ಚಂದನವನದ ಹಿರಿಯ ನಟ ಸರಿಗಮ ವಿಜಿ (Sarigama Viji) ಅಂತ್ಯಕ್ರಿಯೆ ಇಂದು (ಜ.16) ಚಾಮರಾಜಪೇಟೆ ಚಿತಾಗಾರದಲ್ಲಿ ಬಲಿಜ ಸಂಪ್ರದಾಯದಂತೆ ನಡೆದಿದೆ.
ಹಿರಿಯ ಪುತ್ರ ರೋಹಿತ್ (Rohith) ತಂದೆ ಸರಿಗಮ ವಿಜಿ ಚಿತೆಗೆ ಅಗ್ನಿ ಸ್ಪರ್ಶ ಮಾಡಿದ್ದಾರೆ. ಇದಕ್ಕೂ ಮುನ್ನ ರವೀಂದ್ರ ಕಲಾಕ್ಷೇತ್ರದಲ್ಲಿ ನಟನ ಅಂತಿಮ ನಮನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ವಿಜಯೇಂದ್ರ, ಚಲವಾದಿ ನಾರಾಯಣಸ್ವಾಮಿ, ನಟ ಧ್ರುವ ಸರ್ಜಾ, ಹಿರಿಯ ನಟ ಸುಂದರ್ ರಾಜ್, ರಮೇಶ್ ಭಟ್, ಶ್ರೀನಿವಾಸ್ ಮೂರ್ತಿ, ನಟಿ ರೂಪಿಕಾ ಸೇರಿದಂತೆ ಹಲವರು ಅಂತಿಮ ನಮನ ಸಲ್ಲಿಸಿದ್ದರು.
ಕೆಲವು ದಿನಗಳಿಂದ ಸರಿಗಮ ವಿಜಿ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಯಶವಂತಪುರದ ಮಣಿಪಾಲ್ ಆಸ್ಪತ್ರೆಯಲ್ಲಿ ಕಳೆದ 1 ವಾರದಿಂದ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಜ. 15ರಂದು ಸಾವನ್ನಪ್ಪಿದ್ದರು.
1980ರಲ್ಲಿ ಗೀತಪ್ರಿಯಾ ನಿರ್ದೇಶನದ ‘ಬೆಳವಳದ ಮಡಿಲಲ್ಲಿ’ ಚಿತ್ರಕ್ಕೆ ಸಣ್ಣ ಪಾತ್ರದಲ್ಲಿ ನಟಿಸುವುದರ ಮೂಲಕ ಸರಿಗಮ ವಿಜಿ ನಟನಾಗಿ ಚಿತ್ರರಂಗ ಪ್ರವೇಶಿಸಿದ್ದರು. ಆನಂತರ 269 ಚಿತ್ರಗಳಲ್ಲಿ ನಟನೆ, 80 ಚಿತ್ರಗಳಿಗೆ ಸಹಾಯಕ ನಿರ್ದೇಶನ ಮಾಡಿದ್ದಾರೆ..