ಪ್ರಧಾನಮಂತ್ರಿಗಳ ಬಡವರ ಕಲ್ಯಾಣ ಯೋಜನೆಯಡಿ ನೀಡುವ ಹಣವನ್ನು ಜನಧನ್ ಯೋಜನೆ ಖಾತೆ ಇರುವ ಮಹಿಳೆಯರಿಗೆ ನೇರ ವರ್ಗಾವಣೆ ಮಾಡಲಾಗುತ್ತದೆ. ಕೋವಿಡ್19 ಸಾಂಕ್ರಾಮಿಕ ತೀವ್ರವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿಗಳು ಬಡವರ ಕಲ್ಯಾಣ ಯೋಜನೆಯಡಿ ಮಹಿಳೆಯರಿಗೆ 500 ರೂ. ನೀಡುವುದಾಗಿ ಘೋಷಣೆ ಮಾಡಲಾಗಿತ್ತು. ಇದೀಗ ಆ
ಹಣವನ್ನು ಮುಂದಿನ ತಿಂಗಳ ಕಾಲ ಜನಧನ್ ಖಾತೆಗಳಿಗೆ ನೇರ ವರ್ಗಾಯಿಸುವುದಾಗಿ ಹಣಕಾಸು ಸಚಿವಾಲಯ ತಿಳಿಸಿದೆ.
ಈ ಕುರಿತು ಗ್ರಾಮೀಣಾಭಿವೃದ್ಧಿ ಸಚಿವಾಲಯಕ್ಕೆ ಮಾಹಿತಿ ನೀಡಲಾಗಿದೆ. ಪ್ರಧಾನಮಂತ್ರಿಗಳ ಜನಧನ್ ಯೋಜನೆಯ ಖಾತೆ ಇರುವವರ ಮಹಿಳೆಯರಿಗೆ ಏಪ್ರಿಲ್ 2020ರ ಅವಧಿಯ 500 ರೂ.ಗಳನ್ನು ಏಪ್ರಿಲ್ 2, 2020ರ ಬೆಳಗಿನ ಹೊತ್ತಿಗೆ ಆಯಾ ಖಾತೆಗಳಿಗೆ ವರ್ಗಾಯಿಸಲಾಗುತ್ತದೆ.
ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಅನಿವಾರ್ಯವಾಗಿದೆ.
ಖಾತೆದಾರರು, ಬ್ಯಾಂಕ್ನಿಂದ ಹಣ ಪಡೆಯುವುದಕ್ಕೆ ಏಕಕಾಲಕ್ಕೆ ಧಾವಿಸುವಂತಾಗಬಾರದು ಎಂದು ಖಾತೆಗಳ ಸಂಖ್ಯೆಗಳ ಕಡೆಯ ಅಂಕಿಯನ್ನು ಆಧಾರದ ಮೇಲೆ ದಿನಾಂಕಗಳನ್ನು ನಿಗದಿ ಮಾಡಿದ್ದು, ಖಾತೆದಾರರು ಅಂದರಂತೆ ಹಣವನ್ನು ಪಡೆದುಕೊಳ್ಳಬಹುದು.
0 ಅಥವಾ1 ಅಂಕೆಯಿಂದ ಕೊನೆಗೊಳ್ಳುವ ಖಾತೆ ಸಂಖ್ಯೆಯುಳ್ಳವರು ಏಪ್ರಿಲ್ 3ರಂದು, 2 ಅಥವಾ 3 ಅಂಕೆಯಿಂದ ಕೊನೆಗೊಳ್ಳುವ ಸಂಖ್ಯೆಯುಳ್ಳವರು ಏಪ್ರಿಲ್ 4ರಂದು, 4 ಅಥವಾ 5 ಅಂಕೆಯುಳ್ಳವರು ಏಪ್ರಿಲ್ 7ರಂದು, 6 ಅಥವಾ 7 ಅಂಕೆಯುಳ್ಳವರು ಏಪ್ರಿಲ್ 8ರಂದು ಹಾಗೂ 8 ಅಥವಾ 9 ಅಂಕೆಯುಳ್ಳ ಖಾತೆ ಸಂಖ್ಯೆಯುಳ್ಳವರು ಏಪ್ರಿಲ್9ರಂದು ಹಣವನ್ನು ಪಡೆದುಕೊಳ್ಳಬಹುದು.9ನೇ ತಾರೀಖಿ ನಂತರ ಯಾವುದೇ ಬ್ಯಾಂಕ್ ಅವಧಿಯಲ್ಲಿ ಶಾಖೆಗಳಿಗೆ ಭೇಟಿ ನೀಡಿ ಹಣ ಪಡೆದುಕೊಳ್ಳಬಹುದು.
ಅಲ್ಲದೆ ಬ್ಯಾಂಕ್ಗಳಿಗೆ, ಖಾತೆದಾರರಿಗೆ ಅವರ ಖಾತೆ ಸಂಖ್ಯೆಗಳನ್ನು ಆಧರಿಸಿ, ಹಣ ಜಮೆಯಾಗಿರುವ ಮಾಹಿತಿ ನೀಡುವ ಜೊತೆಗೆ ಯಾವ ಶಾಖೆಗೆ ಭೇಟಿಯಾಗಬೇಕು ಎಂಬುದನ್ನು ತಿಳಿಸುವಂತೆ ಸಚಿವಾಲಯದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಈ ಸಂಬಂಧ ಎಸ್ಸೆಮ್ಮೆಸ್ ಜೊತೆಗೆ ಸ್ಥಳೀಯವಾಗಿ ಪತ್ರಿಕೆಗಳು, ಕೇಬಲ್ ನೆಟ್ವರ್ಕ್, ಸ್ಥಳೀಯ ವಾಹಿನಿಗಳು, ರೇಡಿಯೋ ಇತ್ಯಾದಿ ಮಾಧ್ಯಮಗಳ ಮೂಲಕ ಪ್ರಚಾರ ನೀಡುವಂತೆ ತಿಳಿಸಲಾಗಿದೆ.
ಎಸ್ಎಲ್ಬಿಸಿ ಸಮನ್ವಯಕಾರರು ಕೂಡಲೇ ರಾಜ್ಯ ಸರ್ಕಾರಗಳನ್ನು ಸಂಪರ್ಕಿಸಿ, ಖಾತೆದಾರರು ಏಕಕಾಲಕ್ಕೆ ಬ್ಯಾಂಕ್ ಶಾಖೆಗಳಿಗೆ ಎಡತಾಕದಂತೆ ಎಚ್ಚರವಹಿಸಲು ಸೂಚಿಸಲಾಗಿದೆ. ರಾಜ್ಯ ಸರ್ಕಾರಗಳು ಸ್ಥಳೀಯವಾಗಿ ಜಿಲ್ಲಾಡಳಿತಗಳಿಗೆ ಅಗತ್ಯ ಸೂಚನೆಗಳನ್ನು ನೀಡಿ, ಪೊಲೀಸ್ ಬೆಂಬಲದೊಂದಿಗೆ ಫಲಾನುಭವಿಗಳಿಗೆ ಯಾವುದೇ ಅನುನುಕೂಲವಾಗದಂತೆ ಹಣ ವಿತರಣೆಯಾಗುವಂತೆ ನೋಡಿಕೊಳ್ಳುವಂತೆ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಚಿಂದ್ರ ಮಿಶ್ರಾ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.








