Mumbai attack
2008ರ ಮುಂಬೈ ಉಗ್ರ ದಾಳಿಗೆ ಇಂದಿಗೆ 12 ವರ್ಷ: ಉಗ್ರರ ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ಸಾಥ್ ಕೊಟ್ಟ ಅಮೆರಿಕಾ..!
ಮುಂಬೈ: 26/11ರಲ್ಲಿ ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿದ್ದ ಮುಂಬೈ ಉಗ್ರ ದಾಳಿಯ ಕರಾಳತೆಗೆ ಇಂದಿಗೆ 12 ವರ್ಷಗಳು ಕಳೆದಿವೆ. ಈ ಭೀಕರ ಘಟನೆಯಲ್ಲಿ 166 ಜನರು ಬಲಿಯಾಗಿದ್ದರು. 2008 ನವೆಂಬರ್ 26ರಂದು ಪಾಕಿಸ್ತಾನದ ಉಗ್ರರು ಮುಂಬೈ ಮೇಲೆ ನಡೆಸಿದ ಭೀಕರ ದಾಳಿಯು ಸುಮಾರು ನಾಲ್ಕು ದಿನಗಳ ಕಾಲ ಮುಂದುವರೆದಿತ್ತು. ಈ ದಾಳಿಯಲ್ಲಿ 166ಮಂದಿ ಸಾವನ್ನಪ್ಪಿ, 300ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ಇಂದಿಗೆ ಈ ಕರಾಳತೆಗೆ 12 ವರ್ಷಗಳಾಗಿದ್ದು, ರಾಜಕೀಯ ಗಣ್ಯರು, ಅನೇಕ ಕ್ಷೇತ್ರಗಳ ಪ್ರಮುಖರು ಅಂದು ಪ್ರಾಣ ಕಳೆದುಕೊಂಡಿದ್ದ ಎಲ್ಲರಿಗೂ ಗೌರವ ನಮನ ಸಲ್ಲಿಸುತ್ತಿದ್ದಾರೆ.
2008ರ ಮುಂಬೈ ಮೇಲಿನ ಭಯೋತ್ಪಾದಕ ದಾಳಿಯ ಕರಾಳತೆಯನ್ನ ದೇಶ ಈವರೆಗೂ ಮರೆತಿಲ್ಲ. 2008ರ ಮುಂಬೈ ದಾಳಿ ಇತಿಹಾಸದ ಪುಟದಲ್ಲಿ ಒಂದು ಕಪ್ಪು ಚುಕ್ಕೆಯಾಗಿ ಉಳಿದುಬಿಟ್ಟಿದೆ. ಇನ್ನೂ ಈ ಬಗ್ಗೆ ಅನೇಕ ನಾಯಕರು ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯಿಸಿದ್ದಾರೆ. ಅದರಂತೆ ಕೇಂದ್ರ ರಸ್ತೆ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಸಹ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದು, ಭಯೋತ್ಪಾದಕರ ದಾಳಿಯಲ್ಲಿ ಹುತಾತ್ಮರಾದವರಿಗೆ ಗೌರವದ ನಮನಗಳು. ಭದ್ರತಾ ಪಡೆಗಳ ತ್ಯಾಗಕ್ಕೆ ನಾವೆಲ್ಲ ಚಿರಖುಣಿಗಳು ಎಂದು ಬರೆದುಕೊಂಡಿದ್ದಾರೆ.
ಪ್ರತಿ 100 ಸೆಕೆಂಡ್ ಗೆ 20 ವರ್ಷದೊಳಗಿನ ಒಬ್ಬರಿಗೆ ಹೆಚ್ ಐವಿ
ಇತ್ತ ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ‘ದೇಶಕ್ಕಾಗಿ ಎಲ್ಲವನ್ನು ತ್ಯಾಗ ಮಾಡಿದ್ದಕ್ಕಾಗಿ ಭದ್ರತಾ ಪಡೆಗಳಿಗೆ ಕೃತಜ್ಞರಾಗಿರಬೇಕು’ ಎಂದು ಬರೆದುಕೊಂಡಿದ್ದಾರೆ. ಇತ್ತ ಅಮೆರಿಕಾ ಸಹ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ಬೆಂಬಲವಾಗಿ ನಿಲ್ಲುವುದಾಗಿ ಪ್ರತಿಪಾದಿಸಿದೆ. ಹೌದು 26/11ರ ಘಟನೆಯಲ್ಲಿ ನೊಂದವರಿಗೆ ನ್ಯಾಯ ಕಲ್ಪಿಸಲು ಬದ್ಧರಾಗಿರುವುದಾಗಿ ಅಮೇರಿಕಾ ಭರವಸೆ ಕೊಟ್ಟಿದೆ. ಅಮೆರಿಕ ವಿದೇಶಾಂಗ ಇಲಾಖೆಯ ಉಪ ವಕ್ತಾರ ಕೇಲ್ ಬ್ರೌನ್ ಅವರು ಈ ಕುರಿತು ಮಾಹಿತಿ ನೀಡಿದ್ದು, ಅಮೆರಿಕ ಈ ವಿಷಯದಲ್ಲಿ ನೊಂದವರಿಗೆ ನ್ಯಾಯ ಒದಗಿಸಲು ಬದ್ಧವಾಗಿದೆ. ಕೃತ್ಯದಲ್ಲಿ ಆರು ಮಂದಿ ಅಮೆರಿಕನ್ನರು ಮೃತಪಟ್ಟಿದ್ದರು. ಭಾರತದ ಜೊತೆಗೂಡಿ ಭಯೋತ್ಪಾದನೆ ವಿರುದ್ಧ ಹೋರಾಡಲಿದ್ದೇವೆ ಎಂದಿದ್ದಾರೆ.
