ನಿಮ್ಮ ದುರಾಸೆಯ ಬಲಿಪೀಠಕ್ಕೆ ಪ್ರಕೃತಿಯ ಕತ್ತನ್ನಿಡಬೇಡಿ ಮುಖ್ಯಮಂತ್ರಿಗಳೇ Chief Ministers? ದೇವಿಮನೆ ಘಾಟ್ ರಸ್ತೆ ಅಗಲೀಕರಣ ನಿಲ್ಲಿಸಿ
ಶಿರಸಿ-ಕುಮಟಾ ರಾಷ್ಟ್ರೀಯ ಹೆದ್ದಾರಿಯನ್ನು ಮೇಲ್ದರ್ಜೆಗೆ ಏರಿಸುವ “ಭಾರತ ಮಾಲಾ” ಯೋಜನೆಯಲ್ಲಿ ಶಿರಸಿಯ ದೇವಿ ಮನೆ ಘಟ್ಟ, ಜಾನ್ಮನೆ ವ್ಯಾಪ್ತಿಯ ತೇಗ, ಮತ್ತಿ, ಹೊನ್ನೆ, ಅರಳಿ, ಹಾಲ, ಕೆಸಳಾ, ಕೆಂದಾಳ, ಮಾವು, ಗೇರು, ಹಲಸು, ಕಾಸರಕಾ, ನಂದಿ, ನೆಲ್ಲಿ, ಕವಲು, ಕಾಡಮಟೆ, ಜಂಗ್ಲಿ, ದೂಪಾ, ಚಂದಕಲಾ, ಉಪ್ಪಾಗೆ, ಹುಣಸೆ, ಹೊಂಗೆ, ಹಲಗಾ, ನಂದಿ, ಹೊಳೆ ದಾಸವಾಳ, ಹೊಳೆಮತ್ತಿ, ಬಸರಿ ಸೇರಿದಂತೆ 100 ಕ್ಕೂ ಹೆಚ್ಚಿನ ಜಾತಿಯ ಬೃಹತ್ ಗಾತ್ರದ ವೃಕ್ಷಗಳನ್ನು ರಾಷ್ಟ್ರೀಯ ಹೆದ್ದಾರಿ ಯೋಜನೆಗೆ ಕೆಲವೇ ದಿನಗಳಲ್ಲಿ ಧರಶಾಯಿಯಾಗಲಿವೆ. ರಾಜ್ಯದಲ್ಲಿ ಇತ್ತಿಚೀಗೆ ಆಗುತ್ತಿರುವ ಅರಾಜಕತೆಯ ಪ್ರಕ್ಷುಬ್ದತೆಯಲ್ಲಿ ಕಾಡು ಬೆಳಸುವುದಿರಲಿ ಸರ್ಕಾರದ ಯೋಗ್ಯತೆಗೆ ಉಳಿದಿರುವ ಅರಣ್ಯ ಸಂಪತ್ತನ್ನಾದರೂ ಉಳಿಸಿಕೊಳ್ಳುವ ಯೋಜನೆಗಳನ್ನು ಹೇಗೆ ಕಾರ್ಯರೂಪಕ್ಕೆ ತರುವುದೆಂದು ಯೋಚಿಸಬೇಕು. ಆದರೆ ಬಂಡವಾಳಶಾಹಿಗಳ ಉದ್ದಾರಕ್ಕೆ , ಅವರು ನೀಡುವ ಕಮಿಷನ್ ಆಸೆಗೆ, ವೈಯಕ್ತಿಕ ಲಾಭಕ್ಕೆ ನಮ್ಮನ್ನು, ನಾಡನ್ನು ಪೊರೆಯುವ ಕಾಡುಗಳನ್ನೇಕೆ ಸವರುತ್ತಿದ್ದೀರಿ.? ಇಷ್ಟೆಲ್ಲಾ ನಾಶವಾದ ಮೇಲೆ ಮುಂದಿನ ಪೀಳಿಗೆಯ ತಲೆಗಳು ಶುದ್ದ ನೀರು, ಶುದ್ದ ಗಾಳಿ ಕೇಳಿದರೆ ಅವರಿಗೆ ನಾವು ಬಳುವಳಿಯಾಗಿ ಕೊಡುವುದಾದರೂ ಏನನ್ನು..?
