ಶ್ರೀಕಾಕುಳಂನಲ್ಲಿ ರೈಲು ಹರಿದು 5 ಮಂದಿ ದುರಂತ ಸಾವು
ರೈಲ್ವೇ ಹಳಿ ಮೇಲೆ ನಿಂತಿದ್ದವರ ಮೇಲೇ ಕೋನಾರ್ಕ್ ಎಕ್ಸ್ ಪ್ರೆಸ್ ರೈಲು ಹರಿದ ಪರಿಣಾಮ ಒಬ್ಬ ಮಹಿಳೆ ಸೇರಿದಂತೆ ಐವರು ದುರ್ಮರಣ ಹೊಂದಿರುವ ಘಟನೆ ಆಂಧ್ರಪ್ರದೇಶದ ಶ್ರೀಕಾಕುಳಂನಲ್ಲಿ ಸಂಭವಿಸಿದೆ. ಸೋಮವಾರ ರಾತ್ರಿ ಈ ಭಯಾನಕ, ಭೀಕರ ರೈಲು ಅಪಘಾತ ಸಂಭವಿಸಿದೆ.
ಸಿಕಂದರಾಬಾದ್- ಗುವಾಹಟಿ ಸೂಪರ್ಫಾಸ್ಟ್ ಎಕ್ಸ್ಪ್ರೆಸ್ ರೈಲು ತಾಂತ್ರಿಕ ಕಾರಣದಿಂದ ಕೆಟ್ಟು ನಿಂತ ಕಾರಣ ರೈಲಿನಿಂದ ಇಳಿದ ಈ ಪ್ರಯಾಣಿಕರು ಕೆಳಗಡೆ ಇಳಿದು ಪಕ್ಕದ ರೈಲು ಹಳಿ ಮೇಲೆ ನಿಂತಿದ್ದರು. ಮೇಲೆ ವೇಗವಾಗಿ ಬಂದ ಮತ್ತೊಂದು ರೈಲು ಹರಿದ ಪರಿಣಾಮ ಈ ಎದೆನಡುಗಿಸುವ ದುರ್ಘಟನೆ ನಡೆದಿದೆ. ಕೊನಾರ್ಕ್ ಎಕ್ಸ್ಪ್ರೆಸ್ ರೈಲು ಹರಿದ ರಭಸಕ್ಕೆ ಅವರ ದೇಹಗಳು ಛಿದ್ರ ಛಿದ್ರವಾಗಿವೆ.
ಈ ದುರ್ಘಟನೆ ಬಗ್ಗೆ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ಮೃತರ ಕುಟುಂಬಕ್ಕೆ ಪರಿಹಾರ ನೀಡುವಂತೆ ಹಾಗೂ ಗಾಯಾಳುವಿಗೆ ಸೂಕ್ತ ಚಿಕಿತ್ಸೆ ಒದಗಿಸುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದಾರೆ. ರೈಲ್ವೆ ಇಲಾಖೆ ಮತ್ತು ಸ್ಥಳೀಯ ಪೊಲೀಸರು ಘಟನೆ ಬಗ್ಗೆ ತನಿಖೆ ಆರಂಭಿಸಿದ್ದಾರೆ.
ಗುವಾಹಟಿ ಎಕ್ಸ್ಪ್ರೆಸ್ ರೈಲಿನಲ್ಲಿ ಹೊಗೆ ಬರುತ್ತಿರುವುದನ್ನು ಗಮನಿಸಿದ ಕೆಲವು ಪ್ರಯಾಣಿಕರು ಆತಂಕಗೊಂಡ ಎಮೆರ್ಜೆನ್ಸಿ ಚೈನ್ ಎಳೆದು ರೈಲು ನಿಲ್ಲಿಸಿದ್ದರು. ಅವರಲ್ಲಿ ಕೆಲವರು ರೈಲಿನಿಂದ ಇಳಿದು, ಪಕ್ಕದಲ್ಲಿದ್ದ ಹಳಿ ಮೇಲೆ ನಿಂತಿದ್ದರು. ಆಗ ಭುವನೇಶ್ವರದಿಂದ ವಿಶಾಖಪಟ್ಟಣಂಗೆ ತೆರಳುತ್ತಿದ್ದ ಕೊನಾರ್ಕ್ ಎಕ್ಸ್ಪ್ರೆಸ್ ರೈಲು ಇನ್ನೊಂದು ದಿಕ್ಕಿನಿಂದ ಬಂದಿದೆ. ರೈಲು ಬರುತ್ತಿರುವುದು ಅವರ ಗಮನಕ್ಕೆ ಬಂದು ಹಳಿಯಿಂದ ಹೊರ ಬರುವಷ್ಟರಲ್ಲಿ ದುರ್ಘಟನೆ ಸಂಭವಿಸಿದೆ.