ಉತ್ತರ ಪ್ರದೇಶ : ಬಡ ಬ್ರಾಹ್ಮಣರಿಗೆ ಮಾತ್ರವಲ್ಲ ಎಲ್ಲಾ ಬ್ರಾಹ್ಮಣರಿಗೆ ವಿಮೆ ಬೇಕು – ಜಿತಿನ್ ಪ್ರಸಾದ್
ಲಕ್ನೋ, ಅಗಸ್ಟ್ 19: ಉತ್ತರ ಪ್ರದೇಶದ ಬಡ ಬ್ರಾಹ್ಮಣರಿಗೆ ವೈದ್ಯಕೀಯ ವಿಮೆ ನೀಡುವುದಾಗಿ ಹೇಳಿಕೆ ನೀಡಿರುವ ಬಿಜೆಪಿ ಮೇಲೆ ಕಾಂಗ್ರೆಸ್ ಮುಖಂಡ ಜಿತಿನ್ ಪ್ರಸಾದ್ ಮಂಗಳವಾರ ವಾಗ್ದಾಳಿ ನಡೆಸಿದ್ದಾರೆ.
ಯುಪಿ ರಾಜ್ಯದಲ್ಲಿ ಬಡ ಬ್ರಾಹ್ಮಣರಿಗೆ ಮಾತ್ರವಲ್ಲ ಎಲ್ಲಾ ಬ್ರಾಹ್ಮಣರಿಗೆ ವಿಮೆ ಬೇಕು ಏಕೆಂದರೆ ಅವರಿಗೂ ಕೂಡ ಸುರಕ್ಷೆ ಮತ್ತು ರಕ್ಷಣೆಯಿಲ್ಲ ಎಂದು ಪ್ರಸಾದ್ ಹೇಳಿದ್ದಾರೆ. ರಾಜ್ಯದ ಬಡ ಬ್ರಾಹ್ಮಣರಿಗೆ ಬಿಜೆಪಿ ವೈದ್ಯಕೀಯ ವಿಮೆ ನೀಡಲಿದೆ ಎಂದು ಬಿಜೆಪಿ ನಾಯಕ ಉಮೇಶ್ ದ್ವಿವೇದಿ ಸೋಮವಾರ ಹೇಳಿಕೆ ನೀಡಿದ್ದರು. ವಿವಿಧ ರಾಜಕೀಯ ಪಕ್ಷಗಳು ಈಗ ಬ್ರಾಹ್ಮಣರ ವಿಷಯವನ್ನು ತರುತ್ತಿರುವುದು ಬಹಳ ಒಳ್ಳೆಯದು.
ನಾನು ಅವರ ಧೈರ್ಯವನ್ನು ಸ್ವಾಗತಿಸುತ್ತೇನೆ. ಆದರೆ ಪಕ್ಷದ ವಿವಿಧ ನಾಯಕರು ಹೇಳಿಕೆಗಳನ್ನು ನೀಡುವುದು ಮಾತ್ರವಲ್ಲದೆ ಪರಿಹಾರಗಳನ್ನು ತರಬೇಕು ಎಂದು ಅವರು ಹೇಳಿದರು. ಇದಕ್ಕೂ ಮೊದಲು ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ, ವಿಮೆ ಮಾಡುವ ಮೊದಲು ಬ್ರಾಹ್ಮಣರಿಗೆ ಸರ್ಕಾರದಿಂದ ಗೌರವ ಮತ್ತು ರಕ್ಷಣೆ ಬೇಕು ಎಂದು ಹೇಳಿದರು.