ಇಲ್ಲಿಯವರೆಗೂ ಈಗ ಆಗಿರುವ ಪ್ರಕೃತಿ ವಿಕೋಪಗಳಿಗೆ ಬದುಕು ಆಗಲೇ ಹರಿದ ಕೌದಿಯಾಗಿದೆ. ಹರಿದ ಕೌದಿಯಂಥ ಈ ಬದುಕಿಗೆ ತೇಪೆ ಹಚ್ಚುವ ಕೆಲಸವೇ ಇನ್ನೂ ಮುಗಿದಿಲ್ಲಾ ಆಗಲೇ ವಿಕೋಪಕ್ಕೆ ಮುನ್ನುಡಿ ಬರೆಯುವ ಇನ್ನೊಂದು ಬೃಹತ್ ಯೋಜನೆ. ಶಿರಸಿ- ಕುಮುಟಾ ರಸ್ತೆಯ ಇಕ್ಕೆಲಗಳಲ್ಲಿರುವ 9 ಸಾವಿರಕ್ಕೂ ಅಧಿಕ ಮರಗಳ ಮಾರಣಹೋಮಕ್ಕೆ ಅಂತಿಮ ಕ್ಷಣದ ಸಿದ್ಧತೆ ಈಗಾಗಲೇ ನಡೆದಿದೆ. ಸರ್ಕಾರದಿಂದ ಅನುಮತಿಯೂ ಲಭಿಸಿದ್ದು, ಕಟಾವಿಗಾಗಿ ಮರಗಳಿಗೆ ಬಣ್ಣ ಹಚ್ಚಿ ಸಂಖ್ಯೆಯನ್ನು ನಮೂದಿಸಲಾಗಿದೆ. ರಾಜ್ಯ ಹೆದ್ದಾರಿ ’69’ ಈಗ ಭಾರತಮಾಲಾ ಯೋಜನೆ ಅಡಿಯಲ್ಲಿ ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತನೆಯಾಗುತ್ತಿದೆ. ಈ ಹಿಂದಿದ್ದ 10 ಮೀ. ಅಗಲದ ರಸ್ತೆ ಇನ್ನು 18 ಮೀಟರ್ಗೆ ವಿಸ್ತಾರಗೊಳ್ಳಲಿದೆ. ಈ ಕಾಮಗಾರಿ ಆರಂಭಿಸುವ ಸಲುವಾಗಿ ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸುವಂತೆ ಜಿಲ್ಲಾಧಿಕಾರಿಯೂ ಆದೇಶಿಸಿದ್ದಾರೆ. ರಸ್ತೆ ಕಾಮಗಾರಿ ಮೊದಲ ಹಂತವಾಗಿ ರಸ್ತೆ ಬದಿಯ ಈ ಮರಗಳನ್ನು ತೆರವುಗೊಳಿಸುವ ಕಾರ್ಯ ಕೆಲವೇ ದಿನಗಳಲ್ಲಿ ಆರಂಭಗೊಳ್ಳಲಿದೆ.
ಇದೇ ರಸ್ತೆಗೆ ಹೊಂದಿಕೊಂಡು ದಿಗ್ದಿಗಂತವಾಗಿ ಹಬ್ಬಿನಿಂತ “ದೇವಿಮನೆ ಘಟ್ಟ”ದ ಮಲೆಯು ಜಗತ್ತಿನ ಹಲವು ಅಳಿವಿನಂಚಿನ ಖಗ – ಮೃಗ, ಸರೀಸೃಪ, ಚಿಟ್ಟೆಯಂಥ ರತ್ನಗಳಿಗೆ ಆಶ್ರಯ ತಾಣವಾಗಿದ್ದು ಸಾವಿರಾರು ವರ್ಷಗಳಿಂದ ಕನ್ನಡ ನಾಡನ್ನು ಪೊರೆಯುತ್ತಿದೆ. ಇನ್ಮುಂದೆ ಈ ಘಟ್ಟ ಕಣ್ಮರೆಯಾಗಲಿದೆ. ಸರ್ಕಾರದ ಅವೈಜ್ಞಾನಿಕ ಯೋಜನೆಗೆ ಇನ್ನೊಂದು ಕೀರಿಟ ಸಿಗಲಿದ್ದು ಜಗದ್ವಿಖ್ಯಾತ ಪಶ್ಚಿಮ ಘಟ್ಟದ ಒಂದು ಅಂಚು ಬೃಹತ್ ಯಂತ್ರಗಳಿಗೆ ಸಿಕ್ಕು ಅಸುನೀಗಲಿದೆ.
