ಬೆಂಗಳೂರು: ಕೊರೊನಾ ಸೋಂಕಿತರು ಚಿಕಿತ್ಸೆಗೆ ಪರದಾಡುವುದನ್ನು ತಪ್ಪಿಸಲು ಅರಂಭಿಸಿದ್ದ ರಾಜ್ಯದ ಅತಿದೊಡ್ಡ ಕೋವಿಡ್ ಕೇರ್ ಸೆಂಟರ್ಗೆ ಶಾಶ್ವತವಾಗಿ ಬೀಗ ಹಾಕಲು ಬಿಬಿಎಂಪಿ ತೀರ್ಮಾನ ಮಾಡಿದೆ.
ಬೆಂಗಳೂರಿನ ತುಮಕೂರು ರಸ್ತೆಯಲ್ಲಿರುವ ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ 11 ಕೋಟಿ ವೆಚ್ಚದಲ್ಲಿ 6500 ಹಾಸಿಗೆಗಳ ಕೋವಿಡ್ ಕೇರ್ ಸೆಂಟರ್ ಆರಂಭಿಸಲಾಗಿತ್ತು.
ಆದರೆ, ಇದರಲ್ಲಿ ಕೇವಲ 3 ಸಾವಿರ ಹಾಸಿಗೆಗಳನ್ನು ಮಾತ್ರ ಬಳಸಲಾಗುತ್ತಿತ್ತು. 1500 ಹಾಸಿಗೆಗಳನ್ನು ಕೋವಿಡ್ ಸೋಂಕಿತರು ಹಾಗೂ ಇನ್ನುಳಿದ 1500 ಹಾಸಿಗೆಗಳನ್ನು ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗೆಂದು ಮೀಸಲಿಡಲಾಗಿತ್ತು.
ಕಳೆದ ಒಂದು ತಿಂಗಳಿಂದ ಕೊರೊನಾ ಆಸಿಂಪ್ಟಾಮ್ಯಾಟಿಕ್ ಲಕ್ಷಣ ಹೊಂದಿರುವ ಸಾವಿರಾರು ಮಂದಿ ಕೋವಿಡ್ ಕೇರ್ ಸೆಂಟರ್ಗೆ ಬರಲು ಹಿಂದೇಟು ಹಾಕಿ ಮನೆಯಲ್ಲೇ ಹೋಂ ಐಸೋಲೇಶನ್ ಒಳಗಾಗುತ್ತಿದ್ದಾರೆ. ಹೀಗಾಗಿ ಕೋವಿಡ್ ಕೇರ್ ಸೆಂಟರ್ ರೋಗಿಗಳಿಲ್ಲದೆ ಖಾಲಿ ಹೊಡೆಯುತ್ತಿತ್ತು. ಈ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 15ರಿಂದ ಬಿಐಇಸಿಯ ಕೊರೊನಾ ಕೇರ್ ಸೆಂಟರ್ನ್ನು ಮುಚ್ಚಲು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಆದೇಶ ಹೊರಡಿಸಿದ್ದಾರೆ.
ಕೋವಿಡ್ ಕೇಂದ್ರಕ್ಕೆಂದು ಖರೀದಿಸಲಾದ ಬೆಡ್, ಮ್ಯಾಟ್ರಸ್, ಫ್ಯಾನ್, ಪೀಠೋಪಕರಣ ಸೇರಿದಂತೆ ಇತರೆ ಸಾಮಗ್ರಿಗಳನ್ನು ಸರ್ಕಾರಿ ಸ್ವಾಮ್ಯದ ಗೆಸ್ಟ್ಹೌಸ್ ಹಾಗೂ ಸರ್ಕಾರಿ ಆಸ್ಪತ್ರೆಗಳಿಗೆ ಉಚಿತವಾಗಿ ನೀಡಲು ಆದೇಶದಲ್ಲಿ ಸೂಚಿಸಲಾಗಿದೆ.
ಜತೆಗೆ ಕೋವಿಡ್ ಕೇರ್ ಸೆಂಟರ್ನಲ್ಲಿದ್ದ ಪೀಠೋಪಕರಣಗಳ ಪೈಕಿ 1000 ಬಾಗಲಕೋಟೆಯ ತೋಟಗಾರಿಕೆ ವಿವಿ ಹಾಸ್ಟೆಲ್, ಸಮಾಜ ಕಲ್ಯಾಣ ಇಲಾಖೆಯ ವಿವಿಧ ಹಾಸ್ಟೆಲ್ಗಳಿಗೆ 2500, ಜಿಕೆವಿಕೆಗೆ ಒಂದು ಸಾವಿರ ಕಾಟ್ಗಳನ್ನು ಹಸ್ತಾಂತರಿಸಲು ಬಿಬಿಎಂಪಿ ನಿರ್ಧರಿಸಿದೆ.