ಹೈದ್ರಾಬಾದ್ : ಸ್ಕ್ರ್ಯಾಪ್ ಗೋಡೌನ್ ಗೆ ಬೆಂಕಿ 11 ಮಂದಿ ಸಜೀವ ದಹನ
ತೆಲಂಗಾಣದ ರಾಜಧಾನಿ ಹೈದರಾಬಾದ್ನ ಭೋಯಿಗುಡಾದಲ್ಲಿ ಸ್ಕ್ರ್ಯಾಪ್ ಗೋಡೌನ್ನಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, 11 ಕಾರ್ಮಿಕರು ಸಜೀವ ದಹನವಾಗಿರುವ ಘಟನೆ ನಡೆದಿದೆ. ಮೃತರೆಲ್ಲರೂ ಬಿಹಾರ ನಿವಾಸಿಗಳಾಗಿದ್ದು, ಇಲ್ಲಿನ ಜಂಕ್ ಗೋದಾಮಿನಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.
ಸ್ಥಳದಲ್ಲಿದ್ದ ಹೈದರಾಬಾದ್ ಡಿಸಿಪಿ ಕೇಂದ್ರ ವಲಯ, ಎಲ್ಲಾ 11 ಶವಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಿದ್ದಾರೆ. ಸದ್ಯ ಬೆಂಕಿ ಹತೋಟಿಗೆ ಬಂದಿದೆ. ತೆಲಂಗಾಣ ಸಿಎಂ ಕೆಸಿ ರಾವ್ ಅವರು ಬೆಂಕಿಯಲ್ಲಿ ಸಾವನ್ನಪ್ಪಿದ ಬಿಹಾರ ಕಾರ್ಮಿಕರ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಮೃತರ ಕುಟುಂಬಸ್ಥರಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಘಟನೆಯಲ್ಲಿ ಮೃತಪಟ್ಟ ಕಾರ್ಮಿಕರ ಮೃತದೇಹಗಳನ್ನು ಮರಳಿ ತರಲು ವ್ಯವಸ್ಥೆ ಮಾಡುವಂತೆ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದರು.
ಪ್ರಧಾನಿ ಮೋದಿ ಸಂತಾಪ
ಹೈದರಾಬಾದ್ನ ಭೋಯಿಗುಡದಲ್ಲಿ ಸಂಭವಿಸಿದ ಭಾರೀ ಅಗ್ನಿ ದುರಂತದಲ್ಲಿ ಸಂಭವಿಸಿದ ಸಾವುಗಳಿಗೆ ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದಾರೆ. ಈ ದುಃಖದ ಘಳಿಗೆಯಲ್ಲಿ ನನ್ನ ಸಂತಾಪವು ದುಃಖತಪ್ತ ಕುಟುಂಬಗಳೊಂದಿಗೆ ಇದೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿ ಬರೆದುಕೊಂಡಿದ್ದಾರೆ. ಮೃತರ ಕುಟುಂಬಕ್ಕೆ PMNRF ನಿಂದ ತಲಾ 2 ಲಕ್ಷ ರೂಪಾಯಿಗಳ ಎಕ್ಸ್ ಗ್ರೇಷಿಯಾ ಮೊತ್ತವನ್ನು ನೀಡಲಾಗುತ್ತದೆ.
ಶಟರ್ ಮುಚ್ಚಿದ್ದರಿಂದ ಸಿಲುಕಿಕೊಂಡ ಕಾರ್ಮಿಕರು
ಪೊಲೀಸರ ಪ್ರಕಾರ, ಗುಜರಿ ಗೋದಾಮಿನ ಮೊದಲ ಮಹಡಿಯಲ್ಲಿ 12 ಕಾರ್ಮಿಕರು ಮಲಗಿದ್ದರು. ನೆಲ ಮಹಡಿಯಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿತು. ಕೆಳ ಅಂತಸ್ತಿನ ಶೆಟರ್ಗಳನ್ನು ಮುಚ್ಚಲಾಗಿತ್ತು. ಇದು ಕಾರ್ಮಿಕರಿಗೆ ಹೊರಬರುವ ಏಕೈಕ ದಾರಿಯಾಗಿತ್ತು. ಇಂದು ಬೆಳಗ್ಗೆ 8 ಗಂಟೆ ವೇಳೆಗೆ 11 ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಬೆಂಕಿಯಿಂದ ಬಚಾವ್ ಆಗಿದ್ದ ಓರ್ವ ಕಾರ್ಮಿಕನನ್ನು ಆಸ್ಪತ್ರೆಗೆ ಕಳುಹಿಸಲಾಗಿದೆ. ಪೊಲೀಸರ ಪ್ರಕಾರ, ಅಗ್ನಿಶಾಮಕ ನಿಯಂತ್ರಣ ಕೊಠಡಿಗೆ ಮುಂಜಾನೆ 3 ಗಂಟೆಯ ಸುಮಾರಿಗೆ ಕರೆ ಬಂದಿದೆ. ಒಂಬತ್ತು ಅಗ್ನಿಶಾಮಕ ವಾಹನಗಳು ಮೂರು ಗಂಟೆಗಳ ಕಾಲ ಬೆಂಕಿಯನ್ನು ನಂದಿಸಲು ಶ್ರಮ ಪಟ್ಟಿವೆ.
ಫೈಬರ್ ಕೇಬಲ್ಗಳಿಗೆ ಬೆಂಕಿ
ಗೋಡೌನ್ ನಲ್ಲಿದ್ದ ಫೈಬರ್ ಕೇಬಲ್ ಗಳಲ್ಲಿ ಬೆಂಕಿ ಕಾಣಿಸಿಕೊಂಡಿದ್ದರಿಂದ ದಟ್ಟ ಹೊಗೆ ವ್ಯಾಪಿಸಿ ಬೆಂಕಿಯ ತೀವ್ರತೆ ಮತ್ತಷ್ಟು ಹೆಚ್ಚಿದೆ. ಖಾಲಿ ಮದ್ಯದ ಬಾಟಲಿಗಳು, ಪೇಪರ್, ಪ್ಲಾಸ್ಟಿಕ್ ಮತ್ತು ಇತರ ಕೇಬಲ್ಗಳನ್ನು ಸಹ ಗೋಡೌನ್ನಲ್ಲಿ ಇರಿಸಲಾಗಿತ್ತು. ಮೊದಲ ಮಹಡಿಯಲ್ಲಿ ಎರಡು ಕೊಠಡಿಗಳಿದ್ದು, ಒಂದು ಕೊಠಡಿಯಿಂದ 11 ಮೃತದೇಹಗಳನ್ನು ಹೊರತೆಗೆಯಲಾಗಿದೆ. ಮೃತ ದೇಹಗಳನ್ನು ಗುರುತಿಸಲಾಗಿಲ್ಲ.