುಲೈ 7: ರಾಮನಗರ ಜಿಲ್ಲೆ ಬಿಡದಿಯಲ್ಲಿರುವ ಏಷ್ಯಾದ ದೊಡ್ಡ ಕಾರು ತಯಾರಿಕಾ ಕಂಪನಿ ಟೊಯೊಟಾದ ಕಾರ್ಮಿಕ ಕೊರೊನಾ ಸೋಂಕಿಗೆ ಬಲಿಯಾಗಿದ್ದಾನೆ. ಆತ ಎರಡು ದಿನಗಳ ಹಿಂದೆ ಉಸಿರಾಟದ ತೊಂದರೆಯಿಂದ ಮೃತಪಟ್ಟಿದ್ದು, ಆತನ ಗಂಟಲು ದ್ರವ ಮಾದರಿಯನ್ನು ಕೊರೊನಾ ಪರೀಕ್ಷೆಗೆ ಕಳುಹಿಸಿ ಕೊಡಲಾಗಿತ್ತು. ಇದೀಗ ಅವನಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಟೊಯೊಟಾ ಕಾರ್ಖಾನೆಯಲ್ಲಿ ಕೊರೊನಾ ವೈರಸ್ ಸೋಂಕಿನ ಭೀತಿ ಎದುರಾಗಿದೆ.
ಕೊರೊನಾ ಸೋಂಕಿಗೆ ಬಲಿಯಾದ ಕಾರ್ಮಿಕ ಬೆಂಗಳೂರಿನ ವಿಜಯನಗರದ ನಿವಾಸಿಯಾಗಿದ್ದು, ಆತನ ತಂದೆ ಕೂಡ ಜುಲೈ 2 ರಂದು ಕೋವಿಡ್-19 ಸೋಂಕಿಗೆ ಬಲಿಯಾಗಿದ್ದಾರೆ.
ಟೊಯೊಟಾ ಕಂಪನಿ ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿದ್ದು, ತನ್ನ ಸಂಸ್ಥೆಯ ಕಾರ್ಮಿಕ ಕೋವಿಡ್-19 ಗೆ ಬಲಿಯಾಗಿರುವುದಾಗಿ ಮಾಹಿತಿ ನೀಡಿದ್ದು, ಮೃತ ನೌಕರನ ಸಾವಿಗೆ ತೀವ್ರ ಸಂತಾಪ ಸೂಚಿಸಿದೆ.
ಸಂಬಂಧಪಟ್ಟ ಉದ್ಯೋಗಿಯು ಕೊನೆಯದಾಗಿ 2020 ರ ಜೂನ್ 23 ರಂದು ಕಾರ್ಖಾನೆಯಲ್ಲಿ ಕೆಲಸಕ್ಕೆ ಹಾಜರಾಗಿದ್ದರು. ಆದ್ದರಿಂದ ಕೊರೊನಾ ಸೋಂಕು ಕಂಪನಿಯೊಳಗಿನ ಆಂತರಿಕ ಪ್ರಸರಣದಿಂದ ತಗುಲಿದೆ ಎಂಬ ಬಗ್ಗೆ ಯಾವುದೇ ಸ್ಪಷ್ಟ ಪುರಾವೆಗಳಿಲ್ಲ. ಈ ಹಿಂದೆ ಸ್ಥಾವರದಲ್ಲಿ ವರದಿಯಾದ ಎಂಟು ಕೋವಿಡ್-19 ಪ್ರಕರಣಗಳೂ ಸಹ ಕಂಪನಿಯ ಆಂತರಿಕ ಪ್ರಸರಣದಿಂದ ತಗುಲಿದಲ್ಲ ಎಂದು ಸ್ಪಷ್ಟನೆ ನೀಡಿದೆ.
ಮೃತಪಟ್ಟ ಸಿಬ್ಬಂದಿಯ ಪ್ರಾಥಮಿಕ ಅಥವಾ ದ್ವಿತೀಯ ಸಂಪರ್ಕಿತ ನೌಕರರನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿದೆ. ನಮ್ಮ ನೌಕರರು ಮತ್ತು ಅದರ ಎಲ್ಲಾ ಇತರ ಪಾಲುದಾರರ ಸುರಕ್ಷತೆಯ ದೃಷ್ಟಿಯಿದ ಕೆಲಸದ ಸ್ಥಳವನ್ನು ಸೋಂಕು ರಹಿತಗೊಳಿಸಿದ್ದು, ಜೊತೆಗೆ ಸೋಂಕು ಪತ್ತೆಯಾದ ಪ್ರದೇಶಗಳಲ್ಲಿ ಹೆಚ್ಚಿನ ಸುರಕ್ಷತೆಗೆ ಆದ್ಯತೆ ನೀಡಲಾಗಿದೆ. ಸಂಸ್ಥೆಯು ಕಾರ್ಯ ನಿರ್ವಹಣಾ ಪ್ರದೇಶದ ಸುರಕ್ಷತೆಯನ್ನು ದೃಢೀಕರಿಸುವ ಮತ್ತು ಎಲ್ಲಾ ಕಡ್ಡಾಯ ಮುಂಜಾಗ್ರತಾ ಕ್ರಮಗಳಿಗೆ ಬದ್ಧವಾಗಿ ಕಾರ್ಯ ನಿರ್ವಹಿಸಲಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಟೊಯೊಟೊ ಕಂಪನಿ ತಿಳಿಸಿದೆ.