ಪ್ರತಾಪ್ಗಢ : ಅಯೋಧ್ಯೆಯ ರಾಮಮಂದಿರದ ದೇಣಿಗೆ ಕಳ್ಳತನ ಪ್ರಕರಣವನ್ನು ಮುಂದಿಟ್ಟುಕೊಂಡು ಹಿಂದೂ ಧರ್ಮ ಮತ್ತು ಅಯೋಧ್ಯೆಯ ಪವಿತ್ರತೆಯನ್ನು ಹೀಯಾಳಿಸುತ್ತಿರುವ ವಿರೋಧ ಪಕ್ಷಗಳಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಮ್ಮದೇ ಶೈಲಿಯಲ್ಲಿ ಖಡಕ್ ಎಚ್ಚರಿಕೆ ನೀಡಿದ್ದಾರೆ. ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ನ ದ್ವಂದ್ವ ನೀತಿಯನ್ನು ಕಟುವಾಗಿ ಟೀಕಿಸಿರುವ ಅವರು, ವಕ್ಫ್ ಭೂಮಿ ಹಗರಣಗಳ ಬಗ್ಗೆ ಇವರು ಯಾಕೆ ಮೌನವಾಗಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ಊಸರವಳ್ಳಿಯೂ ನಾಚುವಂತಹ ಬಣ್ಣ ಬದಲಾವಣೆ
ಪ್ರತಾಪ್ಗಢದಲ್ಲಿ ನಡೆದ ಬೃಹತ್ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಸಿಎಂ ಯೋಗಿ, ರಾಜಕೀಯ ಲಾಭಕ್ಕಾಗಿ ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಹೂಡುತ್ತಿರುವ ತಂತ್ರಗಳನ್ನು ತೀವ್ರವಾಗಿ ಖಂಡಿಸಿದರು. ಒಂದು ಸಣ್ಣ ಘಟನೆಯನ್ನು ಇಡೀ ದೇಶದಾದ್ಯಂತ ದೊಡ್ಡದು ಮಾಡಿ ಹಿಂದೂಗಳ ನಂಬಿಕೆಗೆ ಪ್ರಹಾರ ಮಾಡುತ್ತಿರುವ ಇವರ ವರ್ತನೆ ನೋಡಿದರೆ ಊಸರವಳ್ಳಿಯೂ ನಾಚಿಕೆಯಿಂದ ಮುಖ ಮುಚ್ಚಿಕೊಳ್ಳಬೇಕು. ಅಯೋಧ್ಯೆಗೆ ಹರಿದು ಬರುತ್ತಿರುವ ಭಕ್ತರ ಜನಸಾಗರವನ್ನು ಕಂಡು ವಿರೋಧ ಪಕ್ಷದವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದು ಲೇವಡಿ ಮಾಡಿದರು.
ವಕ್ಫ್ ಲೂಟಿಯ ಬಗ್ಗೆ ಮಾತಾಡದಿದ್ದಿದ್ದೇಕೆ?
ರಾಮಮಂದಿರದ ವಿಚಾರದಲ್ಲಿ ಬೊಬ್ಬೆ ಹೊಡೆಯುತ್ತಿರುವ ನಾಯಕರು, ವಕ್ಫ್ ಹೆಸರಿನಲ್ಲಿ ನಡೆದಿರುವ ಸಾವಿರಾರು ಕೋಟಿ ರೂಪಾಯಿಗಳ ಭೂ ಹಗರಣದ ಬಗ್ಗೆ ಒಂದೇ ಒಂದು ಮಾತನ್ನೂ ಆಡುತ್ತಿಲ್ಲವೇಕೆ? ಬಡವರು ಮತ್ತು ದೀನದಲಿತರಿಗೆ ಸಿಗಬೇಕಾಗಿದ್ದ ಸಾವಿರಾರು ಹೆಕ್ಟೇರ್ ಭೂಮಿಯನ್ನು ವಕ್ಫ್ ಹೆಸರಿನಲ್ಲಿ ಅಕ್ರಮವಾಗಿ ಮಾರಾಟ ಮಾಡಿ ಪ್ರಭಾವಿಗಳು ಲಾಭ ಮಾಡಿಕೊಂಡಿದ್ದಾರೆ. ಆಗ ಈ ನಾಯಕರ ನಂಬಿಕೆಗಳು ಮತ್ತು ಧ್ವನಿ ಎಲ್ಲಿ ಹೋಗಿತ್ತು ಎಂದು ಯೋಗಿ ಪ್ರಶ್ನೆಗಳ ಸುರಿಮಳೆಗೈದರು.
ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡಿದ್ದು ನಮ್ಮ ಸರ್ಕಾರ
ದೇಣಿಗೆ ಕಳ್ಳತನದ ವಿಷಯ ಗಮನಕ್ಕೆ ಬಂದ ತಕ್ಷಣವೇ ನಮ್ಮ ಸರ್ಕಾರ ಕಠಿಣ ಕ್ರಮ ಜರುಗಿಸಿದೆ. ರಾಮಜನ್ಮಭೂಮಿ ಟ್ರಸ್ಟ್ ಮನವಿಯ ಮೇರೆಗೆ ಎಸ್ಐಟಿ ತನಿಖೆಗೆ ಆದೇಶಿಸಿ, ಸತ್ಯವನ್ನು ಹೊರತಂದಿದ್ದೇವೆ. ಪುರಾವೆಗಳ ಆಧಾರದ ಮೇಲೆ ಎಫ್ಐಆರ್ ದಾಖಲಿಸಿ ಆರೋಪಿಗಳನ್ನು ಜೈಲಿಗಟ್ಟಿದ್ದೇವೆ. ನಾವು ಪಾರದರ್ಶಕವಾಗಿ ಕೆಲಸ ಮಾಡುತ್ತಿದ್ದೇವೆ ಹೊರತು ಯಾರನ್ನೂ ರಕ್ಷಿಸುತ್ತಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಹಳೆಯ ಇತಿಹಾಸ ನೆನಪಿಸಿದ ಯೋಗಿ
ವಿರೋಧ ಪಕ್ಷಗಳಿಗೆ ರಾಮಮಂದಿರದ ಬಗ್ಗೆ ಮಾತನಾಡುವ ಯಾವುದೇ ನೈತಿಕ ಹಕ್ಕಿಲ್ಲ. ಭಗವಾನ್ ಶ್ರೀರಾಮ ಮತ್ತು ಕೃಷ್ಣ ಈ ಜಗತ್ತಿನಲ್ಲೇ ಇರಲಿಲ್ಲ, ಅವರೆಲ್ಲ ಕಾಲ್ಪನಿಕ ಎಂದು ಹಿಂದೆ ಕೋರ್ಟ್ಗೆ ಅಫಿಡವಿಟ್ ಸಲ್ಲಿಸಿದ್ದು ಇದೇ ಕಾಂಗ್ರೆಸ್ ಅಲ್ಲವೇ? ಅಯೋಧ್ಯೆಯಲ್ಲಿ ರಾಮಭಕ್ತರ ಮೇಲೆ ಗುಂಡು ಹಾರಿಸಿದ್ದು ಇದೇ ಸಮಾಜವಾದಿ ಪಕ್ಷವಲ್ಲವೇ? ಎಂದು ಕಿಡಿಕಾರಿದ ಯೋಗಿ, ದೇವಸ್ಥಾನಗಳ ಅಭಿವೃದ್ಧಿಗೆ ಬಳಸಬೇಕಾದ ಹಣವನ್ನು ಸ್ಮಶಾನಗಳ ಗೋಡೆ ಕಟ್ಟಲು ಬಳಸಿದ ಇತಿಹಾಸ ಇವರದ್ದು ಎಂದು ಗುಡುಗಿದರು.
ಜಾತಿಯ ಹೆಸರಿನಲ್ಲಿ ಸಮಾಜವನ್ನು ವಿಭಜಿಸುವುದು ಮತ್ತು ಹಿಂದೂಗಳ ಧಾರ್ಮಿಕ ನಂಬಿಕೆಗಳ ಮೇಲೆ ದಾಳಿ ಮಾಡುವುದು ಈ ಪಕ್ಷಗಳ ಏಕೈಕ ಅಜೆಂಡಾವಾಗಿದೆ. ಅಕ್ರಮ ಕಸಾಯಿಖಾನೆಗಳನ್ನು ಬೆಂಬಲಿಸುತ್ತಿದ್ದವರಿಗೆ ಇಂದು ರಾಮಭಕ್ತರ ನಂಬಿಕೆಯ ಬಗ್ಗೆ ಮಾತನಾಡುವ ಯೋಗ್ಯತೆ ಇಲ್ಲ ಎಂದು ಯೋಗಿ ಆದಿತ್ಯನಾಥ್ ತಿರುಗೇಟು ನೀಡಿದರು.