ಜಗತ್ತಿನ ಜೀವ ವೈವಿಧ್ಯತೆಯ ಕೆಂಪು ದತ್ತಾಂಶ ಪಟ್ಟಿಗೆ (Red data book) ಸೇರಿ ಹೋದ ಸಿಂಹ ಮುಖದ ಸೀಂಗಳೀಕಗಳ ವಾಸಸ್ಥಾನವಿರುವುದು ಇದೇ ಬಿಸಿತಾಣದ ಆಸುಪಾಸಿನಲ್ಲೇ. ಅಲ್ಲದೇ ಈ ಕಣಿವೆಯು ಸಾವಿರಾರು ಅಮೂಲ್ಯ ಆಯುರ್ವೇದ ಔಷಧಿ ಸಸ್ಯಗಳಿರುವ ಸಂರಕ್ಷಿತ ಘಟ್ಟ ಪ್ರದೇಶ. ಇನ್ನೂ ಕೆಲವೇ ದಿನಗಳಲ್ಲಿ ಅರಣ್ಯವೆಂಬ ರಾಷ್ಟ್ರೀಯ ಸಂಪತ್ತು ನಾಶವಾಗಲಿದೆ. ಪ್ರಕೃತಿ ಮನುಷ್ಯನ ಮೇಲೆ ಸೇಡು ತೀರಿಸಿಕೊಳ್ಳಲು ಪ್ರಕೃತಿ ಹಲವು ರೂಪದಲ್ಲಿ ಮೇಲಿಂದ ಮೇಲೆ ದಾಳಿ ಮಾಡಿ ಮನುಷ್ಯ ಸಂಕುಲವನ್ನು ಹೈರಾಣಾಗಿಸಿವೆ. ಪರಿಹಾರ ಕೊಡುವ ಸರ್ಕಾರಗಳು ಈಗಲಾದರೂ ಎಚ್ಚೆತ್ತುಕೊಳ್ಳಬೇಕಲ್ಲವೇ.? ಅದನ್ನು ಬಿಟ್ಟು ಬರ ಪರಿಹಾರದ ಹಣದಲ್ಲೂ ಹಗಲುದರೋಡೆಗೆ ಇಳಿದಿರುವುದು ಕನ್ನಡಿಗರ ದೌರ್ಭಾಗ್ಯವೇ ಸರಿ. ಈ ಹಿಂದೆ ದೇವಿಮನೆ ಘಟ್ಟದಲ್ಲಿ ಸಂಚರಿಸಿ ಹಸಿರನ್ನು ಕಣ್ಣು ತುಂಬಿಕೊಂಡವರೇ ಈಗ ಧನ್ಯರು.! ಇನ್ನೂ ಕೆಲವೇ ದಿನಾ ಆ ಸೌಂದರ್ಯ ಉಳಿಯುವುದು. ಜಗತ್ತು ಈಗಾಗಲೇ ಅವನತಿಯ ಹಂತಕ್ಕೆ ಬಂದಿದ್ದರೂ ಮನುಷ್ಯನ ದುರಾಸೆ ಮಾತ್ರ ಚಿರಸ್ಥಾಯಿ.
