ಕೇಂದ್ರ ಸರ್ಕಾರದ ಆಡಳಿತ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ವೈಯಕ್ತಿಕ ಜೀವನದ ಕುರಿತು ಕೆಪಿಸಿಸಿ ನಾಯಕ ಬಿ ಕೆ ಹರಿಪ್ರಸಾದ್ ಅವರು ಅತ್ಯಂತ ಕಟು ಶಬ್ದಗಳಿಂದ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರಿನ ಕೆಪಿಸಿಸಿ ಕಚೇರಿಯ ಭಾರತ್ ಜೋಡೋ ಭವನದಲ್ಲಿ ನಡೆದ ಕಟ್ಟಡ ನಿರ್ಮಾಣ ಶ್ರಮಿಕರ ಸಂಕಲ್ಪ ಸಭೆಯಲ್ಲಿ ಮಾತನಾಡಿದ ಅವರು ಮೋದಿ ಅವರ ವಿರುದ್ಧ ಕೆಂಡ ಕಾರಿದ್ದಾರೆ.
ಮದುವೆಯೇ ಆಗದವನಿಗೆ ತ್ರಿಪಲ್ ತಲಾಕ್ ಯಾಕೆ ಎಂದು ಪ್ರಶ್ನಿಸಿದ ಹರಿಪ್ರಸಾದ್ ಪ್ರಧಾನಿ ಮೋದಿ ವಿರುದ್ಧ ಏಕವಚನದಲ್ಲಿ ಪ್ರಹಾರ ನಡೆಸಿದರು. ಕೇಂದ್ರದಲ್ಲಿ ನರೇಂದ್ರ ಮೋದಿ ಎಂಬ ಮಹಾ ಮಾನವ ಪ್ರಧಾನಿಯಾಗಿ ಕುಳಿತಿದ್ದಾರೆ. ಇವರಿಗೆ ತ್ರಿಪಲ್ ತಲಾಕ್ ಕುರಿತು ಅಷ್ಟೊಂದು ಕಾಳಜಿ ಯಾಕೆ? ತಾನೇ ಮದುವೆಯಾಗದವನಿಗೆ ತ್ರಿಪಲ್ ತಲಾಕ್ ನ ಅವಶ್ಯಕತೆ ಏನಿದೆ ಎಂದು ಲೇವಡಿ ಮಾಡುವ ಮೂಲಕ ವಿವಾದದ ಕಿಡಿ ಹೊತ್ತಿಸಿದ್ದಾರೆ.
ಕಳೆದ 12 ವರ್ಷಗಳ ಮೋದಿ ಆಡಳಿತದಲ್ಲಿ ದೇಶದ ಪ್ರಗತಿ ಶೂನ್ಯವಾಗಿದೆ ಎಂದು ಟೀಕಿಸಿದ ಅವರು ಪ್ರಧಾನಿಯಾದ ಮೇಲೆ 12 ನಿಮಿಷವಾದರೂ ಉಪಯುಕ್ತವಾಗಿ ಮಾತನಾಡಿದ್ದಾರೆಯೇ ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಪಕ್ಷವು ದೇಶದಲ್ಲಿ ಅತಿ ಹೆಚ್ಚಿನ ಸಾರ್ವಜನಿಕ ಉದ್ದಿಮೆಗಳನ್ನು ಸ್ಥಾಪಿಸಿತ್ತು. ನೆಹರೂ ಅವರಿಂದ ನರಸಿಂಹರಾವ್ ವರೆಗಿನ ನಾಯಕರು ಸಂಸ್ಥೆಗಳನ್ನು ಕಟ್ಟಿದರೆ ಈ ಮಹಾ ಮಾನವ ಕೇವಲ 26 ಸಾರ್ವಜನಿಕ ಉದ್ದಿಮೆಗಳನ್ನು ಮಾರಾಟ ಮಾಡಿದ್ದಾರೆ. ಗುಜರಾತ್ ನಲ್ಲಿ ಕೂಡ ಇವರು ಯಾವುದೇ ಸಾರ್ವಜನಿಕ ಉದ್ದಿಮೆಗಳನ್ನು ಮಾಡಿಲ್ಲ ಬದಲಾಗಿ ಅದಾನಿ ಮತ್ತು ಅಂಬಾನಿಯಂತಹ ಬಂಡವಾಳಶಾಹಿಗಳಿಗೆ ಎಲ್ಲವನ್ನೂ ಧಾರೆ ಎರೆಯುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಧರ್ಮ ಮತ್ತು ರಾಜಕಾರಣದ ವಿಚಾರವಾಗಿಯೂ ಹರಿಪ್ರಸಾದ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. 12 ವರ್ಷಗಳಿಂದ ದೇಶದಲ್ಲಿ ಕೇವಲ ಧರ್ಮಾಧಾರಿತ ರಾಜಕಾರಣ ನಡೆಯುತ್ತಿದೆ. ಧರ್ಮ ಎಂಬುದು ಮನೆಯೊಳಗೆ ಇರಬೇಕಾದ ವಿಚಾರ. ನಾವು ಪೂಜೆ ಪ್ರಾರ್ಥನೆಗಳನ್ನು ಮನೆಯಲ್ಲಿ ಮಾಡುತ್ತೇವೆ ಆದರೆ ಸರ್ಕಾರಕ್ಕೆ ಧರ್ಮದ ಅಗತ್ಯವಿಲ್ಲ. ಇಂದು ಗಣಪತಿ ಭಕ್ತಿ ಎನ್ನುವುದು ಕೇವಲ ಮಸೀದಿಗಳ ಮುಂದೆ ಹೋದಾಗ ಮಾತ್ರ ಬರುತ್ತದೆ. ಮಸೀದಿ ಮುಂದೆ ಡಿಜೆ ಹಾಕಿಕೊಂಡು ಕುಣಿಯುವುದು ಭಕ್ತಿಯಲ್ಲ ಎಂದು ಅವರು ಕಿಡಿ ಕಾರಿದರು. ಧರ್ಮದ ಹೆಸರಿನಲ್ಲಿ ಯುವಕರನ್ನು ದಾರಿ ತಪ್ಪಿಸಿ ಅವರನ್ನು ಜೈಲಿಗೆ ಕಳುಹಿಸುವ ಕೆಲಸ ಮಾಡಲಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ ಅವರು ಶ್ರಮಿಕ ವರ್ಗದವರು ಹೋರಾಟದ ಮೂಲಕ ಬದಲಾವಣೆ ತರಬೇಕೆಂದು ಕರೆ ನೀಡಿದರು.








