ಬೆಂಗಳೂರು: ರಾಜ್ಯದಲ್ಲಿ ಮೂರು ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆಯಾಗಿದೆ. ಈಗಾಗಲೇ ಬಿಜೆಪಿ ಎರಡು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ. ಆದರೆ, ಚನ್ನಪಟ್ಟಣ ಕ್ಷೇತ್ರಕ್ಕೆ ಅಭ್ಯರ್ಥಿ ಆಯ್ಕೆ ಕಗ್ಗಂಟಾಗಿರುವುದರಿಂದಾಗಿ ಘೋಷಣೆ ಮಾಡಿಲ್ಲ. ಈ ಹಿನ್ನೆಲೆಯಲ್ಲಿ ದೆಹಲಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವಿ. ವಿಜಯೇಂದ್ರ ದೌಡಾಯಿಸಿದ್ದಾರೆ.
ಮೈತ್ರಿ ಟಿಕೆಟ್ ವಿಚಾರವಾಗಿ ಬಿಜೆಪಿ-ಜೆಡಿಎಸ್ (BJP JDS Alliance) ಮಧ್ಯೆ ಯಾವುದೇ ಒಮ್ಮತ ಮೂಡಿಲ್ಲ. ಕುಮಾರಸ್ವಾಮಿ ಜೆಡಿಎಸ್ ಗೆ ಕ್ಷೇತ್ರ ಬೇಕು ಎಂದು ಪಟ್ಟು ಹಿಡಿದಿದ್ದರೆ, ಯೋಗೇಶ್ವರ್ ನಾನೇ ಸ್ಪರ್ಧೆ ಮಾಡುವೇ ಎನ್ನುತ್ತಿದ್ದಾರೆ. ಹೀಗಾಗಿ ಟಿಕೆಟ್ ಫೈಟ್ ಜೋರಾಗಿದೆ. ಹೀಗಾಗಿ ವರಿಷ್ಠರೊಂದಿಗೆ ಮಾತುಕತೆ ನಡೆಸಲು ವಿಜಯೇಂದ್ರ ದೆಹಲಿಗೆ ತೆರಳಿದ್ದಾರೆ.
ಹೈಕಮಾಂಡ್ಗೆ ಉಪಚುನಾವಣೆ (By Election) ಗ್ರೌಂಡ್ ರಿಪೋರ್ಟ್ ಸೇರಿದಂತೆ ಕ್ಷೇತ್ರದ ಚಿತ್ರಣ, ಟಿಕೆಟ್ ಜಟಾಪಟಿ, ಸಿಪಿವೈ ಹಠದ ಬಗ್ಗೆಯೂ ಮಾಹಿತಿ ನೀಡಲಿದ್ದಾರೆ ಎನ್ನಲಾಗಿದೆ.
ಈ ಕ್ಷೇತ್ರದ ವಿಚಾರದಲ್ಲಿ ಸ್ಪೆಷಲ್ ಇಂಟ್ರೆಸ್ಟ್ ತೋರಿಸಿರುವ ಡಿಸಿಎಂ ಡಿಕೆ ಶಿವಕುಮಾರ್ ಮೇಲಿಂದ ಮೇಲೆ ಸಭೆ ಮಾಡುತ್ತಿದ್ದು, ಅಭಿಪ್ರಾಯ ಸಂಗ್ರಹಿಸುತ್ತಿದ್ದಾರೆ. ನಾನು ಸ್ಪರ್ಧಿಸುವುದಿಲ್ಲ ಎನ್ನುತ್ತಿದ್ದ, ಡಿ.ಕೆ. ಸುರೇಶ್ ಈಗ ಮತ್ತೆ ರಾಗ ಬದಲಿಸುತ್ತಿದ್ದಾರೆ. ಪಕ್ಷ ತೀರ್ಮಾನ ಮಾಡಿದರೆ ಸ್ಪರ್ಧಿಸುವುದಾಗಿ ಹೇಳುತ್ತಿದ್ದಾರೆ. ಈ ಮಧ್ಯೆ ಕ್ಷೇತ್ರದಲ್ಲಿ ರಘುನಂದನ್ ರಾಮಣ್ಣ, ಮಾಜಿ ಎಂಎಲ್ಎ ಅಶ್ವಥ್ ಹೆಸರು ಕೂಡ ಕೇಳಿ ಬರುತ್ತಿವೆ.