ನನ್ನ ರಾಜೀನಾಮೆ ಕೇಳಲಿಕ್ಕೆ ಅವನ್ಯಾರು : ಡಿಕೆಶಿ ವಿರುದ್ಧ ಕತ್ತಿ ಗರಂ
ಬೆಳಗಾವಿ : ನನ್ನ ರಾಜೀನಾಮೆ ಕೇಳಲಿಕ್ಕೆ ಅವನ್ಯಾರು, ಹೋಗುವ ಹಾದಿಮೇಲೆ ನಿಂತುಕೊಂಡು ರಾಜೀನಾಮೆ ಕೇಳೋದಕ್ಕೆ ಅವನ್ಯಾರು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಸಚಿವ ಉಮೇಶ್ ಕತ್ತಿ ವಾಗ್ದಾಳಿ ನಡೆಸಿದ್ದಾರೆ.
ಅಕ್ಕಿ ವಿತರಣೆ ವಿಚಾರವಾಗಿ ಸಾಯಿರೀ ಎಂಬ ಉಮೇಶ್ ಕತ್ತಿ ಹೇಳಿಕೆಗೆ ಡಿಕೆಶಿ ಪ್ರತಿಕ್ರಿಯೆ ನೀಡಿ, ಉಮೇಶ್ ಕತ್ತಿ ರಾಜೀನಾಮೆಗೆ ಆಗ್ರಹಿಸಿದ್ದರು. ಈ ಬಗ್ಗೆ ನಗರದಲ್ಲಿ ಪ್ರತಿಕ್ರಿಯೆ ನೀಡಿದ ಉಮೇಶ್ ಕತ್ತಿ, ಅವನ್ಯಾರು ನನ್ನ ರಾಜೀನಾಮೆ ಕೇಳಲಿಕ್ಕೆ, ಹೋಗುವ ಹಾದಿಮೇಲೆ ನಿಂತುಕೊಂಡು ರಾಜೀನಾಮೆ ಕೇಳೋದಕ್ಕೆ ಅವನ್ಯಾರು.
ಕಾಂಗ್ರೆಸ್ ಅಧ್ಯಕ್ಷ ಇದ್ದುಕೊಂಡು ನನ್ನ ರಾಜೀನಾಮೆ ಕೇಳೋದಕ್ಕೆ ಅವನಿಗೇನು ಅಧಿಕಾರವಿದೆ. ಶವಯಾತ್ರೆ ಮಾಡೊದಾದ್ರೆ ಕಾಂಗ್ರೆಸ್ ನ ಶವಯಾತ್ರೆಯನ್ನು ತೆಗೆದುಕೊಂಡು ವಿಪಕ್ಷ ನಾಯಕ ಸಿದ್ದರಾಮಯ್ಯ ಮನೆಗೆ ಹೋಗಲಿ. ಶವಯಾತ್ರೆ ಮಾಡಲಿ, ಅಲ್ಲೇ ಸಿದ್ದರಾಮಯ್ಯ ಮನೆಯಲ್ಲೇ ಶವ ಹೂಳಲಿ ಎಂದು ಆಕ್ರೋಶ ಹೊರ ಹಾಕಿದರು.
ಇನ್ನು ರಾಜ್ಯದ ಫಲಾನುಭವಿಗಳಿಗೆ ಹಾಗೂ ರೈತರಿಗೆ ನನ್ನ ಮಾತಿನಿಂದ ಏನಾದರೂ ಮನಸ್ಸು ನೋಯಿಸಿದ್ರೆ ಸ್ವತಃ ಕ್ಷಮೆ ಕೇಳುತ್ತಿದ್ದೇನೆ. ನಮ್ಮ ಸರ್ಕಾರದಿಂದ ಆಹಾರ ಖಾತೆ ಯೋಜನೆಯಡಿ ಎಲ್ಲರಿಗೂ ಪಡಿತರ ವಿತರಣೆ ಜೊತೆಗೆ ಪೌಷ್ಟಿಕ ಆಹಾರ ನೀಡಲಾಗುತ್ತಿದೆ. ಗ್ರಾಹಕರಿಗೂ ಹಾಗೂ ರೈತರು ಒಳ್ಳೆಯದು ಆಗಲಿದೆ ಎಂದರು.