ಟೀಮ್ ಇಂಡಿಯಾ ಟಿ-20 ತಂಡದ ಮುಂದಿನ ಸಾರಥಿ ಯಾರು ?
ಟೀಮ್ ಇಂಡಿಯಾದ ಟಿ-20 ತಂಡದ ನಾಯಕನ ಪಟ್ಟದಿಂದ ವಿರಾಟ್ ಕೊಹ್ಲಿ ಕೆಳಗಿಳಿದಿದ್ದಾರೆ. ನಾಯಕತ್ವದ ಒತ್ತಡ ವಿರಾಟ್ ಗೆ ಜಾಸ್ತಿಯಾಯ್ತೋ ಅಥವಾ ಬಿಸಿಸಿಐಗೆ ಬೇಡವಾಯ್ತೋ ಗೊತ್ತಿಲ್ಲ..!
ಆದ್ರೆ ವಿರಾಟ್ ಗೌರವಯುತವಾಗಿಯೇ ನಾಯಕತ್ವದಿಂದ ಹೊರಬಂದಿದ್ದಾರೆ. ಐಸಿಸಿ ಟ್ರೋಫಿ ಗೆಲ್ಲದಿದ್ರೂ ಟೀಮ್ ಇಂಡಿಯಾದ ಯಶಸ್ವಿ ನಾಯಕ ಎಂಬ ಗೌರವ ಅಂತೂ ವಿರಾಟ್ ಗೆ ಸಲ್ಲುತ್ತದೆ.
ಇದೀಗ ಟೀಮ್ ಇಂಡಿಯಾದ ಮುಂದಿನ ಟಿ-20 ನಾಯಕ ಯಾರು ಅನ್ನೋ ಪ್ರಶ್ನೆಗೆ ಉತ್ತರ ಸಿಗಬೇಕಿದೆ.
ಸದ್ಯದ ಟೀಮ್ ಇಂಡಿಯಾದಲ್ಲಿ ರೋಹಿತ್ ಶರ್ಮಾ ಅವರ ಹೆಸರು ಮುಂಚೂಣಿಯಲ್ಲಿ ಕೇಳಿ ಬರುತ್ತಿದೆ.
ಹಿರಿತನ ಆಧಾರದ ಒಂದು ಕಡೆಯಾದ್ರೆ, ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಐದು ಬಾರಿ ಚಾಂಪಿಯನ್ ಪಟ್ಟಕ್ಕೇರಿಸಿದ್ದ ಖ್ಯಾತಿ ಕೂಡ ರೋಹಿತ್ ಶರ್ಮಾ ಅವರಿಗಿದೆ.
ಅಷ್ಟೇ ಅಲ್ಲ, ಮುಂದಿನ ವರ್ಷ ಮತ್ತೆ ಟಿ-20 ವಿಶ್ವಕಪ್ ನಡೆಯುವುದರಿಂದ ರೋಹಿತ್ ಶರ್ಮಾ ಅವರ ಅನುಭವ ತಂಡಕ್ಕೆ ಬೇಕಾಗಿದೆ. ಹೀಗಾಗಿ ರೋಹಿತ್ ಶರ್ಮಾ ಅವರಿಗೆ ನಾಯಕತ್ವ ಸಿಗುವ ಸಾಧ್ಯತೆಗಳಿವೆ.
ಇನ್ನೊಂದೆಡೆ ಕ್ಯಾಪ್ಟನ್ ರೇಸ್ ನಲ್ಲಿ ಕೆ.ಎಲ್. ರಾಹುಲ್ ಮತ್ತು ರಿಷಬ್ ಪಂತ್ ಹೆಸರು ಕೂಡ ಚಾಲ್ತಿಯಲ್ಲಿದೆ. ಕೆ.ಎಲ್. ರಾಹುಲ್ ಇನ್ನೂ ಕನಿಷ್ಠ ಅಂದ್ರೂ ಐದು ವರ್ಷ ಆಡುವ ಸಾಧ್ಯತೆಗಳಿವೆ.
ಆದ್ರೆ ಐಪಿಎಲ್ ನಲ್ಲಿ ರಾಹುಲ್ ಪಂಜಾಬ್ ಕಿಂಗ್ಸ್ ತಂಡದ ಸಾರಥಿಯಾಗಿದ್ರೂ ಯಶ ಸಾಧಿಸಿಲ್ಲ. ನಾಯಕತ್ವದ ಒತ್ತಡ ರಾಹುಲ್ ಅವರ ಬ್ಯಾಟಿಂಗ್ ಮೇಲೆ ಪರಿಣಾಮ ಬೀರಿಲ್ಲ.
ಆದ್ರೂ ತಂಡವನ್ನಾಗಿ ಮುನ್ನಡೆಸಿಕೊಂಡು ಹೋಗುವುದರಲ್ಲಿ ರಾಹುಲ್ ಎಡವಿದ್ದಾರೆ.
ಇನ್ನೊಂದೆಡೆ ರಿಷಬ್ ಪಂತ್. ಯುವ ಆಟಗಾರ. ಬಿಸಿಸಿಐ ದೂರದೃಷ್ಟಿಯ ಚಿಂತನೆ ನಡೆಸಿದ್ರೆ ರಿಷಬ್ ಪಂತ್ ಗೆ ಹೆಚ್ಚಿನ ಅವಕಾಶಗಳಿವೆ.
ಅಲ್ಲದೆ ಐಪಿಎಲ್ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸಿರುವ ರೀತಿ ಕೂಡ ಮೆಚ್ಚುವಂತಹುದ್ದೇ. ಆದ್ರೆ ಬ್ಯಾಟಿಂಗ್ ಮೇಲೆ ಪರಿಣಾಮ ಬೀರುತ್ತಾ ಅನ್ನೋ ಪ್ರಶ್ನೆ ಕೂಡ ಎದುರಾಗುತ್ತಿದೆ.
ಒಟ್ಟಿನಲ್ಲಿ ಬಿಸಿಸಿಐ ಅನುಭವಕ್ಕೆ ಮಣೆ ಹಾಕುತ್ತಾ ? ಅಥವಾ ಭವಿಷ್ಯದ ದೃಷ್ಟಿಯನ್ನು ಇಟ್ಟುಕೊಂಡು ಮುಂದಿನ ನಾಯಕನನ್ನು ಆಯ್ಕೆ ಮಾಡುತ್ತಾ ಅನ್ನೋದನ್ನು ಕಾದು ನೋಡಬೇಕಿದೆ.