ತಿರುವನಂತಪುರಂ: ಕೇರಳದ (Kerala) ವಯನಾಡು ಭೂಕುಸಿತ (Wayanad Landslide) ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 350ರ ಗಡಿ ದಾಟಿದೆ. ಇನ್ನೂ ರಕ್ಷಣಾ ಪಡೆಗಳು ಶೋಧ ಕಾರ್ಯ ನಡೆಸಿವೆ. ಈ ಸಂದರ್ಭದಲ್ಲಿ ಹಲವಾರು ಮನ ಕಲಕುವ ಘಟನೆಗಳು ನಡಿದಿದ್ದು, ಜನ ಮರುಕ ಪಡುವಂತಾಗಿದೆ.
ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 387ಕ್ಕೆ ಏರಿಕೆ ಕಂಡಿದೆ. ಮುಂಡಕ್ಕೈ, ಚೂರಲ್ಮಲದಲ್ಲಿ 206ಕ್ಕೂ ಹೆಚ್ಚು ಜನರು ಇನ್ನೂ ನಾಪತ್ತೆಯಾಗಿದ್ದಾರೆ. ಚಲಿಯಾರ್ ನದಿ ರಭಸವಾಗಿ ಹರಿದ ಪರಿಣಾಮ ಗ್ರಾಮದಲ್ಲಿದ್ದ ಕಾರು, ಗೃಹೋಪಯೋಗಿ ವಸ್ತುಗಳು ನದಿಯಲ್ಲಿ ಕೊಚ್ಚಿಕೊಂಡು ಹೋಗಿವೆ.
ಈ ದುರಂತದಲ್ಲಿ ಒಟ್ಟು 1,208 ಮನೆಗಳು ಹಾನಿಯಾಗಿವೆ. ಮುಂಡಕ್ಕೈನಲ್ಲಿ 540 ಮನೆಗಳು, ಚೂರಲ್ಮಲದಲ್ಲಿ 600, ಅಟ್ಟಮಾಲದಲ್ಲಿ 68 ಮನೆಗಳು ನೆಲಸಮವಾಗಿವೆ. 3,700 ಎಕರೆ ಕೃಷಿಭೂಮಿ ನಾಶವಾಗಿದ್ದು, 21,111 ಕೋಟಿ ಮೌಲ್ಯದ ಬೆಳೆ ನೆಲಕಚ್ಚಿವೆ. ಹಲವಾರು ದಾನಿಗಳು ದೇಣಿಗೆ ನೀಡುತ್ತಿದ್ದಾರೆ. ಈ ಮೂಲಕ ನೊಂದವರ ಕಣ್ಣೀರು ಒರಿಸುವ ಕಾರ್ಯ ಮಾಡುತ್ತಿದ್ದಾರೆ. ಈ ಮಧ್ಯೆ ಶ್ವಾನವೊಂದು 6 ದಿನಗಳ ಬಳಿಕ ತನ್ನ ಮನೆ ಒಡತಿಯನ್ನು ಕಂಡ ಕೂಡಲೇ ಓಡಿ ಬಂದ ದೃಶ್ಯ ಮನಕಲುಕುವಂತಿತ್ತು.
ತನ್ನ ಒಡತಿಯನ್ನು ಕಂಡು ಓಡಿ ಹೋಗಿ ಬಿಗಿದಪ್ಪಿಕೊಂಡಿದೆ. ಅಲ್ಲದೇ, ವಯನಾಡಿನಲ್ಲಿ ಕಳ್ಳರ ಹಾವಳಿ ಕೂಡ ಹೆಚ್ಚಾಗಿದ್ದು, ಪಾಪಿಗಳು ನಿರಾಶ್ರಿತರ ಮನೆಗಳಿಗೆ ನುಗ್ಗಿ ಕಳ್ಳತನ ಮಾಡುತ್ತಿದ್ದಾರೆ. ಈ ಬಗ್ಗೆ ನಿರಾಶ್ರಿತರು ಆತಂಕ ವ್ಯಕ್ತಪಡಿಸಿದ್ದಾರೆ. ಇನ್ನೊಂದೆಡೆ ಗುರುತು ಸಿಗದ ಶವಗಳನ್ನು ಸಾಮೂಹಿಕವಾಗಿ ಅಂತ್ಯಕ್ರಿಯೆ ಮಾಡಲಾಗುತ್ತಿದೆ.