ಇಡೀ ನಿಸರ್ಗವನ್ನೇ ತನಗೆ ಬೇಕಾದಂತೆ ಬಳಿಸಿಕೊಳ್ಳಬಲ್ಲೆ ಎಂಬ ಅಹಂಕಾರದಿಂದ ಬೀಗುವ ಸರ್ಕಾರಗಳನ್ನು ಓಟು ಹಾಕಿದ ಪ್ರಜೆಗಳೇ ಪ್ರಶ್ನಿಸುವ ಬದಲು ಇತ್ತಿಚೀನ ದಶಕಗಳಲ್ಲಿ ಸರ್ಕಾರದ ಯೋಜನೆಗಳನ್ನು ಅದರ ಆಡಳಿತ ವೈಖರಿಯನ್ನು ಸಮರ್ಥನೆ ಮಾಡಿಕೊಳ್ಳುತ್ತಿರುವುದು ಮಾತ್ರ ಪರಮ ಅಸಹ್ಯಕರ. ನಾಡಿನ ಪರಿಸರಕ್ಕೆ, ಜೀವವೈವಿಧ್ಯತೆಗೆ ಸಂಬಂಧಿಸಿದ ವರದಿಗಳಿಗೆ, ಹಾಗೂ ಇಂಥಹ ಸಂಕೀರ್ಣ ಯೋಜನೆಯ ಆರಂಭಕ್ಕೂ ಮುನ್ನ ಅಲ್ಲೇ ವಾಸಿಸುವ ಸ್ಥಳೀಯರ ಅಭಿಪ್ರಾಯಗಳನ್ನು ಆಲಿಸಬೇಕು, ಸಾಧಕ- ಭಾದಕಗಳ ಚರ್ಚೆಯಾಗಬೇಕು ಅವುಗಳಿಗೆ ಮನ್ನಣೆ ಸಿಗಬೇಕು ಸ್ಥಳೀಯ ಸಸ್ಯಸಂಕುಲದ ವ್ಯಾಪ್ತಿಯ ಬಗ್ಗೆಯಾದರೂ ಸ್ಥೂಲವಾಗಿ ಆಡಳಿತ ಯಂತ್ರಕ್ಕೆ ಅರಿವಿರಬೇಕೆಂಬ ಕನಿಷ್ಠ ಮಟ್ಟದ ಸೌಜನ್ಯಕ್ಕಾದರೂ ಸರ್ಕಾರಗಳು ಇದರ ಬಗ್ಗೆ ಯೋಚಿಸುವುದೇ ಈಗ ದುಸ್ಥರವಾಗಿದೆ. ಇನ್ನಾದರೂ ಪ್ರಕೃತಿಯನ್ನು ಮನುಷ್ಯ ಅರ್ಥ ಮಾಡಿಕೊಳ್ಳಬೇಕು. ಸರ್ಕಾರಗಳು ಮಾಡುವ ತಪ್ಪಿಗೆ ಪ್ರತಿಯಾಗಿ ಪ್ರಕೃತಿ ದಂಡದ ರೂಪದಲ್ಲಿ ಪ್ರವಾಹ, ಜಲದಿಗ್ಬಂಧನ, ಗುಡ್ಡ ಕುಸಿತ, ಮೇಘಸ್ಪೋಟದಂಥಹ ಶಿಕ್ಷೆಯನ್ನು ನಿಮಗೆ ಓಟು ಹಾಕಿದ ತಪ್ಪಿಗೆ ನಾಡಿನ ಜನತೆ ಎಲ್ಲವನ್ನೂ ಮುಚ್ಚಿಕೊಂಡು ಅನುಭವಿಸಬೇಕಾಗಿರುವುದು ಈಗ ಉಳಿದಿರುವ ಏಕೈಕ ದಾರಿ. ಮೂರ್ಖತನ ಬಿಟ್ಟು ಎಚ್ಚೆತ್ತುಕೊಳ್ಳಿ ಮುಖ್ಯಮಂತ್ರಿಗಳೇ?
ಇದನ್ನೂ ಓದಿ : ಶ್ರೀಮಂತರ ನಾಡಿನ ಬಡ ರಾಜ್ಯ ಅರ್ಕನ್ಸಾ – ಬಿಲ್ ಕ್ಲಿಂಟನ್ ಹುಟ್ಟಿದ ನೆಲ
– ಗಿರಿ ವಾಲ್ಮಿಕಿ
ವನ್ಯಜೀವಿ ಮತ್ತು ಪರಿಸರ ಹೋರಾಟಗಾರರು










