ಡ್ರಗ್ಸ್ ಮಾಫಿಯಾದ ಘಾಟು ಚಂದನವನವನ್ನು ದಾಟಿ ಈಗ ರಾಜಕೀಯ ವಲಯವನ್ನು ಪ್ರವೇಶಿಸಿದೆ. ಡ್ರಗ್ ಮಾಫಿಯಾದಲ್ಲಿ ರಾಜಕಾರಣಿಗಳು ಭಾಗಿಯಾಗಿರಬಹುದು ಎಂಬ ಚರ್ಚೆಗಳು ನಡೆಯುತ್ತಿವೆ. ಇದರ ಮಧ್ಯೆ ಪ್ರಶಾಂತ್ ಸಂಬರಗಿ ಒಂದು ಹೆಜ್ಜೆ ಮುಂದೆ ಇಟ್ಟು, ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಈ ದಂಧೆಯಲ್ಲಿ ಭಾಗಿಯಾಗಿದ್ದಾರೆ. ಶ್ರೀಲಂಕಾದ ಕ್ಯಾಸಿನೋದಲ್ಲಿ ನಡೆದ ಪಾರ್ಟಿಯಲ್ಲಿ ಸಂಜನಾ ಜೊತೆ ಜಮೀರ್ ಕೂಡ ಭಾಗಿಯಾಗಿದ್ದರು ಎಂದು ಆರೋಪ ಮಾಡಿದ್ದಾರೆ. ಇದಕ್ಕೆ ರಾಜ್ಯ ಬಿಜೆಪಿ ನಾಯಕರೂ ಧ್ವನಿಗೂಡಿಸಿ ಜಮೀರ್ ವಿರುದ್ಧ ಸಮರ ಸಾರಿದ್ದಾರೆ.
ಸರ್ಕಾರಕ್ಕೆ ಜಮೀರ್ ಸವಾಲ್
ಡ್ರಗ್ ಮಾಫಿಯಾ ಪ್ರಕರಣದಲ್ಲಿ ತಮ್ಮ ವಿರುದ್ಧ ಕೇಳಿಬಂದ ಆರೋಪದ ಬಗ್ಗೆ ಪ್ರತಿಕ್ರಿಯಿಸಿರುವ ಜಮೀರ್, ಪೊಲೀಸರು ನಡೆಸುವ ತನಿಖೆಯಲ್ಲಿ ಸಂಬರಗಿ ಮಾಡಿರುವ ಆರೋಪಗಳು ಸಾಬೀತಾದರೆ ನನ್ನ ಸಂಪೂರ್ಣ ಆಸ್ತಿಯನ್ನು ರಾಜ್ಯ ಸರ್ಕಾರಕ್ಕೆ ಬರೆದುಕೊಡಲು ಸಿದ್ಧನಿದ್ದೇನೆ ಎಂದು ಸವಾಲ್ ಹಾಕಿದ್ದಾರೆ. ಅಲ್ಲದೆ ನನ್ನ ಮೇಲಿನ ಆರೋಪಗಳು ಸುಳ್ಳು ಎಂದು ಕಂಡುಬಂದರೆ ಆರೋಪಿಗಳನ್ನು ಈ ನೆಲದ ಕಾನೂನಿನ ಪ್ರಕಾರ ಶಿಕ್ಷೆಗೆ ಗುರಿಪಡಿಸಲಿ. ಡ್ರಗ್ಸ್ ನಂಟಿಗೆ ಸಂಬಂಧಿಸಿದಂತೆ ನನ್ನ ಮೇಲಿನ ಆರೋಪ ಸತ್ಯಕ್ಕೆ ದೂರವಾದುದ್ದು. ಈ ಪ್ರಕರಣದ ನಿಷ್ಪಕ್ಷಪಾತ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ನಿಜವಾಗ್ಲೂ ಆಸ್ತಿ ಬರೆದುಕೊಡ್ತಾರಾ ಜಮೀರ್ ಸಾಬ್..?
ತಮ್ಮ ಮೇಲೆ ಆರೋಪ ಬರುತ್ತಿದ್ದಂತೆ ಹಿಂದೆ ಮುಂದೆ ಯೋಚಿಸದೇ ಆಕ್ರೋಶಗೊಂಡು ನಾನೇನು ಮಾಡಿಲ್ಲ, ಆರೋಪಗಳೆಲ್ಲವು ಸುಳ್ಳು. ಆರೋಪಗಳು ಸಾಬೀತಾದರೆ ನನ್ನ ಸಂಪೂರ್ಣ ಆಸ್ತಿಯನ್ನು ಸರ್ಕಾರಕ್ಕೆ ಬರೆದುಕೊಡುತ್ತೇನೆ ಎಂದು ಮಾಜಿ ಸಚಿವ ಜಮೀರ್ ಬಹಿರಂಗವಾಗಿಯೇ ಹೇಳಿದ್ದಾರೆ. ಆದ್ರೆ ನಿಜವಾಗಲೂ ಆಸ್ತಿ ಬರೆದುಕೊಡ್ತಾರಾ..?
ವಾಚ್ ಮೆನ್ ಆಗ್ಲಿಲ್ಲ ಯಾಕೆ ಸಾಬ್..?
ಪಕ್ಕಾ ಶಿವಾಜಿನಗರ ಕನ್ನಡದಲ್ಲಿ ವಿರೋಧಿಗಳ ವಿರುದ್ಧ ಮುಗಿಬೀಳುವ ಜಮೀರ್ ಹಿಂದೆ “ಬಿಎಸ್ ಯಡಿಯೂರಪ್ಪನವರು ರಾಜ್ಯದ ಮುಖ್ಯಮಂತ್ರಿ ಆದರೇ ನಾನು ಅವರ ಮನೆಯ ಮುಂದೆ ವಾಚ್ ಮೆನ್ ಆಗುತ್ತೇನೆ” ಎಂದು ವದರಿದ್ದರು. ಆದ್ರೆ ಬಿಎಸ್ ವೈ ರಾಜ್ಯದ ಮುಖ್ಯಮಂತ್ರಿಯಾಗಿ ಒಂದು ವರ್ಷ ಕಳೆದಿದೆ. ಇಲ್ಲಿಯವರೆಗೆ ಜಮೀರ್ ವಾಚ್ ಮೆನ್ ಆಗಿಲ್ಲ. ಯಾಕೆ ಜಮೀರ್ ಸಾಹೇಬ್ರೇ ಆಗ ಎಸೆದಿದ್ದ ಸವಾಲು ಈಗ ನೆನಪಿಗೆ ಬರುತ್ತಿಲ್ವಾ..? ಸವಾಲನ್ನ ನೀವ್ಯಾಕೆ ಸ್ವೀಕರಿಸಿಲ್ಲ..? ಎಂದು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗಳು ನಡೆಯುತ್ತಿವೆ.
https://youtu.be/VBiVGpvAIRc