ನವೆಂಬರ್ 26ರಂದು ಪಾಕಿಸ್ತಾನದಿಂದ ಸಮುದ್ರ ಮಾರ್ಗದ ಮೂಲಕ ಭಾರತಕ್ಕೆ ಪ್ರವೇಶಸಿದ್ದ ಲಷ್ಕರ್-ಎ-ತೊಯ್ಬಾ ಸಂಘಟನೆಯು ಮುಂಬೈ ನಗರದಾದ್ಯಂತ ಬಂದೂಕು ಹಾಗೂ ಬಾಂಬ್ ದಾಳಿಯನ್ನು ನಡೆಸಿತ್ತು. ಮೊದಲು ಛತ್ರಪತಿ ಶಿವಾಜಿ ಟರ್ಮಿನಲ್ ರೈಲ್ವೆ ನಿಲ್ದಾಣದಲ್ಲಿ ಅಜ್ಮಲ್ ಅಮೀರ್ ಕಸಬ್ ಮತ್ತು ಇಸ್ಮಾಯಿಲ್ ಖಾನ್ ದಾಳಿ ನಡೆಸಿದರು. ಈ ದಾಳಿಯಲ್ಲಿ 58 ಜನರು ಸಾವನ್ನಪ್ಪಿದ್ದರು. 100ಕ್ಕೂ ಹೆಚ್ಚಿನ ಜನರಿಗೆ ಗಾಯಗಳಾಗಿದ್ದವು. ಇದಾದ ನಂತರ ಮುಂಬೈನ ಕ್ಯಾಮ ಆಸ್ಪತ್ರೆಗೆ ದಾಳಿ ಮಾಡಲು ಪ್ರಯತ್ನಿಸಿದ್ದರು. ಆದರೆ ಅಲ್ಲಿನ ಸಿಬ್ಬಂದಿಯ ಜಾಗರೂಕತೆಯಿಂದ ಬಹುದೊಡ್ಡ ದುರಂತವೊಂದು ತಪ್ಪಿತ್ತು. ಇವರು ಆಸ್ಪತ್ರೆಯಿಂದ ಹೊರ ಬರುತ್ತಿದ್ದಂತೆ ಭಯೋತ್ಪಾದನಾ ನಿಗ್ರಹ ದಳದ ಪೊಲೀಸ್ ಅಧಿಕಾರಿಗಳ ಮೇಲೆ ದಾಳಿ ನಡೆಸಿದ್ದರು. ದಾಳಿಯಲ್ಲಿ ಹೇಮಂತ್ ಕರ್ಕರೆ ಸೇರಿದಂತೆ 6 ಜನ ಹುತಾತ್ಮರಾಗಿದ್ದರು. ಬಳಿಕ ನಾರಿಮನ್ ಹೌಸ್ ಮೇಲೆ ಮಾಡಿ 5 ಇಸ್ರೇಲ್ನ ನಾಗರಿಕರು ಸೇರಿದಂತೆ 6 ಜನರನ್ನು ಕೊಂದು ಹಾಕಿದರು. ಬಳಿಕ ಪ್ರತಿಷ್ಠಿತ ತಾಜ್ ಹೋಟೆಲ್ ಮೇಲೆ ದಾಳಿ ಮಾಡಿ 31 ಜನರನ್ನು ಕೊಂದಿದ್ದರು. ನಂತರ ಪ್ರಸಿದ್ಧ ಒಬೇರಾಯಿ ಹೋಟೆಲ್ ಮೇಲೆ ದಾಳಿ ನಡೆಸಿ 30 ಜನರನ್ನ ಕೊಂದಿದ್ದರು. ನಂತರ ರಾಷ್ಟ್ರೀಯ ಭದ್ರತಾ ಪಡೆಯು ಮುಂಬೈನ ತಾಜ್ ಹೋಟೆಲ್ ನನ್ನನ್ನು ಭದ್ರಪಡಿಸಿದ ನಂತರ ನವೆಂಬರ್ 29ರಂದು ದಾಳಿಯೂ ಕೊನೆಗೊಂಡಿತ್ತು.
ರಾಷ್ಟ್ರೀಯ ಭದ್ರತಾ ಸಿಬ್ಬಂದಿಯು ಭಯೋತ್ಪಾದಕರನ್ನು ಹೊಡೆದುರುಳಿಸುವ ಹೊತ್ತಿಗೆ 160 ಜನರು ಅಸುನೀಗಿದ್ದರು. ಈ ದಾಳಿಯಲ್ಲಿ 9 ಜನ ಭಯೋತ್ಪಾದಕರು ಸಾವನಪ್ಪಿದರೆ ಅಜ್ಮಲ್ ಅಮೀರ್ ಕಸಬ್ ಸೆರೆಸಿಕ್ಕಿದ್ದ. ಇವನನ್ನು 2012 ರ ಪುಣೆಯ ಯರವಾಡ ಜೈಲಿನಲ್ಲಿ ಗಲ್ಲಿಗೆ ಹಾಕಲಾಯಿತು. ಒಟ್ಟಾರೆ 2008 ರಲ್ಲಿ ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿದ್ದ ಮುಂಬೈ ಉಗ್ರ ದಾಳಿಯ ಕರಾಳತೆಗೆ 12 ವರ್ಷಗಳೇ ಕಳೆದಿದ್ದರು, ಆ ಘಟನೆಯ ಕರಾಳ ಚಾಪು ದೇಶವನ್ನ ಈವರೆಗೂ ಕಾಡುತ್ತಿರೋದಂತು ಸುಳ್ಳಲ್ಲ.
Mumbai attack
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel