ಬೆಂಗಳೂರು : ಡಾ. ಸರೋಜಿನಿ ಮಹಿಷಿ ವರದಿಯನ್ನು ಜಾರಿಗೊಳಿಸುವಂತೆ ಆಗ್ರಹಿಸಿ ಇಂದು ವಿವಿಧ ಕನ್ನಡಪರ ಸಂಘಟನೆಗಳು ಕರ್ನಾಟಕ ಬಂದ್ ಗೆ ಕರೆ ನೀಡಿವೆ. ಸುಮಾರು 4೦೦ಕ್ಕೂ ಸಂಘಟನೆಗಳು ಬಂದ್ ಗೆ ಬೆಂಬಲ ವ್ಯಕ್ತಪಡಿಸಿದ್ದು, ರಾಜ್ಯಾದ್ಯಂತ ಬಂದ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಜಯ ಕರ್ನಾಟಕ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಲಾರಿ ಮಾಲೀಕರ ಸಂಘ, ಸಿಐಟಿಯು ಮೊದಲಾದ ಸಂಘಟನೆಗಳು ಬಂದ್ ಗೆ ಬೆಂಬಲಿಸಿದ್ದು, ಓಲಾ, ಊಬರ್, ಆಟೋ, ಟ್ಯಾಕ್ಸಿಗಳು, ರಸ್ತೆಗಿಳಿಯದೇ ಪ್ರತಿಭಟಿಸುತ್ತಿವೆ. ಇನ್ನು ಬೀದಿ ಬದಿ ಹೋಟೆಲ್, ಬಟ್ಟೆಯಂಗಡಿ, ಪಾನಿಪೂರಿ ಅಂಗಡಿ, ಬೀದಿ ಬದಿ ತರಕಾರಿ,ಹೂವು, ಹಣ್ಣಿನಂಗಡಿ ಬಂದ್ ಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ. ರಾಜ್ಯದ 4,8೦,೦೦೦ ಹಾಗೂ ಬೆಂಗಳೂರಿನಲ್ಲಿ 8೦ ಸಾವಿರ ಬೀದಿ ವ್ಯಾಪಾರಿಗಳು ವ್ಯಾಪಾರ ಸ್ಥಗಿತಗೊಳಿಸಿದ್ದಾರೆ.
ಸರೋಜಿನಿ ಮಹಿಷಿ ಸಮಿತಿಯ ವರದಿ ವಿಚಾರದಲ್ಲಿ ರಾಜ್ಯ ಸರ್ಕಾರ ನಿರ್ಲಕ್ಷ್ಯ ತೋರುತ್ತಿದೆ. ತಕ್ಷಣವೇ ವರದಿ ಅನುಷ್ಠಾನ ಮಾಡಬೇಕೆಂದು ಕನ್ನಡಪರ ಸಂಘಟನೆಗಳು ಆಗ್ರಹಿಸಿವೆ.
ಸರೋಜಿನಿ ಮಹಿಷಿ ವರದಿಯಲ್ಲಿ ಏನಿದೆ?
ಸರೋಜಿನಿ ಮಹಿಷಿ ಸಮಿತಿಯು ಕರ್ನಾಟಕದಲ್ಲಿನ ಎಲ್ಲಾ ಖಾಸಗಿ, ಸರ್ಕಾರಿ ವಲಯದ ಎಲ್ಲಾ ಹಂತಗಳ ಕೆಲಸಗಳಲ್ಲಿ ಕನ್ನಡಿಗರಿಗೆ ಆದ್ಯತೆ ಕೊಡಿಸುವತ್ತ ಹಲವಾರು ಶಿಫಾರಸ್ಸುಗಳನ್ನು ಒಳಗೊಂಡ ವರದಿಯನ್ನು ಸರ್ಕಾರಕ್ಕೆ 1984ರಲ್ಲೇ ಸಲ್ಲಿಸಿದೆ. ಆದ್ರೆ ಈ ವರದಿ ಹೊರಬಂದು 33 ವರ್ಷಗಳೇ ಕಳೆದರೂ ಈ ವರದಿ ಜಾರಿಯಾಗಿಲ್ಲ.
ಸರೋಜಿನಿ ಮಹಿಷಿ ಪರಿಷ್ಕೃತ ವರದಿಯಲ್ಲಿ ಒಟ್ಟು ಮೂರು ಭಾಗಗಳಿದ್ದು, ಮೊದಲ ಭಾಗದಲ್ಲಿ ರಾಜ್ಯ ಸರ್ಕಾರ ಅನುಷ್ಠಾನಗೊಳಿಸಬೇಕಾದ ಅಂಶಗಳ 14 ಶಿಫಾರಸುಗಳಿವೆ. 2ನೇ ಭಾಗದಲ್ಲಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಬೇಕಾಗಿರುವ ಒಂಬತ್ತು ಸಲಹೆಗಳ ಒಳಗೊಂಡ ಶಿಫಾರಸುಗಳಿವೆ. 3ನೇ ಭಾಗದಲ್ಲಿ ಡಾ. ಸರೋಜಿನಿ ಮಹಿಷಿ ವರದಿಯ ಸಂಪೂರ್ಣ ಶಿಫಾರಸುಗಳ ಮಾಹಿತಿ ಇದೆ.
ಸರೋಜಿನಿ ಮಹಿಷಿ ವರದಿಯ 58 ಶಿಫಾರಸುಗಳು:
ಕರ್ನಾಟಕದ ಉದ್ಯೋಗದಲ್ಲಿ ಕನ್ನಡಿಗರಿಗೆ ಆದ್ಯತೆ.
ಎಲ್ಲಾ ಸಾರ್ವಜನಿಕ ವಲಯ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಶೇ.1೦೦ರಷ್ಟು ಮೀಸಲಾತಿ.
ಕೇಂದ್ರ ಸರ್ಕಾರಿ ಇಲಾಖೆಗಳು ಮತ್ತು ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾರ್ವಜನಿಕ ವಲಯ ಘಟಕಗಳಲ್ಲಿ ಗ್ರೂಪ್ ಸಿ ಮತ್ತು ಗ್ರೂಪ್ ಡಿ ಹುದ್ದೆಯನ್ನು ಕೇವಲ ಕನ್ನಡಿಗರಿಗೆ ಮಾತ್ರ ನೀಡಬೇಕು.
ಕರ್ನಾಟಕದಲ್ಲಿ ಕೇಂದ್ರ ಸರ್ಕಾರಿ ಸಂಸ್ಥೆಗಳಲ್ಲಿ ಮತ್ತು ಸಾರ್ವಜನಿಕ ವಲಯ ಘಟಕಗಳಲ್ಲಿ ಗ್ರೂಪ್ ಬಿ ಮತ್ತು ಗ್ರೂಪ್ ಎ ಹುದ್ದೆಗಳಲ್ಲಿ ಶೇ 8೦ರಷ್ಟು ಮತ್ತು ಶೇ ೬೫ರಷ್ಟು ಕನ್ನಡಿಗರಿಗೆ ಮೀಸಲಾತಿ.
ರಾಜ್ಯದ ಕೈಗಾರಿಕಾ ಘಟಕಗಳಲ್ಲಿ ಖಾಸಗಿ ಅಧಿಕಾರ ಹುದ್ದೆಗಳನ್ನು ಕನ್ನಡಿಗರಿಗೆ ಕೊಡಬೇಕು.
ಕೈಗಾರಿಕೆಗಳಲ್ಲಿ ಸ್ಥಳೀಯ ಜನರಿಗೆ ಪ್ರಾಧಾನ್ಯತೆ ಕೊಡಬೇಕು.