ಜನ ಸಾಯಬಾರದೆಂದು ದೇವರಲ್ಲಿ ಪ್ರಾರ್ಥನೆ ಮಾಡಿಕೊಳ್ಳೋಣ : ಉಮೇಶ್ ಕತ್ತಿ
ಬಾಗಲಕೋಟೆ : ಧೈರ್ಯ ಕಳೆದುಕೊಂಡು ಸಾಯುವವರ ಪ್ರಮಾಣ ಹೆಚ್ಚಾಗ್ತಿದೆ. ಮೆಡಿಸಿನ್ ಕೊಟ್ಟರೂ ಧೈರ್ಯ ಕಳೆದುಕೊಂಡು ಸಾಯೋರಿದ್ದಾರೆ. ಅದಕ್ಕೆ ಪರ್ಯಾಯ ವ್ಯವಸ್ಥೆ ಏನಿಲ್ಲ. ಆದ್ರೂ ಜನ ಸಾಯಬಾರದೆಂದು ದೇವರಲ್ಲಿ ಪ್ರಾರ್ಥನೆ ಮಾಡಿಕೊಳ್ಳೋಣ ಎಂದು ಸಚಿವ ಉಮೇಶ್ ಕತ್ತಿ ಹೇಳಿದ್ದಾರೆ.
ಬೀಳಗಿ ಪಟ್ಟಣದಲ್ಲಿ ಕೋವಿಡ್ ಸಂಬಂಧ ನಡೆದ ಅಧಿಕಾರಿಗಳ ಸಭೆಯ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಾ, ದೇಶದಲ್ಲಿ 130 ಕೋಟಿ ಜನಸಂಖ್ಯೆಯಿದೆ. ಯಾರು ಯಾವುದಕ್ಕೆ ಸತ್ತರು ಅಂತಾ ಇಲ್ಲಿಯವರೆಗೂ ಲೆಕ್ಕ ಇಲ್ಲ.
ಕೋವಿಡ್ ಸಮಯದಲ್ಲಿ ಸಾವಿನ ಸಂಖ್ಯೆ ನೋಡಲು ಬುಲೆಟಿನ್ ತೆಗೆದಿದ್ದೀವಿ. ಕೋವಿಡ್ ಬುಲೆಟಿನ್ ವರದಿಯಿಂದಲೂ ತಪ್ಪಾಗಿರಬಹುದು. ನಾವು ಇಲ್ಲ ಅಂತಾ ಹೇಳಲ್ಲ, ನಾವು ಹರಿಶ್ಚಂದ್ರನ ಮಕ್ಕಳು ಅಂತಾನೂ ನಾವು ಹೇಳ್ತಿಲ್ಲ.
ಮಾಧ್ಯಮದವರು ಸರಿಯಾದ ಮಾಹಿತಿ ಕೊಟ್ಟರೆ ಸರಿ ಮಾಡುವ ಕೆಲಸ ಡಿಸಿ ಅವ್ರು ಮಾಡ್ತಾರೆ. ಡಿಸಿ ಏನೂ ಮುಗಿಲ ಮೇಲಿಂದ ಬಂದಿಲ್ಲ. ಅವರು ಕರ್ನಾಟಕದಲ್ಲೇ ಹುಟ್ಟಿ, ಕರ್ನಾಟಕದಲ್ಲೇ ಬೆಳೆದಿದ್ದಾರೆ.
ನಾವು ಸಹ ಇಲ್ಲಿನವರೇ. ತಪ್ಪು ಮಾಡುವ ಉದ್ದೇಶ ನಮಗೆ ಇಲ್ಲ. ಏನಾದ್ರೂ ಇದ್ದರೆ ಮಾಹಿತಿ ಕೊಡಿ ಸರಿ ಮಾಡೋ ಕೆಲಸ ಮಾಡೋಣ ಎಂದರು.
ಇದೇ ವೇಳೆ ಮಾಧ್ಯಮಗಳಲ್ಲಿ ಹೆಣ, ಬೆಡ್ ಇದನ್ನೇ ನೋಡಿ ಭಯ ಹುಟ್ಟುತ್ತಿದೆ. ಚೇಂಜ್ ಮಾಡಿ ಬೇರೆ ತೋರಿಸಿ ಎಂದು ಮನವಿ ಮಾಡಿಕೊಂಡ ಅವರು, ಧೈರ್ಯ ಕಳೆದುಕೊಂಡವರಿಗೆ ಏನು ಮಾಡೋಕಾಗಲ್ಲ.
ಪಂಪ್ ಹೊಡೆದು ಧೈರ್ಯ ತುಂಬೋಕಾಗುತ್ತಾ. ಧೈರ್ಯ ಕಳೆದುಕೊಂಡು ಸಾಯುವವರ ಪ್ರಮಾಣ ಹೆಚ್ಚಾಗ್ತಿದೆ. ಮೆಡಿಸಿನ್ ಕೊಟ್ಟರೂ ಧೈರ್ಯ ಕಳೆದುಕೊಂಡು ಸಾಯೋರಿದ್ದಾರೆ.
ಅದಕ್ಕೆ ಪರ್ಯಾಯ ವ್ಯವಸ್ಥೆ ಏನಿಲ್ಲ. ಆದ್ರೂ ಜನ ಸಾಯಬಾರದೆಂದು ದೇವರಲ್ಲಿ ಪ್ರಾರ್ಥನೆ ಮಾಡಿಕೊಳ್ಳೋಣ ಎಂದು ಹೇಳಿದರು.