ಸಿಎಂ ಬದಲಾವಣೆಗೆ 2023ರವರೆಗೂ ಕಾಯಬೇಕು : ಸತೀಶ್ ಜಾರಕಿಹೊಳಿ
ಬೆಳಗಾವಿ : ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಗೆ 2023ರವರೆಗೂ ಕಾಯಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಿಕಿಹೊಳಿ ಹೇಳಿದ್ದಾರೆ.
ಸದ್ಯ ರಾಜ್ಯದಲ್ಲಿ ಸಿಎಂ ಬದಲಾವಣೆ ಬಗ್ಗೆ ಬಾರಿ ಚರ್ಚೆಗಳು ನಡೆಯುತ್ತಿದ್ದು, ಈ ಬಗ್ಗೆ ಬೆಳಗಾವಿಯಲ್ಲಿ ಮಾತನಾಡಿದ ಸತೀಶ್ ಜಾರಕಿಹೊಳಿ, ನಾಯಕತ್ವ ಬದಲಾವಣೆ ಕುರಿತು ಚರ್ಚೆ ವಿಚಾರಕ್ಕೆ 2023ರ ಮೇನಲ್ಲಿ ಉತ್ತರ ಸಿಗುತ್ತೆ, ಅಲ್ಲಿಯವರೆಗೆ ವೇಟ್ ಮಾಡಿ. ರಾಜ್ಯದಲ್ಲಿ ಸಿಎಂ ಬದಲಾವಣೆಗೆ 2023ರವರೆಗೂ ಕಾಯಬೇಕು ಎಂದರು.
ಇನ್ನು ಸಿಡಿ ಕೇಸ್ ಬಗ್ಗೆ ನಮ್ಮ ಪಕ್ಷದ ವರಿಷ್ಠರು ಸರ್ಕಾರಕ್ಕೆ ಏನು ಹೇಳಬೇಕೋ ಅದನ್ನು ಹೇಳಿದ್ದಾರೆ. ಆದರೆ, ಅಂತಿಮವಾಗಿ ನ್ಯಾಯಾಲಯ, ತನಿಖಾ ತಂಡ ನಿರ್ಧರಿಸಬೇಕು. ವರದಿ ಬಂದ ಬಳಿಕ ಪಕ್ಷದ ವತಿಯಿಂದ ಏನು ಹೇಳಬೇಕೋ ಅದನ್ನ ಹೇಳೇ ಹೇಳ್ತೀವಿ ಎಂದರು.
ಲಾಕ್ಡೌನ್ ವೇಳೆ ಶಾಸಕ ಅಭಯ್ ಪಾಟೀಲ್ ನೇತೃತ್ವದಲ್ಲಿ ಹೋಮ-ಹವನ ಮಾಡಿದ ಬಗ್ಗೆ ಪ್ರತಿಕ್ರಿಯೆ ನೀಡಿ, ಬಿಜೆಪಿಯಲ್ಲಿ ಇದೇನು ಹೊಸದೇನಲ್ಲ. ಹೋಮ -ಹವನದಿಂದ ಕೋವಿಡ್ ಕಡಿಮೆ ಆಗುತ್ತದೆ ಅಂತಾ ವೈಜ್ಞಾನಿಕವಾಗಿ ಸಾಬೀತುಪಡಿಸಿದ್ರೆ ನಾವು ಸ್ವಾಗತ ಮಾಡುತ್ತೇವೆ. ಇದರಿಂದ ಕೊರೊನಾ ಕಡಿಮೆಯಾದರೆ ಕಾಂಗ್ರೆಸ್ ವತಿಯಿಂದ ಅಭಯ್ ಪಾಟೀಲ್ ಗೆ ಸನ್ಮಾನ ಮಾಡುತ್ತೇವೆ. ಪೂಜೆಯಿಂದ ಕೊರೊನಾ ಹೋಗೋದಾದ್ರೆ ಎಂಬಿಬಿಎಸ್ ವೈದ್ಯರು ಯಾಕೆ ಬೇಕು ಎಂದು ಪ್ರಶ್ನಿಸಿದರು.