ನವದೆಹಲಿ : ಇದೇ ತಿಂಗಳ 5 ರಂದು ಪ್ರಧಾನಿ ನರೇಂದ್ರ ಮೋದಿ ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ಮಾಡಲಿದ್ದಾರೆ. ಇದಕ್ಕೆ ಈಗಾಗಲೇ ಎಲ್ಲ ರೀತಿಯ ಸಿದ್ಧತೆಗಳು ನಡೆದಿವೆ. ಈ ಮಧ್ಯೆ ಬಿಜೆಪಿ ರಾಜ್ಯಸಭಾ ಸಂಸದ ಸುಬ್ರಹ್ಮಣಿಯನ್ ಸ್ವಾಮಿ ಅವರು ಮೋದಿ ಬಗ್ಗೆ ನೀಡಿದ ಹೇಳಿಕೆ ಒಂದು ಭಾರಿ ಸದ್ದು ಮಾಡುತ್ತಿದೆ.
ಕೇಂದ್ರ ಹಾಗೂ ಪ್ರಧಾನ ಮಂತ್ರಿಗಳ ವಿರುದ್ಧ ನೇರ ಅಥವಾ ಪರೋಕ್ಷವಾಗಿ ಹೇಳಿಕೆಗಳನ್ನ ನೀಡುವ ಸುಬ್ರಹ್ಮಣಿಯನ್ ಸ್ವಾಮಿ ಈಗ, ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ಕೊಡುಗೆ ಏನೂ ಇಲ್ಲ ಎಂದಿದ್ದಾರೆ.
ಟಿ.ವಿ ಚಾನಲ್ ನಲ್ಲಿ ಮಾತನಾಡುತ್ತ, ರಾಮ ಮಂದಿರ ನಿರ್ಮಾಣದ ಬಗ್ಗೆ ನಾವೆಲ್ಲ ಅನೇಕ ಚರ್ಚೆ, ವಾದಗಳನ್ನು ಮಾಡಿದ್ದೇವೆ. ಆದರೆ ಸುಪ್ರೀಂಕೋರ್ಟ್ ತೀರ್ಪಿನಲ್ಲಿ ಉಲ್ಲೇಖವಾಗಿರುವ, ರಾಮಮಂದಿರ ನಿರ್ಮಾಣಕ್ಕೆ ಅನುಕೂಲಕರವಾಗಿರುವ ಯಾವುದೇ ಅಂಶವನ್ನೂ, ಕೆಲಸವನ್ನೂ ಕೇಂದ್ರ ಸರ್ಕಾರ ಮಾಡಲಿಲ್ಲ. ಮಾಜಿ ಪ್ರಧಾನಿಗಳು ರಾಜೀವ್ ಗಾಂಧಿ, ಪಿ.ವಿ.ನರಸಿಂಹ ರಾವ್ ಹಾಗೂ ವಿಶ್ವ ಹಿಂದು ಪರಿಷತ್ ನ ಅಶೋಕ್ ಸಿಂಘಾಲ್ ಅವರು ರಾಮಮಂದಿರ ನಿರ್ಮಾಣದ ಕಾರ್ಯಸೂಚಿಯನ್ನು ಮುಂದಿಟ್ಟ ಪ್ರಮುಖರು ಎಂದು ಸುಬ್ರಹ್ಮಣಿಯನ್ ಸ್ವಾಮಿ ಹೇಳಿದ್ದಾರೆ.