ಶಿವಮೊಗ್ಗ : ನಾವು ಹೇಳುವ ಸತ್ಯ ಹತ್ತು ಜನರಿಗೆ ಮುಟ್ಟುತ್ತಿದ್ದರೇ, ಸೋಶಿಯಲ್ ಮೀಡಿಯಾದ ಸುಳ್ಳು ಸಾವಿರ ಜನರಿಗೆ ತಲುಪುತ್ತಿದೆ. ಆದುದರಿಂದ ತುಂಬಾ ಅಪಾಯಕಾರಿಯಾದ ಪರಿಸ್ಥಿತಿಯಲ್ಲಿ ಇಂದು ನಾವಿದ್ದೇವೆ ಎಂದು ಜೆಡಿಎಸ್ ಮುಖಂಡ ವೈಎಸ್ ವಿ ದತ್ತಾ ಬಿಜೆಪಿ ವಿರುದ್ಧ ಪರೋಕ್ಷವಾಗಿ ದಾಳಿ ನಡೆಸಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಸೋಶಿಯಲ್ ಮೀಡಿಯಾವನ್ನು ಒಂದು ರಾಜಕೀಯ ಪಕ್ಷ ವ್ಯವಸ್ಥಿತವಾಗಿ ಬಳಸಿಕೊಳ್ಳುತ್ತಿದೆ. ಎಂದು ಬಿಜೆಪಿ ಪಕ್ಷದ ವಿರುದ್ಧ ಜೆಡಿಎಸ್ ಮುಖಂಡ ವೈಎಸ್ ವಿ ದತ್ತಾ ಪರೋಕ್ಷವಾಗಿ ದಾಳಿ ನಡೆಸಿದ್ದಾರೆ. ಇದರಿಂದ ಸುಳ್ಳು ಸುದ್ದಿಗಳು ಬಹು ಬೇಗನೆ ಎಲ್ಲೆಡೆ ಪ್ರಚಾರಗೊಳ್ಳುತ್ತಿದೆ, ಇಂದು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳ ವಿರುದ್ಧ ಧ್ವನಿ ಎತ್ತುವವರ ಸಂಖ್ಯೆಯೂ ಕಡಿಮೆಯಾಗಿದೆ. ನಮ್ಮ ಪಕ್ಷ ಸಾಮಾಜಿಕ ಜಾಲತಾಣಗಳಿಂದ ದೂರವಿರುವ ಪರಿಣಾಮ ನಮ್ಮ ವಿರುದ್ಧ ಸುಳ್ಳು ಪ್ರಚಾರದಿಂದಾಗಿ ನಾವು ದೇಶದ್ರೋಹಿಗಳದರೇ, ಅವರುಗಳು ದೇಶಭಕ್ತರಾಗುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
ಇಂತಹ ಷಡ್ಯಂತ್ರದ ವಿರುದ್ಧ ಗಟ್ಟಿಯಾಗಿ ಧ್ವನಿಯೆತ್ತುವ ರಾಜಕೀಯ ಪಕ್ಷವಾಗಿಯೂ ನಾವು ವಿಫಲವಾಗಿದ್ದೇವೆ ಎಂದು ತಮ್ಮ ಅಸಹಾಯಕತೆಯನ್ನು ಹೇಳಿಕೊಂಡ ದತ್ತಾ, ಸೋಶಿಯಲ್ ಮೀಡಿಯಾ ಎಂಬ ಸಮೂಹ ಸನ್ನಿ ಜೊತೆ ಏಗಲು ಸಾಧ್ಯವಾಗುತ್ತಿಲ್ಲ. ನಾವು ಹೇಳುವ ಸತ್ಯ ಹತ್ತು ಜನರಿಗೆ ಮುಟ್ಟುತ್ತಿದ್ದರೇ, ಸೋಶಿಯಲ್ ಮೀಡಿಯಾದ ಸುಳ್ಳು ಸಾವಿರ ಜನರಿಗೆ ತಲುಪುತ್ತಿದೆ ಆದುದರಿಂದ ತುಂಬಾ ಅಪಾಯಕಾರಿಯಾದ ಪರಿಸ್ಥಿತಿಯಲ್ಲಿ ಇಂದು ನಾವಿದ್ದೇವೆ ಎಂದು ಹೇಳಿದ್ದಾರೆ.









