ಕೋಲಾರ : ರಮೇಶ್ ಕುಮಾರ್ ಅವರು ಆರೋಗ್ಯ ಸಚಿವರಾಗಿದ್ದಾಗ ಹಗರಣ ನಡೆದಿದೆ ಎಂದು ಆರೋಪ ಮಾಡಿದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ಆರೋಪಕ್ಕೆ ರಮೇಶ್ ಕುಮಾರ್ ಪ್ರತಿಕ್ರಿಯಿಸಿ, ನೀವು ಸರ್ಕಾರ ನಡೆಸುತ್ತಿದ್ದೀರಿ, ಬೀದಿ ಜಗಳ ಅಲ್ಲ ಎಂದು ತಿರುಗೇಟು ಕೊಟ್ಟಿದ್ದಾರೆ.
ಕೋಲಾರದಲ್ಲಿ ಮಾತನಾಡಿದ ರಮೇಶ್ ಕುಮಾರ್, ನನ್ನ ವಿರುದ್ಧ ಆರೋಪ ಮಾಡಿರುವುದನ್ನು ವಿಚಾರಿಸಿ, ಬೇಕಿದ್ದರೆ ಈಗಲೇ ಹೋಗಿ ಜೈಲಲ್ಲಿ ಕುಳಿತುಕೊಳ್ಳುತ್ತೇನೆ. ಆರೋಪಕ್ಕೆ ಪ್ರತ್ಯಾರೋಪ ಮಾಡುವುದು ಸಾರ್ವಜನಿಕ ಜೀವನದಲ್ಲಿ ಉತ್ತರ ಅಲ್ಲ. ದಾಖಲೆಗಳ ಸಮೇತ ನಿಷ್ಕಲ್ಮಶವಾಗಿ ಉತ್ತರ ನೀಡಬೇಕು ಎಂದು ಸುಧಾಕರ್ ವಿರುದ್ಧ ಗುಡುಗಿದರು.
ಮುಂದುವರಿದು, ನೀವು ಸರ್ಕಾರ ನಡೆಸುತ್ತಿದ್ದೀರಿ, ಬೀದಿ ಜಗಳ ಅಲ್ಲ ಎಂದು ವಾಗ್ದಾಳಿ ನಡೆಸಿ ರಮೇಶ್ ಕುಮರ್, ಹೌದು, ನಾವು ಅವಿವೇಕಿಗಳು. ನೀವು ಭಾರತ ಮಾತಾ ಕೀ ಸೆರಗಿನಲ್ಲಿ ಇದ್ದು, ಆಕೆಯ ಮಾನ ಕಾಪಾಡೋ ಅವತಾರ ಪುರುಷರಲ್ವ.? ನಾವು ಹುಟ್ಟಿದ್ದೆ ಹೊಲಸಲ್ಲಿ, ನಾವು ಏನು ಮಾಡಿಲ್ಲ ಈ ದೇಶಕ್ಕೆ ಎಂದು ಖಾರವಾಗಿ ಮಾತನಾಡಿದ್ದಾರೆ.